عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Stoneland, Rock city, Al-Hijr valley [Al-Hijr] - Kannada translation

Surah Stoneland, Rock city, Al-Hijr valley [Al-Hijr] Ayah 99 Location Maccah Number 15

ಅಲಿಫ್ ಲಾಮ್ ರಾ. ಇವು ದೈವಿಕ ಗ್ರಂಥದ ವಚನಗಳು ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ.

”ನಾವು ಮುಸಲ್ಮಾನರಾಗಿದ್ದರೆ!” ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಹಾರೈಸುವರು.[1]

ಅವರನ್ನು ಬಿಟ್ಟುಬಿಡಿ. ಅವರು ತಿನ್ನುತ್ತಲೂ, ಆನಂದಿಸುತ್ತಲೂ, ಹುಸಿ ಭರವಸೆಗಳಲ್ಲಿ ತಲ್ಲೀನರಾಗುತ್ತಲೂ ಇರಲಿ. ಸದ್ಯವೇ ಅವರು ತಿಳಿಯುವರು.

ನಾವು ಯಾವುದೇ ಊರನ್ನು ಅದಕ್ಕೆ ಒಂದು ನಿಗದಿತ ಅವಧಿಯನ್ನು ನೀಡದೆ ನಾಶ ಮಾಡಿಲ್ಲ.

ಯಾವುದೇ ಜನತೆ ತಮ್ಮ ನಿಗದಿತ ಅವಧಿಯನ್ನು ದಾಟಿಹೋಗುವುದಿಲ್ಲ, ಹಿಂದೆ ಉಳಿಯುವುದೂ ಇಲ್ಲ.

ಸತ್ಯನಿಷೇಧಿಗಳು ಹೇಳಿದರು: “ಓ ದೇವವಾಣಿ ಅವತೀರ್ಣವಾಗುವವನೇ! ನಿಜಕ್ಕೂ ನೀನೊಬ್ಬ ಮಾನಸಿಕ ಅಸ್ವಸ್ಥ.

ನೀನು ಸತ್ಯವಂತನಾಗಿದ್ದರೆ ನೀನೇಕೆ ನಮ್ಮ ಬಳಿಗೆ ದೇವದೂತರುಗಳನ್ನು ತರುವುದಿಲ್ಲ?”

ನಾವು ದೇವದೂತರುಗಳನ್ನು ಸತ್ಯ ಸಮೇತವಾಗಿಯೇ ಇಳಿಸುತ್ತೇವೆ.[1] ಆಗ ಅವರಿಗೆ ಯಾವುದೇ ಕಾಲಾವಕಾಶ ನೀಡಲಾಗಿರುವುದಿಲ್ಲ.

ಈ ಕುರ್‌ಆನನ್ನು ಅವತೀರ್ಣಗೊಳಿಸಿದ್ದು ನಾವೇ. ನಾವೇ ಇದನ್ನು ಸಂರಕ್ಷಿಸುತ್ತೇವೆ.

ನಿಮಗಿಂತ ಮೊದಲು ನಾವು ಹಿಂದಿನ ಕಾಲದ ಜನರ ಅನೇಕ ಪಂಗಡಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೆವು.

ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ ಅವರು ತಮಾಷೆ ಮಾಡಿ ನಗುತ್ತಿದ್ದರು.

ಅಪರಾಧಿಗಳ ಹೃದಯಗಳಲ್ಲಿ ನಾವು ಈ ರೀತಿ ಅದನ್ನು (ತಮಾಷೆ ಮಾಡುವುದನ್ನು) ತೂರಿಸಿ ಬಿಡುತ್ತೇವೆ.

ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. ಹಿಂದಿನ ಕಾಲದ ಜನರ ಮೇಲಿನ ಶಿಕ್ಷಾಕ್ರಮವು ಈಗಾಗಲೇ ಜರುಗಿ ಬಿಟ್ಟಿದೆ.

