The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Prophets [Al-Anbiya] - Kannada translation
Surah The Prophets [Al-Anbiya] Ayah 112 Location Maccah Number 21
ಜನರಿಗೆ ವಿಚಾರಣೆಯ ಸಮಯವು ಸನ್ನಿಹಿತವಾಗಿದೆ. ಆದರೂ ಅವರು ನಿರ್ಲಕ್ಷ್ಯದಿಂದ ವಿಮುಖರಾಗುತ್ತಿದ್ದಾರೆ.
ಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಯಾವುದೇ ಹೊಸ ಉಪದೇಶವು ಬಂದಾಗಲೆಲ್ಲಾ ಅವರು ಆಟವಾಡುತ್ತಲೇ ಅದಕ್ಕೆ ಕಿವಿಗೊಡುತ್ತಾರೆ.
ಅವರ ಹೃದಯಗಳು ಸಂಪೂರ್ಣ ನಿರ್ಲಕ್ಷ್ಯದಲ್ಲಿವೆ. ಅಕ್ರಮಿಗಳು ಪರಸ್ಪರ ರಹಸ್ಯವಾಗಿ ಮಾತನಾಡುತ್ತಾ ಕೇಳುತ್ತಾರೆ: “ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೇ? ನಿಮಗೆ ದೃಷ್ಟಿಯಿದ್ದೂ ಸಹ ನೀವು ಮಾಟಗಾರಿಕೆಗೆ ಬಲಿಯಾಗುತ್ತೀರಾ?”
ಪ್ರವಾದಿ ಹೇಳಿದರು: “ಆಕಾಶ ಮತ್ತು ಭೂಮಿಯಲ್ಲಿರುವ ಎಲ್ಲಾ ಮಾತುಗಳನ್ನು ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿಯುತ್ತಾನೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.”
ಅಷ್ಟೇ ಅಲ್ಲ; ಅವರು ಹೇಳಿದರು: “ಈ ಕುರ್ಆನ್ ಅರ್ಥಶೂನ್ಯ ಕನಸುಗಳ ಮಿಶ್ರಣವಾಗಿದೆ. ಅಲ್ಲ; ಅವನೇ (ಪ್ರವಾದಿ) ಅದನ್ನು ಸ್ವಯಂ ರಚಿಸಿ ತಂದಿದ್ದಾನೆ. ಅಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಇಲ್ಲದಿದ್ದರೆ, ಹಿಂದಿನ ಪ್ರವಾದಿಗಳು ತಂದಂತಹ ಯಾವುದಾದರೂ ದೃಷ್ಟಾಂತವನ್ನು ಇವನು ಕೂಡ ತಂದು ತೋರಿಸಲಿ.”
ಇವರಿಗಿಂತ ಮೊದಲು ನಾವು ನಾಶ ಮಾಡಿದ ಯಾವುದೇ ಊರಿನವರೂ ವಿಶ್ವಾಸವಿಟ್ಟಿರಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿಡುವರೇ?
ನಿಮಗಿಂತ ಮೊದಲು ನಾವು ಎಷ್ಟು ಸಂದೇಶವಾಹಕರನ್ನು ಕಳುಹಿಸಿದ್ದೆವೋ ಅವರೆಲ್ಲರೂ ನಾವು ದೇವವಾಣಿ ನೀಡಿದ ಪುರುಷರಾಗಿದ್ದರು. ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರೊಡನೆ ಕೇಳಿ ನೋಡಿ.
ಅವರನ್ನು ನಾವು ಆಹಾರ ಸೇವಿಸದ ದೇಹಗಳನ್ನಾಗಿ ಮತ್ತು ಶಾಶ್ವತವಾಗಿ ವಾಸಿಸುವವರನ್ನಾಗಿ ಮಾಡಿಲ್ಲ.
ನಂತರ ನಾವು ಅವರಿಗೆ ನೀಡಿದ ಎಲ್ಲಾ ವಾಗ್ದಾನಗಳನ್ನು ಸತ್ಯವಾಗಿ ನೆರವೇರಿಸಿಕೊಟ್ಟೆವು. ಅವರನ್ನು ಮತ್ತು ನಾವು ರಕ್ಷಿಸಬೇಕೆಂದು ಇಚ್ಛಿಸಿದವರನ್ನು ರಕ್ಷಿಸಿದೆವು. ಎಲ್ಲೆ ಮೀರಿದವರನ್ನು ನಾವು ನಾಶ ಮಾಡಿದೆವು.
ನಿಶ್ಚಯವಾಗಿಯೂ ನಾವು ನಿಮಗೆ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉಪದೇಶವಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?
ಅಕ್ರಮವೆಸಗುತ್ತಿದ್ದ ಎಷ್ಟೋ ಊರುಗಳನ್ನು ನಾವು ನಾಶ ಮಾಡಿದ್ದೇವೆ. ಅದರ ನಂತರ ನಾವು ಬೇರೊಂದು ಜನತೆಯನ್ನು ಸೃಷ್ಟಿಸಿದೆವು.
ಅವರಿಗೆ ನಮ್ಮ ಶಿಕ್ಷೆಯ ಅನುಭವವಾದಾಗ ಅಗೋ! ಅವರು ಅದರಿಂದ ಓಡಿ ಪಾರಾಗಲು ಯತ್ನಿಸುತ್ತಾರೆ.
ಓಡಬೇಡಿ! ನಾವು ನಿಮಗೆ ಒದಗಿಸಿದ ಆಡಂಬರಗಳ ಕಡೆಗೆ ಮತ್ತು ನಿಮ್ಮ ವಸತಿಗಳ ಕಡೆಗೆ ಬನ್ನಿರಿ. ನಿಮ್ಮೊಂದಿಗೆ ಪ್ರಶ್ನಿಸುವುದಕ್ಕಾಗಿ.[1]
ಅವರು ಹೇಳಿದರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳೇ ಆಗಿದ್ದೆವು.”
