The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Spider [Al-Ankaboot] - Kannada translation
Surah The Spider [Al-Ankaboot] Ayah 69 Location Maccah Number 29
ಅಲಿಫ್-ಲಾಮ್-ಮೀಮ್.
“ನಾವು ವಿಶ್ವಾಸವಿಟ್ಟಿದ್ದೇವೆ” ಎಂದು ಹೇಳುವ ಕಾರಣ ತಮ್ಮನ್ನು ಪರೀಕ್ಷೆಗೆ ಗುರಿಯಾಗಿಸದೆ ಬಿಟ್ಟು ಬಿಡಲಾಗುವುದೆಂದು ಜನರು ಭಾವಿಸಿದ್ದಾರೆಯೇ?
ಅವರಿಗಿಂತ ಮೊದಲಿನವರನ್ನೂ ನಾವು ಪರೀಕ್ಷಿಸಿದ್ದೇವೆ. ಆಗ ಅವರಲ್ಲಿ ಸತ್ಯವಂತರು ಯಾರೆಂದು ಅಲ್ಲಾಹು ಖಂಡಿತ ತಿಳಿಯುವನು ಮತ್ತು ಸುಳ್ಳು ಹೇಳುವವರು ಯಾರೆಂದೂ ಅವನು ಖಂಡಿತ ತಿಳಿಯುವನು.
ದುಷ್ಕರ್ಮವೆಸಗುವವರು ನಮ್ಮ ನಿಯಂತ್ರಣದಲ್ಲಿಲ್ಲವೆಂದು ಅವರು ಭಾವಿಸುತ್ತಿದ್ದಾರೆಯೇ? ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.
مَن كَانَ يَرۡجُواْ لِقَآءَ ٱللَّهِ فَإِنَّ أَجَلَ ٱللَّهِ لَأٓتٖۚ وَهُوَ ٱلسَّمِيعُ ٱلۡعَلِيمُ [٥]
ಯಾರಿಗೆ ಅಲ್ಲಾಹನನ್ನು ಭೇಟಿಯಾಗುವ ನಿರೀಕ್ಷೆಯಿದೆಯೋ—ನಿಶ್ಚಯವಾಗಿಯೂ ಅಲ್ಲಾಹನ ನಿಶ್ಚಿತ ಅವಧಿಯು ಬಂದೇ ಬರುತ್ತದೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ಯಾರು ಪರಿಶ್ರಮಪಡುತ್ತಾನೋ ಅವನು ಪರಿಶ್ರಮಪಡುವುದು ಅವನ ಒಳಿತಿಗೇ ಆಗಿದೆ. ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ನಿರಪೇಕ್ಷನಾಗಿದ್ದಾನೆ.
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರ ಕೆಡುಕುಗಳನ್ನು ನಾವು ಅಳಿಸಿ ಬಿಡುವೆವು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
ತಂದೆ-ತಾಯಿಗಳಿಗೆ ಒಳಿತು ಮಾಡಬೇಕೆಂದು ನಾವು ಮನುಷ್ಯನಿಗೆ ಉಪದೇಶ ಮಾಡಿದ್ದೇವೆ. ಆದರೆ, ನಿನಗೆ ಯಾವುದೇ ತಿಳುವಳಿಕೆಯಿಲ್ಲದ ವಸ್ತುವನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ (ಶಿರ್ಕ್) ಮಾಡಲು ಅವರು (ತಂದೆ-ತಾಯಿ) ಪರಿಶ್ರಮಿಸಿದರೆ ಅವರ ಆಜ್ಞಾಪಾಲನೆ ಮಾಡಬೇಡ. ನೀವು ಮರಳಿ ಬರುವುದು ನನ್ನ ಬಳಿಗೇ ಆಗಿದೆ. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು.
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ನಿಶ್ಚಯವಾಗಿಯೂ ನಾವು ಅವರನ್ನು ನೀತಿವಂತರಲ್ಲಿ ಸೇರಿಸುವೆವು.