ನಾವು ಅವರ ಮೇಲೆ ಆಕಾಶದ ದ್ವಾರವನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿಹೋದರೂ ಸಹ,

ಅವರು ಹೇಳುವರು: “ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ. ಅಲ್ಲ, ನಮಗೆ ಮಾಟ ಮಾಡಲಾಗಿದೆ.”[1]

ನಾವು ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿದ್ದೇವೆ ಮತ್ತು ನೋಡುಗರಿಗಾಗಿ ಅವುಗಳನ್ನು ಅಲಂಕರಿಸಿದ್ದೇವೆ.

ಮತ್ತು ಅದನ್ನು (ಆಕಾಶವನ್ನು) ಎಲ್ಲಾ ಬಹಿಷ್ಕೃತ ಶೈತಾನರಿಂದ ಸಂರಕ್ಷಿಸಿದ್ದೇವೆ.

ಯಾರಾದರೂ ಕದ್ದಾಲಿಸಲು ಪ್ರಯತ್ನಿಸಿದರೆ, ಅಗ್ನಿಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.

ನಾವು ಭೂಮಿಯನ್ನು ವಿಸ್ತರಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಹಾಕಿದೆವು. ಅದರಲ್ಲಿ ನಾವು ಎಲ್ಲವನ್ನೂ ಒಂದು ನಿಗದಿತ ಪ್ರಮಾಣದಲ್ಲಿ ಬೆಳೆಸಿದೆವು.

ಅದರಲ್ಲಿ ನಾವು ನಿಮಗೆ ಮತ್ತು ನೀವು ಆಹಾರ ನೀಡದವರಿಗೆ[1] ಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು.

ಯಾವುದೇ ವಸ್ತುವಾದರೂ ಅದರ ಬೊಕ್ಕಸಗಳು ನಮ್ಮ ಬಳಿಯಲ್ಲೇ ಇವೆ. ನಾವು ಪ್ರತಿಯೊಂದು ವಸ್ತುವನ್ನೂ ಅದರ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿಯೇ ಇಳಿಸುತ್ತೇವೆ.

ನಾವು ಫಲವತ್ತಾಗಿಸುವ ಗಾಳಿಯನ್ನು ಕಳುಹಿಸುತ್ತೇವೆ. ನಂತರ ಆಕಾಶದಿಂದ ಮಳೆಯನ್ನು ಸುರಿಸಿ, ಅದನ್ನು ನಿಮಗೆ ಕುಡಿಯಲು ನೀಡುತ್ತೇವೆ. ನೀವು ಅದನ್ನು ಸಂಗ್ರಹಿಸಿಡುವವರಲ್ಲ.

ನಿಶ್ಚಯವಾಗಿಯೂ ನಾವೇ ಜೀವನ ಮತ್ತು ಮರಣವನ್ನು ನೀಡುವವರು. ನಾವೇ (ಎಲ್ಲಾ ವಸ್ತುಗಳ) ಉತ್ತರಾಧಿಕಾರಿಗಳು.

ನಿಮ್ಮಲ್ಲಿ ಇದಕ್ಕೆ ಮೊದಲು ತೀರಿ ಹೋದವರು ಯಾರೆಂದು ನಮಗೆ ತಿಳಿದಿದೆ. ಮುಂದೆ ಬರಲಿರುವವರು ಯಾರೆಂದೂ ನಮಗೆ ತಿಳಿದಿದೆ.

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರನ್ನು ಒಟ್ಟು ಸೇರಿಸುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.

ನಾವು ಮನುಷ್ಯನನ್ನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದೆವು.

ನಾವು ಜಿನ್ನ್‌ಗಳನ್ನು ಇದಕ್ಕಿಂತ ಮೊದಲು ತೀಕ್ಷ್ಣ ತಾಪವಿರುವ ಬೆಂಕಿಯಿಂದ ಸೃಷ್ಟಿಸಿದೆವು.

ತಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳೊಡನೆ ಹೇಳಿದ ಸಂದರ್ಭ: “ನಾನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸುತ್ತೇನೆ.

ನಾನು ಅವನಿಗೆ ಪೂರ್ಣ ರೂಪವನ್ನು ನೀಡಿ ಅವನಿಗೆ ನನ್ನ ಆತ್ಮವನ್ನು ಊದಿದರೆ, ನೀವೆಲ್ಲರೂ ಅವನಿಗೆ ಸಾಷ್ಟಾಂಗ ಮಾಡುತ್ತಾ ಬೀಳಿರಿ.”