ಅವರು ಹೀಗೆ ರೋದಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ನಾವು ಅವರನ್ನು ಬುಡದಿಂದ ಕತ್ತರಿಸಲಾದ ತೆನೆಗಳಂತೆ ಮತ್ತು ಆರಿಹೋದ ಬೆಂಕಿಯಂತೆ ಮಾಡುವ ತನಕ.
ನಾವು ಭೂಮ್ಯಾಕಾಶಗಳನ್ನು ಅಥವಾ ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ.
ಮನರಂಜನೆಯು ನಮ್ಮ ಉದ್ದೇಶವಾಗಿದ್ದರೆ, ನಾವು ಅದನ್ನು ನಮ್ಮ ಬಳಿಯಲ್ಲೇ ಮಾಡುತ್ತಿದ್ದೆವು. ನಾವು ಹಾಗೆ ಮಾಡುವವರಾಗಿದ್ದರೆ.
ಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅಸತ್ಯವನ್ನು ಒಡೆದು ಹಾಕುತ್ತದೆ. ಆಗ ಅದು (ಅಸತ್ಯ) ತಕ್ಷಣ ನಾಶವಾಗುತ್ತದೆ. ನೀವು (ಅಲ್ಲಾಹನ ಬಗ್ಗೆ) ಆರೋಪಿಸುವ ಮಾತುಗಳಿಂದಾಗಿ ನಿಮಗೆ ವಿನಾಶವು ಕಾದಿದೆ.
ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನಿಗೆ ಸೇರಿದವರು. ಅವನ ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸಲು ಅಹಂಕಾರಪಡುವುದಿಲ್ಲ. ಅವರು ದಣಿಯುವುದೂ ಇಲ್ಲ.
ಅವರು ರಾತ್ರಿ-ಹಗಲು ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಅವರಿಗೆ ಸುಸ್ತಾಗುವುದಿಲ್ಲ.
ಅವರು ಭೂಮಿಯಲ್ಲಿ ಯಾರನ್ನು ದೇವರಾಗಿ ಸ್ವೀಕರಿಸಿದ್ದಾರೋ ಅವರು (ಸತ್ತವರಿಗೆ) ಜೀವ ನೀಡುತ್ತಾರೆಯೇ?
ಭೂಮ್ಯಾಕಾಶಗಳಲ್ಲಿ ಅಲ್ಲಾಹನ ಹೊರತು ಬೇರೆ ದೇವರುಗಳು ಇರುತ್ತಿದ್ದರೆ ಅವು ನಾಶವಾಗಿ ಹೋಗುತ್ತಿದ್ದವು.[1] ಅವರು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲದ್ದರಿಂದಲೂ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.
ಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಅವನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆದರೆ ಅವರು (ಮನುಷ್ಯರು) ಉತ್ತರದಾಯಿಗಳಾಗಿದ್ದಾರೆ.
ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆಯೇ? ಹೇಳಿರಿ: “ಅದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ತನ್ನಿರಿ.” ಇದು (ಕುರ್ಆನ್) ನನ್ನ ಜೊತೆಯಲ್ಲಿರುವವರಿಗೆ ಮತ್ತು ನನಗಿಂತ ಮೊದಲಿನವರಿಗೆ ಇರುವ ಉಪದೇಶವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರಿಗೂ ಸತ್ಯವೇನೆಂದು ತಿಳಿದಿಲ್ಲ. ಆದ್ದರಿಂದ ಅವರು ವಿಮುಖರಾಗುತ್ತಿದ್ದಾರೆ.
ನಿಮಗಿಂತ ಮೊದಲು ನಾವು ಯಾವೆಲ್ಲಾ ಸಂದೇಶವಾಹಕರುಗಳನ್ನು ಕಳುಹಿಸಿದ್ದೆವೋ ಅವರೆಲ್ಲರಿಗೂ, “ನನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ” ಎಂಬ ದೇವವಾಣಿಯನ್ನೇ ನೀಡಿದ್ದೆವು.
ಅವರು ಹೇಳಿದರು: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಮಕ್ಕಳಿದ್ದಾರೆ.” ಅವನು ಪರಿಶುದ್ಧನು. ಅಲ್ಲ, ವಾಸ್ತವವಾಗಿ ಅವರು ಅವನ ಸನ್ಮಾನ್ಯ ದಾಸರಾಗಿದ್ದಾರೆ.
ಅಲ್ಲಾಹು ಮಾತನಾಡುವುದಕ್ಕೆ ಮೊದಲೇ ಅವರು ಮಾತನಾಡುವುದಿಲ್ಲ. ಅವರು ಅವನ ಆಜ್ಞೆಯಂತೆ ಕೆಲಸ ಮಾಡುತ್ತಾರೆ.
ಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವ ಎಲ್ಲವನ್ನೂ ಅವನು ತಿಳಿಯುತ್ತಾನೆ. ಅವನ ಸಂಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಅವರು ಶಿಫಾರಸು ಮಾಡುತ್ತಾರೆ. ಅವರು ಅವನ ಭಯದಿಂದ ತರಗುಟ್ಟುತ್ತಾರೆ.
“ಅಲ್ಲಾಹನ ಹೊರತು ನಾನೇ ದೇವನು” ಎಂದು ಅವರಲ್ಲಿ ಯಾರು ಹೇಳುತ್ತಾನೋ, ಅವನಿಗೆ ನಾವು ಪ್ರತಿಫಲವಾಗಿ ನರಕಾಗ್ನಿಯನ್ನು ನೀಡುವೆವು. ಅಕ್ರಮಿಗಳಿಗೆ ನಾವು ಹೀಗೆಯೇ ಪ್ರತಿಫಲ ನೀಡುತ್ತೇವೆ.
