عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Pilgrimage [Al-Hajj] - Kannada translation

Surah The Pilgrimage [Al-Hajj] Ayah 78 Location Maccah Number 22

ಓ ಮನುಷ್ಯರೇ! ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ನಿಶ್ಚಯವಾಗಿಯೂ ಅಂತ್ಯಸಮಯದ ಕಂಪನವು ಭಯಾನಕ ಸಂಗತಿಯಾಗಿದೆ.

ನೀವು ಅದನ್ನು ಕಾಣುವ ದಿನ ಹೇಗಿದೆಯೆಂದರೆ, ಅಂದು ಸ್ತನಪಾನ ಮಾಡುವ ತಾಯಂದಿರು ಸ್ತನ ಚೀಪುವ ಮಗುವನ್ನು ಮರೆಯುವರು, ಗರ್ಭಿಣಿಯರು ತನ್ನ ಗರ್ಭದಲ್ಲಿರುವುದನ್ನು ಹಡೆಯುವರು ಮತ್ತು ಜನರು ನಶೆಯಲ್ಲಿರುವಂತೆ ನಿಮಗೆ ಕಾಣುವರು. ವಾಸ್ತವವಾಗಿ ಅವರು ನಶೆಯಲ್ಲಿಲ್ಲ. ಆದರೆ ಅಲ್ಲಾಹನ ಶಿಕ್ಷೆಯು ಅತಿ ಕಠೋರವಾಗಿದೆ.

ಜನರಲ್ಲಿ ಕೆಲವರಿದ್ದಾರೆ. ಅವರು ಯಾವುದೇ ಜ್ಞಾನವಿಲ್ಲದೆ ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ ಮತ್ತು ದಂಗೆಕೋರರಾದ ಎಲ್ಲಾ ಶೈತಾನರನ್ನು ಹಿಂಬಾಲಿಸುತ್ತಾರೆ.

ಯಾರು ಅವನನ್ನು (ಶೈತಾನನನ್ನು) ಗೆಳೆಯನಾಗಿ ಸ್ವೀಕರಿಸುತ್ತಾನೋ, ಅವನನ್ನು ಶೈತಾನನು ದಾರಿತಪ್ಪಿಸುತ್ತಾನೆ ಮತ್ತು ಜ್ವಲಿಸುವ ನರಕ ಶಿಕ್ಷೆಗೆ ಒಯ್ಯುತ್ತಾನೆ ಎಂದು ಅವನ ಬಗ್ಗೆ ಲಿಖಿತಗೊಳಿಸಲಾಗಿದೆ.

ಮನುಷ್ಯರೇ! ಪುನರುತ್ಥಾನದ ಬಗ್ಗೆ ನಿಮಗೆ ಸಂಶಯವಿದ್ದರೆ (ಆಲೋಚಿಸಿ ನೋಡಿ). ನಿಶ್ಚಯವಾಗಿಯೂ, ನಾವು ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ, ನಂತರ ರಕ್ತಪಿಂಡದಿಂದ, ನಂತರ ರೂಪ ನೀಡಲಾದ ಮತ್ತು ರೂಪ ನೀಡಲ್ಪಡದ ಮಾಂಸ ಮುದ್ದೆಯಿಂದ ಸೃಷ್ಟಿಸಿದೆವು. ನಾವು ಇದನ್ನು ನಿಮಗೆ ವಿವರಿಸಿಕೊಡುತ್ತಿದ್ದೇವೆ. ನಂತರ ನಾವು ಇಚ್ಛಿಸುವ ನಿಶ್ಚಿತ ಅವಧಿಯ ತನಕ ಅದನ್ನು ಗರ್ಭಾಶಯಗಳಲ್ಲಿ ಇಡುತ್ತೇವೆ. ನಂತರ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರತರುತ್ತೇವೆ. ನೀವು ನಿಮ್ಮ ಪೂರ್ಣ ಯೌವನವನ್ನು ತಲುಪುವುದಕ್ಕಾಗಿ. ನಿಮ್ಮಲ್ಲಿ ಕೆಲವರು ನಿಧನರಾಗುತ್ತಾರೆ. ಕೆಲವರು ಅನೇಕ ವಿಷಯಗಳನ್ನು ತಿಳಿದುಕೊಂಡ ಬಳಿಕವೂ ಏನೂ ತಿಳಿಯದ ಅವಸ್ಥೆಗೆ ತಲುಪುವ ರೀತಿಯಲ್ಲಿ ಹಣ್ಣು ಹಣ್ಣು ಮುದುಕರಾಗುವ ಪ್ರಾಯಕ್ಕೆ ಮರಳಿಸಲ್ಪಡುತ್ತಾರೆ. ಭೂಮಿಯು ಒಣಗಿ ನಿರ್ಜೀವವಾಗಿರುವುದನ್ನು ನೀವು ಕಾಣುವಿರಿ. ನಂತರ ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ, ಅದು ಮೈಗೊಡವಿ ಎದ್ದು ಬೆಳವಣಿಗೆ ಪಡೆಯುತ್ತದೆ ಮತ್ತು ಅಪ್ಯಾಯಮಾನವಾದ ಎಲ್ಲಾ ರೀತಿಯ ಸಸ್ಯಗಳನ್ನು ಉತ್ಪಾದಿಸುತ್ತದೆ.

ಅದೇಕೆಂದರೆ ಅಲ್ಲಾಹನೇ ಸತ್ಯ. ಅವನು ಸತ್ತವರಿಗೆ ಜೀವ ನೀಡುತ್ತಾನೆ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಅಂತ್ಯಸಮಯವು ಬಂದೇ ಬರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಸಮಾಧಿಗಳಲ್ಲಿರುವವರನ್ನು ಅಲ್ಲಾಹು ಜೀವ ನೀಡಿ ಎಬ್ಬಿಸುತ್ತಾನೆ.