ಆಗ ದೇವದೂತರುಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗ ಮಾಡಿದರು.

ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರೊಡನೆ ಸೇರಲು ನಿರಾಕರಿಸಿದನು.

ಅಲ್ಲಾಹು ಕೇಳಿದನು: “ಓ ಇಬ್ಲೀಸ್! ನೀನು ಸಾಷ್ಟಾಂಗ ಮಾಡುವವರೊಡನೆ ಸೇರದಿರಲು ಕಾರಣವೇನು?”

ಅವನು ಹೇಳಿದನು: “ನೀನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗ ಮಾಡಬೇಕಾದವನಲ್ಲ.”

ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಟುಹೋಗು. ನಿಜಕ್ಕೂ ನೀನು ಬಹಿಷ್ಕೃತನಾಗಿರುವೆ.

ಪ್ರತಿಫಲದ ದಿನದ ತನಕ ನಿನ್ನ ಮೇಲೆ ಶಾಪವಿದೆ.”

ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ಅವರನ್ನು ಜೀವಂತ ಎಬ್ಬಿಸಲಾಗುವ ದಿನದ ತನಕ ನನಗೆ ಕಾಲಾವಕಾಶ ನೀಡು.”

ಅಲ್ಲಾಹು ಹೇಳಿದನು: “ಸರಿ. ನಿನ್ನನ್ನು ಕಾಲಾವಕಾಶ ನೀಡಲಾದವರಲ್ಲಿ ಸೇರಿಸಿದ್ದೇನೆ.

ಆ ನಿಗದಿತ ಸಮಯದ ದಿನದ ತನಕ.”

ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ನೀನು ನನ್ನನ್ನು ದಾರಿತಪ್ಪಿಸಿದ ಕಾರಣ, ಭೂಮಿಯಲ್ಲಿ ನಾನು ಅವರೆಲ್ಲರಿಗೂ ಪಾಪಗಳನ್ನು ಅಂದವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸುವೆನು.

ಅವರಲ್ಲಿರುವ ನಿನ್ನ ನಿಷ್ಕಳಂಕ ದಾಸರ ಹೊರತು.”

ಅಲ್ಲಾಹು ಹೇಳಿದನು: “ಇದು ನನ್ನ ಬಳಿಗೆ ತಲುಪುವ ನೇರ ಮಾರ್ಗವಾಗಿದೆ.

ನಿಶ್ಚಯವಾಗಿಯೂ, ನನ್ನ ದಾಸರ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ. ಅವರಲ್ಲಿ ನಿನ್ನನ್ನು ಹಿಂಬಾಲಿಸಿದ ದುರ್ಮಾರ್ಗಿಗಳ ಹೊರತು.

ನಿಶ್ಚಯವಾಗಿಯೂ, ನರಕಾಗ್ನಿಯು ಅವರೆಲ್ಲರಿಗೂ ವಾಗ್ದಾನ ಮಾಡಲಾದ ಸ್ಥಳವಾಗಿದೆ.

ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೂ ಅವರಲ್ಲಿರುವ ಒಂದು ವಿಭಾಗವನ್ನು ವಿಂಗಡಿಸಿಡಲಾಗಿದೆ.

ನಿಶ್ಚಯವಾಗಿಯೂ, ದೇವಭಯವುಳ್ಳವರು ಉದ್ಯಾನಗಳಲ್ಲಿ ಮತ್ತು ಚಿಲುಮೆಗಳಲ್ಲಿರುತ್ತಾರೆ.

(ಅವರೊಡನೆ ಹೇಳಲಾಗುವುದು): “ನಿರ್ಭಯ ಮತ್ತು ಶಾಂತಿಯಿಂದ ಅದರೊಳಗೆ ಪ್ರವೇಶಿಸಿರಿ.”