ಜನರಲ್ಲಿ ಕೆಲವರಿದ್ದಾರೆ. ಅವರು ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ.” ಆದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗೆ ತೊಂದರೆಗಳು ಎದುರಾದರೆ, ಜನರು ನೀಡುವ ತೊಂದರೆಯನ್ನು ಅವರು ಅಲ್ಲಾಹನ ಶಿಕ್ಷೆಯಂತೆಯೇ ಪರಿಗಣಿಸುತ್ತಾರೆ. ಒಂದು ವೇಳೆ, ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಏನಾದರೂ ಸಹಾಯವು ಬಂದರೆ ಅವರು ಹೇಳುತ್ತಾರೆ: “ನಿಜವಾಗಿಯೂ ನಾವು ನಿಮ್ಮ ಜೊತೆಗಿದ್ದೆವು.” ಸರ್ವಲೋಕದವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿಲ್ಲವೇ?
ಸತ್ಯವಿಶ್ವಾಸಿಗಳು ಯಾರೆಂದು ನಿಶ್ಚಯವಾಗಿಯೂ ಅಲ್ಲಾಹು ತಿಳಿಯುತ್ತಾನೆ. ಕಪಟವಿಶ್ವಾಸಿಗಳು ಯಾರೆಂದೂ ಅವನು ತಿಳಿಯುತ್ತಾನೆ.
ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳಿದರು: “ನಮ್ಮ ಮಾರ್ಗವನ್ನು ಅನುಸರಿಸಿರಿ. ನಿಮ್ಮ ಪಾಪಗಳನ್ನು ನಾವು ಹೊರುತ್ತೇವೆ.” ಆದರೆ ಅವರು ಇವರ ಪಾಪಗಳಲ್ಲಿ ಏನನ್ನೂ ಹೊರುವುದಿಲ್ಲ. ಅವರು ಸುಳ್ಳು ಹೇಳುವವರೇ ಆಗಿದ್ದಾರೆ.
ಅವರು ಅವರದ್ದೇ ಪಾಪಭಾರಗಳನ್ನು ಹೊರುತ್ತಾರೆ. ಅವರ ಪಾಪಭಾರಗಳೊಂದಿಗೆ ಇತರರು ಮಾಡಿದ ಪಾಪಭಾರಗಳನ್ನೂ ಹೊರುತ್ತಾರೆ. ಅವರು ಆರೋಪಿಸುವ ಸುಳ್ಳುಗಳ ಬಗ್ಗೆ ಪುನರುತ್ಥಾನ ದಿನದಂದು ಅವರಲ್ಲಿ ಖಂಡಿತ ವಿಚಾರಿಸಲಾಗುವುದು.
ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಒಂಬೈನೂರ ಐವತ್ತು ವರ್ಷಗಳ ಕಾಲ ಅವರ ನಡುವೆ ಬದುಕಿದರು. ನಂತರ ಅವರು ಅಕ್ರಮವೆಸಗಿದಾಗ ಚಂಡಮಾರುತವು ಅವರನ್ನು ಹಿಡಿದು ನಾಶ ಮಾಡಿತು.
ಆದರೆ ನಾವು ನೂಹರನ್ನು ಮತ್ತು ನಾವೆಯಲ್ಲಿದ್ದವರನ್ನು ರಕ್ಷಿಸಿದೆವು. ಅದನ್ನು ಸರ್ವಲೋಕದವರಿಗೆ ಒಂದು ದೃಷ್ಟಾಂತವನ್ನಾಗಿ ಮಾಡಿದೆವು.
ಇಬ್ರಾಹೀಮರನ್ನು ನೆನಪಿಸಿಕೊಳ್ಳಿ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಮಾತ್ರ ಭಯಪಡಿರಿ. ನಿಮಗೆ ತಿಳುವಳಿಕೆಯಿದ್ದರೆ ಅದೇ ನಿಮಗೆ ಉತ್ತಮವಾಗಿದೆ.