ಜನರಲ್ಲಿ ಕೆಲವರಿದ್ದಾರೆ. ಅವರು ಯಾವುದೇ ಜ್ಞಾನ, ಮಾರ್ಗದರ್ಶನ ಅಥವಾ ಬೆಳಕು ಚೆಲ್ಲುವ ಗ್ರಂಥದ ಆಧಾರವಿಲ್ಲದೆ ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ.

ಅವನು (ಅಹಂಕಾರದಿಂದ) ತನ್ನ ಕತ್ತನ್ನು ತಿರುಗಿಸುತ್ತಾನೆ. ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುವುದಕ್ಕಾಗಿ. ಅವನಿಗೆ ಇಹಲೋಕದಲ್ಲೇ ಅಪಮಾನವಿದೆ. ಪುನರುತ್ಥಾನ ದಿನದಂದು ನಾವು ಅವನಿಗೆ ಸುಟ್ಟು ಕರಕಲಾಗಿಸುವ ಶಿಕ್ಷೆಯ ರುಚಿಯನ್ನು ತೋರಿಸುವೆವು.

ನಿನ್ನ ಕೈಗಳು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳೇ ಇದಕ್ಕೆ ಕಾರಣ. ಅಲ್ಲಾಹು ತನ್ನ ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ.

ಜನರಲ್ಲಿ ಕೆಲವರಿದ್ದಾರೆ. ಅವರು ಒಂದು ತುದಿಯಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುತ್ತಾರೆ. ಅವರಿಗೆ ಏನಾದರೂ ಲಾಭವುಂಟಾದರೆ ಅವರು ಆಸಕ್ತಿಯಿಂದ ಅದನ್ನು ಸ್ವೀಕರಿಸುತ್ತಾರೆ. ಆದರೆ ಅವರಿಗೇನಾದರೂ ಪರೀಕ್ಷೆ ಎದುರಾದರೆ ಅವರು ಮುಖ ತಿರುಗಿಸಿ ನಡೆಯುತ್ತಾರೆ. ಅವನು ಇಹಲೋಕ ಮತ್ತು ಪರಲೋಕವನ್ನು ಕಳೆದುಕೊಂಡಿದ್ದಾನೆ. ಅದೇ ಅತ್ಯಂತ ಸ್ಪಷ್ಟವಾದ ನಷ್ಟ.

ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ತೊಂದರೆ ಅಥವಾ ಉಪಕಾರ ಮಾಡದವರನ್ನು ಕರೆದು ಪ್ರಾರ್ಥಿಸುತ್ತಾರೆ. ಅದೇ ಅತಿವಿದೂರವಾದ ದುರ್ಮಾರ್ಗ.

ಯಾರ ತೊಂದರೆಯು ಅವನ ಉಪಕಾರಕ್ಕಿಂತಲೂ ಹೆಚ್ಚು ಹತ್ತಿರದಲ್ಲಿದೆಯೋ ಅಂತಹವರನ್ನು ಅವರು ಕರೆದು ಪ್ರಾರ್ಥಿಸುತ್ತಾರೆ. ಅವನು ಬಹಳ ಕೆಟ್ಟ ರಕ್ಷಕನಾಗಿದ್ದಾನೆ. ಅವನು ಬಹಳ ನಿಕೃಷ್ಟ ಸಹಾಯಕನಾಗಿದ್ದಾನೆ.

ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವುದನ್ನು ಮಾಡುತ್ತಾನೆ.

ಅಲ್ಲಾಹು ತನ್ನ ಪ್ರವಾದಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸಹಾಯ ಮಾಡುವುದಿಲ್ಲ ಎಂದು ಭಾವಿಸುವವನು ಛಾವಣಿಗೆ ಹಗ್ಗ ಕಟ್ಟಿ (ತನ್ನ ಕೊರಳಿಗೆ ಉರುಳು ಹಾಕಿ) ಸಾಯಲಿ. ನಂತರ ತನ್ನ ಚಾಲಾಕಿತನದಿಂದ ತನ್ನನ್ನು ಕೆರಳಿಸುವ ಆ ವಿಷಯವು ನಿವಾರಣೆಯಾಗುತ್ತದೋ ಎಂದು ನೋಡಲಿ.

ಈ ರೀತಿ ನಾವು ಸ್ಪಷ್ಟ ಸಾಕ್ಷ್ಯಾಧಾರಗಳ ರೂಪದಲ್ಲಿ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವವರಿಗೆ ಸನ್ಮಾರ್ಗ ತೋರಿಸುತ್ತಾನೆ.

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಸಾಬಿಗಳು, ಕ್ರೈಸ್ತರು, ಅಗ್ನಿಯಾರಾಧಕರು, ಬಹುದೇವಾರಾಧಕರು—ಅಲ್ಲಾಹು ಇವರೆಲ್ಲರ ಮಧ್ಯೆ ಪುನರುತ್ಥಾನ ದಿನದಂದು ತೀರ್ಪು ನೀಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.

ಆಕಾಶಗಳಲ್ಲಿರುವವರು, ಭೂಮಿಯಲ್ಲಿರುವವರು, ಸೂರ್ಯ, ಚಂದ್ರ, ತಾರೆಗಳು, ಪರ್ವತಗಳು, ಮರಗಳು, ಜೀವರಾಶಿಗಳು ಮತ್ತು ಜನರಲ್ಲಿ ಅನೇಕರು ಅಲ್ಲಾಹನಿಗೆ ಸಾಷ್ಟಾಂಗ ಮಾಡುವುದನ್ನು ನೀವು ನೋಡುವುದಿಲ್ಲವೇ? ಶಿಕ್ಷೆಯು ದೃಢಪಟ್ಟ ಅನೇಕ ಮಂದಿಯೂ ಜನರಲ್ಲಿದ್ದಾರೆ. ಅಲ್ಲಾಹು ಯಾರನ್ನು ಅವಮಾನಿಸುತ್ತಾನೋ ಅವನಿಗೆ ಗೌರವ ನೀಡುವವರಾರೂ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.