ಅವರ ಹೃದಯಗಳಲ್ಲಿ ಯಾವುದೇ ರೀತಿಯ ದ್ವೇಷವಿದ್ದರೆ ನಾವು ಅದನ್ನು ತೊಲಗಿಸುವೆವು. ಅವರು ಸಹೋದರರಂತೆ ಪರಸ್ಪರ ಮುಖಾಮುಖಿಯಾಗಿ ಸಿಂಹಾಸನಗಳಲ್ಲಿ ಕುಳಿತಿರುವರು.

ಅಲ್ಲಿ ಅವರಿಗೆ ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ. ಅವರನ್ನು ಅಲ್ಲಿಂದ ಹೊರದಬ್ಬಲಾಗುವುದೂ ಇಲ್ಲ.

ನನ್ನ ದಾಸರಿಗೆ, ನಾನು ಅತ್ಯಂತ ಕ್ಷಮಿಸುವವನು ಮತ್ತು ಅತ್ಯಧಿಕ ದಯೆ ತೋರುವವನೆಂದು ತಿಳಿಸಿ.

ನನ್ನ ಶಿಕ್ಷೆಯು ಅತ್ಯಧಿಕ ನೋವಿನಿಂದ ಕೂಡಿದ ಶಿಕ್ಷೆಯಾಗಿದೆಯೆಂದೂ ತಿಳಿಸಿ.

ಇಬ್ರಾಹೀಮ‌ರ ಅತಿಥಿಗಳ ಬಗ್ಗೆ ಅವರಿಗೆ ತಿಳಿಸಿ.

ಅವರು ಇಬ್ರಾಹೀಮ‌ರ ಬಳಿಗೆ ಬಂದು “ಸಲಾಮ್” ಎಂದು ಹೇಳಿದ ಸಂದರ್ಭ. ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನಮಗೆ ನಿಮ್ಮ ಬಗ್ಗೆ ಭಯವಾಗುತ್ತಿದೆ.”

ಅವರು ಉತ್ತರಿಸಿದರು: “ಭಯಪಡಬೇಡಿ! ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಜನನದ ಶುಭ ಸುದ್ದಿಯನ್ನು ತಿಳಿಸುತ್ತೇವೆ.”

ಇಬ್ರಾಹೀಮ್ ಕೇಳಿದರು: “ನಾನು ಇಳಿ ವಯಸ್ಸನ್ನು ತಲುಪಿದ ಬಳಿಕ ನೀವು ನನಗೆ ಶುಭ ಸುದ್ದಿ ತಿಳಿಸುತ್ತಿದ್ದೀರಾ? ನೀವು ಎಂತಹ ಶುಭ ಸುದ್ದಿ ತಿಳಿಸುತ್ತೀರಿ?”

ಅವರು ಹೇಳಿದರು: “ನಾವು ನಿಮಗೆ ಸತ್ಯವಾದ ಒಂದು ಶುಭ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಆದ್ದರಿಂದ ನೀವು ನಿರಾಶರಾದವರಲ್ಲಿ ಸೇರಬೇಡಿ.”

ಇಬ್ರಾಹೀಮ್ ಹೇಳಿದರು: “ತನ್ನ ಪರಿಪಾಲಕನ (ಅಲ್ಲಾಹನ) ಕರುಣೆಯ ಬಗ್ಗೆ ದಾರಿತಪ್ಪಿದವರ ಹೊರತು ಇನ್ನಾರು ನಿರಾಶರಾಗುತ್ತಾರೆ?”

ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?”

ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ.

ಆದರೆ ಲೂತ್‍ರ ಕುಟುಂಬವು ಇದರಿಂದ ಹೊರತಾಗಿದೆ. ನಾವು ಅವರೆಲ್ಲರನ್ನೂ ಖಂಡಿತ ರಕ್ಷಿಸುವೆವು.

ಆದರೆ ಅವರ ಹೆಂಡತಿಯ ಹೊರತು.” ನಾವು ಅವಳನ್ನು ಬಾಕಿಯಾಗುವವರಲ್ಲಿ (ಶಿಕ್ಷೆಗೆ ಗುರಿಯಾಗುವವರಲ್ಲಿ) ನಿರ್ಣಯಿಸಿದ್ದೇವೆ.