ಭೂಮ್ಯಾಕಾಶಗಳು ಪರಸ್ಪರ ಅಂಟಿಕೊಂಡಿದ್ದವು ಮತ್ತು ನಾವು ಅವುಗಳನ್ನು ಬೇರ್ಪಡಿಸಿದೆವು ಎಂದು ಸತ್ಯನಿಷೇಧಿಗಳು ನೋಡುವುದಿಲ್ಲವೇ? ಜೀವವಿರುವ ಎಲ್ಲ ವಸ್ತುಗಳನ್ನೂ ನಾವು ನೀರಿನಿಂದ ಉಂಟು ಮಾಡಿದೆವು. ಆದರೂ ಅವರು ವಿಶ್ವಾಸವಿಡುವುದಿಲ್ಲವೇ?
ಭೂಮಿಯು ಅವರೊಂದಿಗೆ ಅಲುಗಾಡದಿರಲು ನಾವು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ವಿಶಾಲವಾದ ಮಾರ್ಗಗಳನ್ನು ಮಾಡಿದೆವು. ಅವರು ದಾರಿ ಕಾಣುವುದಕ್ಕಾಗಿ.
ನಾವು ಆಕಾಶವನ್ನು ಭದ್ರ ಮೇಲ್ಛಾವಣಿಯನ್ನಾಗಿ ಮಾಡಿದೆವು. ಆದರೆ ಅವರು ಆಕಾಶದ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.
ಅವನೇ ರಾತ್ರಿ-ಹಗಲು ಮತ್ತು ಸೂರ್ಯ-ಚಂದ್ರರನ್ನು ಸೃಷ್ಟಿಸಿದವನು. ಎಲ್ಲವೂ ಒಂದು ನಿಗದಿತ ಕಕ್ಷೆಯಲ್ಲಿ ಈಜುತ್ತಿವೆ.
(ಪ್ರವಾದಿಯವರೇ) ನಿಮಗಿಂತ ಮೊದಲು ನಾವು ಯಾವುದೇ ವ್ಯಕ್ತಿಗೂ ಶಾಶ್ವತ ಬದುಕನ್ನು ನೀಡಿಲ್ಲ. ಹೀಗಿರುವಾಗ, ನೀವು ನಿಧನರಾದರೆ ಅವರು ಶಾಶ್ವತವಾಗಿ ಉಳಿಯುವರೇ?
ಪ್ರತಿಯೊಂದು ಜೀವಿಯೂ ಮರಣದ ರುಚಿಯನ್ನು ನೋಡಲಿದೆ. ನಾವು ಪರೀಕ್ಷೆಯ ರೂಪದಲ್ಲಿ ನಿಮ್ಮಲ್ಲರನ್ನೂ ಒಳಿತು ಮತ್ತು ಕೆಡುಕುಗಳಲ್ಲಿ ಪರೀಕ್ಷಿಸುತ್ತೇವೆ. ನೀವೆಲ್ಲರೂ ನಮ್ಮ ಬಳಿಗೇ ಮರಳಿ ಬರುವಿರಿ.
ಸತ್ಯನಿಷೇಧಿಗಳು ನಿಮ್ಮನ್ನು ನೋಡಿದಾಗಲೆಲ್ಲಾ ನಿಮ್ಮನ್ನು ತಮಾಷೆ ಮಾಡುತ್ತಾ, “ನಿಮ್ಮ ದೇವರುಗಳ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವವನು ಇವನೇ ಏನು?” ಎಂದು (ಪರಸ್ಪರ) ಕೇಳುತ್ತಾರೆ. ಅವರಂತೂ ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿಷೇಧಿಸಿದ್ದಾರೆ.
ಮಾನವನನ್ನು ಆತುರ ಜೀವಿಯಾಗಿ ಸೃಷ್ಟಿಸಲಾಗಿದೆ. ನಾನು ಸದ್ಯವೇ ನನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡಲಿದ್ದೇನೆ. ಆದ್ದರಿಂದ ನೀವು ನನ್ನೊಂದಿಗೆ ತ್ವರೆ ಮಾಡಬೇಡಿ.
ಅವರು ಕೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ವಾಗ್ದಾನವು ನಿಜವಾಗುವುದು ಯಾವಾಗ ಎಂದು ಹೇಳಿರಿ?”
ತಮ್ಮ ಮುಖಗಳಿಂದ ಮತ್ತು ಬೆನ್ನುಗಳಿಂದ ಬೆಂಕಿಯನ್ನು ತಡೆಯಲು ಸಾಧ್ಯವಾಗದ ಮತ್ತು ಯಾವುದೇ ಸಹಾಯವು ದೊರಕದ ಆ ಒಂದು ಸಮಯದ ಬಗ್ಗೆ ಸತ್ಯನಿಷೇಧಿಗಳು ತಿಳಿದಿದ್ದರೆ!
ಅಲ್ಲ; ಅಂತ್ಯ ಸಮಯವು ಅವರ ಬಳಿಗೆ ಹಠಾತ್ತನೆ ಬರಲಿದೆ. ಅದು ಅವರನ್ನು ತಬ್ಬಿಬ್ಬುಗೊಳಿಸಲಿದೆ. ಅದನ್ನು ತಡೆಗಟ್ಟಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.
ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಅವರನ್ನು ಅಪಹಾಸ್ಯ ಮಾಡಿದವರನ್ನು ನಂತರ ಅವರು ಅಪಹಾಸ್ಯ ಮಾಡುತ್ತಿದ್ದ ವಿಷಯವೇ ಆವರಿಸಿಬಿಟ್ಟಿತು.
ಕೇಳಿರಿ: “ನಿಮ್ಮನ್ನು ಪರಮ ದಯಾಮಯನಿಂದ (ಅಲ್ಲಾಹನಿಂದ) ಹಗಲು-ರಾತ್ರಿ ರಕ್ಷಣೆ ಮಾಡಲು ಯಾರಿದ್ದಾರೆ?” ಅಲ್ಲ; ವಾಸ್ತವವಾಗಿ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖರಾಗಿದ್ದಾರೆ.
