The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesTaha [Taha] - Kannada translation
Surah Taha [Taha] Ayah 135 Location Maccah Number 20
ತ್ವಾಹಾ
(ಪ್ರವಾದಿಯವರೇ) ನಿಮಗೆ ಕಷ್ಟವಾಗಬೇಕೆಂದು ನಾವು ಈ ಕುರ್ಆನನ್ನು ನಿಮಗೆ ಅವತೀರ್ಣಗೊಳಿಸಿಲ್ಲ.
ದೇವಭಯವುಳ್ಳವರಿಗೆ ಒಂದು ಉಪದೇಶವಾಗಿ ಮಾತ್ರ (ಇದನ್ನು ಅವತೀರ್ಣಗೊಳಿಸಿದ್ದೇವೆ).
ಭೂಮಿ ಮತ್ತು ಅತ್ಯುನ್ನತ ಆಕಾಶಗಳನ್ನು ಸೃಷ್ಟಿಸಿದ (ಅಲ್ಲಾಹನ) ಕಡೆಯಿಂದ ಇದು ಅವತೀರ್ಣವಾಗಿದೆ.
ಪರಮ ದಯಾಮಯನು (ಅಲ್ಲಾಹು) ಸಿಂಹಾಸನದಲ್ಲಿ ಆರೂಢನಾಗಿದ್ದಾನೆ.
ಭೂಮ್ಯಾಕಾಶಗಳಲ್ಲಿ, ಅವುಗಳ ನಡುವೆ ಮತ್ತು ಭೂಮಿಯ ಅಡಿಯಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು.
ನೀವು ಜೋರಾಗಿ ಮಾತನಾಡಿದರೂ—ನಿಶ್ಚಯವಾಗಿಯೂ ಅವನು ರಹಸ್ಯವಾಗಿರುವುದನ್ನು ಮತ್ತು ನಿಗೂಢವಾಗಿರುವುದನ್ನು ತಿಳಿಯುತ್ತಾನೆ.
ಅವನೇ ಅಲ್ಲಾಹು, ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ.
ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?
ಅವರು ಒಂದು ಬೆಂಕಿಯನ್ನು ಕಂಡ ಸಂದರ್ಭ. ಅವರು ತಮ್ಮ ಮನೆಯವರೊಡನೆ ಹೇಳಿದರು: “ನೀವಿಲ್ಲೇ ಇರಿ. ನನಗೆ (ದೂರದಲ್ಲಿ) ಬೆಂಕಿ ಕಾಣುತ್ತಿದೆ. ನಾನು ಅದರಿಂದ ಏನಾದರೂ ಉರಿಸಿಕೊಂಡು ಬರುತ್ತೇನೆ. ಅಥವಾ ಬೆಂಕಿಯ ಬಳಿ ಯಾವುದಾದರೂ ದಾರಿಯನ್ನು ನೋಡುತ್ತೇನೆ.”
ಅವರು ಅಲ್ಲಿಗೆ ತಲುಪಿದಾಗ ಒಂದು ಧ್ವನಿಯುಂಟಾಯಿತು: “ಓ ಮೂಸಾ!
ನಾನೇ ನಿಮ್ಮ ಪರಿಪಾಲಕ. ನೀವು ನಿಮ್ಮ ಚಪ್ಪಲಿಯನ್ನು ಕಳಚಿಡಿ. ನೀವು ‘ತುವಾ’ ಎಂಬ ಪವಿತ್ರ ಕಣಿವೆಯಲ್ಲಿದ್ದೀರಿ.
ನಾನು ನಿಮ್ಮನ್ನು ಆರಿಸಿದ್ದೇನೆ. ಆದ್ದರಿಂದ ನಿಮಗೆ ನೀಡಲಾಗುವ ದೇವವಾಣಿಯನ್ನು ಕಿವಿಗೊಟ್ಟು ಕೇಳಿ.
ನಿಶ್ಚಯವಾಗಿಯೂ ನಾನೇ ಅಲ್ಲಾಹು. ನನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಮತ್ತು ನನ್ನ ನೆನಪಿಗಾಗಿ ನಮಾಝನ್ನು ಸಂಸ್ಥಾಪಿಸಿರಿ.
ನಿಶ್ಚಯವಾಗಿಯೂ ಅಂತ್ಯಸಮಯವು ಸಂಭವಿಸಿಯೇ ತೀರುತ್ತದೆ. ಪ್ರತಿಯೊಬ್ಬರಿಗೂ ಅವರು ಮಾಡಿದ ಪರಿಶ್ರಮಗಳಿಗೆ ಪ್ರತಿಫಲವನ್ನು ನೀಡುವುದಕ್ಕೋಸ್ಕರ ನಾನು ಅದನ್ನು ಗೋಪ್ಯವಾಗಿಡಲು ಬಯಸುತ್ತೇನೆ.
ಆದ್ದರಿಂದ ಅದರಲ್ಲಿ ನಂಬಿಕೆಯಿಲ್ಲದವರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದವರು ಯಾರೋ ಅವರು ನಿಮ್ಮನ್ನು ಅದರಲ್ಲಿ ದೃಢವಿಶ್ವಾಸವಿಡದಂತೆ ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗಿ ಬಿಡುವಿರಿ.
ಓ ಮೂಸಾ! ನಿಮ್ಮ ಬಲಗೈಯಲ್ಲಿರುವುದೇನು?”
ಮೂಸಾ ಹೇಳಿದರು: “ಇದು ನನ್ನ ಕೋಲು. ಇದನ್ನು ಆಧಾರವಾಗಿಟ್ಟು ನಾನು ನಿಲ್ಲುತ್ತೇನೆ. ಇದರಿಂದ ನಾನು ನನ್ನ ಕುರಿಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಇದರಲ್ಲಿ ನನಗೆ ಬೇರೆ ಪ್ರಯೋಜನಗಳೂ ಇವೆ.”
ಅಲ್ಲಾಹು ಹೇಳಿದನು: “ಓ ಮೂಸಾ! ಆ ಕೋಲನ್ನು ಕೆಳಗೆಸೆಯಿರಿ.”
ಮೂಸಾ ಅದನ್ನು ಕೆಳಗೆಸೆದರು. ಆಗ ಅಗೋ! ಅದು ಸರ್ಪವಾಗಿ ಮಾರ್ಪಟ್ಟು ಓಡತೊಡಗಿತು.
ಅಲ್ಲಾಹು ಹೇಳಿದನು: “ಅದನ್ನು ಹಿಡಿಯಿರಿ. ಭಯಪಡಬೇಡಿ. ನಾವು ಅದನ್ನು ಅದರ ಹಿಂದಿನ ರೂಪಕ್ಕೆ ಮರಳಿಸುತ್ತೇವೆ.
ನಿಮ್ಮ ಕೈಯನ್ನು ನಿಮ್ಮ ಕಂಕುಳದಲ್ಲಿಡಿ. ಅದು ಬೆಳ್ಳಗೆ ಹೊಳೆಯುತ್ತಾ ಹೊರಬರುತ್ತದೆ. ಅದರಲ್ಲಿ ಯಾವುದೇ ದೋಷವಿರುವುದಿಲ್ಲ. ಇದು ಇನ್ನೊಂದು ದೃಷ್ಟಾಂತವಾಗಿದೆ.