ನಂತರ ಆ ದೂತರು ಲೂತರ ಕುಟುಂಬದವರ ಬಳಿಗೆ ಬಂದಾಗ,

ಲೂತ್ ಹೇಳಿದರು: “ನಿಜಕ್ಕೂ ನೀವು ಅಪರಿಚಿತ ಜನರಂತೆ ಕಾಣುತ್ತೀರಿ.”

ಅವರು ಉತ್ತರಿಸಿದರು: “ಅಲ್ಲ, ವಾಸ್ತವವಾಗಿ ಈ ಜನರು ಯಾವುದರ ಬಗ್ಗೆ ಸಂಶಯಪಡುತ್ತಿದ್ದಾರೋ ಅದನ್ನೇ ನಾವು ತಂದಿದ್ದೇವೆ.

ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.

ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ತಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಡಿ. ನೀವು ಅವರನ್ನು (ಕುಟುಂಬವನ್ನು) ಹಿಂದಿನಿಂದ ಹಿಂಬಾಲಿಸಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ನಿಮಗೆ ಆದೇಶಿಸಲಾಗುವ ಕಡೆಗೆ ಸಾಗಿರಿ.”

ನಾವು ಲೂತರಿಗೆ ಆ ವಿಷಯದ ತೀರ್ಮಾನವನ್ನು ತಿಳಿಸಿದೆವು—ಅದೇನೆಂದರೆ, ಬೆಳಗಾಗುತ್ತಿದ್ದಂತೆ ಇವರ ಬುಡವನ್ನೇ ಕತ್ತರಿಸಿ ಬಿಡಲಾಗುವುದೆಂದು.

ನಗರ ವಾಸಿಗಳು ಕೇಕೆ ಹಾಕುತ್ತಾ ಬಂದರು.

ಲೂತ್ ಹೇಳಿದರು: “ಇವರು ನನ್ನ ಅತಿಥಿಗಳು! ದಯವಿಟ್ಟು ನನಗೆ ಅವಮಾನ ಮಾಡಬೇಡಿ.

ಅಲ್ಲಾಹನನ್ನು ಭಯಪಡಿರಿ. ನನ್ನನ್ನು ತಮಾಷೆ ಮಾಡಬೇಡಿ.”

ಅವರು ಹೇಳಿದರು: “ಜಗತ್ತಿನಲ್ಲಿರುವವರ ವಿಷಯದಲ್ಲಿ (ಹಸ್ತಕ್ಷೇಪ ಮಾಡಬಾರದೆಂದು) ನಾವು ನಿನ್ನನ್ನು ತಡೆದಿಲ್ಲವೇ?”

ಲೂತ್ ಹೇಳಿದರು: “ನಿಮಗೆ ಅದನ್ನು ಮಾಡಲೇಬೇಕೆಂದಿದ್ದರೆ ಇಲ್ಲಿ ನನ್ನ ಹೆಣ್ಣುಮಕ್ಕಳಿದ್ದಾರೆ.”

(ಪ್ರವಾದಿಯವರೇ) ನಿಮ್ಮ ಆಯುಷ್ಯದ ಮೇಲಾಣೆ! ಅವರು ಕಾಮೋನ್ಮಾದದಿಂದ ಅಂಧರಾಗಿ ಅಲೆಯುತ್ತಿದ್ದರು.

ಸೂರ್ಯೋದಯವಾಗುತ್ತಿದ್ದಂತೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.

ನಂತರ ನಾವು ಆ ಊರನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಕಲ್ಲುಗಳ ಮಳೆಯನ್ನು ಸುರಿಸಿದೆವು.

ನಿಶ್ಚಯವಾಗಿಯೂ ಅಂತರ್ದೃಷ್ಟಿಯುಳ್ಳವರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

ನಿಶ್ಚಯವಾಗಿಯೂ ಆ ಊರು ಸಮಾನಾಂತರದಲ್ಲಿ ಚಲಿಸುವ (ಚಿರಪರಿಚಿತ) ರಸ್ತೆಯಲ್ಲಿದೆ.

ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ.

ಐಕತ್‌ನ ಜನರು (ಮದ್ಯನ್ ದೇಶದವರು) ಅಕ್ರಮಿಗಳಾಗಿದ್ದರು.