ಅವರ ರಕ್ಷಣೆ ಮಾಡಲು ಅವರಿಗೆ ನಮ್ಮ ಹೊರತು ಬೇರೆ ದೇವರುಗಳು ಇದ್ದಾರೆಯೇ? ಆ ದೇವರುಗಳಿಗೆ ಸ್ವಯಂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ನಮ್ಮ ಕಡೆಯಿಂದಲೂ ರಕ್ಷಣೆ ಸಿಗುವುದಿಲ್ಲ.
ಅಲ್ಲ; ನಾವು ಇವರಿಗೆ ಮತ್ತು ಇವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆವು. ಹೀಗೆ ಅವರು ದೀರ್ಘಕಾಲ ಬಾಳಿ ಬದುಕಿದರು. ನಾವು ಭೂಮಿಯನ್ನು ಅದರ ಅಂಚುಗಳಿಂದ ಕುಗ್ಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ?[1] ಹೀಗಿದ್ದೂ ಅವರೇ ವಿಜಯಿಗಳಾಗುವರೇ?
قُلۡ إِنَّمَآ أُنذِرُكُم بِٱلۡوَحۡيِۚ وَلَا يَسۡمَعُ ٱلصُّمُّ ٱلدُّعَآءَ إِذَا مَا يُنذَرُونَ [٤٥]
(ಪ್ರವಾದಿಯವರೇ) ಹೇಳಿರಿ: “ನಾನು ನಿಮಗೆ ದೇವವಾಣಿಯ ಆಧಾರದಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ.” ಅವರಿಗೆ ಎಚ್ಚರಿಕೆ ನೀಡಲಾಗುವಾಗ ಕಿವಿ ಕೇಳದವರು ಆ ಕರೆಯನ್ನು ಕೇಳಲಾರರು.
ಅವರಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಒಂದು ಸುಳಿವು ತಾಗಿದರೆ ಸಾಕು, ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು.”
ಪುನರುತ್ಥಾನ ದಿನದಂದು ನಾವು ನ್ಯಾಯಯುತ ತಕ್ಕಡಿಗಳನ್ನು ಸ್ಥಾಪಿಸುವೆವು. ಅಂದು ಯಾವುದೇ ವ್ಯಕ್ತಿಗೂ ಅನ್ಯಾಯವಾಗುವುದಿಲ್ಲ. ಅವರು ಮಾಡಿದ ಕರ್ಮವು ಒಂದು ಸಾಸಿವೆ ಕಾಳಿನ ತೂಕದಷ್ಟಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಯಥೇಷ್ಟ ಸಾಕು.
ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯ ವಿವೇಚನೆಯನ್ನು, ಪ್ರಕಾಶವನ್ನು ಮತ್ತು ದೇವಭಯವುಳ್ಳವರಿಗೆ ಉಪದೇಶವನ್ನು ನೀಡಿದೆವು.
ಅವರು (ದೇವಭಯವುಳ್ಳವರು) ಯಾರೆಂದರೆ, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅದೃಶ್ಯರೂಪದಲ್ಲಿ ಭಯಪಡುವವರು ಮತ್ತು ಅಂತ್ಯಸಮಯದ ವಿಷಯದಲ್ಲಿ ಅತೀವ ಆತಂಕದಲ್ಲಿರುವವರು.
ಇದು (ಕುರ್ಆನ್) ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಉಪದೇಶವಾಗಿದೆ. ಆದರೂ ನೀವು ಅದನ್ನು ನಿರಾಕರಿಸುತ್ತೀರಾ?
ಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ವಿವೇಚನೆಯನ್ನು ನೀಡಿದ್ದೆವು. ನಾವು ಅವರ ಸ್ಥಿತಿಗತಿಗಳ ಬಗ್ಗೆ ತಿಳಿದವರಾಗಿದ್ದೆವು.
ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದ ಸಂದರ್ಭ: “ನೀವು ಧ್ಯಾನ ನಿರತರಾಗಿ ಕುಳಿತುಕೊಳ್ಳುವ ಈ ವಿಗ್ರಹಗಳು ಏನು?”
ಅವರು ಉತ್ತರಿಸಿದರು: “ನಮ್ಮ ಪೂರ್ವಜರು ಇವುಗಳನ್ನು ಆರಾಧಿಸುವುದನ್ನು ನಾವು ನೋಡಿದ್ದೇವೆ.”
ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”
ಅವರು ಕೇಳಿದರು: “ನೀನು ನಮ್ಮ ಬಳಿಗೆ ಸತ್ಯವನ್ನು ತಂದಿದ್ದೀಯಾ? ಅಥವಾ ಕೇವಲ ತಮಾಷೆಗಾಗಿ ಹೇಳುತ್ತಿದ್ದೀಯಾ?”
ಇಬ್ರಾಹೀಮ್ ಹೇಳಿದರು: “ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅವುಗಳ ಪರಿಪಾಲಕನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನಾನು ಅದಕ್ಕೆ ಸಾಕ್ಷಿಯಾಗಿರುವವರಲ್ಲಿ ಒಬ್ಬನು.
ಅಲ್ಲಾಹನಾಣೆ! ನೀವು ಇಲ್ಲಿಂದ ತಿರುಗಿ ಹೊರಟುಹೋದ ಬಳಿಕ ನಾನು ನಿಮ್ಮ ವಿಗ್ರಹಗಳ ವಿರುದ್ಧ ಒಂದು ಸಂಚು ರೂಪಿಸುತ್ತೇನೆ.”
ನಂತರ ಇಬ್ರಾಹೀಮ್ ಆ ಎಲ್ಲಾ ವಿಗ್ರಹಗಳನ್ನು ಧ್ವಂಸ ಮಾಡಿದರು. ಆದರೆ ಅವುಗಳಲ್ಲಿ ದೊಡ್ಡ ವಿಗ್ರಹವನ್ನು ಹಾಗೆಯೇ ಬಿಟ್ಟರು. ಜನರು ಅದರ ಬಳಿಗೆ ಹಿಂದಿರುಗಿ ಬರುವುದಕ್ಕಾಗಿ.
ಜನರು ಕೇಳಿದರು: “ನಮ್ಮ ದೇವರುಗಳೊಡನೆ ಇಂತಹ ಕೃತ್ಯವನ್ನು ಮಾಡಿದ್ದು ಯಾರು? ನಿಶ್ಚಯವಾಗಿಯೂ ಅವನು ಅಕ್ರಮಿಯಾಗಿದ್ದಾನೆ.”
ಕೆಲವರು ಹೇಳಿದರು: “ಇಬ್ರಾಹೀಮ್ ಎಂಬ ಹೆಸರಿನ ಒಬ್ಬ ಯುವಕ ಈ ದೇವರುಗಳ ಬಗ್ಗೆ ಮಾತನಾಡುವುದನ್ನು ನಾವು ಕೇಳಿದ್ದೇವೆ.”
ಜನರು ಹೇಳಿದರು: “ಅವನನ್ನು ಜನರ ಕಣ್ಣ ಮುಂದೆ ತಂದು ನಿಲ್ಲಿಸಿ. ಎಲ್ಲರೂ ಅವನನ್ನು ನೋಡಲಿ.”
ಅವರು ಕೇಳಿದರು: “ಓ ಇಬ್ರಾಹೀಮ್! ನಮ್ಮ ದೇವರುಗಳೊಂದಿಗೆ ಈ ಕೃತ್ಯವನ್ನು ಮಾಡಿದ್ದು ನೀನೇ ಏನು?”
ಇಬ್ರಾಹೀಮ್ ಉತ್ತರಿಸಿದರು: “ಅಲ್ಲ; ಈ ದೊಡ್ಡ ವಿಗ್ರಹವೇ ಇದನ್ನು ಮಾಡಿದ್ದು. ನೀವು ಆ (ಧ್ವಂಸವಾದ) ವಿಗ್ರಹಗಳೊಡನೆ ಕೇಳಿ ನೋಡಿ. ಅವುಗಳಿಗೆ ಮಾತನಾಡಲು ಸಾಧ್ಯವಿದ್ದರೆ.”
ಅವರು (ಸತ್ಯವನ್ನು ಅರಿತು) ಪರಸ್ಪರರ ಕಡೆಗೆ ತಿರುಗಿ ಹೇಳಿದರು: “ನಿಜವಾಗಿಯೂ ನೀವೇ ಅಕ್ರಮಿಗಳು.”[1]
ನಂತರ ಅವರು ಉಲ್ಟಾ ಹೊಡೆದು ಹೇಳಿದರು: “ಈ ವಿಗ್ರಹಗಳು ಮಾತನಾಡುವುದಿಲ್ಲವೆಂದು ನಿನಗೆ ಗೊತ್ತಿಲ್ಲವೇ?”
ಇಬ್ರಾಹೀಮ್ ಕೇಳಿದರು: “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದ ಈ ವಸ್ತುಗಳನ್ನು ಆರಾಧಿಸುತ್ತಿದ್ದೀರಾ?
ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ಈ ದೇವರುಗಳಿಗೆ ನಾಚಿಕೆಯಾಗಬೇಕು! ನೀವು ಆಲೋಚಿಸುವುದಿಲ್ಲವೇ?”[1]
ಜನರು ಹೇಳಿದರು: “ಅವನನ್ನು ಸುಟ್ಟುಬಿಡಿ; ಮತ್ತು ನಿಮ್ಮ ದೇವರುಗಳಿಗೆ ಸಹಾಯ ಮಾಡಿ. ನೀವೇನಾದರೂ ಮಾಡುವುದಿದ್ದರೆ.”
ನಾವು ಹೇಳಿದೆವು: “ಓ ಬೆಂಕಿಯೇ! ನೀನು ಇಬ್ರಾಹೀಮರಿಗೆ ತಂಪು ಮತ್ತು ಸುರಕ್ಷೆಯಾಗಿ ಮಾರ್ಪಡು.”
ಅವರು ಇಬ್ರಾಹೀಮರ ಮೇಲೆ ತಂತ್ರ ಪ್ರಯೋಗಿಸಲು ಬಯಸಿದ್ದರು. ಆದರೆ ನಾವು ಅವರ (ತಂತ್ರವನ್ನು) ವಿಫಲಗೊಳಿಸಿದೆವು.
ನಾವು ಅವರನ್ನು ಮತ್ತು ಲೂತರನ್ನು ಪಾರು ಮಾಡಿ ನಾವು ಸರ್ವಲೋಕದವರಿಗಾಗಿ ಸಮೃದ್ಧಗೊಳಿಸಿದ ಪ್ರದೇಶಕ್ಕೆ ಸಾಗಿಸಿದೆವು.
ನಾವು ಅವರಿಗೆ ಇಸ್ಹಾಕರನ್ನು ಮತ್ತು ಹೆಚ್ಚಿಗೆಯಾಗಿ ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ನೀತಿವಂತರನ್ನಾಗಿ ಮಾಡಿದೆವು.
ನಾವು ಅವರನ್ನು ನಮ್ಮ ಆಜ್ಞೆಯಂತೆ ಮಾರ್ಗದರ್ಶನ ಮಾಡುವ ಮುಖಂಡರನ್ನಾಗಿ ಮಾಡಿದೆವು. ನಾವು ಅವರಿಗೆ ಸತ್ಕರ್ಮಗಳನ್ನು ಮಾಡಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ದೇವವಾಣಿಯನ್ನು (ನಿರ್ದೇಶನವನ್ನು) ನೀಡಿದೆವು. ಅವರು ನಮ್ಮನ್ನು ಮಾತ್ರ ಆರಾಧಿಸುವ ದಾಸರಾಗಿದ್ದರು.
ನಾವು ಲೂತರಿಗೆ ತೀರ್ಪುಗಾರಿಕೆ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅಶ್ಲೀಲಕೃತ್ಯವನ್ನು ಮಾಡುತ್ತಿದ್ದ ಊರಿನಿಂದ ನಾವು ಅವರನ್ನು ಪಾರು ಮಾಡಿದೆವು. ನಿಶ್ಚಯವಾಗಿಯೂ ಆ ಊರಿನವರು ದುಷ್ಟ ಅವಿಧೇಯ ಜನರಾಗಿದ್ದರು.
ನಾವು ಅವರನ್ನು (ಲೂತ್ರನ್ನು) ನಮ್ಮ ದಯೆಯಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರಿದ್ದರು.
ನೂಹರನ್ನು ಕೂಡ ನೆನಪಿಸಿಕೊಳ್ಳಿ! ಇದಕ್ಕೆ ಮೊದಲು ಅವರು ನಮ್ಮನ್ನು ಕರೆದು ಪ್ರಾರ್ಥಿಸಿದ ಸಂದರ್ಭದಲ್ಲಿ ನಾವು ಅವರ ಕರೆಗೆ ಉತ್ತರಿಸಿದೆವು. ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಮಹಾ ದುರಂತದಿಂದ ಪಾರು ಮಾಡಿದೆವು.
ನಮ್ಮ ವಚನಗಳನ್ನು ನಿಷೇಧಿಸಿದ ಜನರ ವಿರುದ್ಧ ನಾವು ಅವರಿಗೆ (ನೂಹರಿಗೆ) ಸಹಾಯ ಮಾಡಿದೆವು. ನಿಶ್ಚಯವಾಗಿಯೂ ಅವರು ದುಷ್ಟ ಜನರಾಗಿದ್ದರು. ಆದ್ದರಿಂದ ನಾವು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.
ದಾವೂದ್ ಮತ್ತು ಸುಲೈಮಾನರನ್ನು ನೆನಪಿಸಿಕೊಳ್ಳಿ! ಅವರಿಬ್ಬರು ಒಂದು ಹೊಲದ ವಿಷಯದಲ್ಲಿ ತೀರ್ಪು ನೀಡುತ್ತಿದ್ದರು. ಆ ಹೊಲಕ್ಕೆ ಕೆಲವು ಜನರ ಕುರಿಗಳು ನುಸುಳಿದ್ದವು. ಅವರು ನೀಡುವ ತೀರ್ಪಿಗೆ ನಾವು ಸಾಕ್ಷಿಯಾಗಿದ್ದೆವು.
ನಾವು ಸುಲೈಮಾನರಿಗೆ ಈ ಪ್ರಕರಣವು ಸರಿಯಾಗಿ ಅರ್ಥವಾಗುವಂತೆ ಮಾಡಿದೆವು.[1] ಅವರಿಬ್ಬರಿಗೂ ನಾವು ತೀರ್ಪುಗಾರಿಕೆ ಮತ್ತು ಜ್ಞಾನವನ್ನು ನೀಡಿದ್ದೆವು. ದಾವೂದರೊಂದಿಗೆ ಸ್ತುತಿಕೀರ್ತನೆ ಮಾಡಲು ನಾವು ಪರ್ವತಗಳನ್ನು ಮತ್ತು ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದೆವು. ನಾವು (ಅದನ್ನೆಲ್ಲಾ) ಮಾಡುವವರಾಗಿದ್ದೆವು.
ಯುದ್ಧದಲ್ಲಿ (ವೈರಿಗಳ ಏಟುಗಳಿಂದ) ನಿಮಗೆ ರಕ್ಷಣೆ ಒದಗಿಸುವ ಅಂಗಿಗಳ ತಯಾರಿಕೆಯನ್ನು ನಾವು ದಾವೂದರಿಗೆ ಕಲಿಸಿಕೊಟ್ಟೆವು.[1] ಆದರೂ ನೀವು ಕೃತಜ್ಞರಾಗುವುದಿಲ್ಲವೇ?
ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ನಾವು ಸಮೃದ್ಧಗೊಳಿಸಿದ ಭೂಪ್ರದೇಶಕ್ಕೆ ಚಲಿಸುತ್ತಿತ್ತು.[1] ನಾವು ಎಲ್ಲಾ ವಿಷಯಗಳ ಬಗ್ಗೆಯೂ ಜ್ಞಾನವುಳ್ಳವರಾಗಿದ್ದೇವೆ.
ಶೈತಾನರಲ್ಲಿ ಕೆಲವರನ್ನು ಅವರಿಗೆ ಅಧೀನಗೊಳಿಸಿದೆವು. ಅವರು ಸುಲೈಮಾನರಿಗಾಗಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದಲ್ಲದೆ ಇನ್ನಿತರ ಅನೇಕ ಕೆಲಸಗಳನ್ನು ಅವರು ಮಾಡುತ್ತಿದ್ದರು. ನಾವು ಅವರೆಲ್ಲರ ಪಾಲಕರಾಗಿದ್ದೆವು.
ಅಯ್ಯೂಬರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ. “ನಿಶ್ಚಯವಾಗಿಯೂ ನನಗೆ ತೊಂದರೆ ತಗುಲಿದೆ. ನೀನಾದರೋ ದಯೆ ತೋರುವವರಲ್ಲೇ ಅತ್ಯಧಿಕ ದಯೆ ತೋರುವವನು.”
ಆಗ ನಾವು ಅವರ ಕರೆಗೆ ಉತ್ತರ ನೀಡಿ ಅವರು ಬಳಲುತ್ತಿದ್ದ ತೊಂದರೆಯನ್ನು ನಿವಾರಿಸಿದೆವು. ನಾವು ಅವರಿಗೆ ಅವರ ಕುಟುಂಬವನ್ನು ಮತ್ತು ಅವರೊಂದಿಗೆ ಅವರಷ್ಟೇ ಇತರರನ್ನು ನೀಡಿದೆವು. ಇದು ನಮ್ಮ ಕಡೆಯ ದಯೆಯಾಗಿದೆ ಮತ್ತು ಆರಾಧಕರಿಗೆ ಒಂದು ಉಪದೇಶವಾಗಿದೆ.