ನಿಮಗೆ ನಮ್ಮ ಮಹಾ ದೃಷ್ಟಾಂತಗಳಲ್ಲಿ ಸೇರಿದ ಕೆಲವನ್ನು ತೋರಿಸಿಕೊಡುವುದಕ್ಕಾಗಿ (ಹೀಗೆ ಮಾಡುತ್ತಿದ್ದೇವೆ).
ನೀವು ಫರೋಹನ ಬಳಿಗೆ ಹೋಗಿ. ಖಂಡಿತವಾಗಿಯೂ ಅವನು ಅತಿರೇಕಿಯಾಗಿದ್ದಾನೆ.”
ಮೂಸಾ ಹೇಳಿದರು: “ನನ್ನ ಪರಿಪಾಲಕನೇ! ನನಗೆ ನನ್ನ ಹೃದಯವನ್ನು ತೆರೆದುಕೊಡು.
ನನಗೆ ನನ್ನ ಕೆಲಸವನ್ನು ಸುಲಭಗೊಳಿಸು.
ನನ್ನ ನಾಲಗೆಯಯಿಂದ ಕಟ್ಟುಗಳನ್ನು ಬಿಚ್ಚಿ ಹಾಕು.[1]
ಜನರು ನನ್ನ ಮಾತನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ.
ನನಗೆ ನನ್ನ ಕುಟುಂಬದಿಂದಲೇ ಒಬ್ಬ ಸಹಾಯಕನನ್ನು ನಿಶ್ಚಯಿಸು.
ನನ್ನ ಸಹೋದರ ಹಾರೂನನನ್ನು.
ಅವನಿಂದ ನನ್ನ ಶಕ್ತಿಯನ್ನು ಬಲಪಡಿಸು.
ನನ್ನ ಕೆಲಸದಲ್ಲಿ ಅವನನ್ನು ಪಾಲುದಾರನಾಗಿ ಮಾಡು.
ನಾವು ಹೇರಳವಾಗಿ ನಿನ್ನ ಪರಿಶುದ್ಧತೆಯನ್ನು ಕೊಂಡಾಡಲು.
ಮತ್ತು ನಿನ್ನನ್ನು ಹೇರಳವಾಗಿ ಸ್ಮರಿಸಲು.
ನಿಶ್ಚಯವಾಗಿಯೂ ನೀನು ನಮ್ಮ ಕ್ಷೇಮವನ್ನು ನೋಡಿಕೊಳ್ಳುವವನಾಗಿರುವೆ.”
ಅಲ್ಲಾಹು ಹೇಳಿದನು: “ಓ ಮೂಸಾ! ನೀವು ಕೇಳಿದ್ದೆಲ್ಲವನ್ನೂ ನಿಮಗೆ ನೀಡಲಾಗಿದೆ.
ನಾವು ನಿಮಗೆ ಬೇರೊಂದು ಸಂದರ್ಭದಲ್ಲೂ ದೊಡ್ಡ ಉಪಕಾರ ಮಾಡಿದ್ದೆವು.
ನಿಮಗೆ ಈಗ ತಿಳಿಸಲಾಗುವ (ಈ ಕೆಳಗಿನ) ವಿಷಯವನ್ನು ನಾವು ನಿಮ್ಮ ತಾಯಿಗೆ ತೋಚುವಂತೆ ಮಾಡಿದ ಸಂದರ್ಭ.
ಆ ಮಗುವನ್ನು (ಮೂಸಾರನ್ನು) ಒಂದು ಪೆಟ್ಟಿಗೆಯಲ್ಲಿಟ್ಟು ಹೊಳೆಗೆ ಎಸೆಯಿರಿ. ಹೊಳೆಯು ಆ ಪೆಟ್ಟಿಗೆಯನ್ನು ದಡಕ್ಕೆ ಒಯ್ಯುತ್ತದೆ. ಆಗ ನನ್ನ ಮತ್ತು ಆ ಮಗುವಿನ ವೈರಿ ಆ ಮಗುವನ್ನು ಎತ್ತಿಕೊಳ್ಳುವನು. (ಓ ಮೂಸಾ) ನಾನು ನನ್ನ ಕಡೆಯ ವಿಶೇಷ ಪ್ರೀತಿಯನ್ನು ನಿಮ್ಮ ಮೇಲೆ ಇಟ್ಟಿದ್ದೆನು. ನೀವು ನನ್ನ ಕಣ್ಣುಗಳ ಮುಂದೆ ಬೆಳೆದು ದೊಡ್ಡವನಾಗುವುದಕ್ಕಾಗಿ.
ನಿಮ್ಮ ಸಹೋದರಿ ನಡೆಯುತ್ತಾ ಬಂದ ಸಂದರ್ಭ. ಅವಳು ಹೇಳಿದಳು: “ಈ ಮಗುವಿನ ಲಾಲನೆ-ಪಾಲನೆ ಮಾಡುವ ಒಬ್ಬರನ್ನು ನಾನು ನಿಮಗೆ ತೋರಿಸಿಕೊಡಲೇ?” ಹೀಗೆ ನಾವು ನಿಮ್ಮನ್ನು ನಿಮ್ಮ ತಾಯಿಗೆ ಹಿಂದಿರುಗಿಸಿದೆವು. ಆಕೆಯ ಕಣ್ಮನ ತಣಿಯುವುದಕ್ಕಾಗಿ ಮತ್ತು ಆಕೆ ದುಃಖಪಡದಿರುವುದಕ್ಕಾಗಿ. ನೀವು ಒಬ್ಬ ವ್ಯಕ್ತಿಯನ್ನು ಕೊಂದಿರಿ. ಆಗ ನಾವು ನಿಮ್ಮನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ನಿಮ್ಮನ್ನು ಅನೇಕ ವಿಧಗಳಿಂದ ಪರೀಕ್ಷಿಸಿದೆವು. ನಂತರ ನೀವು ಮದ್ಯನ್ ಗೋತ್ರದವರೊಡನೆ ಹಲವಾರು ವರ್ಷ ವಾಸಿಸಿದಿರಿ. ಓ ಮೂಸಾ! ನಂತರ ನನ್ನ ನಿರ್ಣಯದಂತೆ ನೀವು ಇಲ್ಲಿಗೆ ಬಂದಿದ್ದೀರಿ.
ನಾನು ನಿಮ್ಮನ್ನು ಸ್ವತಃ ನನಗಾಗಿ ಆಯ್ಕೆ ಮಾಡಿದ್ದೇನೆ.
ನೀವು ನಿಮ್ಮ ಸಹೋದರನನ್ನು ಕರೆದುಕೊಂಡು ನನ್ನ ದೃಷ್ಟಾಂತಗಳೊಂದಿಗೆ ಹೊರಡಿರಿ. ನನ್ನನ್ನು ಸ್ಮರಿಸುವ ವಿಷಯದಲ್ಲಿ ಉದಾಸೀನರಾಗಬೇಡಿ.
ನೀವಿಬ್ಬರೂ ಫರೋಹನ ಬಳಿಗೆ ಹೋಗಿರಿ. ಖಂಡಿತವಾಗಿಯೂ ಅವನು ಅತಿರೇಕಿಯಾಗಿದ್ದಾನೆ.