ಈ ಎರಡು ಗುಂಪುಗಳು ತಮ್ಮ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ತರ್ಕಿಸುತ್ತಾರೆ. ಸತ್ಯನಿಷೇಧಗಳು ಯಾರೋ—ಅವರಿಗೆ ಅಗ್ನಿಯ ಉಡುಪುಗಳನ್ನು ಕತ್ತರಿಸಿ ಕೊಡಲಾಗುವುದು. ಅವರ ತಲೆಯ ಮೇಲೆ ಕುದಿಯುವ ನೀರನ್ನು ಸುರಿಯಲಾಗುವುದು.

ಅದರಿಂದ ಅವರ ಉದರ ಮತ್ತು ಚರ್ಮಗಳ ಒಳಗಿರುವುದೆಲ್ಲವೂ ಕರಗಿ ಬಿಡುತ್ತವೆ.

ಅವರನ್ನು ಶಿಕ್ಷಿಸಲು ಕಬ್ಬಿಣದ ಸಲಾಖೆಗಳಿವೆ.

ಕಡು ಸಂಕಟದಿಂದ ಅವರು ಅದರಿಂದ ತಪ್ಪಿಸಿಕೊಳ್ಳಲು ಬಯಸುವಾಗಲೆಲ್ಲ ಅವರನ್ನು ಅದಕ್ಕೇ ಮರಳಿಸಲಾಗುವುದು. “ಸುಟ್ಟು ಕರಕಲಾಗಿಸುವ ಶಿಕ್ಷೆಯ ರುಚಿಯನ್ನು ನೋಡಿರಿ” (ಎಂದು ಅವರೊಡನೆ ಹೇಳಲಾಗುವುದು).

ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಅಲ್ಲಿ ಅವರಿಗೆ ಬಂಗಾರದ ಕಡಗಗಳನ್ನು ಮತ್ತು ಮುತ್ತುಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಪು ರೇಷ್ಮೆಯಾಗಿರುವುದು.

ಪರಿಶುದ್ಧ ಮಾತಿನ ಕಡೆಗೆ ಅವರಿಗೆ ಮಾರ್ಗದರ್ಶನ ಮಾಡಲಾಗಿದೆ. ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ಮಾಡಲಾಗಿದೆ.

ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಹಾಗೂ (ಮಕ್ಕಾದ) ಪವಿತ್ರ ಮಸೀದಿಯಿಂದ ಜನರನ್ನು ತಡೆಯುವವರು ಯಾರೋ—ಆ ಮಸೀದಿಯನ್ನು ನಾವು ಅಲ್ಲಿನ ನಿವಾಸಿಗಳು ಮತ್ತು ಹೊರಗಿನವರು ಸೇರಿದಂತೆ ಎಲ್ಲಾ ಜನರಿಗೂ ಸಮಾನ ಹಕ್ಕಿರುವಂತೆ ಮಾಡಿದ್ದೇವೆ. ಯಾರು ಅಲ್ಲಿ ಅನ್ಯಾಯವಾಗಿ ಧರ್ಮಬಾಹಿರ ಕೃತ್ಯವನ್ನು ಮಾಡಲು ಬಯಸುತ್ತಾನೋ ಅವನಿಗೆ ನಾವು ಯಾತನಾಮಯ ಶಿಕ್ಷೆಯ ರುಚಿಯನ್ನು ತೋರಿಸುವೆವು.

ನಾವು ಇಬ್ರಾಹೀಮ‌ರಿಗೆ ಆ ಭವನದ (ಕಅ‌ಬಾಲಯದ) ಸ್ಥಳವನ್ನು ನಿಗದಿಪಡಿಸಿದ ಸಂದರ್ಭ. (ನಾವು ಅವರಿಗೆ ಆಜ್ಞಾಪಿಸಿದೆವು): “ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬೇಡಿ ಮತ್ತು ಪ್ರದಕ್ಷಿಣೆ ಮಾಡುವವರಿಗೆ, ನಿಂತು, ಬಾಗಿ ಮತ್ತು ಸಾಷ್ಟಾಂಗ ಮಾಡುತ್ತಾ ಪ್ರಾರ್ಥಿಸುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ.

ಜನರಿಗೆ ಹಜ್ಜ್ ನಿರ್ವಹಿಸಲು ಕರೆ ನೀಡಿರಿ. ಜನರು ತಮ್ಮ ಬಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸಣಕಲು ಒಂಟೆಗಳ ಮೇಲೇರಿ ಬರುವರು. ಅವರು ವಿದೂರವಾದ ಎಲ್ಲಾ ಸ್ಥಳಗಳಿಂದಲೂ ಬರುವರು.

ಅವರಿಗೆ ಪ್ರಯೋಜನವಾಗುವುದನ್ನು ಪಡೆಯಲು ಮತ್ತು ನಿಶ್ಚಿತ ದಿನಗಳಲ್ಲಿ ಅಲ್ಲಾಹನ ಹೆಸರನ್ನು ಉಚ್ಚರಿಸಿ ಅವನು ಒದಗಿಸಿದ ಜಾನುವಾರುಗಳನ್ನು ಬಲಿ ನೀಡಲು. ಅದರ ಮಾಂಸವನ್ನು ನೀವು ತಿನ್ನಿರಿ ಮತ್ತು ಹಸಿದ ಬಡವರಿಗೂ ತಿನ್ನಲು ನೀಡಿರಿ.