ಇಸ್ಮಾಈಲ್, ಇದ್ರೀಸ್ ಮತ್ತು ದುಲ್-ಕಿಫ್ಲರನ್ನು ಕೂಡ ನೆನಪಿಸಿಕೊಳ್ಳಿ! ಅವರೆಲ್ಲರೂ ತಾಳ್ಮೆಯುಳ್ಳವರಾಗಿದ್ದರು.
ನಾವು ಅವರನ್ನು ನಮ್ಮ ಕಾರುಣ್ಯದಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿರುವರು.
ದುನ್ನೂನರನ್ನು[1] (ಯೂನುಸ್) ಕೂಡ ನೆನಪಿಸಿಕೊಳ್ಳಿ! ಅವರು ಕೋಪದಿಂದ ಹೊರಟುಹೋದ ಸಂದರ್ಭ. ನಮಗೆ ಅವರನ್ನು ಹಿಡಿಯಲು ಸಾಧ್ಯವಿಲ್ಲವೆಂದು ಅವರು ಭಾವಿಸಿದ್ದರು. ನಂತರ ಅವರು ಅಂಧಕಾರಗಳ ಒಳಗಿನಿಂದ ಕೂಗಿ ಕರೆದರು: “ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವನಿಲ್ಲ. ನೀನು ಪರಿಶುದ್ಧನು! ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದ್ದೆ.”
ಆಗ ನಾವು ಅವರ ಕರೆಗೆ ಉತ್ತರ ನೀಡಿದೆವು ಮತ್ತು ಅವರನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ಇದೇ ರೀತಿ ಸತ್ಯವಿಶ್ವಾಸಿಗಳನ್ನು ಪಾರು ಮಾಡುತ್ತೇವೆ.
ಝಕರಿಯ್ಯರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನನ್ನು ಒಂಟಿಯಾಗಿ ಬಿಟ್ಟುಬಿಡಬೇಡ. ನೀನು ಅತ್ಯುತ್ತಮ ವಾರಸುದಾರನಾಗಿರುವೆ.”
ಆಗ ನಾವು ಅವರ ಕರೆಗೆ ಉತ್ತರ ನೀಡಿದೆವು. ಅವರಿಗೆ ಯಹ್ಯಾ ಎಂಬ ಪುತ್ರನನ್ನು ದಯಪಾಲಿಸಿದೆವು. ಅವರ ಪತ್ನಿಯನ್ನು (ಗರ್ಭಧಾರಣೆಗೆ) ಯೋಗ್ಯಳನ್ನಾಗಿಸಿದೆವು. ನಿಶ್ಚಯವಾಗಿಯೂ ಈ ಎಲ್ಲಾ ಪ್ರವಾದಿಗಳು ಸತ್ಕರ್ಮಗಳನ್ನು ಮಾಡಲು ತ್ವರೆ ಮಾಡುತ್ತಿದ್ದರು ಮತ್ತು ನಿರೀಕ್ಷೆ ಹಾಗೂ ಭಯದಿಂದ ನಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ನಮಗೆ ವಿನಮ್ರರಾಗಿದ್ದರು.
ತನ್ನ ಕನ್ಯತ್ವವನ್ನು ಸಂರಕ್ಷಿಸಿದ ಆ ಪರಿಶುದ್ಧ ಮಹಿಳೆಯನ್ನು (ಮರ್ಯಮರನ್ನು) ಕೂಡ ನೆನಪಿಸಿಕೊಳ್ಳಿ. ನಾವು ಅವರೊಳಗೆ ಆತ್ಮವನ್ನು ಊದಿದೆವು. ಅವರನ್ನು ಮತ್ತು ಅವರ ಪುತ್ರನನ್ನು ಸರ್ವಲೋಕದವರಿಗೆ ದೃಷ್ಟಾಂತವೆಂಬಂತೆ ಮಾಡಿದೆವು.
ನಿಶ್ಚಯವಾಗಿಯೂ, ಇದೇ ನಿಮ್ಮ ಸಮುದಾಯ. ಏಕೈಕ ಸಮುದಾಯ! ಮತ್ತು ನಾನೇ ನಿಮ್ಮ ಪರಿಪಾಲಕ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ.
ಆದರೆ ಜನರು ತಮ್ಮ ಧರ್ಮದ ವಿಷಯದಲ್ಲಿ ಒಡೆದು ಭಿನ್ನರಾದರು. ಎಲ್ಲರೂ ನಮ್ಮ ಬಳಿಗೆ ಮರಳಿ ಬರುವರು.
ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾನೋ, ಅವನ ಪರಿಶ್ರಮಗಳನ್ನು ನಿರಾಕರಿಸಲಾಗುವುದಿಲ್ಲ. ನಿಶ್ಚಯವಾಗಿಯೂ ನಾವು ಅವುಗಳನ್ನು ದಾಖಲಿಸಿಡುವೆವು.
ನಾವು ಯಾವೆಲ್ಲಾ ಊರುಗಳನ್ನು ನಾಶ ಮಾಡಿದ್ದೇವೆಯೋ ಅವುಗಳ ನಿವಾಸಿಗಳು (ಭೂಮಿಗೆ) ಮರಳಿ ಬರುವುದಿಲ್ಲ ಎಂಬುದು ಅನಿಷೇಧ್ಯ ಸತ್ಯವಾಗಿದೆ.
ಎಲ್ಲಿಯವರೆಗೆಂದರೆ, ಯಾಜೂಜ್-ಮಾಜೂಜರನ್ನು ತೆರೆದು ಬಿಡಲಾಗುವುದು ಮತ್ತು ಅವರು ಎಲ್ಲ ದಿಬ್ಬಗಳಿಂದಲೂ ಇಳಿದು ಬರುವರು.
ಆ ಸತ್ಯ ವಾಗ್ದಾನವು ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ಎವೆಯಿಕ್ಕದೆ ದಿಟ್ಟಿಸುತ್ತಿರುವುದು. (ಅವರು ಹೇಳುವರು): “ಅಯ್ಯೋ! ನಮ್ಮ ದುರ್ಗತಿಯೇ! ನಾವು ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯದಲ್ಲಿದ್ದೆವು. ಅಲ್ಲ, ನಾವು ಅಕ್ರಮಿಗಳಾಗಿದ್ದೆವು.”
ನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ. ನೀವೆಲ್ಲರೂ ಅದಕ್ಕೇ ಹೋಗಿ ಸೇರುವಿರಿ.
ಇವರು ನಿಜಕ್ಕೂ ದೇವರುಗಳಾಗಿದ್ದರೆ ಇವರು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲೇ ಶಾಶ್ವತವಾಗಿರುವರು.
ಅಲ್ಲಿ ಅವರು ದೀರ್ಘ ನಿಟ್ಟುಸಿರುಗಳನ್ನು ಬಿಡುವರು. ಅದರಲ್ಲಿ ಅವರಿಗೆ ಏನೂ ಕೇಳಿಸಲಾರದು.
ನಿಶ್ಚಯವಾಗಿಯೂ, ನಮ್ಮ ಕಡೆಯಿಂದ ಯಾರಿಗೆ ಒಳಿತನ್ನು ಮೊದಲೇ ನೀಡಲಾಗಿದೆಯೋ ಅವರನ್ನು ಅದರಿಂದ (ನರಕದಿಂದ) ದೂರವಿರಿಸಲಾಗುವುದು.[1]
ಅವರಿಗೆ ನರಕದ ಕಿರಿಚಾಟಗಳು ಕೇಳುವುದಿಲ್ಲ. ಅವರ ಮನಸ್ಸುಗಳು ಅಸೆಪಡುವ ಸುಖಗಳಲ್ಲಿ ಅವರು ಸದಾಕಾಲ ವಾಸಿಸುವರು.
ಆ ಮಹಾ ದಿಗಿಲಿನಿಂದಲೂ ಅವರು ಸಂಕಟಪಡಲಾರರು. ದೇವದೂತರುಗಳು ಅವರನ್ನು ಬರಮಾಡಿಕೊಳ್ಳುತ್ತಾ ಹೇಳುವರು: “ಇದು ನಿಮಗೆ ವಾಗ್ದಾನ ಮಾಡಲಾದ ನಿಮ್ಮ ದಿನವಾಗಿದೆ.”
ಪುಸ್ತಕದ ಹಾಳೆಗಳನ್ನು ಸುರುಳಿಯಾಗಿ ಸುತ್ತುವಂತೆ ನಾವು ಆಕಾಶವನ್ನು ಸುತ್ತುವ ದಿನ. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆ ಮತ್ತೊಮ್ಮೆ ಸೃಷ್ಟಿಸುವೆವು. ಅದು ನಾವು ನೆರವೇರಿಸಬೇಕಾದ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಅದನ್ನು ನೆರವೇರಿಸುತ್ತೇವೆ.
ನಿಶ್ಚಯವಾಗಿಯೂ ನೀತಿವಂತರಾದ ನನ್ನ ದಾಸರೇ ಭೂಮಿಯ ವಾರಸುದಾರರಾಗುವರು ಎಂದು ನಾವು ಝಬೂರ್ನಲ್ಲಿ ಉಪದೇಶದ ನಂತರ ದಾಖಲಿಸಿದ್ದೇವೆ.
ನಿಶ್ಚಯವಾಗಿಯೂ ಇದರಲ್ಲಿ ಆರಾಧನೆ ಮಾಡುವವರಿಗೆ ದೊಡ್ಡ ಸಂದೇಶವಿದೆ.
(ಪ್ರವಾದಿಯವರೇ) ನಾವು ನಿಮ್ಮನ್ನು ಸರ್ವಲೋಕದವರಿಗೆ ಒಂದು ದಯೆಯಾಗಿಯೇ ಕಳುಹಿಸಿದ್ದೇವೆ.
ಹೇಳಿರಿ: “ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಇನ್ನಾದರೂ ನೀವು ಮುಸ್ಲಿಮರಾಗುವಿರಾ?”
ಅವರೇನಾದರೂ ಮುಖ ತಿರುಗಿಸಿ ನಡೆದರೆ ಹೇಳಿರಿ: “ನಾನು ನಿಮಗೆ ಸಮಾನ ರೂಪದಲ್ಲಿ ಎಚ್ಚರಿಸಿದ್ದೇನೆ.[1] ನಿಮಗೆ ವಾಗ್ದಾನ ಮಾಡಲಾಗಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ವಿದೂರದಲ್ಲಿದೆಯೋ ಎಂದು ನನಗೆ ತಿಳಿದಿಲ್ಲ.
ನಿಶ್ಚಯವಾಗಿಯೂ ಅಲ್ಲಾಹು ಬಹಿರಂಗ ಮಾತುಗಳನ್ನು ತಿಳಿಯುತ್ತಾನೆ ಮತ್ತು ನೀವು ರಹಸ್ಯವಾಗಿಡುವುದನ್ನೂ ತಿಳಿಯುತ್ತಾನೆ.
ನನಗೆ ಗೊತ್ತಿಲ್ಲ! ಬಹುಶಃ ಅದು ನಿಮಗೆ ಒಂದು ಪರೀಕ್ಷೆ ಮತ್ತು ನಿಶ್ಚಿತ ಕಾಲದವರೆಗಿನ ಆನಂದವಾಗಿರಬಹುದು.”
ಅವರು (ಪ್ರವಾದಿ) ಹೇಳಿದರು: “ನನ್ನ ಪರಿಪಾಲಕನೇ! ಸತ್ಯವಾಗಿ ತೀರ್ಪು ನೀಡು. ನಮ್ಮ ಪರಿಪಾಲಕನು (ಅಲ್ಲಾಹು) ಪರಮ ದಯಾಳುವಾಗಿದ್ದಾನೆ. ನೀವು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲಾ ವಿಷಯಗಳ ಬಗ್ಗೆ ಸಹಾಯ ಬೇಡಲಾಗುವವನು ಅವನೇ.”