ನೀವು ಅಲ್ಲಾಹನನ್ನು ಬಿಟ್ಟು ಕೆಲವು ವಿಗ್ರಹಗಳನ್ನು ಆರಾಧಿಸುತ್ತಿದ್ದೀರಿ ಮತ್ತು ಸುಳ್ಳನ್ನು ಸೃಷ್ಟಿಸುತ್ತಿದ್ದೀರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಆರಾಧಿಸುತ್ತಿದ್ದೀರೋ ಅವರು ನಿಮ್ಮ ಉಪಜೀವನವನ್ನು ವಶದಲ್ಲಿಟ್ಟುಕೊಂಡಿಲ್ಲ. ಆದ್ದರಿಂದ ನೀವು ಅಲ್ಲಾಹನಲ್ಲಿ ಉಪಜೀವನವನ್ನು ಬೇಡಿರಿ. ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನಿಗೆ ಕೃತಜ್ಞರಾಗಿರಿ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.”
ನೀವು ನಿಷೇಧಿಸುವುದಾದರೆ (ಅದರಲ್ಲಿ ಆಶ್ಚರ್ಯವಿಲ್ಲ). ನಿಮಗಿಂತ ಮೊದಲು ಹಲವಾರು ಸಮುದಾಯಗಳ ಜನರು ನಿಷೇಧಿಸಿದ್ದಾರೆ. ಸಂದೇಶವಾಹಕರ ಕರ್ತವ್ಯವು ಸ್ಪಷ್ಟವಾದ ರೀತಿಯಲ್ಲಿ ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ.
ಅಲ್ಲಾಹು ಪ್ರಥಮ ಬಾರಿಗೆ ಹೇಗೆ ಸೃಷ್ಟಿಸಿದನೆಂದು ಅವರು ನೋಡಿಲ್ಲವೇ? ನಂತರ ಅವನು ಅದನ್ನು ಪುನರಾವರ್ತಿಸುವನು. ನಿಶ್ಚಯವಾಗಿಯೂ ಅದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ.
ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಅವನು ಪ್ರಥಮ ಬಾರಿಗೆ ಹೇಗೆ ಸೃಷ್ಟಿಸಿದನೆಂದು ನೋಡಿರಿ. ನಂತರ ಅಲ್ಲಾಹು ಇನ್ನೊಮ್ಮೆ ಸೃಷ್ಟಿಸುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.”
ಅವನು ಇಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಕರುಣೆ ತೋರುತ್ತಾನೆ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
ಭೂಮಿಯಲ್ಲಿ ಅಥವಾ ಆಕಾಶದಲ್ಲಿ ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರೋ ಸಹಾಯಕರೋ ಇಲ್ಲ.
ಅಲ್ಲಾಹನ ವಚನಗಳನ್ನು ಮತ್ತು ಅವನನ್ನು ಭೇಟಿಯಾಗುವುದನ್ನು ನಿಷೇಧಿಸಿದವರು ಯಾರೋ ಅವರು ನನ್ನ ದಯೆಯ ಬಗ್ಗೆ ನಿರಾಶರಾಗಿದ್ದಾರೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
ಆಗ ಅವರ (ಇಬ್ರಾಹೀಮರ) ಜನರ ಉತ್ತರವು ಇದು ಮಾತ್ರವಾಗಿತ್ತು: “ನೀವು ಅವನನ್ನು ಕೊಲ್ಲಿರಿ ಅಥವಾ ಸುಟ್ಟು ಬಿಡಿ.” ಆಗ ಅಲ್ಲಾಹು ಅವರನ್ನು ಬೆಂಕಿಯಿಂದ ರಕ್ಷಿಸಿದನು. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
ಇಬ್ರಾಹೀಮ್ ಹೇಳಿದರು: “ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು (ದೇವರುಗಳಾಗಿ) ಸ್ವೀಕರಿಸಿರುವುದು ಇಹಲೋಕ ಜೀವನದಲ್ಲಿ ನೀವು ಪರಸ್ಪರ ಹೊಂದಿರುವ ಗೆಳೆತನದ ಆಧಾರದಲ್ಲಿ ಮಾತ್ರವಾಗಿದೆ. ಆದರೆ ಪುನರುತ್ಥಾನದ ದಿನದಂದು ನೀವು ಒಬ್ಬರನ್ನೊಬ್ಬರು ನಿಷೇಧಿಸುವಿರಿ ಮತ್ತು ಒಬ್ಬರನ್ನೊಬ್ಬರು ಶಪಿಸುವಿರಿ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಯಾವುದೇ ಸಹಾಯಕರು ಇರುವುದಿಲ್ಲ.”
ಆಗ ಲೂತ್ ಅವರಲ್ಲಿ ವಿಶ್ವಾಸವಿಟ್ಟರು. ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಲಸೆ (ಹಿಜ್ರ) ಮಾಡುತ್ತೇನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”[1]
ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರ ಸಂತಾನದಲ್ಲೇ ಪ್ರವಾದಿತ್ವ ಮತ್ತು ಗ್ರಂಥವನ್ನು ನಿಶ್ಚಯಿಸಿದೆವು. ಇಹಲೋಕದಲ್ಲೂ ನಾವು ಅವರಿಗೆ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರುವರು.
ಲೂತ್ರನ್ನೂ ನೆನಪಿಸಿಕೊಳ್ಳಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಿ.
ನೀವು (ಲೈಂಗಿಕ ತೃಷೆಯನ್ನು ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಿ, ರಸ್ತೆಗಳಲ್ಲಿ ತಡೆಯೊಡ್ಡುತ್ತೀರಿ ಮತ್ತು ನಿಮ್ಮ ಸಭೆಗಳಲ್ಲೂ ಅಶ್ಲೀಲ ಕೃತ್ಯಗಳನ್ನು ಮಾಡುತ್ತೀರಿ.” ಆಗ ಅವರ ಜನರ ಉತ್ತರವು ಇದು ಮಾತ್ರವಾಗಿತ್ತು: “ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ತಂದು ತೋರಿಸು.”
ಲೂತ್ ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ಕಿಡಿಗೇಡಿಗಳಾದ ಈ ಜನರ ವಿರುದ್ಧ ನನಗೆ ಸಹಾಯ ಮಾಡು.”
ನಮ್ಮ ದೂತರು ಸುವಾರ್ತೆಯೊಂದಿಗೆ ಇಬ್ರಾಹೀಮರ ಬಳಿಗೆ ಬಂದ ಸಂದರ್ಭ. ಅವರು (ದೂತರು) ಹೇಳಿದರು: “ನಾವು ಈ ಊರಿನ ಜನರನ್ನು ಖಂಡಿತ ನಾಶ ಮಾಡುತ್ತೇವೆ. ಅದರ ನಿವಾಸಿಗಳು ಮಹಾ ದುಷ್ಟರಾಗಿದ್ದಾರೆ.”
ಇಬ್ರಾಹೀಮ್ ಹೇಳಿದರು: “ಆದರೆ ಅಲ್ಲಿ ಲೂತ್ ಇದ್ದಾರೆ!” ದೂತರು ಉತ್ತರಿಸಿದರು: “ಅಲ್ಲಿ ಯಾರೆಲ್ಲಾ ಇದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು.”
ನಮ್ಮ ದೂತರು ಲೂತರ ಬಳಿಗೆ ಬಂದ ಸಂದರ್ಭ. ಅವರನ್ನು ನೋಡಿ ಲೂತರಿಗೆ ಬಹಳ ಸಂಕಟವಾಯಿತು ಮತ್ತು ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಭಯಪಡಬೇಡಿ; ಸಂಕಟಪಡಬೇಡಿ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಖಂಡಿತ ರಕ್ಷಿಸುವೆವು. ನಿಮ್ಮ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು.
ನಾವು ಈ ಊರಿನವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸುವೆವು. ಅವರು ಮಾಡಿದ ದೃಷ್ಕೃತ್ಯಗಳ ಕಾರಣದಿಂದ.”
ನಾವು ಆ ಊರನ್ನು ಒಂದು ಸ್ಪಷ್ಟ ಚಿಹ್ನೆಯಾಗಿ ಬಾಕಿಯುಳಿಸಿದ್ದೇವೆ. ಬುದ್ಧಿಶಕ್ತಿಯಿರುವ ಜನರು ಆಲೋಚಿಸುವುದಕ್ಕಾಗಿ.
ನಾವು ಮದ್ಯನರ ಬಳಿಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು. ಅವರು ಹೇಳಿದರು: “ನನ್ನ ಜನರೇ! ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಅಂತ್ಯದಿನವನ್ನು ನಿರೀಕ್ಷಿಸಿರಿ. ನೀವು ಕಿಡಿಗೇಡಿತನ ಮಾಡುತ್ತಾ ಭೂಮಿಯಲ್ಲಿ ವಿಹರಿಸಬೇಡಿ.”
ಆದರೆ ಅವರು ಶುಐಬರನ್ನು ನಿಷೇಧಿಸಿದರು. ಆಗ ಭೂಕಂಪವು ಅವರನ್ನು ಹಿಡಿಯಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
ನಾವು ಆದ್ ಮತ್ತು ಸಮೂದ್ ಗೋತ್ರಗಳನ್ನೂ ನಾಶ ಮಾಡಿದೆವು. ಅವರ ಕೆಲವು ವಾಸಸ್ಥಳಗಳು ನಿಮಗೆ ಸ್ಪಷ್ಟವಾಗಿ ಕಾಣುತ್ತಿವೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದನು ಮತ್ತು ಅವರನ್ನು ನೇರ ಮಾರ್ಗದಿಂದ ತಡೆದನು. (ವಾಸ್ತವವಾಗಿ) ಅವರು ನೋಡಿ ತಿಳಿಯುವ ಸಾಮರ್ಥ್ಯವುಳ್ಳವರಾಗಿದ್ದರು.
ನಾವು ಕಾರೂನ್, ಫರೋಹ ಮತ್ತು ಹಾಮಾನನನ್ನು ಕೂಡ ನಾಶ ಮಾಡಿದೆವು. ಮೂಸಾ ಅವರ ಬಳಿಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆಗ ಅವರು ಭೂಮಿಯಲ್ಲಿ ಅಹಂಕಾರದಿಂದ ಮೆರೆದರು. ಆದರೆ ಅವರಿಗೆ ನಮ್ಮನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ.
ಹೀಗೆ ನಾವು ಪ್ರತಿಯೊಬ್ಬರನ್ನೂ ಅವರು ಮಾಡಿದ ಪಾಪಗಳಿಗಾಗಿ ಹಿಡಿದು ಶಿಕ್ಷಿಸಿದೆವು. ಅವರಲ್ಲಿ ಕೆಲವರ ವಿರುದ್ಧ ನಾವು ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು, ಅವರಲ್ಲಿ ಕೆಲವರನ್ನು ಚೀತ್ಕಾರವು ಹಿಡಿದು ಬಿಟ್ಟಿತು, ಅವರಲ್ಲಿ ಕೆಲವರನ್ನು ನಾವು ಭೂಮಿಯಲ್ಲಿ ಹುದುಗಿಸಿದೆವು ಮತ್ತು ಅವರಲ್ಲಿ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಸ್ವತಃ ಅವರೇ ಅವರೊಡನೆ ಅನ್ಯಾಯವೆಸಗಿದರು.
ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದವರ ಉದಾಹರಣೆಯು ಒಂದು ಜೇಡದಂತೆ. ಅದು ಒಂದು ಮನೆಯನ್ನು ಕಟ್ಟಿತು. ಮನೆಗಳಲ್ಲೇ ಅತ್ಯಂತ ದುರ್ಬಲ ಮನೆಯು ಜೇಡನ ಮನೆಯಾಗಿದೆ. ಅವರು ತಿಳಿಯುವವರಾಗಿದ್ದರೆ!
ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಎಲ್ಲಾ ವಸ್ತುಗಳ ಬಗ್ಗೆಯೂ ಅಲ್ಲಾಹನಿಗೆ ಸ್ಪಷ್ಟ ಜ್ಞಾನವಿದೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಾವು ಈ ಉದಾಹರಣೆಗಳನ್ನು ಜನರಿಗೆ ವಿವರಿಸಿಕೊಡುತ್ತೇವೆ. ಜ್ಞಾನವಿರುವವರು ಮಾತ್ರ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ಅಲ್ಲಾಹು ಭೂಮ್ಯಾಕಾಶಗಳನ್ನು ಸತ್ಯ ಸಮೇತ ಸೃಷ್ಟಿಸಿದ್ದಾನೆ. ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ.
ನಿಮಗೆ ದೇವವಾಣಿಯ ಮೂಲಕ ನೀಡಲಾದ ಗ್ರಂಥವನ್ನು ಪಠಿಸಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಕೃತ್ಯಗಳಿಂದ ಮತ್ತು ದುಷ್ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆಯು ಅತಿಶ್ರೇಷ್ಠವಾಗಿದೆ. ನೀವು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ತಿಳಿಯುತ್ತಾನೆ.
ನೀವು ಗ್ರಂಥದವರೊಂದಿಗೆ ಅತ್ಯುತ್ತಮ ರೀತಿಯಲ್ಲೇ ವಿನಾ ಸಂವಾದ ಮಾಡಬೇಡಿ; ಅವರಲ್ಲಿರುವ ಅಕ್ರಮಿಗಳ ಹೊರತು. ಹೇಳಿರಿ: “ನಮಗೆ ಅವತೀರ್ಣವಾಗಿರುವುದರಲ್ಲಿ ಮತ್ತು ನಿಮಗೆ ಅವತೀರ್ಣವಾಗಿರುವುದರಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ನಮ್ಮ ದೇವನು ಮತ್ತು ನಿಮ್ಮ ದೇವನು ಒಬ್ಬನೇ. ನಾವು ಅವನಿಗೆ ಶರಣಾಗಿದ್ದೇವೆ.”
ಈ ರೀತಿ ನಾವು ನಿಮಗೆ ನಮ್ಮ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ನಾವು (ಇದಕ್ಕೆ ಮೊದಲು) ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು ಇದರಲ್ಲಿ ವಿಶ್ವಾಸವಿಡುತ್ತಾರೆ. ಇವರಲ್ಲೂ (ಮಕ್ಕಾ ನಿವಾಸಿಗಳಲ್ಲೂ) ಕೂಡ ಕೆಲವರು ಅದರಲ್ಲಿ ವಿಶ್ವಾಸವಿಡುತ್ತಾರೆ. ಸತ್ಯನಿಷೇಧಿಗಳ ಹೊರತು ಇನ್ನಾರೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವುದಿಲ್ಲ.
(ಪ್ರವಾದಿಯವರೇ) ಇದಕ್ಕೆ ಮೊದಲು ನೀವು ಯಾವುದೇ ಗ್ರಂಥವನ್ನು ಪಠಿಸಿರಲಿಲ್ಲ. ನಿಮ್ಮ ಬಲಗೈಯಿಂದ ಅದನ್ನು ಬರೆಯಲೂ ಇಲ್ಲ. ಹಾಗಿರುತ್ತಿದ್ದರೆ ಈ ಸತ್ಯನಿಷೇಧಿಗಳಿಗೆ ಸಂಶಯಪಡಬಹುದಾಗಿತ್ತು.
ಬದಲಿಗೆ, ಇದು (ಕುರ್ಆನ್) ಜ್ಞಾನ ನೀಡಲಾದವರ ಹೃದಯಗಳಲ್ಲಿ ಭದ್ರವಾಗಿ ನೆಲೆಯೂರಿರುವ ಸ್ಪಷ್ಟ ವಚನಗಳಾಗಿವೆ. ಅಕ್ರಮಿಗಳ ಹೊರತು ಇನ್ನಾರೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವುದಿಲ್ಲ.
ಸತ್ಯನಿಷೇಧಿಗಳು ಹೇಳುತ್ತಾರೆ: “ಇವನಿಗೆ (ಪ್ರವಾದಿಗೆ) ಇವನ ಪರಿಪಾಲಕನಿಂದ (ಅಲ್ಲಾಹನಿಂದ) ದೃಷ್ಟಾಂತಗಳನ್ನು (ಪವಾಡಗಳನ್ನು) ಏಕೆ ಇಳಿಸಿಕೊಡಲಾಗುವುದಿಲ್ಲ?” ಹೇಳಿರಿ: “ದೃಷ್ಟಾಂತಗಳೆಲ್ಲವೂ ಅಲ್ಲಾಹನ ಬಳಿಯಿವೆ. ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.”
ನಾವು ನಿಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ ಎಂಬುದು ಅವರಿಗೆ (ದೃಷ್ಟಾಂತವಾಗಿ) ಸಾಕಾಗುವುದಿಲ್ಲವೇ? ಅದನ್ನು ಅವರಿಗೆ ಓದಿಕೊಡಲಾಗುತ್ತಿದೆ. ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಾದ ಜನರಿಗೆ ದಯೆ ಮತ್ತು ಉಪದೇಶವಿದೆ.
ಹೇಳಿರಿ: “ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹು ಸಾಕು. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಮಿಥ್ಯದಲ್ಲಿ ವಿಶ್ವಾಸವಿಡುವವರು ಮತ್ತು ಅಲ್ಲಾಹನನ್ನು ನಿಷೇಧಿಸುವವರು ಯಾರೋ ಅವರೇ ನಷ್ಟ ಹೊಂದಿದವರು.”
ಅವರು ನಿಮ್ಮೊಡನೆ ಶಿಕ್ಷೆಗಾಗಿ ತ್ವರೆ ಮಾಡುತ್ತಾರೆ. ಒಂದು ನಿಶ್ಚಿತ ಅವಧಿಯು ಇಲ್ಲದಿರುತ್ತಿದ್ದರೆ ಶಿಕ್ಷೆಯು ಈಗಾಗಲೇ ಅವರ ಬಳಿಗೆ ಬಂದಿರುತ್ತಿತ್ತು. ಅದು ಅವರ ಬಳಿಗೆ ಹಠಾತ್ತನೆ ಬರುತ್ತದೆ. ಆಗ ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.
ಅವರು ನಿಮ್ಮೊಡನೆ ಶಿಕ್ಷೆಗಾಗಿ ತ್ವರೆ ಮಾಡುತ್ತಾರೆ. ನಿಶ್ಚಯವಾಗಿಯೂ ನರಕವು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
ಶಿಕ್ಷೆಯು ಅವರನ್ನು ಮೇಲ್ಭಾಗದಿಂದ ಮತ್ತು ಅವರ ಕಾಲುಗಳ ತಳಭಾಗದಿಂದ ಆವರಿಸಿಕೊಳ್ಳುವ ದಿನ! ಅಲ್ಲಾಹು ಹೇಳುವನು: “ನೀವು ಮಾಡಿದ ಕರ್ಮಗಳ ರುಚಿಯನ್ನು ನೋಡಿರಿ.”
ನನ್ನ ಸತ್ಯವಿಶ್ವಾಸಿ ದಾಸರೇ! ನನ್ನ ಭೂಮಿ ವಿಶಾಲವಾಗಿದೆ. ಆದ್ದರಿಂದ ನೀವು ನನ್ನನ್ನು ಮಾತ್ರ ಆರಾಧಿಸಿರಿ.
ಪ್ರತಿಯೊಂದು ಆತ್ಮವೂ ಮರಣದ ರುಚಿಯನ್ನು ನೋಡಲಿದೆ. ನಂತರ ನಿಮ್ಮನ್ನು ನಮ್ಮ ಬಳಿಗೇ ಮರಳಿಸಲಾಗುವುದು.
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ನಾವು ಸ್ವರ್ಗದಲ್ಲಿ, ತಳಭಾಗದಿಂದ ನದಿಗಳು ಹರಿಯುವ ಉನ್ನತ ಮಹಲುಗಳಲ್ಲಿ ವಾಸ್ತವ್ಯವನ್ನು ಮಾಡಿಕೊಡುವೆವು. ಅದರಲ್ಲಿ ಅವರು ಶಾಶ್ವತವಾಗಿ ವಾಸಿಸುವರು. ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಎಷ್ಟು ಉತ್ತಮವಾಗಿದೆ!
ಅವರು ಯಾರೆಂದರೆ, ತಾಳ್ಮೆಯಿಂದ ಜೀವಿಸುವವರು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರು.
ಎಷ್ಟೋ ಜೀವಿಗಳಿವೆ. ಅವು ಅವುಗಳ ಆಹಾರವನ್ನು ಹೊತ್ತುಕೊಂಡು ಸಾಗುವುದಿಲ್ಲ. ಅವುಗಳಿಗೂ ನಿಮಗೂ ಅಲ್ಲಾಹು ಆಹಾರವನ್ನು ನೀಡುತ್ತಾನೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
“ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಯಾರು? ಸೂರ್ಯ-ಚಂದ್ರರನ್ನು ಅಧೀನಗೊಳಿಸಿದ್ದು ಯಾರು?” ಎಂದು ನೀವೇನಾದರೂ ಅವರೊಡನೆ (ಸತ್ಯನಿಷೇಧಿಗಳೊಡನೆ) ಕೇಳಿದರೆ ಅವರು ಖಂಡಿತ “ಅಲ್ಲಾಹು” ಎಂದೇ ಉತ್ತರಿಸುತ್ತಾರೆ. ಹಾಗಿದ್ದೂ ಅವರನ್ನು (ಸತ್ಯದಿಂದ) ತಪ್ಪಿಸಲಾಗುತ್ತಿರುವುದು ಹೇಗೆ?
ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
“ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡುವುದು ಯಾರು?” ಎಂದು ನೀವು ಅವರೊಡನೆ ಕೇಳಿದರೆ ಅವರು ಖಂಡಿತ “ಅಲ್ಲಾಹು” ಎಂದೇ ಉತ್ತರಿಸುತ್ತಾರೆ. ಹೇಳಿರಿ: “ಅಲ್ಲಾಹನಿಗೆ ಸರ್ವಸ್ತುತಿ. ಆದರೆ ಅವರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.”
ಈ ಇಹಲೋಕ ಜೀವನವು ಕೇವಲ ಆಟ ಮತ್ತು ಮನೋರಂಜನೆಯಾಗಿದೆ. ಪರಲೋಕ ಜೀವನವೇ ನಿಜವಾದ ಜೀವನ. ಅವರು ತಿಳಿದಿರುತ್ತಿದ್ದರೆ!
ಅವರು (ಬಹುದೇವಾರಾಧಕರು) ನಾವೆಯನ್ನು ಏರಿದರೆ ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. ನಂತರ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.
ನಾವು ಅವರಿಗೆ ದಯಪಾಲಿಸಿರುವುದನ್ನು ನಿಷೇಧಿಸಲು ಮತ್ತು ಆನಂದವಾಗಿ ಜೀವನ ನಡೆಸುತ್ತಿರಲು. ಅವರಿಗೆ ಸದ್ಯವೇ ತಿಳಿಯಲಿದೆ.
ನಾವು ನಿರ್ಭಯವಾದ ಒಂದು ಪವಿತ್ರ ಸ್ಥಳವನ್ನು (ಹರಂ) ನಿರ್ಮಿಸಿದ್ದನ್ನು ಅವರು ನೋಡಿಲ್ಲವೇ? ಅವರ ಸುತ್ತುಮುತ್ತಲಿಂದ ಜನರನ್ನು ಅಪಹರಿಸಲಾಗುತ್ತಿದೆ.[1] ಆದರೂ ಅವರು ಮಿಥ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಅನುಗ್ರಹವನ್ನು ನಿಷೇಧಿಸುತ್ತಿದ್ದಾರೆಯೇ?
ಅಲ್ಲಾಹನ ಹೆಸರಲ್ಲಿ ಸುಳ್ಳು ಆರೋಪಿಸುವವನು ಮತ್ತು ಸತ್ಯವು ಬಂದಾಗ ಅದನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಇಂತಹ ಸತ್ಯನಿಷೇಧಿಗಳಿಗೆ ನರಕದಲ್ಲಿ ವಾಸ್ತವ್ಯವಿಲ್ಲವೇ?
ನಮ್ಮ ಮಾರ್ಗದಲ್ಲಿ ಪರಿಶ್ರಮಪಡುವವರು ಯಾರೋ ಅವರಿಗೆ ನಾನು ನಮ್ಮ ಮಾರ್ಗಗಳನ್ನು ಖಂಡಿತ ತೋರಿಸುವೆವು. ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮಾಡುವವರ ಜೊತೆಯಲ್ಲಿದ್ದಾನೆ.