ಆದ್ದರಿಂದ, ನಾವು ಅವರಿಂದ ಪ್ರತೀಕಾರ ಪಡೆದೆವು. ಈ ಎರಡು ಊರುಗಳೂ[1] ಬಯಲು ರಸ್ತೆಯಲ್ಲಿವೆ.

ಹಿಜ್ರ್ ನಿವಾಸಿಗಳು (ಸಮೂದ್ ಗೋತ್ರದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.

ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವರು ಅವುಗಳನ್ನು ಲೆಕ್ಕಿಸದೆ ವಿಮುಖರಾದರು.

ಅವರು ನಿರ್ಭೀತವಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿದ್ದರು.

ಆಗ ಬೆಳಗ್ಗಿನ ವೇಳೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.

ಅವರ ಯಾವುದೇ ಕರ್ಮಗಳು ಅವರಿಗೆ ಉಪಕಾರ ಮಾಡಲಿಲ್ಲ.

ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತ್ಯಸಮಯವು ಖಂಡಿತ ಬಂದೇ ಬರುತ್ತದೆ. ಆದ್ದರಿಂದ ನೀವು ಅತಿಸುಂದರವಾದ ರೀತಿಯಲ್ಲಿ ಕ್ಷಮಿಸಿಬಿಡಿ.

ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಸೃಷ್ಟಿಕರ್ತನು ಮತ್ತು ಸರ್ವಜ್ಞನಾಗಿದ್ದಾನೆ.

ನಾವು ನಿಮಗೆ ಪುನರಾವರ್ತಿಸಿ ಪಠಿಸಲಾಗುವ ಏಳು ವಚನಗಳನ್ನು[1] ಮತ್ತು ಶ್ರೇಷ್ಠ ಕುರ್‌ಆನನ್ನು ನೀಡಿದ್ದೇವೆ.

ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವರ ವಿಷಯದಲ್ಲಿ ಬೇಸರಪಡಬೇಡಿ. ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಗಳನ್ನು ತಗ್ಗಿಸಿಕೊಡಿ.

ಹೇಳಿರಿ: “ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.”

ವಿಂಗಡನೆ ಮಾಡಿದವರ ಮೇಲೆ ನಾವು (ಶಿಕ್ಷೆಯನ್ನು) ಇಳಿಸಿದಂತೆ,

ಅಂದರೆ ಕುರ್‌ಆನನ್ನು ವಿವಿಧ ಭಾಗಗಳನ್ನಾಗಿ ಮಾಡಿದವರ ಮೇಲೆ.[1]

ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಅವರಲ್ಲಿ ಎಲ್ಲರನ್ನೂ ಖಂಡಿತ ವಿಚಾರಣೆ ಮಾಡುವೆವು.

ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ.

ಆದ್ದರಿಂದ ನಿಮಗೆ ಆಜ್ಞಾಪಿಸಲಾಗುವುದನ್ನು ಬಹಿರಂಗವಾಗಿ ಘೋಷಿಸಿರಿ ಮತ್ತು ಬಹುದೇವಾರಾಧಕರಿಂದ ವಿಮುಖರಾಗಿರಿ.

ನಿಮ್ಮನ್ನು ತಮಾಷೆ ಮಾಡುವವರನ್ನು ನೋಡಿಕೊಳ್ಳಲು ನಿಮಗೆ ನಾವು ಸಾಕು.

ಅವರು ಯಾರೆಂದರೆ, ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಸ್ಥಾಪಿಸುವವರು. ಅವರು ಸದ್ಯವೇ ತಿಳಿದುಕೊಳ್ಳುವರು.

(ಪ್ರವಾದಿಯವರೇ) ಅವರು ಹೇಳುವ ಮಾತುಗಳಿಂದ ನಿಮ್ಮ ಹೃದಯವು ಇಕ್ಕಟ್ಟು ಅನುಭವಿಸುತ್ತಿದೆಯೆಂದು ನಮಗೆ ತಿಳಿದಿದೆ.

ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಮತ್ತು ಸಾಷ್ಟಾಂಗ ಮಾಡುವವರಲ್ಲಿ ಸೇರಿರಿ.

ಮರಣವು ಬರುವ ತನಕ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ.