عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Bee [An-Nahl] - Kannada translation

Surah The Bee [An-Nahl] Ayah 128 Location Maccah Number 16

ಅಲ್ಲಾಹನ ಆಜ್ಞೆಯು ಬಂದಿದೆ. ಆದ್ದರಿಂದ ಅದಕ್ಕಾಗಿ ತ್ವರೆ ಮಾಡಬೇಡಿ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.

“ನನ್ನ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನು ಭಯಪಡಲು ಜನರಿಗೆ ಎಚ್ಚರಿಕೆ ನೀಡಿರಿ” ಎಂಬ ಸಂದೇಶದೊಂದಿಗೆ, ಅವನು ತನ್ನ ದಾಸರಲ್ಲಿ ತಾನು ಇಚ್ಛಿಸುವವರ ಮೇಲೆ ತನ್ನ ಆಜ್ಞೆಯಂತೆ ದೇವವಾಣಿಯ ಸಹಿತ ದೇವದೂತರುಗಳನ್ನು ಇಳಿಸುತ್ತಾನೆ.

ಅವನು ಭೂಮ್ಯಾಕಾಶಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದಾನೆ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಮೋನ್ನತನಾಗಿದ್ದಾನೆ.

ಅವನು ಮಾನವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅಗೋ! ಮಾನವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ!

ಅವನು ಜಾನುವಾರುಗಳನ್ನು ಸಹ ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಬೆಚ್ಚಗಿನ ಉಡುಪುಗಳಿವೆ. ಬೇರೆಯೂ ಪ್ರಯೋಜನಗಳಿವೆ. ಅವುಗಳನ್ನು ನೀವು ಆಹಾರವಾಗಿಯೂ ಸೇವಿಸುತ್ತೀರಿ.

ನೀವು ಅವುಗಳನ್ನು ಮೇಯಿಸಿ ಮುಸ್ಸಂಜೆ ಮರಳಿ ಕರೆತರುವಾಗ ಮತ್ತು ಅವುಗಳನ್ನು ಮೇಯಲು ಮುಂಜಾನೆ ಕರೆದುಕೊಂಡು ಹೋಗುವಾಗ ನಿಮಗೆ ಅವುಗಳಲ್ಲಿ ಸೌಂದರ್ಯವಿದೆ.

ನೀವು ಬಹಳ ಕಷ್ಟದಿಂದಲೇ ಹೊರತು ತಲುಪಲು ಸಾಧ್ಯವಿಲ್ಲದಂತಹ ದೇಶಗಳಿಗೆ ಅವು ನಿಮ್ಮ ಭಾರಗಳನ್ನು ಹೊತ್ತು ಸಾಗುತ್ತವೆ. ನಿಜಕ್ಕೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಹಾನುಭೂತಿಯುಳ್ಳವನು ಮತ್ತು ದಯೆ ತೋರುವವನಾಗಿದ್ದಾನೆ.

ಅವನು ಕುದುರೆಗಳನ್ನು, ಹೇಸರಗತ್ತೆಗಳನ್ನು ಮತ್ತು ಕತ್ತೆಗಳನ್ನು ಸೃಷ್ಟಿಸಿದನು. ನೀವು ಅವುಗಳ ಮೇಲೆ ಸವಾರಿ ಮಾಡುವುದಕ್ಕಾಗಿ ಮತ್ತು ನಿಮಗೊಂದು ಅಲಂಕಾರವಾಗಿ. ನೀವು ತಿಳಿಯದೇ ಇರುವುದನ್ನೂ ಅವನು ಸೃಷ್ಟಿಸುತ್ತಾನೆ.

ನೇರ ಮಾರ್ಗವನ್ನು ತೋರಿಸಿಕೊಡುವುದು ಅಲ್ಲಾಹನ ಹೊಣೆಯಾಗಿದೆ. ಅವುಗಳಲ್ಲಿ ಕೆಲವು ವಕ್ರ ಮಾರ್ಗಗಳಿವೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರಿಗೂ ಸನ್ಮಾರ್ಗ ತೋರಿಸುತ್ತಿದ್ದನು.

ಅವನೇ ಆಕಾಶದಿಂದ ಮಳೆಯನ್ನು ಇಳಿಸಿದವನು. ಅದರಲ್ಲಿ ನಿಮಗೆ ಕುಡಿಯುವ ನೀರಿದೆ. ಅದರಿಂದ ಉಂಟಾದ ಹುಲ್ಲುಗಾವಲುಗಳಲ್ಲಿ ನೀವು ನಿಮ್ಮ ಜಾನುವಾರುಗಳನ್ನು ಮೇಯಿಸುತ್ತೀರಿ.

ಅವನು ಅದರ (ನೀರಿನ) ಮೂಲಕ ನಿಮಗೆ ಪೈರುಗಳನ್ನು, ಆಲಿವ್, ಖರ್ಜೂರ, ದ್ರಾಕ್ಷಿ ಮತ್ತು ಎಲ್ಲ ವಿಧದ ಹಣ್ಣು-ಹಂಪಲುಗಳನ್ನು ಬೆಳೆಸುತ್ತಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

ಅವನು ನಿಮಗೆ ರಾತ್ರಿ-ಹಗಲುಗಳನ್ನು ಮತ್ತು ಸೂರ್ಯ-ಚಂದ್ರರನ್ನು ನಿಯಂತ್ರಿಸಿಕೊಟ್ಟಿದ್ದಾನೆ. ನಕ್ಷತ್ರಗಳು ಅವನ ಆಜ್ಞೆಗೆ ವಿಧೇಯವಾಗಿವೆ. ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ಅವನು ನಿಮಗಾಗಿ ಇನ್ನೂ ಅನೇಕ ರಂಗುರಂಗಿನ ವಸ್ತುಗಳನ್ನು ಭೂಮಿಯಲ್ಲಿ ಹಬ್ಬಿಸಿದ್ದಾನೆ. ನಿಶ್ಚಯವಾಗಿಯೂ ಉಪದೇಶ ಸ್ವೀಕರಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

ಅವನೇ ನಿಮಗೆ ಕಡಲನ್ನು ನಿಯಂತ್ರಿಸಿಕೊಟ್ಟವನು. ಅದರಿಂದ ನೀವು ತಾಜಾ ಮಾಂಸವನ್ನು (ಮೀನು) ಸೇವಿಸುತ್ತೀರಿ ಮತ್ತು ನೀವು ಧರಿಸುವ ಆಭರಣಗಳನ್ನು ಹೊರತೆಗೆಯುತ್ತೀರಿ. ನಾವೆಗಳು ಅದರ ನೀರನ್ನು ಸೀಳುತ್ತಾ ಸಾಗುವುದನ್ನು ನೀವು ನೋಡುತ್ತೀರಿ. ನೀವು ಅವನ (ಅಲ್ಲಾಹನ) ಅನುಗ್ರಹವನ್ನು ಅರಸುವುದಕ್ಕಾಗಿ ಮತ್ತು ಕೃತಜ್ಞರಾಗುವುದಕ್ಕಾಗಿ (ಇವೆಲ್ಲವನ್ನೂ ನಿಯಂತ್ರಿಸಿಕೊಡಲಾಗಿದೆ).

ಭೂಮಿಯು ನಿಮ್ಮೊಂದಿಗೆ ಅಲುಗಾಡದಿರಲು ಅವನು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದನು. ಅವನು ನದಿಗಳನ್ನು ಮತ್ತು ರಸ್ತೆಗಳನ್ನು ಮಾಡಿಕೊಟ್ಟನು. ನೀವು ಉದ್ದೇಶಿತ ಸ್ಥಳಕ್ಕೆ ತಲುಪುವುದಕ್ಕಾಗಿ.

ಅವನು ಇನ್ನೂ ಅನೇಕ ಚಿಹ್ನೆಗಳನ್ನು ಮಾಡಿಕೊಟ್ಟನು. ನಕ್ಷತ್ರಗಳ ಮೂಲಕವೂ ಅವರು (ಜನರು) ದಾರಿಯನ್ನು ಕಂಡುಹಿಡಿಯುತ್ತಾರೆ.

ಹಾಗಾದರೆ, ಸೃಷ್ಟಿಸುವವನು ಸೃಷ್ಟಿಸದವನಂತೆ ಆಗುವನೇ? ಆದರೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?

ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ನೀವು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆ.

ಅವರು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವರು ಏನೂ ಸೃಷ್ಟಿಸುವುದಿಲ್ಲ. ವಾಸ್ತವವಾಗಿ, ಅವರೇ ಸೃಷ್ಟಿಗಳಾಗಿದ್ದಾರೆ.

ಅವರು ನಿರ್ಜೀವಿಗಳು; ಜೀವವಿರುವವರಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುವುದೆಂದು ಕೂಡ ಅವರು ತಿಳಿದಿಲ್ಲ.[1]

ನಿಮ್ಮ ದೇವರು ಏಕೈಕ ದೇವರು. ಪರಲೋಕದಲ್ಲಿ ವಿಶ್ವಾಸವಿಲ್ಲದವರ ಹೃದಯಗಳಲ್ಲಿ ಅಸಮ್ಮತಿಯಿದೆ.[1] ಅವರು ಅಹಂಕಾರದಿಂದ ವರ್ತಿಸುತ್ತಾರೆ.

ಸಂಶಯವೇ ಇಲ್ಲ! ಅವರು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ಸ್ಪಷ್ಟವಾಗಿ ತಿಳಿಯುತ್ತಾನೆ. ಅವನು ಅಹಂಕಾರಿಗಳನ್ನು ಇಷ್ಟಪಡುವುದಿಲ್ಲ.

“ನಿಮ್ಮ ಪರಿಪಾಲಕನು (ಅಲ್ಲಾಹು) ಏನನ್ನು ಅವತೀರ್ಣಗೊಳಿಸಿದನು?” ಎಂದು ಅವರೊಡನೆ ಕೇಳಲಾದರೆ, “ಪ್ರಾಚೀನ ಕಾಲದ ಜನರ ಪುರಾಣಗಳನ್ನು” ಎಂದು ಅವರು ಉತ್ತರಿಸುತ್ತಾರೆ.

ಇದರ ಪರಿಣಾಮವಾಗಿ ಪುನರುತ್ಥಾನ ದಿನದಂದು ಅವರು ತಮ್ಮ ಪಾಪದ ಹೊರೆಯನ್ನು ಪೂರ್ಣವಾಗಿ ಹೊರುತ್ತಾರೆ ಮತ್ತು ಯಾವುದೇ ಜ್ಞಾನವಿಲ್ಲದೆ ಅವರು ಯಾರನ್ನೆಲ್ಲಾ ದಾರಿತಪ್ಪಿಸಿದ್ದಾರೋ ಅವರ ಪಾಪದ ಒಂದು ಭಾಗವನ್ನು ಕೂಡ ಹೊರುತ್ತಾರೆ. ತಿಳಿಯಿರಿ! ಅವರು ಹೊರುವ ಹೊರೆ ಬಹಳ ನಿಕೃಷ್ಟವಾಗಿದೆ.

ಅವರಿಗಿಂತ ಮೊದಲಿನವರು ಕೂಡ ಪಿತೂರಿ ಮಾಡಿದ್ದರು. ಆಗ ಅಲ್ಲಾಹು ಅವರು ಕಟ್ಟಡದ ಅಡಿಪಾಯವನ್ನೇ ಅಲುಗಾಡಿಸಿದನು. ಆಗ ಅದರ ಛಾವಣಿಯು ಅವರ ತಲೆಯ ಮೇಲೆ ಕುಸಿದು ಬಿತ್ತು. ಅವರು ನಿರೀಕ್ಷಿಸದ ಕಡೆಯಿಂದ ಶಿಕ್ಷೆಯು ಅವರ ಬಳಿಗೆ ಬಂತು.

ನಂತರ ಪುನರುತ್ಥಾನ ದಿನದಂದು ಅವನು ಅವರನ್ನು ಅವಮಾನಿಸುತ್ತಾ ಕೇಳುವನು: “ನೀವು ನನಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಎಲ್ಲಿದ್ದಾರೆ? ಅವರ ವಿಷಯದಲ್ಲಿ ನೀವು (ಸತ್ಯವಿಶ್ವಾಸಿಗಳನ್ನು) ವಿರೋಧಿಸುತ್ತಿದ್ದಿರಲ್ಲವೇ?” ಜ್ಞಾನಿಗಳು ಹೇಳುವರು: “ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ಇಂದು ಅವಮಾನ ಮತ್ತು ಕೆಡುಕು ಕಾದಿದೆ.”

ಅವರು ಯಾರೆಂದರೆ, ಸ್ವಯಂ ಅಕ್ರಮವೆಸಗಿದ ಸ್ಥಿತಿಯಲ್ಲಿ ದೇವದೂತರುಗಳು ಯಾರ ಆತ್ಮವನ್ನು ವಶಪಡಿಸುವರೋ ಅವರು. ಆಗ ಅವರು “ನಾವು ಯಾವುದೇ ತಪ್ಪು ಮಾಡಿಲ್ಲ” ಎನ್ನುತ್ತಾ ಶರಣಾಗುವರು. ಹೌದು! ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.

ಆದ್ದರಿಂದ ನೀವು ನರಕದ ಬಾಗಿಲುಗಳನ್ನು ಪ್ರವೇಶ ಮಾಡಿರಿ. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಹಂಕಾರಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.

“ನಿಮ್ಮ ಪರಿಪಾಲಕನು (ಅಲ್ಲಾಹು) ಏನನ್ನು ಅವತೀರ್ಣಗೊಳಿಸಿದನು?” ಎಂದು ದೇವಭಯವುಳ್ಳವರೊಡನೆ ಕೇಳಲಾದರೆ, ಅವರು ಹೇಳುವರು: “ಅತ್ಯುತ್ತಮವಾದುದನ್ನು.” ಒಳಿತು ಮಾಡುವವರಿಗೆ ಇಹಲೋಕದಲ್ಲೇ ಒಳಿತಿದೆ. ಪರಲೋಕ ಭವನವಂತೂ ಅತಿಶ್ರೇಷ್ಠವಾಗಿದೆ. ದೇವಭಯವುಳ್ಳವರ ಭವನವು ಬಹಳ ಉತ್ತಮವಾಗಿದೆ.

ತಳಭಾಗದಿಂದ ನದಿಗಳು ಹರಿಯುವ ಶಾಶ್ವತವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು ಅವರು ಪ್ರವೇಶಿಸುವರು. ಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ಈ ರೀತಿ ಅಲ್ಲಾಹು ದೇವಭಯವುಳ್ಳವರಿಗೆ ಪ್ರತಿಫಲವನ್ನು ನೀಡುತ್ತಾನೆ.

ಪರಿಶುದ್ಧ ಜನರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಹೇಳುವರು: “ನಿಮಗೆ ಶಾಂತಿಯಿರಲಿ. ನೀವು ಮಾಡಿದ ಕರ್ಮಗಳ ಫಲವಾಗಿ ಸ್ವರ್ಗಲೋಕವನ್ನು ಪ್ರವೇಶ ಮಾಡಿರಿ.”

ತಮ್ಮ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದನ್ನು ಮಾತ್ರ ಅವರು ಕಾಯುತ್ತಿದ್ದಾರೆಯೇ? ಅವರಿಗಿಂತ ಮೊದಲಿನವರು ಕೂಡ ಹೀಗೆಯೇ ಮಾಡಿದ್ದರು. ಅಲ್ಲಾಹು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡಿದರು.

ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳ ಫಲವನ್ನು ಅವರು ಉಂಡರು. ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಯೇ ಬಿಟ್ಟಿತು.

ಅಲ್ಲಾಹನೊಂದಿಗೆ (ಬೇರೆ ದೇವರುಗಳನ್ನು) ಸಹಭಾಗಿಗಳನ್ನಾಗಿ ಮಾಡಿದವರು ಹೇಳಿದರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸುತ್ತಿರಲಿಲ್ಲ. ಅವನು ಆಜ್ಞಾಪಿಸಿದ್ದಲ್ಲದೆ ಬೇರೇನನ್ನೂ ನಾವು ನಿಷಿದ್ಧವೆನ್ನುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ಮಾಡಿದ್ದರು. ಸಂದೇಶವಾಹಕರಿಗೆ ಸಂದೇಶವನ್ನು ತಲುಪಿಸುವುದಲ್ಲದೆ ಬೇರೇನಾದರೂ ಹೊಣೆಗಾರಿಕೆಯಿದೆಯೇ?

“ಅಲ್ಲಾಹನನ್ನು ಆರಾಧಿಸಿರಿ ಮತ್ತು ಮಿಥ್ಯ ದೇವರುಗಳನ್ನು ತೊರೆಯಿರಿ” ಎಂಬ ಸಂದೇಶದೊಂದಿಗೆ ನಾವು ಎಲ್ಲಾ ಸಮುದಾಯಗಳಿಗೂ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದನು. ಕೆಲವರಿಗೆ ದುರ್ಮಾರ್ಗವು ಖಾತ್ರಿಯಾಗಿದೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.

(ಪ್ರವಾದಿಯವರೇ) ಅವರು ಸನ್ಮಾರ್ಗಿಗಳಾಗಬೇಕೆಂಬ ಹಂಬಲ ನಿಮಗಿದ್ದರೆ (ಅದು ವ್ಯರ್ಥ). ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. ಅವರಿಗೆ ಸಹಾಯ ಮಾಡುವವರು ಯಾರೂ ಇಲ್ಲ.

“ಅಲ್ಲಾಹು ಸತ್ತವರಿಗೆ ಜೀವ ನೀಡಿ ಎಬ್ಬಿಸುವುದಿಲ್ಲ” ಎಂದು ಅವರು ಬಲವಾಗಿ ಆಣೆ ಹಾಕುತ್ತಾ ಹೇಳಿದರು. ಹೌದು! (ಅವನು ಖಂಡಿತ ಜೀವ ನೀಡಿ ಎಬ್ಬಿಸುತ್ತಾನೆ). ಅದು ಅವನ ಸತ್ಯ ವಾಗ್ದಾನವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

ಅದೇಕೆಂದರೆ, ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಅದನ್ನು ಅವರಿಗೆ ವಿವರಿಸಿಕೊಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳು ಸುಳ್ಳು ಹೇಳುವವರೆಂದು ಅವರು ಮನವರಿಕೆಯಾಗುವುದಕ್ಕಾಗಿ.

ನಾವು ಒಂದು ವಸ್ತುವನ್ನು ಬಯಸಿದರೆ ಅದರೊಡನೆ ನಮ್ಮ ಮಾತು “ಉಂಟಾಗು” ಎಂದು ಹೇಳುವುದು ಮಾತ್ರವಾಗಿದೆ. ಆಗ ಅದು ಉಂಟಾಗುತ್ತದೆ.

ಹಿಂಸೆಗೆ ಗುರಿಯಾದ ಬಳಿಕವೂ ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರು ಯಾರೋ—ಅವರಿಗೆ ನಾವು ಇಹಲೋಕದಲ್ಲಿ ಉತ್ತಮ ವಾಸ್ತವ್ಯವನ್ನು ಮಾಡಿಕೊಡುವೆವು. ಪರಲೋಕದ ಪ್ರತಿಫಲವಂತೂ ಅತಿಶ್ರೇಷ್ಠವಾದುದು. ಅವರು ಅದನ್ನು ತಿಳಿದಿರುತ್ತಿದ್ದರೆ!

ಅವರು ಯಾರೆಂದರೆ, ಸಹಿಷ್ಣುತೆಯುಳ್ಳವರು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರು.

ನಿಮಗಿಂತ ಮೊದಲು ನಾವು ಸಂದೇಶವಾಹಕರನ್ನಾಗಿ ಪುರುಷರನ್ನು ಮಾತ್ರ ಕಳುಹಿಸಿದ್ದೆವು. ಅವರಿಗೆ ನಾವು ದೇವವಾಣಿಯನ್ನು ನೀಡುತ್ತಿದ್ದೆವು. ನಿಮಗೆ ಅರಿವಿಲ್ಲದಿದ್ದರೆ ವಿದ್ವಾಂಸರೊಡನೆ ಕೇಳಿ ನೋಡಿ.[1]

ಸ್ಪಷ್ಟ ಸಾಕ್ಷ್ಯಾಧಾರಗಳು ಮತ್ತು ಗ್ರಂಥಗಳೊಂದಿಗೆ (ನಾವು ಅವರನ್ನು ಕಳುಹಿಸಿದ್ದೇವೆ). (ಪ್ರವಾದಿಯವರೇ) ನಾವು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿರುವುದು ಜನರಿಗೆ ಅವತೀರ್ಣವಾದ ಸಂದೇಶವನ್ನು ನೀವು ಅವರಿಗೆ ವಿವರಿಸಿಕೊಡುವುದಕ್ಕಾಗಿ ಮತ್ತು ಅವರು ಆಲೋಚಿಸುವುದಕ್ಕಾಗಿ.

ಕೆಟ್ಟ ಪಿತೂರಿಗಳನ್ನು ಮಾಡುವವರು—ಅವರನ್ನು ಅಲ್ಲಾಹು ಭೂಮಿಯಲ್ಲಿ ಹುದುಗಿಸಿ ಬಿಡಲಾರನು ಅಥವಾ ಅವರು ನಿರೀಕ್ಷಿಸದ ಕಡೆಯಿಂದ ಅವರಿಗೆ ಶಿಕ್ಷೆಯು ಬಂದೆರಗಲಾರದು ಎಂದು ನಿರ್ಭಯರಾಗಿದ್ದಾರೆಯೇ?

ಅಥವಾ ಅವರು ತಮ್ಮ ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವಾಗ ಅಲ್ಲಾಹು ಅವರನ್ನು ಹಿಡಿಯಲಾರನೆಂದು (ಅವರು ನಿರ್ಭಯರಾಗಿದ್ದಾರೆಯೇ)? ಏನೇ ಆದರೂ ಅಲ್ಲಾಹನನ್ನು ಸೋಲಿಸಲು ಅವರಿಗೆ ಸಾಧ್ಯವಿಲ್ಲ.

ಅಥವಾ ಅವರನ್ನು ಹೆದರುವಂತೆ ಮಾಡಿ ಹಿಡಿಯಲಾರನೆಂದು (ಅವರು ನಿರ್ಭಯರಾಗಿದ್ದಾರೆಯೇ)? ಆದರೆ ನಿಮ್ಮ ಪರಿಪಾಲಕನು (ಅಲ್ಲಾಹು) ಅತ್ಯಂತ ಸಹಾನುಭೂತಿಯುಳ್ಳವನು ಮತ್ತು ಅತ್ಯಧಿಕ ದಯೆ ತೋರುವವನಾಗಿದ್ದಾನೆ.

ಅಲ್ಲಾಹು ಸೃಷ್ಟಿಸಿದ ಯಾವುದಾದರೂ ವಸ್ತುವನ್ನು ಅವರು ನೋಡುವುದಿಲ್ಲವೇ? ಅದರ ನೆರಳು ಬಲಭಾಗದಲ್ಲೂ ಎಡಭಾಗದಲ್ಲೂ ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತದೆ ಮತ್ತು ತನ್ನ ವಿನಮ್ರತೆಯನ್ನು ವ್ಯಕ್ತಪಡಿಸುತ್ತದೆ.

ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಜೀವರಾಶಿಗಳು ಮತ್ತು ಎಲ್ಲಾ ದೇವದೂತರುಗಳು ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತಾರೆ. ಅವರು ಅಹಂಕಾರ ತೋರುವುದಿಲ್ಲ.

ಅವರು (ದೇವದೂತರು) ತಮ್ಮ ಮೇಲ್ಭಾಗದಲ್ಲಿರುವ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುತ್ತಾರೆ. ಅವರಿಗೆ ಆದೇಶಿಸಲಾಗುವುದನ್ನು ನಿರ್ವಹಿಸುತ್ತಾರೆ.

ಅಲ್ಲಾಹು ಹೇಳಿದನು: “ನೀವು ಎರಡು ದೇವರುಗಳನ್ನು ಸ್ವೀಕರಿಸಬೇಡಿ. ಏಕೈಕ ದೇವನು ಅವನು (ಅಲ್ಲಾಹು) ಮಾತ್ರ. ಆದ್ದರಿಂದ ನೀವು ನನ್ನನ್ನು ಮಾತ್ರ ಭಯಪಡಿರಿ.”

ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಆರಾಧನೆ ಅವನಿಗೆ ಮಾತ್ರ ಸಲ್ಲತಕ್ಕದ್ದು. ಆದರೂ ನೀವು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಭಯಪಡುತ್ತೀರಾ?

ನಿಮ್ಮಲ್ಲಿ ಬಳಿ ಯಾವುದೇ ಅನುಗ್ರಹಗಳಿದ್ದರೂ ಅದು ಅಲ್ಲಾಹು ನೀಡಿದ್ದಾಗಿದೆ. ನಂತರ ನಿಮಗೇನಾದರೂ ತೊಂದರೆ ಸಂಭವಿಸಿದರೆ ನೀವು ಅವನಲ್ಲೇ ಮೊರೆಯಿಡುತ್ತೀರಿ.

ನಂತರ ಅವನು ನಿಮ್ಮಿಂದ ಆ ತೊಂದರೆಯನ್ನು ನಿವಾರಿಸಿದರೆ, ಅಗೋ ನಿಮ್ಮಲ್ಲೊಂದು ಗುಂಪು ತಮ್ಮ ಪರಿಪಾಲಕನೊಡನೆ (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.

ನಾವು ಅವರಿಗೆ ದಯಪಾಲಿಸಿದ ಅನುಗ್ರಹಗಳನ್ನು ಅವರು ನಿಷೇಧಿಸುತ್ತಾರೆ. ನೀವು ಆನಂದಿಸಿ. ಸದ್ಯವೇ ನೀವು ತಿಳಿಯುವಿರಿ.

ನಾವು ಅವರಿಗೆ ಒದಗಿಸಿರುವುದರಲ್ಲಿ ಒಂದಂಶವನ್ನು ಅವರು ಅವರಿಗೆ ಯಾವುದೇ ಪರಿಚಯವಿಲ್ಲದ ದೇವರುಗಳಿಗೆ ಮೀಸಲಿಡುತ್ತಾರೆ.[1] ಅಲ್ಲಾಹನಾಣೆ! ನಿಮ್ಮ ಈ ಸುಳ್ಳಾರೋಪಗಳ ಬಗ್ಗೆ ನಿಮ್ಮೊಡನೆ ಖಂಡಿತ ಪ್ರಶ್ನಿಸಲಾಗುವುದು.

ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳಿದ್ದಾರೆಂದು ಆರೋಪಿಸುತ್ತಾರೆ. ಅಲ್ಲಾಹು ಪರಿಶುದ್ಧನು! ಆದರೆ ಅವರಿಗೆ ಅವರು ಬಯಸುವುದನ್ನೇ (ಗಂಡು ಮಕ್ಕಳನ್ನು) ಇಟ್ಟುಕೊಂಡಿದ್ದಾರೆ.

ಅವರಲ್ಲೊಬ್ಬನಿಗೆ ಒಂದು ಹೆಣ್ಣು ಮಗುವಿನ ಜನನದ ಬಗ್ಗೆ ಶುಭ ಸುದ್ದಿಯನ್ನು ತಿಳಿಸಲಾದರೆ, ಅವನ ಮುಖವು ಕಪ್ಪಿಡುತ್ತದೆ ಮತ್ತು (ಹೃದಯದಲ್ಲಿ) ರೋಷ ಉಕ್ಕುತ್ತದೆ.

ಆ ಕೆಟ್ಟ ವಾರ್ತೆಯ ಕಾರಣದಿಂದಾಗಿ ಅವನು ಜನರಿಂದ ಅಡಗುತ್ತಾನೆ. ಆ ಮಗುವನ್ನು ಸಾಕಬೇಕೋ ಅಥವಾ ಮಣ್ಣಿನಲ್ಲಿ ದಫನ ಮಾಡಬೇಕೋ? ಎಂದು ಅವನು ಯೋಚಿಸುತ್ತಾನೆ. ಅವರು ಮಾಡುವ ತೀರ್ಮಾನವು ಬಹಳ ನಿಕೃಷ್ಟವಾಗಿದೆ.[1]

ಪರಲೋಕದಲ್ಲಿ ವಿಶ್ವಾಸವಿಡದವರಿಗೆ ಕೆಟ್ಟ ವಿಶೇಷಣವಿದೆ. ಅಲ್ಲಾಹನಿಗೆ ಅತ್ಯುನ್ನತ ವಿಶೇಷಣವಿದೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅಲ್ಲಾಹು ಮನುಷ್ಯರನ್ನು ಅವರು ಮಾಡಿದ ಅಕ್ರಮಗಳ ಕಾರಣದಿಂದ ಹಿಡಿದು ಶಿಕ್ಷಿಸುವುದಾದರೆ, ಭೂಮಿಯಲ್ಲಿ ಒಂದೇ ಒಂದು ಜೀವಿಯೂ ಉಳಿಯುತ್ತಿರಲಿಲ್ಲ. ಆದರೆ ಅವನು ಒಂದು ನಿಗದಿತ ಅವಧಿಯವರೆಗೆ ಅವರಿಗೆ ಕಾಲಾವಕಾಶ ನೀಡುತ್ತಾನೆ. ಅವರ ಅವಧಿಯೇನಾದರೂ ಬಂದುಬಿಟ್ಟರೆ ಆ ಅವಧಿಯಿಂದ ಒಂದು ಕ್ಷಣ ಹಿಂದೆ ಉಳಿಯಲು ಅಥವಾ ಒಂದು ಕ್ಷಣ ಮುಂದಕ್ಕೆ ಹೋಗಲು ಅವರಿಗೆ ಸಾಧ್ಯವಿಲ್ಲ.

ಅವರಿಗೆ ಇಷ್ಟವಿಲ್ಲದ ವಸ್ತುಗಳನ್ನು ಅವರು ಅಲ್ಲಾಹನಿಗೆ ಅರೋಪಿಸುತ್ತಾರೆ. ಅತ್ಯುತ್ತಮವಾದುದೆಲ್ಲವೂ ಅವರಿಗೆಂದು ಅವರ ನಾಲಗೆಗಳು ಸುಳ್ಳು ಸುಳ್ಳಾಗಿ ಬಣ್ಣಿಸುತ್ತವೆ. ಸಂಶಯವೇ ಇಲ್ಲ! ನಿಶ್ಚಯವಾಗಿಯೂ ನರಕಾಗ್ನಿಯಿರುವುದು ಅವರಿಗೇ ಆಗಿದೆ. ಅವರು (ನರಕವಾಸಿಗಳ) ಮುಂಭಾಗದಲ್ಲಿರುವರು.

ಅಲ್ಲಾಹನಾಣೆ! ನಿಮಗಿಂತ ಮೊದಲು ನಾವು ಅನೇಕ ಸಮುದಾಯಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಆದರೆ ಶೈತಾನನು ಅವರಿಗೆ ಅವರ ದುಷ್ಕರ್ಮಗಳನ್ನು ಅಂದಗೊಳಿಸಿ ತೋರಿಸಿದನು. ಇಂದು ಕೂಡ ಅವನು ಅವರ ಮಿತ್ರನೇ ಆಗಿದ್ದಾನೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.

(ಪ್ರವಾದಿಯವರೇ) ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಅದನ್ನು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡಲು ನಾವು ನಿಮಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಇದು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.

ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಅದರಿಂದ ನಿರ್ಜೀವವಾಗಿದ್ದ ಭೂಮಿಗೆ ಜೀವವನ್ನು ನೀಡಿದನು. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

ನಿಶ್ಚಯವಾಗಿಯೂ ನಿಮಗೆ ಜಾನುವಾರುಗಳಲ್ಲಿ ನೀತಿಪಾಠವಿದೆ. ಅವುಗಳ ಉದರಗಳಲ್ಲಿ ಏನಿದೆಯೋ ಅದರಿಂದ—ಸೆಗಣಿ ಮತ್ತು ರಕ್ತದ ನಡುವಿನಿಂದ—ನಾವು ನಿಮಗೆ ಶುದ್ಧ ಹಾಲನ್ನು ಕುಡಿಯಲು ನೀಡುತ್ತೇವೆ. ಅದು ಕುಡಿಯುವವರಿಗಂತೂ ಬಹಳ ರುಚಿಕರವಾಗಿದೆ.

ಖರ್ಜೂರದ ಮರಗಳ ಮತ್ತು ದ್ರಾಕ್ಷಿ ಬಳ್ಳಿಗಳ ಹಣ್ಣುಗಳಿಂದಲೂ ನೀವು ಶರಾಬನ್ನು ಮತ್ತು ಉತ್ತಮ ಆಹಾರಗಳನ್ನು ತಯಾರಿಸುತ್ತೀರಿ.[1] ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

ನಿಮ್ಮ ಪರಿಪಾಲಕನು (ಅಲ್ಲಾಹು) ಜೇನುನೊಣಕ್ಕೆ ಸಂದೇಶವನ್ನು ನೀಡಿದನು: “ಬೆಟ್ಟಗಳಲ್ಲಿ, ಮರಗಳಲ್ಲಿ ಮತ್ತು ಮನುಷ್ಯರು ನಿರ್ಮಿಸಿದ ಎತ್ತರದ ಕಟ್ಟಡಗಳಲ್ಲಿ ಗೂಡುಗಳನ್ನು ನಿರ್ಮಿಸು.

ನಂತರ ಎಲ್ಲ ರೀತಿಯ ಹಣ್ಣುಗಳನ್ನು ತಿಂದು, ನಿನ್ನ ಪರಿಪಾಲಕನು (ಅಲ್ಲಾಹು) ಸುಲಭಗೊಳಿಸಿದ ಮಾರ್ಗಗಳಲ್ಲಿ ಸಂಚರಿಸು.” ಅವುಗಳ ಉದರಗಳಿಂದ ವಿಭಿನ್ನ ರಂಗುಗಳ ಪಾನೀಯವು ಹೊರಬರುತ್ತದೆ. ಅದರಲ್ಲಿ ಮನುಷ್ಯರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಯೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

ಅಲ್ಲಾಹು ನಿಮ್ಮನ್ನು ಸೃಷ್ಟಿಸಿದನು. ನಂತರ ನಿಮ್ಮನ್ನು ಅವನು ಮೃತಪಡಿಸುವನು. ನಿಮ್ಮಲ್ಲಿ ಕೆಲವರನ್ನು—ಅವರು ಅನೇಕ ವಿಷಯಗಳನ್ನು ತಿಳಿದುಕೊಂಡ ಬಳಿಕವೂ ಏನೂ ತಿಳಿಯದ ಅವಸ್ಥೆಗೆ ತಲುಪುವ ರೀತಿಯಲ್ಲಿ ಹಣ್ಣು ಹಣ್ಣು ಮುದುಕರಾಗುವ ಪ್ರಾಯಕ್ಕೆ ಮರಳಿಸಲಾಗುವರು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.

ಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತಲೂ ಹೆಚ್ಚು ಉಪಜೀವನವನ್ನು ನೀಡಿದ್ದಾನೆ. ಹೆಚ್ಚು ಉಪಜೀವನ ನೀಡಲಾದವರು ಅದನ್ನು ತಮ್ಮ ಅಧೀನದಲ್ಲಿರುವ ಗುಲಾಮರಿಗೆ ನೀಡಿ ಅದರಲ್ಲಿ ಇಬ್ಬರೂ (ಗುಲಾಮ ಮತ್ತು ಯಜಮಾನ) ಸಮಾನರಾಗುವಂತೆ ಮಾಡಿಕೊಳ್ಳುವುದಿಲ್ಲ.[1] ಹಾಗಿದ್ದೂ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸುತ್ತಾರೆಯೇ?

ಅಲ್ಲಾಹು ನಿಮ್ಮಿಂದಲೇ ನಿಮಗೆ ಪತ್ನಿಯರನ್ನು ಮಾಡಿಕೊಟ್ಟನು. ನಿಮ್ಮ ಪತ್ನಿಯರ ಮೂಲಕ ನಿಮಗೆ ಮಕ್ಕಳು ಮೊಮ್ಮಕ್ಕಳನ್ನು ಮಾಡಿಕೊಟ್ಟನು. ಉತ್ತಮ ವಸ್ತುಗಳನ್ನು ನಿಮಗೆ ಆಹಾರವಾಗಿ ನೀಡಿದನು. ಹೀಗಿದ್ದೂ ಅವರು ಅಸತ್ಯದಲ್ಲಿ ನಂಬಿಕೆಯಿಟ್ಟು ಅಲ್ಲಾಹನ ಸವಲತ್ತುಗಳನ್ನು ನಿಷೇಧಿಸುತ್ತಾರೆಯೇ?

ಅವರು ಅಲ್ಲಾಹನನ್ನು ಬಿಟ್ಟು ಭೂಮ್ಯಾಕಾಶಗಳಲ್ಲಿ ಅವರಿಗೆ ಯಾವುದೇ ಉಪಜೀವನ ಮಾರ್ಗಗಳನ್ನು ಮಾಡಿಕೊಡದವರನ್ನು ಮತ್ತು ಯಾವುದೇ ಸಾಮರ್ಥ್ಯವಿಲ್ಲದವರನ್ನು ಆರಾಧಿಸುತ್ತಿದ್ದಾರೆ.

ಆದ್ದರಿಂದ ನೀವು ಅಲ್ಲಾಹನಿಗೆ ಉದಾಹರಣೆಗಳನ್ನು ಕೊಡಲು ಹೋಗಬೇಡಿ. ನಿಶ್ಚಯವಾಗಿಯೂ ಅಲ್ಲಾಹನಿಗೆ ತಿಳಿದಿದೆ. ಆದರೆ ನಿಮಗೆ ತಿಳಿದಿಲ್ಲ.

ಅಲ್ಲಾಹು ಒಂದು ಉದಾಹರಣೆಯನ್ನು ಕೊಡುತ್ತಾನೆ. ಇನ್ನೊಬ್ಬನ ಅಧೀನದಲ್ಲಿರುವ ಒಬ್ಬ ಗುಲಾಮ. ಅವನಿಗೆ (ಸ್ವಯಂ) ಏನೂ ಮಾಡುವ ಸಾಮರ್ಥ್ಯವಿಲ್ಲ. ಅದೇ ರೀತಿ, ನಾವು ಅತ್ಯುತ್ತಮ ಉಪಜೀವನವನ್ನು ದಯಪಾಲಿಸಿದ ಇನ್ನೊಬ್ಬ ವ್ಯಕ್ತಿ. ಅವನು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಾನೆ. ಇವರು ಸಮಾನರಾಗುವರೇ?[1] ಅಲ್ಲಾಹನಿಗೆ ಸರ್ವಸ್ತುತಿ. ವಾಸ್ತವವಾಗಿ, ಅವರಲ್ಲಿ ಹೆಚ್ಚಿನವರೂ ತಿಳಿಯುವುದಿಲ್ಲ.

ಅಲ್ಲಾಹು ಇನ್ನೊಂದು ಉದಾಹರಣೆಯನ್ನು ಕೊಡುತ್ತಾನೆ. ಇಬ್ಬರು ವ್ಯಕ್ತಿಗಳಿದ್ದು ಅವರಲ್ಲೊಬ್ಬನು ಮೂಕ. ಅವನಿಗೆ ಏನೂ ಮಾಡುವ ಸಾಮರ್ಥ್ಯವಿಲ್ಲ. ಅವನ ಯಜಮಾನನಿಗೆ ಅವನೊಂದು ಹೊರೆಯಾಗಿದ್ದಾನೆ. ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಇವನು ಮತ್ತು ನೇರಮಾರ್ಗದಲ್ಲಿದ್ದು ನ್ಯಾಯವನ್ನು ಆದೇಶಿಸುವ ವ್ಯಕ್ತಿ ಸಮಾನರಾಗುವರೇ?

ಭೂಮ್ಯಾಕಾಶಗಳ ಅದೃಶ್ಯಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಂತ್ಯ ಸಮಯದ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಅಥವಾ ಅದಕ್ಕಿಂತಲೂ ಹತ್ತಿರವಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಅಲ್ಲಾಹು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರತಂದನು. ಆಗ ನಿಮಗೆ ಏನೂ ತಿಳಿದಿರಲಿಲ್ಲ. ಅವನು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದನು. ನೀವು ಕೃತಜ್ಞರಾಗುವುದಕ್ಕಾಗಿ.

ವಾಯುಮಂಡಲದಲ್ಲಿ ಅಲ್ಲಾಹನ ಆಜ್ಞೆಗೆ ವಿಧೇಯವಾಗಿ ಹಾರಾಡುವ ಹಕ್ಕಿಗಳನ್ನು ಅವರು ನೋಡಿಲ್ಲವೇ? ಅಲ್ಲಾಹನ ಹೊರತು ಯಾರೂ ಅವುಗಳನ್ನು ಆಧರಿಸಿ ಹಿಡಿಯುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಇದರಲ್ಲಿ ದೃಷ್ಟಾಂತಗಳಿವೆ.

ಅಲ್ಲಾಹು ನಿಮಗೆ ನಿಮ್ಮ ಮನೆಗಳಲ್ಲಿ ವಿಶ್ರಾಂತಿಯ ಸ್ಥಳವನ್ನು ಮಾಡಿಕೊಟ್ಟಿದ್ದಾನೆ. ಜಾನುವಾರುಗಳ ತೊಗಲುಗಳಿಂದಲೂ ಅವನು ನಿಮಗೆ ಮನೆಗಳನ್ನು (ಡೇರೆಗಳನ್ನು) ಮಾಡಿಕೊಟ್ಟಿದ್ದಾನೆ. ನೀವು ಪ್ರಯಾಣ ಮಾಡುವ ದಿನಗಳಲ್ಲೂ ಮತ್ತು ಬಿಡಾರ ಹೂಡುವ ದಿನಗಳಲ್ಲೂ ಅವುಗಳನ್ನು ಅನಾಯಾಸವಾಗಿ ಒಯ್ಯುತ್ತೀರಿ. ಅವುಗಳ ಉಣ್ಣೆ, ತುಪ್ಪಳ ಮತ್ತು ಕೇಶಗಳಿಂದ ನೀವು ನಿಗದಿತ ಕಾಲದವರೆಗೆ ಉಪಯೋಗಗಳನ್ನು ಮತ್ತು ಆನಂದವನ್ನು ಪಡೆಯುತ್ತೀರಿ.

ಅಲ್ಲಾಹು ನಿಮಗೆ ಅವನು ಸೃಷ್ಟಿಸಿದ ವಸ್ತುಗಳಿಂದ ನೆರಳನ್ನು ಮಾಡಿಕೊಟ್ಟಿದ್ದಾನೆ. ಪರ್ವತಗಳಲ್ಲಿ ನಿಮಗೆ ಆಶ್ರಯದಾಣಗಳನ್ನು (ಗುಹೆಗಳನ್ನು) ಮಾಡಿಕೊಟ್ಟಿದ್ದಾನೆ. ನಿಮ್ಮನ್ನು ಸೆಕೆಯಿಂದ ರಕ್ಷಿಸುವ ಅಂಗಿಗಳನ್ನು ಮತ್ತು ಯುದ್ಧದಲ್ಲಿ (ವೈರಿಯಿಂದ) ರಕ್ಷಿಸುವ ಅಂಗಿಗಳನ್ನು ಮಾಡಿಕೊಟ್ಟಿದ್ದಾನೆ. ಈ ರೀತಿ ಅವನು ನಿಮಗೆ ತನ್ನ ಎಲ್ಲಾ ಅನುಗ್ರಹವನ್ನು ಪೂರ್ಣವಾಗಿ ಕರುಣಿಸುತ್ತಿದ್ದಾನೆ. ನೀವು ಅವನಿಗೆ ಶರಣಾಗುವುದಕ್ಕಾಗಿ.

(ಪ್ರವಾದಿಯವರೇ) ಅವರೇನಾದರೂ ವಿಮುಖರಾದರೆ—ನಿಮ್ಮ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರ.

ಅವರು ಅಲ್ಲಾಹನ ಅನುಗ್ರಹಗಳನ್ನು ಗುರುತಿಸಿದ ಬಳಿಕವೂ ಅವುಗಳನ್ನು ನಿಷೇಧಿಸುತ್ತಾರೆ. ಅವರಲ್ಲಿ ಹೆಚ್ಚಿನವರೂ ಕೃತಘ್ನರಾಗಿದ್ದಾರೆ.

ನಾವು ಎಲ್ಲಾ ಸಮುದಾಯಗಳಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ಎಬ್ಬಿಸುವ ದಿನ. ನಂತರ ಸತ್ಯನಿಷೇಧಿಗಳಿಗೆ (ನೆಪ ಹೇಳಿ ತಪ್ಪಿಸಿಕೊಳ್ಳಲು) ಅನುಮತಿ ನೀಡಲಾಗುವುದಿಲ್ಲ. ಅವರಿಗೆ ಪಶ್ಚಾತ್ತಾಪಪಡಲು ಕೂಡ ಅವಕಾಶ ನೀಡಲಾಗುವುದಿಲ್ಲ.

ಅಕ್ರಮಿಗಳು ಶಿಕ್ಷೆಯನ್ನು ನೋಡುವಾಗ—ಅವರಿಗೆ ಅದರಲ್ಲಿ ರಿಯಾಯಿತಿ ನೀಡುವ ಅಥವಾ ಅವರಿಗೆ ಕಾಲಾವಕಾಶ ನೀಡುವ ವಿಷಯವೇ ಇಲ್ಲ.

ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದವರು (ಪರಲೋಕದಲ್ಲಿ) ತಾವು ಸಹಭಾಗಿಗಳನ್ನಾಗಿ ಮಾಡಿದವರನ್ನು ಕಂಡಾಗ ಹೇಳುವರು: “ನಮ್ಮ ಪರಿಪಾಲಕನೇ! ನಾವು ನಿನ್ನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದ ಸಹಭಾಗಿಗಳು ಇವರೇ.” ಆಗ ಅವರು ಉತ್ತರಿಸುವರು: “ನೀವು ಖಂಡಿತ ಸುಳ್ಳು ಹೇಳುತ್ತಿದ್ದೀರಿ.”

ಅಂದು ಅವರೆಲ್ಲರೂ ಅಲ್ಲಾಹನ ಮುಂದೆ ಸಂಪೂರ್ಣ ಶರಣಾಗತಿಯನ್ನು ಪ್ರಕಟಿಸುವರು. ಅವರು ಸುಳ್ಳು ಸುಳ್ಳಾಗಿ ಆರೋಪಿಸಿದ್ದೆಲ್ಲವೂ ಅವರಿಂದ ಮರೆಯಾಗುವುವು.

ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ—ಅವರಿಗೆ ನಾವು ಶಿಕ್ಷೆಯ ಮೇಲೆ ಶಿಕ್ಷೆಯನ್ನು ಹೆಚ್ಚಿಸುವೆವು. ಇದು ಅವರು ಮಾಡಿದ ಕಿಡಿಗೇಡಿತನದ ಪ್ರತಿಫಲವಾಗಿದೆ.

(ಪ್ರವಾದಿಯವರೇ) ನಾವು ಎಲ್ಲಾ ಸಮುದಾಯಗಳ ವಿರುದ್ಧ ಅವರಿಂದಲೇ ಒಬ್ಬ ಸಾಕ್ಷಿಯನ್ನು ನಿಲ್ಲಿಸುವ ಮತ್ತು ಇವರ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ನಿಲ್ಲಿಸುವ ದಿನ! ಎಲ್ಲಾ ವಿಷಯಗಳಿಗೂ ವಿವರಣೆ ನೀಡುವ ಈ ಗ್ರಂಥವನ್ನು ನಾವು ನಿಮಗೆ ಅವತೀರ್ಣಗೊಳಿಸಿದ್ದೇವೆ. ಇದು ಮುಸಲ್ಮಾನರಿಗೆ ಸನ್ಮಾರ್ಗದರ್ಶಿ, ದಯೆ ಮತ್ತು ಸುವಾರ್ತೆಯಾಗಿದೆ.

ನಿಶ್ಚಯವಾಗಿಯೂ, ಅಲ್ಲಾಹು ನ್ಯಾಯವನ್ನು, ಒಳಿತನ್ನು ಮತ್ತು ಹತ್ತಿರದ ಸಂಬಂಧಿಕರಿಗೆ (ನೆರವು) ನೀಡಲು ಆಜ್ಞಾಪಿಸುತ್ತಾನೆ. ಅಶ್ಲೀಲಕೃತ್ಯಗಳು, ದುರಾಚಾರಗಳು ಮತ್ತು ಅತಿರೇಕಗಳನ್ನು ವಿರೋಧಿಸುತ್ತಾನೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ.

ನೀವು ಕರಾರು ಮಾಡಿದರೆ ಅಲ್ಲಾಹನ ಕರಾರನ್ನು ನೆರವೇರಿಸಿರಿ. ನೀವು ಆಣೆಗಳನ್ನು—ಅವುಗಳನ್ನು ಖಾತ್ರಿಪಡಿಸಿದ ನಂತರ ಮುರಿಯಲು ಹೋಗಬೇಡಿ. ನೀವಂತೂ ಅಲ್ಲಾಹನನ್ನು ನಿಮಗೆ ಜಾಮೀನಾಗಿ ನಿಲ್ಲಿಸಿದ್ದೀರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ಅಲ್ಲಾಹು ತಿಳಿಯುತ್ತಾನೆ.

ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ಅದನ್ನು ಎಳೆ ಎಳೆಯಾಗಿ ಬಿಡಿಸಿ ಎಸೆಯುವ ಮಹಿಳೆಯಂತೆ ನೀವಾಗಬೇಡಿ—ನಿಮ್ಮಲ್ಲೊಂದು ಗುಂಪು ಇನ್ನೊಂದು ಗುಂಪಿಗಿಂತ ಹೆಚ್ಚಾಗಿರುವ ಕಾರಣ ನೀವು ನಿಮ್ಮ ಆಣೆಗಳನ್ನು (ಕರಾರುಗಳನ್ನು) ಪರಸ್ಪರ ವಂಚನೆಯ ಮಾರ್ಗವಾಗಿ ಮಾಡುತ್ತಿದ್ದೀರಿ.[1] ಅಲ್ಲಾಹು ಅದರ ಮೂಲಕ ಕೇವಲ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಯಾವ ವಿಷಯದಲ್ಲಿ ನೀವು ಭಿನ್ನಮತ ತಳೆದಿದ್ದಿರೋ ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಖಂಡಿತ ವಿವರಿಸಿಕೊಡುವನು.

ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ಇಚ್ಛಿಸುವವರನ್ನು ಅವನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಿಮ್ಮೊಡನೆ ಖಂಡಿತ ಪ್ರಶ್ನಿಸಲಾಗುವುದು.

ನೀವು ನಿಮ್ಮ ಆಣೆಗಳನ್ನು ಪರಸ್ಪರ ವಂಚನೆ ಮಾಡುವುದಕ್ಕಾಗಿ ಬಳಸಬೇಡಿ. ಇದರಿಂದ ನಿಮ್ಮ ಪಾದಗಳು ಸ್ಥಿರವಾಗಿ ನಿಂತ ಬಳಿಕವೂ ಅಲುಗಾಡಬಹುದು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದ ನಿಮಿತ್ತ ನೀವು ಶಿಕ್ಷೆಯ ರುಚಿಯನ್ನು ನೋಡುವಿರಿ. (ಪರಲೋಕದಲ್ಲಿ) ನಿಮಗೆ ಕಠೋರವಾದ ಶಿಕ್ಷೆಯೂ ಇದೆ.

ಅಲ್ಲಾಹನ ಕರಾರನ್ನು ತುಚ್ಛ ಬೆಲೆಗೆ ಮಾರಾಟ ಮಾಡಬೇಡಿ. ಅಲ್ಲಾಹನ ಬಳಿ ಏನಿದೆಯೋ ಅದೇ ನಿಮಗೆ ಉತ್ತಮ. ನೀವು ತಿಳಿದವರಾಗಿದ್ದರೆ.

ನಿಮ್ಮ ಬಳಿ ಏನಿವೆಯೋ ಅವೆಲ್ಲವೂ ನಶ್ವರವಾಗಿವೆ. ಆದರೆ ಅಲ್ಲಾಹನ ಬಳಿ ಏನಿವೆಯೋ ಅವು ಶಾಶ್ವತವಾಗಿವೆ. ತಾಳ್ಮೆಯಿಂದ ಜೀವಿಸುವವರು ಯಾರೋ—ಅವರು ಮಾಡುವ ಅತ್ಯುತ್ತಮ ಕರ್ಮಗಳಿಗೆ ನಾವು ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.

ಗಂಡಾಗಿರಲಿ, ಹೆಣ್ಣಾಗಿರಲಿ—ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ನಾವು ಖಂಡಿತವಾಗಿಯೂ ಅತ್ಯುತ್ತಮ ಬದುಕನ್ನು ನೀಡುವೆವು. ಅವರು ಮಾಡುವ ಅತ್ಯುತ್ತಮ ಕರ್ಮಗಳಿಗೆ ನಾವು ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.

ನೀವು ಕುರ್‌ಆನ್ ಪಠಿಸುವಾಗ ಬಹಿಷ್ಕೃತ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.

ಸತ್ಯವಿಶ್ವಾಸಿಗಳು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರ ಮೇಲೆ ಅವನಿಗೆ ಯಾವುದೇ ಅಧಿಕಾರವಿಲ್ಲ.

ಅವನಿಗೆ ಅಧಿಕಾರವಿರುವುದು ಅವನನ್ನು ಮಿತ್ರನಾಗಿ ಸ್ವೀಕರಿಸಿದವರ ಮೇಲೆ ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವವರ ಮೇಲೆ ಮಾತ್ರ.

ನಾವು ಒಂದು ವಚನದ ಸ್ಥಾನದಲ್ಲಿ ಇನ್ನೊಂದು ವಚನವನ್ನು ಬದಲಾಯಿಸಿದರೆ— ಅಲ್ಲಾಹು ಏನು ಅವತೀರ್ಣಗೊಳಿಸುತ್ತಿದ್ದಾನೆಂದು ಅವನಿಗೆ ಪೂರ್ಣ ಜ್ಞಾನವಿದೆ—ಅವರು ಹೇಳುತ್ತಾರೆ: “ನೀನು ಸುಳ್ಳಾರೋಪ ಮಾಡುವವನಾಗಿರುವೆ.” ಅಲ್ಲ, ವಾಸ್ತವವಾಗಿ ಅವರಲ್ಲಿ ಹೆಚ್ಚಿನವರಿಗೂ ವಿಷಯವೇನೆಂದೇ ತಿಳಿದಿಲ್ಲ.

(ಪ್ರವಾದಿಯವರೇ) ಹೇಳಿರಿ: “ಸತ್ಯವಿಶ್ವಾಸಿಗಳನ್ನು ದೃಢವಾಗಿ ನಿಲ್ಲಿಸಲು ಮತ್ತು ಮುಸಲ್ಮಾನರಿಗೆ ಸನ್ಮಾರ್ಗದರ್ಶಿ ಮತ್ತು ಸುವಾರ್ತೆಯಾಗಿ ಪವಿತ್ರಾತ್ಮನು (ಜಿಬ್ರೀಲ್) ಇದನ್ನು ಅಲ್ಲಾಹನಿಂದ ಇಳಿಸಿ ತಂದಿದ್ದಾರೆ.”

“ಇವನಿಗೆ (ಪ್ರವಾದಿಗೆ) ಯಾರೋ ಒಬ್ಬ ಮನುಷ್ಯ ಕಲಿಸಿಕೊಡುತ್ತಿದ್ದಾನೆ” ಎಂದು ಅವರು ಹೇಳುತ್ತಿದ್ದಾರೆಂದು ನಮಗೆ ಖಂಡಿತ ತಿಳಿದಿದೆ. ಅವರು ಉಲ್ಲೇಖಿಸುವ ಆ ವ್ಯಕ್ತಿಯದ್ದು ಅಜಮಿ ಭಾಷೆ. ಆದರೆ ಇದು ಸ್ಪಷ್ಟ ಅರಬ್ಬಿ ಭಾಷೆಯಲ್ಲಿದೆ.[1]

ಅಲ್ಲಾಹನ ವಚನಗಳಲ್ಲಿ ವಿಶ್ವಾಸವಿಡದವರು ಯಾರೋ—ಅವರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.

ಅಲ್ಲಾಹನ ವಚನಗಳಲ್ಲಿ ವಿಶ್ವಾಸವಿಡದವರೇ ಸುಳ್ಳು ಸುಳ್ಳಾಗಿ ಆರೋಪಿಸುವವರು. ಅವರೇ ನಿಜವಾದ ಸುಳ್ಳುಗಾರರು.

ಸತ್ಯವಿಶ್ವಾಸಿಯಾದ ಬಳಿಕವೂ ಅಲ್ಲಾಹನನ್ನು ನಿಷೇಧಿಸುವವರು ಯಾರೋ—ಹೃದಯವು ಸತ್ಯವಿಶ್ವಾಸದಲ್ಲಿ ದೃಢವಾಗಿದ್ದು ಬಲವಂತಕ್ಕೊಳಗಾಗಿ (ಸತ್ಯನಿಷೇಧದ ಮಾತು ಹೇಳುವವರು) ಇದರಿಂದ ಹೊರತಾಗಿದ್ದಾರೆ.[1] ಆದರೆ ಯಾರು ಮುಕ್ತ ಹೃದಯದಿಂದ ನಿಷೇಧಿಸುತ್ತಾರೋ, ಅವರು ಅಲ್ಲಾಹನ ಕೋಪಕ್ಕೆ ತುತ್ತಾಗುತ್ತಾರೆ. ಅವರಿಗೆ ಭಯಾನಕ ಶಿಕ್ಷೆಯೂ ಇದೆ.

ಅದೇಕೆಂದರೆ, ಅವರು ಪರಲೋಕಕ್ಕಿಂತಲೂ ಇಹಲೋಕವನ್ನೇ ಹೆಚ್ಚು ಇಷ್ಟಪಡುತ್ತಾರೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

ಅವರು ಯಾರೆಂದರೆ, ಅಲ್ಲಾಹು ಅವರ ಹೃದಯಗಳಿಗೆ, ಕಿವಿಗಳಿಗೆ ಮತ್ತು ದೃಷ್ಟಿಗಳಿಗೆ ಮೊಹರು ಹಾಕಿದವರು. ಅವರೇ ನಿರ್ಲಕ್ಷ್ಯರಾಗಿರುವವರು.

ಸಂಶಯವೇ ಇಲ್ಲ. ಪರಲೋಕದಲ್ಲಿ ಅವರು ಸಂಪೂರ್ಣ ನಷ್ಟಹೊಂದಿದವರಾಗಿರುವರು.

ಹಿಂಸೆಗೆ ಗುರಿಯಾದ ಬಳಿಕವೂ ವಲಸೆ (ಹಿಜ್ರ) ಮಾಡಿದವರು, ನಂತರ ಯುದ್ಧ ಮಾಡಿದವರು ಮತ್ತು ಸ್ಥೈರ್ಯ ತೋರಿದವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ಅವರನ್ನು ಕ್ಷಮಿಸುವನು ಮತ್ತು ಅವರಿಗೆ ದಯೆ ತೋರುವನು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರವಾಗಿ ತರ್ಕಿಸುತ್ತಾ ಬರುವ ಮತ್ತು ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಪೂರ್ಣ ಪ್ರತಿಫಲವನ್ನು ನೀಡಲಾಗುವ ದಿನ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

ಅಲ್ಲಾಹು ಒಂದು ಉದಾಹರಣೆಯನ್ನು ಕೊಡುತ್ತಾನೆ. ನಿರ್ಭಯ ಮತ್ತು ನೆಮ್ಮದಿಯಾಗಿದ್ದ ಒಂದು ಊರು. ಅದಕ್ಕೆ ಎಲ್ಲಾ ಕಡೆಗಳಿಂದಲೂ ಯಥೇಷ್ಟ ಆಹಾರ ಸಾಮಗ್ರಿಗಳು ಬರುತ್ತಿದ್ದವು. ಆದರೆ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರಿಗೆ ಹಸಿವು ಮತ್ತು ಭಯದ ವಾತಾವರಣವನ್ನು ಅನುಭವಿಸುವಂತೆ ಮಾಡಿದನು. ಇದು ಅವರು ಮಾಡಿದ ಕರ್ಮಗಳ ಫಲವಾಗಿತ್ತು.

ಅವರಿಗೆ ಅವರಿಂದಲೇ ಒಬ್ಬ ಸಂದೇಶವಾಹಕರು ಬಂದಿದ್ದರು. ಆದರೆ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ಅವರು ಅಕ್ರಮವೆಸಗುತ್ತಿದ್ದಾಗಲೇ ಶಿಕ್ಷೆಯು ಅವರನ್ನು ಹಿಡಿದುಕೊಂಡಿತು.

ಅಲ್ಲಾಹು ನಿಮಗೆ ಒದಗಿಸಿದ ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನು ತಿನ್ನಿರಿ. ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿರಿ. ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ.

ಅವನು ನಿಮಗೆ ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರನ್ನು ಘೋಷಿಸಲಾದ ವಸ್ತುಗಳನ್ನು ಮಾತ್ರ ನಿಷೇಧಿಸಿದ್ದಾನೆ. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

ನೀವು ಯಾವುದೇ ವಸ್ತುವನ್ನೂ ನಿಮ್ಮ ನಾಲಗೆಗಳಿಂದ ಸುಳ್ಳು ಸುಳ್ಳಾಗಿ “ಇದು ಧರ್ಮಸಮ್ಮತ ಮತ್ತು ಇದು ಧರ್ಮನಿಷಿದ್ಧ” ಎಂದು ಹೇಳಬೇಡಿ. ಇದರಿಂದ ನೀವು ಅಲ್ಲಾಹನ ಮೇಲೆ ಸುಳ್ಳು ಆರೋಪಿಸಿದವರಾಗುವಿರಿ. ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವರು ಖಂಡಿತ ಯಶಸ್ವಿಯಾಗುವುದಿಲ್ಲ.

ಅವರಿಗಿರುವುದು ತಾತ್ಕಾಲಿಕ ಆನಂದ ಮಾತ್ರ. (ಪರಲೋಕದಲ್ಲಿ) ಅವರಿಗೆ ಯಾತನಾಮಯ ಶಿಕ್ಷೆಯಿದೆ.

(ಪ್ರವಾದಿಯವರೇ) ನಾವು ನಿಮಗೆ ಇದಕ್ಕೆ ಮೊದಲು ತಿಳಿಸಿಕೊಟ್ಟ ವಸ್ತುಗಳನ್ನು ನಾವು ಯಹೂದಿಗಳಿಗೆ ನಿಷೇಧಿಸಿದ್ದೇವೆ.[1] ನಾವು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದಾರೆ.

ಯಾರು ಅಜ್ಞಾನದಿಂದ ಪಾಪ ಮಾಡಿ ನಂತರ ಪಶ್ಚಾತ್ತಾಪಪಟ್ಟು ಸ್ವಯಂ ಸುಧಾರಿಸಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ಅದರ ಬಳಿಕವೂ ಅವರನ್ನು ಕ್ಷಮಿಸುವನು ಮತ್ತು ಅವರಿಗೆ ದಯೆ ತೋರುವನು.

ನಿಶ್ಚಯವಾಗಿಯೂ ಇಬ್ರಾಹೀಮರು ಒಬ್ಬ ಮುಖಂಡರಾಗಿದ್ದರು. ಅವರು ಅಲ್ಲಾಹನಿಗೆ ವಿಧೇಯತೆ ತೋರುವವರು ಮತ್ತು ಏಕನಿಷ್ಠರಾಗಿದ್ದರು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ.

ಅವರು ಅಲ್ಲಾಹನ ಅನುಗ್ರಹಗಳಿಗೆ ಆಭಾರಿಯಾಗಿದ್ದರು. ಅಲ್ಲಾಹು ಅವರನ್ನು ಆರಿಸಿದ್ದನು ಮತ್ತು ನೇರಮಾರ್ಗಕ್ಕೆ ಸೇರಿಸಿದ್ದನು.

ನಾವು ಅವರಿಗೆ ಇಹಲೋಕದಲ್ಲೇ ಒಳಿತನ್ನು ದಯಪಾಲಿಸಿದ್ದೇವೆ. ಪರಲೋಕದಲ್ಲಿ ಅವರು ನಿಶ್ಚಯವಾಗಿಯೂ ನೀತಿವಂತರಲ್ಲಿ ಸೇರುವರು.

ನಂತರ, ನಾವು ನಿಮಗೆ, “ಏಕನಿಷ್ಠರಾದ ಇಬ್ರಾಹೀಮರ ಧರ್ಮವನ್ನು ಹಿಂಬಾಲಿಸಿರಿ” ಎಂದು ದೇವವಾಣಿಯನ್ನು ನೀಡಿದೆವು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ.

ಸಬ್ಬತ್‌ನ ವಿಷಯದಲ್ಲಿ ಭಿನ್ನಮತ ತಳೆದವರ ಮೇಲೆಯೇ ಅದನ್ನು ಗೌರವಿಸಬೇಕೆಂದು ನಾವು ವಿಧಿಸಿದೆವು. ಅವರು ಯಾವ ವಿಷಯದಲ್ಲಿ ಭಿನ್ನಮತ ತಳೆದರೋ ಆ ವಿಷಯದಲ್ಲಿ ನಿಮ್ಮ ಪರಿಪಾಲಕನು (ಅಲ್ಲಾಹು) ಪುನರುತ್ಥಾನ ದಿನದಂದು ಅವರ ಮಧ್ಯೆ ಖಂಡಿತ ತೀರ್ಪು ನೀಡುವನು.

ವಿವೇಚನೆ ಮತ್ತು ಅತ್ಯುತ್ತಮ ಉಪದೇಶದ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗಕ್ಕೆ ಜನರನ್ನು ಕರೆಯಿರಿ. ಅವರೊಡನೆ ಅತ್ಯುತ್ತಮ ರೀತಿಯಲ್ಲಿ ತರ್ಕಿಸಿರಿ. ತನ್ನ ಮಾರ್ಗದಿಂದ ತಪ್ಪಿಹೋದವರು ಯಾರೆಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂದೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.

ನೀವು ಪ್ರತೀಕಾರ ಪಡೆಯುವುದಾದರೆ ನಿಮ್ಮ ವಿರುದ್ಧ (ವೈರಿಗಳಿಂದ) ಎಷ್ಟು ಅತಿರೇಕ ನಡೆದಿದೆಯೋ ಅಷ್ಟೇ ಪ್ರತೀಕಾರ ಪಡೆಯಿರಿ. ನೀವು ತಾಳ್ಮೆ ತೋರುವುದಾದರೆ, ತಾಳ್ಮೆಯುಳ್ಳವರಿಗೆ ಖಂಡಿತವಾಗಿಯೂ ಅದೇ ಅತ್ಯುತ್ತಮವಾಗಿದೆ.

(ಪ್ರವಾದಿಯವರೇ) ತಾಳ್ಮೆ ತೋರಿರಿ. ಅಲ್ಲಾಹನ ಕೃಪೆಯಿಂದಲೇ ನೀವು ತಾಳ್ಮೆ ತೋರುತ್ತೀರಿ. ಅವರ ಬಗ್ಗೆ ನೊಂದುಕೊಳ್ಳಬೇಡಿ. ಅವರು ಮಾಡುವ ಪಿತೂರಿಗಳನ್ನು ನೋಡಿ ಸಂಕಟಪಡಬೇಡಿ.

ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಮತ್ತು ನೀತಿವಂತರೊಡನೆ ಇದ್ದಾನೆ.