ನಂತರ ಅವರು ತಮ್ಮ ಕೊಳೆಯನ್ನು ನಿವಾರಿಸಲಿ,[1] ತಮ್ಮ ಹರಕೆಗಳನ್ನು ಸಂದಾಯ ಮಾಡಲಿ ಮತ್ತು ಆ ಪ್ರಾಚೀನ ಭವನಕ್ಕೆ ಪ್ರದಕ್ಷಿಣೆ ಮಾಡಲಿ.”

ಇದು. ಅಲ್ಲಾಹು ಪವಿತ್ರಗೊಳಿಸಿದ್ದನ್ನು ಯಾರು ಗೌರವಿಸುತ್ತಾರೋ ಅದು ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶ್ರೇಷ್ಠವಾಗಿದೆ. ನಿಮಗೆ ಜಾನುವಾರುಗಳನ್ನು ಧರ್ಮಸಮ್ಮತಗೊಳಿಸಲಾಗಿದೆ. ಆದರೆ ಈಗಾಗಲೇ (ನಿಷಿದ್ಧವೆಂದು) ವಿವರಿಸಲಾಗಿರುವವುಗಳ ಹೊರತು. ನೀವು ವಿಗ್ರಹಗಳ ಹೊಲಸಿನಿಂದ ದೂರವಿರಿ ಮತ್ತು ಸುಳ್ಳು ಮಾತುಗಳಿಂದಲೂ ದೂರವಿರಿ.

ಏಕನಿಷ್ಠರಾಗಿ ಅಲ್ಲಾಹನ ಕಡೆಗೆ ತಿರುಗಿರಿ ಮತ್ತು ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡಬೇಡಿ. ಯಾರು ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ ಅವನ ಸ್ಥಿತಿಯು ಆಕಾಶದಿಂದ ಕೆಳಗೆ ಬೀಳುವವನಂತೆ. ಹಕ್ಕಿಗಳು ಅವನನ್ನು ಕಸಿದುಕೊಂಡು ಹೋಗಬಹುದು; ಅಥವಾ ಗಾಳಿಯು ಅವನನ್ನು ವಿದೂರ ಸ್ಥಳಕ್ಕೆ ಒಯ್ಯಬಹುದು.

ಇದು. ಯಾರು ಅಲ್ಲಾಹನ ಧರ್ಮಲಾಂಛನಗಳನ್ನು ಗೌರವಿಸುತ್ತಾರೋ—ನಿಶ್ಚಯವಾಗಿಯೂ ಅದು ಹೃದಯಗಳಲ್ಲಿರುವ ದೇವಭಯದಿಂದಾಗಿದೆ.

ನಿಮಗೆ ಅವುಗಳಲ್ಲಿ (ಬಲಿಮೃಗಗಳಲ್ಲಿ) ಒಂದು ನಿಶ್ಚಿತ ಅವಧಿಯ ತನಕ ಪ್ರಯೋಜನಗಳಿವೆ. ನಂತರ ಅವುಗಳನ್ನು ಬಲಿ ನೀಡಬೇಕಾದ ಸ್ಥಳವು ಆ ಪ್ರಾಚೀನ ಭವನವಾಗಿದೆ.

ನಾವು ಎಲ್ಲಾ ಸಮುದಾಯಗಳಿಗೂ ಬಲಿಕರ್ಮವನ್ನು ನಿಶ್ಚಯಿಸಿದ್ದೇವೆ. ಅವರು ಅಲ್ಲಾಹನ ಹೆಸರು ಉಚ್ಛರಿಸಿ ಅವನು ಅವರಿಗೆ ಆಹಾರವಾಗಿ ಒದಗಿಸಿದ ಜಾನುವಾರುಗಳನ್ನು ಬಲಿ ನೀಡಲೆಂದು. ನಿಮ್ಮ ದೇವನು ಏಕೈಕ ದೇವನು. ಆದ್ದರಿಂದ ಅವನಿಗೆ ಮಾತ್ರ ಶರಣಾಗಿರಿ. ವಿನಮ್ರತೆ ತೋರುವವರಿಗೆ ಸುವಾರ್ತೆಯನ್ನು ತಿಳಿಸಿರಿ.

ಅವರು ಯಾರೆಂದರೆ, ಅವರ ಮುಂದೆ ಅಲ್ಲಾಹನ ಹೆಸರನ್ನು ಹೇಳಲಾದರೆ ಅವರ ಹೃದಯಗಳು ನಡುಗುತ್ತವೆ. ಅವರಿಗೆ ಕೆಡುಕುಗಳು ಸಂಭವಿಸಿದರೆ ಅವರು ತಾಳ್ಮೆಯಿಂದ ಸಹಿಸುತ್ತಾರೆ. ಅವರು ನಮಾಝನ್ನು ಸಂಸ್ಥಾಪಿಸುತ್ತಾರೆ ಮತ್ತು ನಾವು ನೀಡಿದ ಧನದಿಂದ ಖರ್ಚು ಮಾಡುತ್ತಾರೆ.

ನಾವು ಬಲಿ ಒಂಟೆಗಳನ್ನು ನಿಮಗೋಸ್ಕರ ಅಲ್ಲಾಹನ ಲಾಂಛನಗಳಲ್ಲಿ ಸೇರಿಸಿದ್ದೇವೆ. ನಿಮಗೆ ಅದರಲ್ಲಿ ಒಳಿತಿದೆ. ಆದ್ದರಿಂದ, ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ನಂತರ ಅವು ತಮ್ಮ ಪಾರ್ಶ್ವಗಳ ಮೇಲೆ ಬಿದ್ದರೆ, ನೀವೂ ತಿನ್ನಿರಿ ಮತ್ತು ನಿಮ್ಮ ಮುಂದೆ ಕೈಯೊಡ್ಡದ ಬಡವರಿಗೆ ಮತ್ತು ಬೇಡಿ ತಿನ್ನುವವರಿಗೆ ತಿನ್ನಿಸಿರಿ. ಈ ರೀತಿ ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿದ್ದೇವೆ. ನೀವು ಕೃತಜ್ಞರಾಗುವುದಕ್ಕಾಗಿ.

ಅವುಗಳ ಮಾಂಸ ಅಥವಾ ರಕ್ತ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ನಿಮ್ಮಲ್ಲಿರುವ ದೇವಭಯವು ಅವನಿಗೆ ತಲುಪುತ್ತದೆ. ಈ ರೀತಿ ಅವನು ಅವುಗಳನ್ನು ನಿಮಗೆ ಅಧೀನಗೊಳಿಸಿದ್ದಾನೆ. ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿದ್ದಕ್ಕಾಗಿ ನೀವು ಅವನ ಮಹತ್ವವನ್ನು ಕೊಂಡಾಡಲು. ಒಳಿತು ಮಾಡುವವರಿಗೆ ಸುವಾರ್ತೆಯನ್ನು ತಿಳಿಸಿರಿ.

ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಅವರ ವೈರಿಗಳಿಂದ ರಕ್ಷಿಸುತ್ತಾನೆ. ವಿಶ್ವಾಸದ್ರೋಹ ಮಾಡುವ ಕೃತಘ್ನನನ್ನು ಅಲ್ಲಾಹು ಖಂಡಿತ ಇಷ್ಟಪಡುವುದಿಲ್ಲ.

ಯಾರ ವಿರುದ್ಧ ವೈರಿಗಳು ಯುದ್ಧ ಸಾರಿದ್ದಾರೋ ಅವರಿಗೂ ಯುದ್ಧ ಮಾಡುವ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರಾಗಿದ್ದಾರೆ. ಅವರಿಗೆ ಸಹಾಯ ಮಾಡುವ ಶಕ್ತಿ ಖಂಡಿತ ಅಲ್ಲಾಹನಿಗಿದೆ.

ಅವರು (ಮರ್ದಿತರು) ಯಾರೆಂದರೆ, ಅಲ್ಲಾಹನೇ ನಮ್ಮ ಪರಿಪಾಲಕ ಎಂದು ಹೇಳಿದ ಕಾರಣಕ್ಕಾಗಿ ತಮ್ಮ ಮನೆಗಳಿಂದ ಅನ್ಯಾಯವಾಗಿ ಹೊರಹಾಕಲಾದವರು. ಅಲ್ಲಾಹು ಜನರಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ತಡೆಯದಿರುತ್ತಿದ್ದರೆ, ಸನ್ಯಾಸಿ ಪೀಠಗಳು, ಚರ್ಚುಗಳು, ಯಹೂದಿಗಳ ಮಂದಿರಗಳು ಮತ್ತು ಅತ್ಯಧಿಕವಾಗಿ ಅಲ್ಲಾಹನ ಹೆಸರನ್ನು ಉಚ್ಛರಿಸಲಾಗುವ ಮಸೀದಿಗಳು ಧ್ವಂಸವಾಗುತ್ತಿದ್ದವು! ಅಲ್ಲಾಹನಿಗೆ ಸಹಾಯ ಮಾಡುವವರಿಗೆ ಅಲ್ಲಾಹು ಖಂಡಿತ ಸಹಾಯ ಮಾಡುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಬಲಿಷ್ಠನು ಮತ್ತು ಅಜೇಯನಾಗಿದ್ದಾನೆ.

ಅವರು (ಮರ್ದಿತರು) ಯಾರೆಂದರೆ, ನಾವು ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದರೆ ಅವರು ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ, ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ. ವಿಷಯಗಳ ಅಂತಿಮ ಫಲಿತಾಂಶವು ಅಲ್ಲಾಹನಿಗೆ ಸೇರಿದೆ.

(ಪ್ರವಾದಿಯವರೇ) ಅವರು ನಿಮ್ಮನ್ನು ನಿಷೇಧಿಸಿದರೆ (ಅದರಲ್ಲಿ ಅತಿಶಯೋಕ್ತಿಯಿಲ್ಲ). ಅವರಿಗಿಂತ ಮೊದಲು ಜೀವಿಸಿದ್ದ ನೂಹರ ಜನರು, ಆದ್ ಮತ್ತು ಸಮೂದ್ ಗೋತ್ರದವರು ಕೂಡ ಪ್ರವಾದಿಗಳನ್ನು ನಿಷೇಧಿಸಿದ್ದರು.

ಇಬ್ರಾಹೀಮರ ಜನರು ಮತ್ತು ಲೂತರ ಜನರು ಕೂಡ (ಪ್ರವಾದಿಗಳನ್ನು ನಿಷೇಧಿಸಿದ್ದರು).

ಮದ್‍ಯನ್ ನಿವಾಸಿಗಳು ಕೂಡ (ಪ್ರವಾದಿಗಳನ್ನು ನಿಷೇಧಿಸಿದ್ದರು). ಮೂಸಾರನ್ನು ಕೂಡ ನಿಷೇಧಿಸಲಾಗಿತ್ತು. ಆದ್ದರಿಂದ, ನಾನು ಸತ್ಯನಿಷೇಧಿಗಳಿಗೆ ಅವಧಿಯನ್ನು ವಿಸ್ತರಿಸಿಕೊಟ್ಟು ನಂತರ ಅವರನ್ನು ಹಿಡಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!

ನಾವು ಎಷ್ಟೋ ಊರುಗಳನ್ನು ಅವುಗಳ ನಿವಾಸಿಗಳು ಅಕ್ರಮವೆಸಗಿದಾಗ ನಾಶ ಮಾಡಿದ್ದೆವು. ಅವೆಲ್ಲವೂ ಛಾವಣಿ ಸಹಿತ ಕುಸಿದು ಬಿದ್ದವು. ಎಷ್ಟೋ ಬಾವಿಗಳು ಪಾಳು ಬಿದ್ದಿವೆ! ಎಷ್ಟೋ ಎತ್ತರೆತ್ತರದ ಮಹಲುಗಳು ನಿರ್ಜನವಾಗಿವೆ!

ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಹಾಗಾದರೆ ಅವರಿಗೆ ಆಲೋಚಿಸುವ ಹೃದಯಗಳು ಅಥವಾ ಕೇಳುವ ಕಿವಿಗಳು ಇರುತ್ತಿದ್ದವು. ಏಕೆಂದರೆ, ಕುರುಡಾಗುವುದು ಕೇವಲ ಕಣ್ಣುಗಳು ಮಾತ್ರವಲ್ಲ, ಎದೆಗಳೊಳಗಿರುವ ಹೃದಯಗಳು ಕೂಡ ಕುರುಡಾಗುತ್ತವೆ.

ಅವರು ನಿಮ್ಮೊಡನೆ ಶಿಕ್ಷೆಗಾಗಿ ತ್ವರೆ ಮಾಡುತ್ತಾರೆ. ಆದರೆ ಅಲ್ಲಾಹು ತನ್ನ ವಾಗ್ದಾನವನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಒಂದು ದಿನವೆಂದರೆ ನಿಮ್ಮ ಎಣಿಕೆಯಂತೆ ಸಾವಿರ ವರ್ಷಗಳಾಗಿವೆ.

ನಾನು ಎಷ್ಟೋ ಊರುಗಳಿಗೆ ಅವುಗಳ ನಿವಾಸಿಗಳು ಅಕ್ರಮವೆಸಗಿದಾಗ ಕಾಲಾವಕಾಶವನ್ನು ವಿಸ್ತರಿಸಿಕೊಟ್ಟಿದ್ದೆನು. ನಂತರ ಅವರನ್ನು ಹಿಡಿದೆನು. ಎಲ್ಲರೂ ಮರಳಿ ಬರುವುದು ನನ್ನ ಬಳಿಗೇ ಆಗಿದೆ.

ಹೇಳಿರಿ: “ಓ ಜನರೇ! ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡುವವನಾಗಿದ್ದೇನೆ.”

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಕ್ಷಮೆ ಮತ್ತು ಗೌರವಾನ್ವಿತ ಆಹಾರವಿದೆ.

ನಮ್ಮ ದೃಷ್ಟಾಂತಗಳನ್ನು ವಿರೂಪಗೊಳಿಸಲು ಪ್ರಯತ್ನಿಸುವವರು ಯಾರೋ ಅವರೇ ನರಕವಾಸಿಗಳು.

ನಾವು ನಿಮಗಿಂತ ಮೊದಲು ಕಳುಹಿಸಿದ ಯಾವುದೇ ಸಂದೇಶವಾಹಕರು ಮತ್ತು ಪ್ರವಾದಿಗಳು ಮಾತನಾಡುವಾಗ (ಅಲ್ಲಾಹನ ಗ್ರಂಥವನ್ನು ಓದಿಕೊಡುವಾಗ), ಶೈತಾನನು ಅದಕ್ಕೆ ಕೆಲವು ದುರ್ವಿಚಾರಗಳನ್ನು ಸೇರಿಸುತ್ತಿದ್ದನು. ಆದರೆ ಶೈತಾನನು ಸೇರಿಸಿದ್ದನ್ನು ಅಲ್ಲಾಹು ಅಳಿಸಿ ಹಾಕುತ್ತಿದ್ದನು. ನಂತರ ಅಲ್ಲಾಹು ತನ್ನ ವಚನಗಳನ್ನು ಪ್ರಬಲಗೊಳಿಸುತ್ತಿದ್ದನು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.[1]

ಶೈತಾನನು ಸೇರಿಸಿದ್ದನ್ನು ಹೃದಯಗಳಲ್ಲಿ ರೋಗವಿರುವವರಿಗೆ ಮತ್ತು ಕಠೋರ ಹೃದಯಿಗಳಿಗೆ ಒಂದು ಪರೀಕ್ಷೆಯಾಗಿ ಮಾಡಲು. ನಿಶ್ಚಯವಾಗಿಯೂ ಅಕ್ರಮಿಗಳು ಆಳವಾದ ವಿರೋಧದಲ್ಲಿದ್ದಾರೆ.

ಅದೇ ರೀತಿ ಜ್ಞಾನ ನೀಡಲಾದವರು ಅದು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ತಿಳಿದು ಅದರಲ್ಲಿ ವಿಶ್ವಾಸವಿಡಲು, ಮತ್ತು ಅವರ ಹೃದಯಗಳು ಅದಕ್ಕೆ ಶರಣಾಗಲು. ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ನೇರಮಾರ್ಗಕ್ಕೆ ಮುನ್ನಡೆಸುತ್ತಾನೆ.

ಅಂತ್ಯಸಮಯವು ಅವರ ಬಳಿಗೆ ಹಠಾತ್ತನೆ ಬರುವ ತನಕ ಅಥವಾ ವಿನಾಶಕಾರಿ ದಿನದ ಶಿಕ್ಷೆಯು ಅವರ ಬಳಿಗೆ ಬರುವ ತನಕ ಸತ್ಯನಿಷೇಧಿಗಳು ಅದರ ಬಗ್ಗೆ ಸಂಶಯದಲ್ಲೇ ಇರುವರು.

ಅಂದು ಸಾರ್ವಭೌಮತ್ವವು ಸಂಪೂರ್ಣವಾಗಿ ಅಲ್ಲಾಹನಿಗಾಗಿದೆ. ಅವನು ಅವರ ಮಧ್ಯೆ ತೀರ್ಪು ನೀಡುವನು. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಸುಖಸಮೃದ್ಧವಾದ ಸ್ವರ್ಗಗಳಲ್ಲಿರುವರು.

ಸತ್ಯನಿಷೇಧಿಗಳು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ—ಅವರಿಗೆ ಅವಮಾನಕರ ಶಿಕ್ಷೆಯಿದೆ.

ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರು, ನಂತರ ಹುತಾತ್ಮರಾದವರು ಅಥವಾ ನಿಧನರಾದವರು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರಿಗೆ ಅತ್ಯುತ್ತಮ ಉಪಜೀವನವನ್ನು ಒದಗಿಸುವನು. ನಿಶ್ಚಯವಾಗಿಯೂ ಉಪಜೀವನ ಒದಗಿಸುವವರಲ್ಲಿ ಅಲ್ಲಾಹು ಅತಿಶ್ರೇಷ್ಠನಾಗಿದ್ದಾನೆ.

ನಿಶ್ಚಯವಾಗಿಯೂ ಅವರಿಗೆ ಸಂತೃಪ್ತಿ ನೀಡುವ ಸ್ಥಳಕ್ಕೆ ಅಲ್ಲಾಹು ಅವರನ್ನು ಪ್ರವೇಶ ಮಾಡಿಸುವನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.

ಅದು.[1] ಒಬ್ಬನು ತನ್ನ ಮೇಲೆ ನಡೆದ ದಬ್ಬಾಳಿಕೆಗೆ ಸಮಾನವಾದ ಪ್ರತೀಕಾರವನ್ನು ಪಡೆದಾಗ, ದಬ್ಬಾಳಿಕೆ ಮಾಡಿದವನು ಅವನ ಮೇಲೆ ಪುನಃ ಅತಿರೇಕವೆಸಗಿದರೆ ಅಲ್ಲಾಹು ಖಂಡಿತ ಅವನಿಗೆ ಸಹಾಯ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ.

ಅದೇಕೆಂದರೆ ಅಲ್ಲಾಹು ರಾತ್ರಿಯನ್ನು ಹಗಲಿನಲ್ಲಿ ಪ್ರವೇಶ ಮಾಡಿಸುತ್ತಾನೆ ಮತ್ತು ಹಗಲನ್ನು ರಾತ್ರಿಯಲ್ಲಿ ಪ್ರವೇಶ ಮಾಡಿಸುತ್ತಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

ಅದೇಕೆಂದರೆ ಅಲ್ಲಾಹನೇ ಸತ್ಯ. ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳೆಲ್ಲವೂ ಮಿಥ್ಯ. ಅಲ್ಲಾಹು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ.

ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿ, ಅದರಿಂದ ಭೂಮಿಯು ಹಸಿರಾಗಿ ಕಂಗೊಳಿಸುವುದನ್ನು ನೀವು ನೋಡಿಲ್ಲವೇ? ನಿಶ್ಚಯವಾಗಿಯೂ ಅಲ್ಲಾಹು ಸಹಾನುಭೂತಿಯುಳ್ಳವನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.

ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.

ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನು ಅಲ್ಲಾಹು ನಿಮಗೆ ನಿಯಂತ್ರಿಸಿಕೊಟ್ಟಿದ್ದಾನೆ ಎಂಬುದನ್ನು ನೀವು ನೋಡುವುದಿಲ್ಲವೇ? ಅವನ ಆಜ್ಞೆಯಂತೆ ಸಮುದ್ರದಲ್ಲಿ ಸಂಚರಿಸುವ ನಾವೆಗಳನ್ನು ಕೂಡ (ಅವನು ನಿಯಂತ್ರಿಸಿಕೊಟ್ಟಿದ್ದಾನೆ). ಆಕಾಶವು ಅವನ ಅಪ್ಪಣೆಯಿಲ್ಲದೆ ಭೂಮಿಯ ಮೇಲೆ ಬೀಳದಂತೆ ಅವನು ಅದನ್ನು ಆಧರಿಸಿ ಹಿಡಿದಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹು ಜನರ ಮೇಲೆ ಅತ್ಯಂತ ಅನುಕಂಪವಿರುವವನು ಮತ್ತು ದಯೆ ತೋರುವವನಾಗಿದ್ದಾನೆ.

ನಿಮಗೆ ಜೀವ ನೀಡಿದವನು ಅವನೇ. ನಂತರ ಅವನು ನಿಮ್ಮನ್ನು ಮೃತಪಡಿಸುತ್ತಾನೆ. ನಂತರ ನಿಮಗೆ ಪುನಃ ಜೀವ ನೀಡುತ್ತಾನೆ. ನಿಶ್ಚಯವಾಗಿಯೂ ಮನುಷ್ಯನು ಅತ್ಯಂತ ಕೃತಘ್ನನಾಗಿದ್ದಾನೆ.

ನಾವು ಪ್ರತಿಯೊಂದು ಸಮುದಾಯಕ್ಕೂ ಆರಾಧನಾ ವಿಧಾನವನ್ನು ನಿಶ್ಚಯಿಸಿದ್ದೇವೆ. ಅವರು ಅದನ್ನೇ ಪಾಲಿಸುತ್ತಾರೆ. ಆದ್ದರಿಂದ ಅವರು ಈ ವಿಷಯದಲ್ಲಿ ನಿಮ್ಮೊಂದಿಗೆ ತರ್ಕ ಮಾಡಬಾರದು. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗಕ್ಕೆ ಅವರನ್ನು ಕರೆಯಿರಿ. ನಿಶ್ಚಯವಾಗಿಯೂ ನೀವು ನೇರವಾದ ಮಾರ್ಗದಲ್ಲಿದ್ದೀರಿ.