ಅವನೊಡನೆ ಮೃದುವಾಗಿ ಮಾತನಾಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ಭಯಪಡಬಹುದು.”
ಅವರಿಬ್ಬರು ಹೇಳಿದರು: “ನಮ್ಮ ಪರಿಪಾಲಕನೇ! ಅವನು ನಮ್ಮ ಮೇಲೆ ದಬ್ಬಾಳಿಕೆ ಮಾಡಬಹುದು ಅಥವಾ ಅತಿರೇಕವೆಸಬಹುದೆಂದು ನಮಗೆ ಭಯವಾಗುತ್ತಿದೆ.”
ಅಲ್ಲಾಹು ಹೇಳಿದನು: “ಹೆದರಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ನಾನು ಕೇಳುತ್ತಲೂ, ನೋಡುತ್ತಲೂ ಇದ್ದೇನೆ.
ನೀವಿಬ್ಬರೂ ಅವನ ಬಳಿಗೆ ಹೋಗಿ, ಅವನೊಡನೆ ಹೇಳಿರಿ: “ನಿಶ್ಚಯವಾಗಿಯೂ ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಿ. ಅವರನ್ನು ಹಿಂಸೆ ನೀಡಬೇಡಿ. ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಒಂದು ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ಸನ್ಮಾರ್ಗವನ್ನು ಅನುಸರಿಸುವವರ ಮೇಲೆ (ಅಲ್ಲಾಹನ) ಸಂರಕ್ಷಣೆಯಿದೆ.
ಸತ್ಯವನ್ನು ನಿಷೇಧಿಸಿದವರಿಗೆ ಮತ್ತು (ಅದರಿಂದ) ವಿಮುಖರಾದವರಿಗೆ ಶಿಕ್ಷೆಯಿದೆಯೆಂದು ನಿಶ್ಚಯವಾಗಿಯೂ ನಮಗೆ ದೇವವಾಣಿ ನೀಡಲಾಗಿದೆ.”
ಫರೋಹ ಕೇಳಿದನು: “ಓ ಮೂಸಾ! ನಿಮ್ಮಿಬ್ಬರ ಪರಿಪಾಲಕ ಯಾರು?”
ಮೂಸಾ ಹೇಳಿದರು: “ಪ್ರತಿಯೊಂದು ವಸ್ತುವಿಗೂ ಅದರ ವಿಶಿಷ್ಟ ರೂಪ ಮತ್ತು ಆಕೃತಿಯನ್ನು ನೀಡಿ ನಂತರ ಅದಕ್ಕೆ ಮಾರ್ಗದರ್ಶನ ಮಾಡಿದವನೇ ನಮ್ಮ ಪರಿಪಾಲಕ.”
ಫರೋಹ ಕೇಳಿದನು: “ಸರಿ. ಹಾಗಾದರೆ ಹಿಂದಿನ ತಲೆಮಾರುಗಳ ಅವಸ್ಥೆಯೇನು?”
ಮೂಸಾ ಹೇಳಿದರು: “ಅವರ ಕುರಿತಾದ ಜ್ಞಾನವು ನನ್ನ ಪರಿಪಾಲಕನ (ಅಲ್ಲಾಹನ) ಬಳಿ ಒಂದು ಗ್ರಂಥದಲ್ಲಿದೆ. ನನ್ನ ಪರಿಪಾಲಕನು (ಅಲ್ಲಾಹು) ಯಾವುದೇ ಪ್ರಮಾದವೆಸಗುವುದಿಲ್ಲ; ಅವನು ಮರೆಯುವುದೂ ಇಲ್ಲ.”
ಅವನು ಯಾರೆಂದರೆ, ನಿಮಗೆ ಭೂಮಿಯನ್ನು ಹಾಸಿನಂತೆ ಮಾಡಿಕೊಟ್ಟವನು, ಅದರಲ್ಲಿ ನಿಮಗೆ ನಡೆಯಲು ದಾರಿಗಳನ್ನು ತೆರೆದುಕೊಟ್ಟವನು ಮತ್ತು ಆಕಾಶದಿಂದ ಮಳೆಯನ್ನು ಇಳಿಸಿಕೊಟ್ಟವನು. ನಂತರ ಆ ನೀರಿನಿಂದ ನಾವು ವಿವಿಧ ತರಹದ ಸಸ್ಯಗಳು ಬೆಳೆಯುವಂತೆ ಮಾಡುತ್ತೇವೆ.
ನೀವು ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
ನಾವು ನಿಮ್ಮನ್ನು ಅದರಿಂದ (ಭೂಮಿಯಿಂದ) ಸೃಷ್ಟಿಸಿದೆವು, ನಿಮ್ಮನ್ನು ಅದಕ್ಕೇ ಮರಳಿಸುವೆವು ಮತ್ತು ಅದರಿಂದಲೇ ನಿಮ್ಮನ್ನು ಪುನಃ ಹೊರತರುವೆವು.
ನಾವು ಅವನಿಗೆ (ಫರೋಹನಿಗೆ) ನಮ್ಮ ಎಲ್ಲಾ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ನಿಷೇಧಿಸಿದನು ಮತ್ತು ನಿರಾಕರಿಸಿದನು.
ಅವನು ಕೇಳಿದನು: “ಓ ಮೂಸಾ! ನೀನು ನಿನ್ನ ಮಾಟಗಾರಿಕೆಯನ್ನು ಬಳಸಿ ನಮ್ಮನ್ನು ನಮ್ಮ ದೇಶದಿಂದ ಓಡಿಸಲು ಇಲ್ಲಿಗೆ ಬಂದಿದ್ದೀಯಾ?
ನಾವು ಕೂಡ ಅದಕ್ಕೆ ಸಮಾನವಾದ ಮಾಟಗಾರಿಕೆಯನ್ನು ತರುವೆವು. ಆದ್ದರಿಂದ ನಮ್ಮಿಬ್ಬರ ನಡುವೆ ಒಂದು ಸಮಯವನ್ನು ನಿಶ್ಚಯಿಸು. ಅದನ್ನು ನಮ್ಮಿಬ್ಬರಲ್ಲಿ ಯಾರೂ ಉಲ್ಲಂಘಿಸಬಾರದು. ಖಾಲಿ ಮೈದಾನದಲ್ಲಿ ಸ್ಪರ್ಧೆ ನಡೆಯಲಿ.”
ಮೂಸಾ ಹೇಳಿದರು: “ಉತ್ಸವದ ದಿನವೇ ನಿಮಗಿರುವ ನಿಗದಿತ ಸಮಯವಾಗಿದೆ. ಪೂರ್ವಾಹ್ನದಲ್ಲೇ ಜನರು ಒಟ್ಟುಗೂಡಲಿ.”
ಫರೋಹ ಅಲ್ಲಿಂದ ನಿರ್ಗಮಿಸಿ ತನ್ನ ವ್ಯೂಹವನ್ನು ನಿರ್ಧರಿಸಿದನು. ನಂತರ ನಿಗದಿತ ಸಮಯಕ್ಕೆ ಬಂದನು.
ಮೂಸಾ ಮಾಟಗಾರರೊಡನೆ ಹೇಳಿದರು: “ನಿಮಗೆ ದುರದೃಷ್ಟ ಕಾದಿದೆ! ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಹಾಗೇನಾದರೂ ಮಾಡಿದರೆ ಅವನು ನಿಮ್ಮನ್ನು ಶಿಕ್ಷೆಯ ಮೂಲಕ ಸರ್ವನಾಶ ಮಾಡುವನು. ಸುಳ್ಳನ್ನು ಆರೋಪಿಸುವವನು ಖಂಡಿತ ಪರಾಜಿತನಾಗುತ್ತಾನೆ.”
ಜನರು ಪರಸ್ಪರ ತಮ್ಮ ತಮ್ಮಲ್ಲಿ ಭಿನ್ನ ಅಭಿಪ್ರಾಯಗಳನ್ನು ತಳೆದರು. ಅವರು ರಹಸ್ಯವಾಗಿ ಮಾತನಾಡತೊಡಗಿದರು.
ಅವರು ಹೇಳಿದರು: “ನಿಶ್ಚಯವಾಗಿಯೂ ಇವರಿಬ್ಬರು ಮಾಟಗಾರರಾಗಿದ್ದಾರೆ. ಇವರು ಇವರ ಮಾಟಗಾರಿಕೆಯಿಂದ ನಿಮ್ಮನ್ನು ಈ ದೇಶದಿಂದ ಓಡಿಸಲು ಮತ್ತು ನಿಮ್ಮ ಮಾದರಿಯೋಗ್ಯ ಸಂಪ್ರದಾಯವನ್ನು ನಾಶ ಮಾಡಲು ಬಯಸುತ್ತಾರೆ.
ಆದ್ದರಿಂದ ನೀವು ನಿಮ್ಮ ತಂತ್ರದ ಬಗ್ಗೆ ದೃಢನಿರ್ಧಾರ ಮಾಡಿರಿ. ನಂತರ ಒಂದೇ ಸಾಲಿನಲ್ಲಿ ಬನ್ನಿರಿ. ಮೇಲುಗೈ ಸಾಧಿಸುವವರೇ ಇಂದು ಯಶಸ್ವಿಯಾಗುವರು.”
ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು ಎಸೆಯಿರಿ ಅಥವಾ ನಾವೇ ಮೊದಲು ಎಸೆಯುವೆವು.”
ಮೂಸಾ ಹೇಳಿದರು: “ಬೇಡ, ನೀವೇ ಎಸೆಯಿರಿ.” ಆಗ ಅಗೋ! ಅವರ ಮಾಟಗಾರಿಕೆಯಿಂದ ಅವರ ಹಗ್ಗಗಳು ಮತ್ತು ಕೋಲುಗಳು ಚಲಿಸುತ್ತಿರುವಂತೆ ಕಾಣತೊಡಗಿದವು.
ಮೂಸಾರಿಗೆ ಮನಸ್ಸಿನಲ್ಲಿ ಭಯವಾಯಿತು.
ನಾವು ಹೇಳಿದೆವು: “ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
ನಿಮ್ಮ ಬಲಗೈಯ್ಯಲ್ಲಿರುವುದನ್ನು (ಕೋಲನ್ನು) ಎಸೆಯಿರಿ. ಅವರು ನಿರ್ಮಿಸಿದ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ಮಾಡಿರುವುದು ಮಾಟಗಾರರು ಮಾಡುವ ಕಣ್ಕಟ್ಟು ವಿದ್ಯೆಯಾಗಿದೆ. ಮಾಟಗಾರರು ಎಲ್ಲೇ ಹೋದರೂ ಯಶಸ್ವಿಯಾಗುವುದಿಲ್ಲ.”
ಆಗ ಮಾಟಗಾರರು ಸಾಷ್ಟಾಂಗವೆರಗುತ್ತಾ ಬಿದ್ದರು. ಅವರು ಹೇಳಿದರು: “ನಾವು ಹಾರೂನ್ ಮತ್ತು ಮೂಸಾರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.”
ಫರೋಹ ಹೇಳಿದನು: “ನಾನು ನಿಮಗೆ ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ಆದ್ದರಿಂದ ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ, ನಂತರ ನಿಮ್ಮೆಲ್ಲರನ್ನೂ ಖರ್ಜೂರ ಮರದ ಕಾಂಡದಲ್ಲಿ ಶಿಲುಬೆಗೆ ಹಾಕುವೆನು. ನಮ್ಮಿಬ್ಬರಲ್ಲಿ (ನಾನು ಮತ್ತು ಮೂಸಾರ ದೇವನು) ಅತಿಕಠೋರವಾಗಿ ಮತ್ತು ಶಾಶ್ವತವಾಗಿ ಉಳಿಯುವ ಶಿಕ್ಷೆಯನ್ನು ನೀಡುವುದು ಯಾರೆಂದು ನೀವು ಖಂಡಿತ ತಿಳಿಯುವಿರಿ.”
ಮಾಟಗಾರರು ಹೇಳಿದರು: “ನಮ್ಮ ಬಳಿಗೆ ಬಂದ ಈ ಸ್ಪಷ್ಟ ಸಾಕ್ಷ್ಯಾಧಾರಗಳಿಗಿಂತ ಮತ್ತು ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗಿಂತ ನಾವು ನಿಮ್ಮ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಆದ್ದರಿಂದ ನಿಮಗೆ ಏನು ತೀರ್ಪು ನೀಡಲಿದೆಯೋ ನೀಡಿ. ನಿಮಗೆ ತೀರ್ಪು ನೀಡಲು ಸಾಧ್ಯವಾಗುವುದು ಇಹಲೋಕದಲ್ಲಿ ಮಾತ್ರ.
ನಾವು ನಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ. ನಾವು ಮಾಡಿದ ಪಾಪಗಳನ್ನು ಮತ್ತು ನೀವು ನಮ್ಮಿಂದ ಬಲವಂತವಾಗಿ ಮಾಡಿಸಿದ ಮಾಟಗಾರಿಕೆಯನ್ನು ಅವನು ನಮಗೆ ಕ್ಷಮಿಸುವನೆಂಬ ಭರವಸೆಯಿದೆ. ಅಲ್ಲಾಹು ಅತಿಶ್ರೇಷ್ಠನು ಮತ್ತು ಚಿರಂತನನಾಗಿದ್ದಾನೆ.”
ಯಾರು ತನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಅಪರಾಧಿಯಾಗಿ ಬರುತ್ತಾನೋ—ಅವನಿಗೆ ನರಕಾಗ್ನಿಯಾಗಿದೆ. ಅವನು ಅದರಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ.
ಯಾರು ಅವನ ಬಳಿಗೆ ಸತ್ಯವಿಶ್ವಾಸಿಯಾಗಿ ಮತ್ತು ಸತ್ಕರ್ಮಿಯಾಗಿ ಬರುತ್ತಾನೋ ಅವರಿಗೆ ಉನ್ನತೋನ್ನತ ಪದವಿಗಳಿವೆ.
ತಳಭಾಗದಿಂದ ನದಿಗಳು ಹರಿಯುವ ಶಾಶ್ವತ ವಾಸದ ಸ್ವರ್ಗೋದ್ಯಾನಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಪರಿಶುದ್ಧರಾದವರಿಗೆ ನೀಡಲಾಗುವ ಪ್ರತಿಫಲವಾಗಿದೆ.
ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಅವರಿಗೆ ಸಮುದ್ರದಲ್ಲಿ ಒಂದು ಒಣ ರಸ್ತೆಯನ್ನು ಮಾಡಿಕೊಡಿ. ನಂತರ ನಿಮಗೆ (ಶತ್ರುಗಳು) ಹಿಂಬಾಲಿಸಿ ಹಿಡಿಯುವರೆಂಬ ಆತಂಕ ಮತ್ತು ಭಯವಿರಲಾರದು.”
ಫರೋಹ ತನ್ನ ಸೈನ್ಯದೊಂದಿಗೆ ಅವರನ್ನು ಹಿಂಬಾಲಿಸಿದನು. ಆಗ ಸಮುದ್ರವು ಹೇಗೆ ಆವರಿಸಿಕೊಳ್ಳಬೇಕೋ ಹಾಗೆಯೇ ಅವರನ್ನು ಆವರಿಸಿಕೊಂಡಿತು.
ಫರೋಹ ತನ್ನ ಜನರನ್ನು ತಪ್ಪುದಾರಿಗೆಳೆದನು. ಅವನು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಲಿಲ್ಲ.
ಓ ಇಸ್ರಾಯೇಲ್ ಮಕ್ಕಳೇ! ನಾವು ನಿಮ್ಮನ್ನು ನಿಮ್ಮ ವೈರಿಯಿಂದ ರಕ್ಷಿಸಿದೆವು. ತೂರ್ ಪರ್ವತದ ಬಲಭಾಗವನ್ನು ನಾವು ನಿಮಗೆ ವಾಗ್ದಾನ ಮಾಡಿದೆವು. ಮನ್ನ ಮತ್ತು ಸಲ್ವಾವನ್ನು ನಿಮಗೆ ಇಳಿಸಿಕೊಟ್ಟೆವು.
ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳನ್ನು ತಿನ್ನಿರಿ. ಅದರಲ್ಲಿ ಮಿತಿಮೀರಬೇಡಿ. ಹಾಗೇನಾದರೂ ಆದರೆ ನನ್ನ ಕೋಪವು ನಿಮ್ಮ ಮೇಲೆರಗುವುದು. ಯಾರ ಮೇಲೆ ನನ್ನ ಕೋಪವು ಎರಗುತ್ತದೋ ಅವನು ಸಂಪೂರ್ಣ ನಾಶವಾದನು.
ಪಶ್ಚಾತ್ತಾಪಪಡುವವರು, ವಿಶ್ವಾಸವಿಡುವವರು ಮತ್ತು ಸತ್ಕರ್ಮವೆಸಗುವವರು ಹಾಗೂ ಅನಂತರ ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲುವವರಿಗೆ ನಿಶ್ಚಯವಾಗಿಯೂ ನಾನು ಕ್ಷಮಿಸುವೆನು.
“ಓ ಮೂಸಾ! ನೀವು ನಿಮ್ಮ ಜನರನ್ನು ಬಿಟ್ಟು ತರಾತುರಿಯಿಂದ ಬರಲು ಕಾರಣವೇನು?”
ಮೂಸಾ ಹೇಳಿದರು: “ಅವರು ನನ್ನ ಹಿಂದೆಯೇ ಇದ್ದಾರೆ. ನನ್ನ ಪರಿಪಾಲಕನೇ! ನೀನು ಪ್ರೀತಿಗೆ ಪಾತ್ರನಾಗಲು ನಾನು ತರಾತುರಿಯಿಂದ ನಿನ್ನ ಬಳಿಗೆ ಬಂದಿದ್ದೇನೆ.”[1]
ಅಲ್ಲಾಹು ಹೇಳಿದನು: “ನೀವು ನಿಮ್ಮ ಜನರನ್ನು ಬಿಟ್ಟು ಬಂದ ಬಳಿಕ ನಾವು ಅವರನ್ನು ಪರೀಕ್ಷಿಸಿದೆವು. ಸಾಮಿರಿ ಅವರನ್ನು ದಾರಿತಪ್ಪಿಸಿದನು.”[1]
ಆಗ ಮೂಸಾ ತಮ್ಮ ಜನರ ಬಳಿಗೆ ಕೋಪ ಮತ್ತು ಬೇಸರದಿಂದ ಹಿಂದಿರುಗಿದರು. ಅವರು ಹೇಳಿದರು: “ಓ ನನ್ನ ಜನರೇ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಅತ್ಯುತ್ತಮವಾದ ಆಶ್ವಾಸನೆಯನ್ನು ನೀಡಿಲ್ಲವೇ? ಅದು ಈಡೇರುವ ಸಮಯವು ನಿಮಗೆ ದೀರ್ಘವಾಗಿ ಕಂಡಿತೇ? ಅಥವಾ ನಿಮ್ಮ ಪರಿಪಾಲಕನ (ಅಲ್ಲಾಹನ) ಕೋಪವು ನಿಮ್ಮ ಮೇಲೆ ಇಳಿಯಬೇಕೆಂದು ನೀವು ಬಯಸಿದಿರೋ? ಅದಕ್ಕಾಗಿ ನೀವು ನನ್ನ ಕರಾರನ್ನು ಮುರಿದಿರೋ?”
ಅವರು ಹೇಳಿದರು: “ನಾವು ನಮ್ಮ ಇಚ್ಛೆಯಂತೆ ನಿಮ್ಮ ಕರಾರನ್ನು ಮುರಿದಿಲ್ಲ. ಬದಲಿಗೆ, ನಮ್ಮ ಮೇಲೆ ಆ ಜನರ (ಫರೋಹನ ಜನರ) ಆಭರಣಗಳ ಹೊರೆಗಳನ್ನು ಹೊರಿಸಲಾಗಿತ್ತು. ನಾವು ಅದನ್ನು ಕೆಳಗೆ ಎಸೆದೆವು. ಸಾಮಿರಿ ಕೂಡ ಅದೇ ರೀತಿ ಎಸೆದನು.
ನಂತರ ಅವನು ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು ಅದರಿಂದ ಹೊರತಂದನು. ಅವರು ಹೇಳಿದರು: “ಇದೇ ನಿಮ್ಮ ಮತ್ತು ಮೂಸಾರ ದೇವರು. ಮೂಸಾರಿಗೆ ಅದು ಮರೆತುಹೋಗಿದೆ.”[1]
ಆದರೆ ಅವರ ಮಾತಿಗೆ ಉತ್ತರ ನೀಡಲು ಮತ್ತು ಅವರಿಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡಲು ಅದಕ್ಕೆ (ಆ ಕರುವಿನ ಮೂರ್ತಿಗೆ) ಸಾಧ್ಯವಿಲ್ಲವೆಂದು ಅವರು ಕಾಣುವುದಿಲ್ಲವೇ?
ಇದಕ್ಕಿಂತ ಮೊದಲು ಹಾರೂನ್ ಅವರೊಡನೆ ಹೇಳಿದ್ದರು: “ಓ ನನ್ನ ಜನರೇ! ಈ ಕರುವಿನ ಮೂಲಕ ನಿಮ್ಮನ್ನು ಪರೀಕ್ಷಿಸಲಾಗುತ್ತಿದೆ. ನಿಶ್ಚಯವಾಗಿಯೂ ಪರಮ ದಯಾಮಯನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನೀವು ನನ್ನನ್ನು ಅನುಸರಿಸಿರಿ. ನನ್ನ ಮಾತನ್ನು ಕೇಳಿರಿ.”
ಅವರು ಉತ್ತರಿಸಿದರು: “ಮೂಸಾ ನಮ್ಮ ಬಳಿಗೆ ಮರಳುವ ತನಕ ನಾವು ಇದರ ಮುಂದೆ ಧ್ಯಾನ ಮಾಡುತ್ತಲೇ ಇರುತ್ತೇವೆ.”
ಮೂಸಾ ಕೇಳಿದರು: “ಓ ಹಾರೂನ್! ಇವರು ದಾರಿತಪ್ಪುವುದನ್ನು ಕಂಡಾಗ ನಿಮ್ಮನ್ನು ತಡೆದದ್ದು ಏನು?
ನನ್ನನ್ನು ಅನುಸರಿಸದಂತೆ. ನೀನು ನನ್ನ ಆದೇಶವನ್ನು ಉಲ್ಲಂಘಿಸಿದೆಯಾ?”[1]
ಹಾರೂನ್ ಹೇಳಿದರು: “ನನ್ನ ತಾಯಿಯ ಮಗನೇ! ನನ್ನ ಗಡ್ಡವನ್ನು ಅಥವಾ ನನ್ನ ತಲೆಯನ್ನು ಹಿಡಿಯಬೇಡ. ನೀನು ಇಸ್ರಾಯೇಲ್ ಮಕ್ಕಳ ನಡುವೆ ಭಿನ್ನಮತ ಎಬ್ಬಿಸಿರುವೆ. ನನ್ನ ಆಜ್ಞೆಯನ್ನು ಕೂಡ ನೀನು ಕಾಯಲಿಲ್ಲ ಎಂದು ನೀನು ಹೇಳಬಹುದೆಂದು ನನಗೆ ಭಯವಾಯಿತು.”[1]
ಮೂಸಾ ಕೇಳಿದರು: “ಓ ಸಾಮಿರಿ! ನಿನ್ನ ಸಮಾಚಾರವೇನು?”
ಅವನು ಹೇಳಿದನು: “ಜನರಿಗೆ ಕಾಣಲು ಸಾಧ್ಯವಾಗದ ಒಂದನ್ನು ನಾನು ನೋಡಿದೆ. ನಾನು ಆ ದೇವದೂತನ ಹೆಜ್ಜೆ ಗುರುತಿನಿಂದ ಒಂದು ಹಿಡಿ ಮಣ್ಣು ತೆಗೆದು ಅದಕ್ಕೆ ಹಾಕಿದೆ. ಹೀಗೆ ಮಾಡಲು ನನ್ನ ಮನಸ್ಸು ನನ್ನನ್ನು ಪ್ರೇರೇಪಿಸಿತು.”[1]
ಮೂಸಾ ಹೇಳಿದರು: “ಹೊರಟು ಹೋಗು! ನೀನು ನಿರಂತರ “ನನ್ನನ್ನು ಮುಟ್ಟಬೇಡಿ” ಎಂದು ಹೇಳುತ್ತಿರುವುದೇ ಇಹಲೋಕದಲ್ಲಿ ನಿನಗಿರುವ ಶಿಕ್ಷೆ.[1] ನಿನಗೆ ಒಂದು ನಿಶ್ಚಿತ ಅವಧಿಯಿದೆ. ಅದನ್ನು ಉಲ್ಲಂಘಿಸಲು ನಿನಗೆ ಸಾಧ್ಯವಿಲ್ಲ. ನೀನು ಧ್ಯಾನ ಮಾಡುತ್ತಿದ್ದ ನಿನ್ನ ದೇವರನ್ನು (ಕರುವನ್ನು) ನೋಡು. ನಾವು ಅದನ್ನು ಖಂಡಿತ ಸುಟ್ಟು ಬಿಡುವೆವು. ನಂತರ ಅದನ್ನು ನುಚ್ಚುನೂರು ಮಾಡಿ ಕಡಲಿಗೆ ಎಸೆಯುವೆವು.
ಯಾರ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲವೋ ಆ ಅಲ್ಲಾಹನೇ ನಿಮ್ಮ ದೇವನು. ಅವನ ಜ್ಞಾನವು ಎಲ್ಲಾ ವಸ್ತುಗಳನ್ನೂ ಆವರಿಸಿಕೊಂಡಿದೆ.
ಈ ರೀತಿ ಈಗಾಗಲೇ ನಡೆದು ಹೋದ ಅನೇಕ ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುತ್ತೇವೆ. ನಿಶ್ಚಯವಾಗಿಯೂ ನಾವು ನಿಮಗೆ ನಮ್ಮ ಕಡೆಯ ಉಪದೇಶವನ್ನು ನೀಡಿದ್ದೇವೆ.
ಯಾರು ಅದರಿಂದ ವಿಮುಖನಾಗುತ್ತಾನೋ ಅವನು ಪುನರುತ್ಥಾನ ದಿನದಂದು (ಪಾಪದ) ಹೊರೆಯನ್ನು ಖಂಡಿತ ಹೊರುವನು.
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಪುನರುತ್ಥಾನ ದಿನದಂದು ಅವರು ಹೊರುವ ಹೊರೆಯು ಬಹಳ ನಿಕೃಷ್ಟವಾಗಿದೆ.
ಕಹಳೆಯಲ್ಲಿ ಊದಲಾಗುವ ದಿನ! ಅಂದು ನಾವು ಅಪರಾಧಿಗಳನ್ನು ನೀಲಿಕಣ್ಣಿನವರಾಗಿ ಒಟ್ಟು ಸೇರಿಸುವೆವು.
ಅವರು ಪರಸ್ಪರ ಪಿಸುಗುಡುತ್ತಾ ಹೇಳುವರು: “ನೀವು (ಭೂಮಿಯಲ್ಲಿ) ಕೇವಲ ಹತ್ತು ದಿನಗಳ ಕಾಲ ವಾಸವಾಗಿದ್ದಿರಿ.”
ಅವರು ಏನು ಹೇಳುತ್ತಿದ್ದಾರೋ ಅದರ ನಿಜಸ್ಥಿತಿಯ ಬಗ್ಗೆ ನಾವು ಸ್ಪಷ್ಟವಾಗಿ ತಿಳಿದಿದ್ದೇವೆ. ಅವರಲ್ಲಿ ಅತ್ಯುತ್ತಮ ಮಾರ್ಗದಲ್ಲಿರುವವನು ಹೇಳುವನು: “ನೀವು ಕೇವಲ ಒಂದು ದಿನ ಮಾತ್ರ ವಾಸವಾಗಿದ್ದಿರಿ.”[1]
ಅವರು ನಿಮ್ಮಲ್ಲಿ ಪರ್ವತಗಳ ಬಗ್ಗೆ ಕೇಳುತ್ತಾರೆ. ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ಅವುಗಳನ್ನು ಪುಡಿಪುಡಿ ಮಾಡಿ ಹಾರಿಸಿ ಬಿಡುವನು.
ಅವನು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಮಾಡುವನು.
ನೀವು ಅದರಲ್ಲಿ ಉಬ್ಬು-ತಗ್ಗುಗಳನ್ನು ಕಾಣಲಾರಿರಿ.
ಅಂದು ಜನರು ಕರೆ ನೀಡುವವನನ್ನು ಹಿಂಬಾಲಿಸುವರು. ಅವನ ಕರೆಗೆ ಯಾವುದೇ ವಕ್ರತೆಯಿರುವುದಿಲ್ಲ. ಪರಮ ದಯಾಮಯನ (ಅಲ್ಲಾಹನ) ಮುಂದೆ ಧ್ವನಿಗಳೆಲ್ಲವೂ ಶರಣಾಗುವುವು. ನಿಮಗೆ ಪಿಸುಮಾತುಗಳಲ್ಲದೆ ಬೇರೇನೂ ಕೇಳಿಸದು.[1]
ಅಂದು ಯಾರಿಗೂ ಶಿಫಾರಸು ಪ್ರಯೋಜನಪಡುವುದಿಲ್ಲ. ಪರಮ ದಯಾಮಯನು (ಅಲ್ಲಾಹು) ಯಾರಿಗೆ (ಶಿಫಾರಸು ಮಾಡಲು) ಅನುಮತಿ ನೀಡುತ್ತಾನೋ ಮತ್ತು ಯಾರ ಮಾತನ್ನು ಅವನು ಇಷ್ಟಪಡುತ್ತಾನೋ ಅವರ ಹೊರತು.
ಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವುದನ್ನು ಅವನು ತಿಳಿಯುತ್ತಾನೆ. ಜ್ಞಾನದ ಮೂಲಕ ಅವನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ.
ನಿರಂತರ ಬದುಕಿರುವವನು ಮತ್ತು ಎಲ್ಲವನ್ನೂ ನಿಯಂತ್ರಿಸುವ ಅಲ್ಲಾಹನ ಮುಂದೆ ಮುಖಗಳೆಲ್ಲವೂ ಶರಣಾಗುವುವು. ಅನ್ಯಾಯದ ಹೊರೆ ಹೊತ್ತವನು ಪರಾಜಿತನಾದನು.
ಯಾರು ಸತ್ಯವಿಶ್ವಾಸಿಯಾಗಿರುತ್ತಾ, ಸತ್ಕರ್ಮಗಳನ್ನು ಮಾಡುತ್ತಾನೋ ಅವನು ಅನ್ಯಾಯವನ್ನು ಅಥವಾ ನಾಶ-ನಷ್ಟವನ್ನು ಭಯಪಡಬೇಕಾಗಿಲ್ಲ.
ಈ ರೀತಿ ನಾವು ಇದನ್ನು ಅರಬ್ಬಿ ಭಾಷೆಯ ಗ್ರಂಥವಾಗಿ ಅವತೀರ್ಣಗೊಳಿಸಿದೆವು. ನಾವು ಅದರಲ್ಲಿ ಎಚ್ಚರಿಕೆಗಳನ್ನು ಅನೇಕ ವಿಧಗಳಲ್ಲಿ ವಿವರಿಸಿದ್ದೇವೆ. ಅವರು ದೇವಭಯವುಳ್ಳವರಾಗಲಿ ಅಥವಾ ಅವರ ಮನಸ್ಸುಗಳಲ್ಲಿ ಚಿಂತನೆ ಮೂಡಲಿ ಎಂದು.
ಅಲ್ಲಾಹು ಅತ್ಯುನ್ನತನು ಮತ್ತು ನಿಜವಾದ ಸಾರ್ವಭೌಮನಾಗಿದ್ದಾನೆ. ಕುರ್ಆನಿನ ದೇವವಾಣಿಯನ್ನು ನಿಮಗೆ ಓದಿಕೊಟ್ಟು ಮುಗಿಸುವುದಕ್ಕೆ ಮುನ್ನ ನೀವು ಅದನ್ನು ಪಠಿಸಲು ಆತುರಪಡಬೇಡಿ. “ನನ್ನ ಪರಿಪಾಲಕನೇ! ನನಗೆ ಜ್ಞಾನವನ್ನು ಹೆಚ್ಚಿಸು” ಎಂದು ಪ್ರಾರ್ಥಿಸಿರಿ.
ನಾವು ಆದಮರಿಗೆ ಮೊದಲೇ ದೃಢ ಆಜ್ಞೆಯನ್ನು ನೀಡಿದ್ದೆವು. ಆದರೆ ಅವರು ಅದನ್ನು ಮರೆತರು. ನಾವು ಅವರಲ್ಲಿ ಯಾವುದೇ ದೃಢನಿರ್ಧಾರವನ್ನು ಕಂಡಿಲ್ಲ.
“ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ನಾವು ದೇವದೂತರಿಗೆ ಆಜ್ಞಾಪಿಸಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು; ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು.
ಆಗ ನಾವು ಹೇಳಿದೆವು: “ಓ ಆದಮ್! ಈತ ನಿಮ್ಮ ಮತ್ತು ನಿಮ್ಮ ಪತ್ನಿಯ ವೈರಿಯಾಗಿದ್ದಾನೆ. ಈತ ನಿಮ್ಮನ್ನು ಸ್ವರ್ಗದಿಂದ ಹೊರಹೋಗುವಂತೆ ಮಾಡುವ ಪ್ರಸಂಗ ಬರದಿರಲಿ. ಹಾಗೇನಾದರೂ ಆದರೆ ನೀವು ಕಷ್ಟ ಅನುಭವಿಸುವಿರಿ.
ಇಲ್ಲಿ ನಿಮಗೆ ಖಂಡಿತ ಹಸಿವೆಯೋ ನಗ್ನತೆಯೋ ಇಲ್ಲ.
ಇಲ್ಲಿ ನಿಮಗೆ ದಾಹವೋ ಬಿಸಿಲಿನ ತಾಪವೋ ಇಲ್ಲ.
ಆದರೆ ಶೈತಾನನು ಅವರಿಗೆ ದುಷ್ಪ್ರೇರಣೆ ಮಾಡಿದನು: “ಓ ಆದಮ್! ನಾನು ನಿಮಗೆ ಶಾಶ್ವತ ಬದುಕನ್ನು ನೀಡುವ ಒಂದು ಮರದ ಕುರಿತು ಮತ್ತು ಎಂದೂ ಹಳೆಯದಾಗದ ಸಾಮ್ರಾಜ್ಯದ ಕುರಿತು ತಿಳಿಸಿಕೊಡಲೇ?”
ನಂತರ ಅವರಿಬ್ಬರು (ಆದಮ್ ಮತ್ತು ಹವ್ವಾ) ಆ ಮರದ ಹಣ್ಣನ್ನು ತಿಂದರು. ಆಗ ಅವರಿಗೆ ಅವರ ಗುಹ್ಯಭಾಗಗಳು ಪ್ರಕಟವಾದವು. ಅವರು ಸ್ವರ್ಗದ ಎಲೆಗಳನ್ನು ಜೋಡಿಸಿ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆದಮ್ ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೋಲ್ಲಂಘನೆ ಮಾಡಿದರು. ಆದ್ದರಿಂದ ಅವರು ತಪ್ಪಿ ನಡೆದರು.
ನಂತರ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಆರಿಸಿದನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದನು.
ಅಲ್ಲಾಹು ಹೇಳಿದನು: “ನೀವಿಬ್ಬರೂ ಒಟ್ಟಿಗೆ ಇಲ್ಲಿಂದ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನವು ಬರುವಾಗ, ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿತಪ್ಪುವುದಿಲ್ಲ ಮತ್ತು ಕಷ್ಟ ಅನುಭವಿಸುವುದಿಲ್ಲ.
ಆದರೆ ಯಾರು ನನ್ನ ಸ್ಮರಣೆಯನ್ನು ಕಡೆಗಣಿಸಿ ವಿಮುಖನಾಗುತ್ತಾನೋ—ನಿಶ್ಚಯವಾಗಿಯೂ ಅವನಿಗೆ ಇಕ್ಕಟ್ಟಾದ ಜೀವನವಿರುವುದು. ಪುನರುತ್ಥಾನ ದಿನದಂದು ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು.”
ಅವನು ಕೇಳುವನು: “ನನ್ನ ಪರಿಪಾಲಕನೇ! ನೀನು ನನ್ನನ್ನು ಕುರುಡನಾಗಿ ಏಕೆ ಎಬ್ಬಿಸಿದೆ? ನನಗೆ ಕಣ್ಣು ಕಾಣುತ್ತಿತ್ತಲ್ಲವೇ?”
ಅಲ್ಲಾಹು ಹೇಳುವನು: “ಈ ರೀತಿಯೇ ಆಗಿದೆ. ನಮ್ಮ ವಚನಗಳು ನಿನ್ನ ಬಳಿಗೆ ಬಂದಾಗ ನೀನು ಅದನ್ನು ಮರೆತುಬಿಟ್ಟೆ. ಅದೇ ರೀತಿ ಇಂದು ನೀನು ಕೂಡ ಮರೆಯಲಾಗಿರುವೆ.”
ಹದ್ದು ಮೀರುವವರಿಗೆ ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ವಿಶ್ವಾಸವಿಡದವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು. ಪರಲೋಕದ ಶಿಕ್ಷೆಯಂತೂ ಅತಿಕಠೋರ ಮತ್ತು ಶಾಶ್ವತವಾಗಿದೆ.
ಅವರಿಗಿಂತ ಮೊದಲು ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ ಎಂಬ ಸಂಗತಿಯು ಅವರನ್ನು ಸನ್ಮಾರ್ಗಕ್ಕೆ ಒಯ್ಯುವುದಿಲ್ಲವೇ? ವಾಸ್ತವವಾಗಿ, ಅವರ ವಾಸಸ್ಥಳಗಳಲ್ಲಿ ಇವರು ನಡೆದಾಡುತ್ತಿದ್ದಾರೆ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಇದರಲ್ಲಿ ಅನೇಕ ದೃಷ್ಟಾಂತಗಳಿವೆ.
ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಾತು ಮೊದಲೇ ಇಲ್ಲದಿರುತ್ತಿದ್ದರೆ, ಮತ್ತು ಒಂದು ನಿಶ್ಚಿತ ಅವಧಿಯನ್ನು ಮೊದಲೇ ತೀರ್ಮಾನಿಸಲಾಗದಿರುತ್ತಿದ್ದರೆ, ಶಿಕ್ಷೆಯು ಇವರಿಗೆ ಅನಿವಾರ್ಯವಾಗಿ ಬಿಡುತ್ತಿತ್ತು.
ಆದ್ದರಿಂದ ಅವರು ಹೇಳುತ್ತಿರುವ ಮಾತುಗಳ ಬಗ್ಗೆ ತಾಳ್ಮೆಯಿಂದಿರಿ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ರಾತ್ರಿಯ ಕೆಲವು ತಾಸುಗಳಲ್ಲೂ, ಹಗಲಿನ ಕೆಲವು ಭಾಗಗಳಲ್ಲೂ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತರಾಗುವುದಕ್ಕಾಗಿ.
ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವೆಲ್ಲವೂ ಇಹಲೋಕದ ಸೊಬಗುಗಳಾಗಿವೆ. ಅದರ ಮೂಲಕ ನಾವು ಅವರನ್ನು ಪರೀಕ್ಷಿಸುತ್ತೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ಒದಗಿಸುವ ಉಪಜೀವನವು ಅತ್ಯುತ್ತಮ ಮತ್ತು ಶಾಶ್ವತವಾಗಿದೆ.
ನಿಮ್ಮ ಕುಟುಂಬದವರಿಗೆ ನಮಾಝ್ ನಿರ್ವಹಿಸಲು ಆದೇಶಿಸಿರಿ. ಅದರಲ್ಲಿ (ನಮಾಝ್ನಲ್ಲಿ) ಸ್ಥೈರ್ಯದಿಂದಿರಿ. ನಾವು ನಿಮ್ಮಿಂದ ಆಹಾರವನ್ನು ಬೇಡುವುದಿಲ್ಲ. ನಾವೇ ನಿಮಗೆ ಆಹಾರ ಒದಗಿಸುತ್ತೇವೆ. ಅಂತಿಮ ಫಲಿತಾಂಶವಿರುವುದು ದೇವಭಯಕ್ಕಾಗಿದೆ.
ಅವರು ಹೇಳಿದರು: “ಅವರು (ಪ್ರವಾದಿ) ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಮ್ಮ ಬಳಿಗೆ ಒಂದು ದೃಷ್ಟಾಂತವನ್ನೇಕೆ ತರುವುದಿಲ್ಲ?” ಹಿಂದಿನ ಗ್ರಂಥಗಳಲ್ಲಿರುವ ಸ್ಪಷ್ಟ ಸಾಕ್ಷ್ಯವು ಅವರ ಬಳಿಗೆ ಬಂದಿಲ್ಲವೇ?
ಇವರಿಗಿಂತ (ಪ್ರವಾದಿಗಿಂತ) ಮೊದಲೇ ನಾವು ಅವರನ್ನು ಯಾವುದಾದರೂ ಶಿಕ್ಷೆಯ ಮೂಲಕ ನಾಶ ಮಾಡುತ್ತಿದ್ದರೆ, ಅವರು ಹೇಳುತ್ತಿದ್ದರು: “ನಮ್ಮ ಪರಿಪಾಲಕನೇ! ನೀನು ನಮ್ಮ ಬಳಿಗೆ ಒಬ್ಬ ಸಂದೇಶವಾಹಕನನ್ನು ಏಕೆ ಕಳುಹಿಸಲಿಲ್ಲ? ಹಾಗೇನಾದರೂ ಕಳುಹಿಸುತ್ತಿದ್ದರೆ ಈ ಅವಮಾನ ಮತ್ತು ನಾಚಿಗೆಗೇಡನ್ನು ಅನುಭವಿಸುವುದಕ್ಕೆ ಮೊದಲೇ ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು.”
ಹೇಳಿರಿ: “ಎಲ್ಲರೂ (ತಮ್ಮ ಫಲಿತಾಂಶವನ್ನು) ಕಾಯುತ್ತಿದ್ದಾರೆ. ನೀವು ಕೂಡ ಕಾಯಿರಿ. ಸರಿಯಾದ ಮಾರ್ಗದಲ್ಲಿರುವವರು ಯಾರು ಮತ್ತು ಸನ್ಮಾರ್ಗವನ್ನು ಪಡೆದವರು ಯಾರೆಂದು ನೀವು ಸದ್ಯವೇ ತಿಳಿಯುವಿರಿ.