ಅವರು ನಿಮ್ಮೊಂದಿಗೆ ತರ್ಕ ಮಾಡಿದರೆ, ಹೇಳಿರಿ: “ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.

ನೀವು ಭಿನ್ನಾಭಿಪ್ರಾಯದಲ್ಲಿರುವ ವಿಷಯದಲ್ಲಿ ಅಲ್ಲಾಹು ಪುನರುತ್ಥಾನ ದಿನದಂದು ನಿಮ್ಮ ನಡುವೆ ತೀರ್ಪು ನೀಡುತ್ತಾನೆ.”

ಭೂಮ್ಯಾಕಾಶದಲ್ಲಿರುವುದನ್ನು ಅಲ್ಲಾಹು ತಿಳಿಯುತ್ತಾನೆಂದು ನಿಮಗೆ ಗೊತ್ತಿಲ್ಲವೇ? ನಿಶ್ಚಯವಾಗಿಯೂ ಅವಲ್ಲವೂ ಒಂದು ಗ್ರಂಥದಲ್ಲಿದೆ. ನಿಶ್ಚಯವಾಗಿಯೂ ಅಲ್ಲಾಹನಿಗೆ ಅದು ಬಹಳ ಸುಲಭದ ವಿಷಯವಾಗಿದೆ.

ಅವರು ಅಲ್ಲಾಹನನ್ನು ಬಿಟ್ಟು ಅವನು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸದವರನ್ನು ಆರಾಧಿಸುತ್ತಿದ್ದಾರೆ. ಅವರಿಗೂ ಸಹ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ.

ನಮ್ಮ ಸ್ಪಷ್ಟ ವಚನಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳ ಮುಖಗಳಲ್ಲಿ ಅತೃಪ್ತಿ ವ್ಯಕ್ತವಾಗುವುದನ್ನು ಕಾಣಬಹುದು. ಅವರಿಗೆ ನಮ್ಮ ವಚನಗಳನ್ನು ಓದಿಕೊಡುವವರ ಮೇಲೆ ಹಲ್ಲೆ ಮಾಡುವಷ್ಟರ ಮಟ್ಟಿಗೆ ಅವರು ತಲುಪುತ್ತಾರೆ. ಹೇಳಿರಿ: “ಅದಕ್ಕಿಂತಲೂ ನಿಕೃಷ್ಟವಾದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನರಕಾಗ್ನಿ! ಅಲ್ಲಾಹು ಅದನ್ನು ಸತ್ಯನಿಷೇಧಿಗಳಿಗೆ ವಾಗ್ದಾನ ಮಾಡಿದ್ದಾನೆ. ಅದು ಬಹಳ ನಿಕೃಷ್ಟ ಗಮ್ಯಸ್ಥಾನವಾಗಿದೆ.”

ಓ ಮನುಷ್ಯರೇ! ನಿಮಗೆ ಒಂದು ಉದಾಹರಣೆಯನ್ನು ನೀಡಲಾಗುತ್ತಿದೆ. ಅದನ್ನು ಕಿವಿಗೊಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದೀರೋ ಅವರಿಗೆ ಒಂದು ನೊಣವನ್ನು ಕೂಡ ಸೃಷ್ಟಿಸುವ ಶಕ್ತಿಯಿಲ್ಲ. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನಾದರೂ ಕಸಿದುಕೊಂಡರೆ, ಅದನ್ನು ಆ ನೊಣದಿಂದ ವಾಪಸು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಪ್ರಾರ್ಥಿಸುವವನು ಎಷ್ಟು ಬಲಹೀನನು! ಪ್ರಾರ್ಥಿಸಲಾಗುವವನು ಕೂಡ ಎಷ್ಟು ಬಲಹೀನನು!

ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಗಣನೆ ಮಾಡಲಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.

ಅಲ್ಲಾಹು ದೇವದೂತರುಗಳಿಂದ ಮತ್ತು ಮನುಷ್ಯರಿಂದ ಸಂದೇಶವಾಹಕರನ್ನು ಆರಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

ಅವರ ಮುಂದಿರುವುದನ್ನು ಮತ್ತು ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಎಲ್ಲ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ.

ಸತ್ಯವಿಶ್ವಾಸಿಗಳೇ! ನೀವು ತಲೆಬಾಗಿರಿ, ಸಾಷ್ಟಾಂಗ ಮಾಡಿರಿ, ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ ಹಾಗೂ ಸತ್ಕರ್ಮಗಳನ್ನು ನಿರ್ವಹಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮಿಸಬೇಕಾದ ರೀತಿಯಲ್ಲೇ ಪರಿಶ್ರಮಿಸಿರಿ. ಅವನು ನಿಮ್ಮನ್ನು ಆರಿಸಿದ್ದಾನೆ. ಅವನು ನಿಮಗೆ ಧರ್ಮದಲ್ಲಿ ಯಾವುದೇ ಕಷ್ಟವನ್ನು ಮಾಡಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಧರ್ಮ. ಅವನು ಹಿಂದಿನ ಗ್ರಂಥಗಳಲ್ಲಿ ಮತ್ತು ಇದರಲ್ಲಿ (ಕುರ್‌ಆನಿನಲ್ಲಿ) ನಿಮಗೆ ಮುಸಲ್ಮಾನರೆಂದು ಹೆಸರಿಟ್ಟಿದ್ದಾನೆ. ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲು ಮತ್ತು ನೀವು ಜನರ ಮೇಲೆ ಸಾಕ್ಷಿಗಳಾಗಲು. ಆದ್ದರಿಂದ ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ಸಂರಕ್ಷಕ. ಅವನು ಎಷ್ಟು ಉತ್ತಮ ರಕ್ಷಕ! ಎಷ್ಟು ಉತ್ತಮ ಸಹಾಯಕ!