عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Romans [Ar-Room] - Kannada translation

Surah The Romans [Ar-Room] Ayah 60 Location Maccah Number 30

ಅಲಿಫ್-ಲಾಮ್-ಮೀಮ್.

ರೋಮನ್ನರು ಪರಾಜಿತರಾದರು.

ಸಮೀಪದ ಪ್ರದೇಶದಲ್ಲಿ. ತಮ್ಮ ಪರಾಜಯದ ಬಳಿಕ ಅವರು ಸದ್ಯವೇ ವಿಜಯಿಗಳಾಗುವರು.[1]

ಕೆಲವೇ ವರ್ಷಗಳಲ್ಲಿ.[1] ಅದರ ಮುಂದಿನ ಮತ್ತು ಹಿಂದಿನ ಸಂಗತಿಗಳ ನಿಯಂತ್ರಣವು ಅಲ್ಲಾಹನ ಕೈಯಲ್ಲಿದೆ. ಅಂದು ಸತ್ಯವಿಶ್ವಾಸಿಗಳು ಸಂಭ್ರಮಿಸುವರು.

ಅಲ್ಲಾಹನ ಸಹಾಯದಿಂದ. ಅಲ್ಲಾಹು ಅವನು ಬಯಸುವವರಿಗೆ ಸಹಾಯ ಮಾಡುತ್ತಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

ಇದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹು ಅವನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

ಅವರು ಇಹಲೋಕ ಜೀವನದ ಬಹಿರಂಗ ವಿಷಯಗಳನ್ನು ಮಾತ್ರ ತಿಳಿದಿದ್ದಾರೆ. ಆದರೆ ಪರಲೋಕದ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.

ಅವರು ಸ್ವಯಂ ಆಲೋಚಿಸುವುದಿಲ್ಲವೇ? ಅಲ್ಲಾಹು ಭೂಮ್ಯಾಕಾಶಗಳನ್ನು ಹಾಗೂ ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಸತ್ಯ ಸಮೇತವಾಗಿ ಮತ್ತು ಒಂದು ನಿಶ್ಚಿತ ಅವಧಿಯವರೆಗೆ ಮಾತ್ರ ಸೃಷ್ಟಿಸಿದ್ದಾನೆ. ಜನರಲ್ಲಿ ಹೆಚ್ಚಿನವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದವರಾಗಿದ್ದಾರೆ.

ಅವರು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಭೂಮಿಯನ್ನು ಉತ್ತು ಬೇಸಾಯ ಮಾಡಿದರು. ಅವರು ಇವರಿಗಿಂತಲೂ ಹೆಚ್ಚು ಭೂಮಿಯಲ್ಲಿ ವಾಸವಾಗಿದ್ದರು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.

ನಂತರ, ದುಷ್ಕರ್ಮವೆಸಗಿದವರ ಅಂತ್ಯವು ಅತ್ಯಂತ ದುಸ್ತರವಾಗಿತ್ತು. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು ಮತ್ತು ಅವುಗಳನ್ನು ತಮಾಷೆ ಮಾಡುತ್ತಿದ್ದರು.

ಅಲ್ಲಾಹು ಪ್ರಥಮ ಬಾರಿಗೆ ಸೃಷ್ಟಿಸುತ್ತಾನೆ. ನಂತರ ಅದನ್ನು ಪುನರಾವರ್ತಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ಅಂತ್ಯಸಮಯವು ಸಂಭವಿಸುವ ದಿನ ಅಪರಾಧಿಗಳು ಹತಾಶರಾಗುವರು.

ಅವರು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ದೇವರುಗಳಲ್ಲಿ) ಯಾರೂ ಕೂಡ ಅವರಿಗೆ ಶಿಫಾರಸು ಮಾಡುವುದಿಲ್ಲ. ಸ್ವತಃ ಅವರೇ ಆ ಸಹಭಾಗಿಗಳನ್ನು ನಿಷೇಧಿಸುವರು.

ಅಂತ್ಯಸಮಯವು ಸಂಭವಿಸುವ ದಿನ. ಅಂದು ಅವರು ಪರಸ್ಪರ ಬೇರ್ಪಡುವರು.

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಉದ್ಯಾನವನದಲ್ಲಿ ಆನಂದದಿಂದ ನಲಿದಾಡುವರು.

ಆದರೆ ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ ಅವರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.

ಸಂಜೆಯಾಗುವಾಗ ಮತ್ತು ಮುಂಜಾನೆಯಾಗುವಾಗ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡಿರಿ.

ಭೂಮ್ಯಾಕಾಶಗಳಲ್ಲಿ ಸರ್ವಸ್ತುತಿಗಳು ಅವನಿಗೆ ಮಾತ್ರ ಮೀಸಲು. ರಾತ್ರಿ ಹಾಗೂ ಮಧ್ಯಾಹ್ನದಲ್ಲೂ ಅವನ್ನು ಕೊಂಡಾಡಿರಿ.

ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಜೀವವನ್ನು ನೀಡುತ್ತಾನೆ. ಇದೇ ರೀತಿ ನಿಮ್ಮನ್ನು ಕೂಡ ಹೊರತರಲಾಗುವುದು.

ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನೀವು (ಜಗತ್ತಿನಾದ್ಯಂತ) ಹಬ್ಬಿಕೊಂಡ ಮಾನುಕುಲವಾಗಿ ಮಾರ್ಪಟ್ಟಿರಿ.

ನಿಮಗೆ ನಿಮ್ಮಿಂದಲೇ ಪತ್ನಿಯರನ್ನು ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಅವಳಲ್ಲಿ ನೆಮ್ಮದಿಯನ್ನು ಪಡೆಯುವುದಕ್ಕಾಗಿ. ಅವನು ನಿಮ್ಮ ನಡುವೆ ಪ್ರೀತಿ ಮತ್ತು ಅನುಕಂಪವನ್ನು ಇಟ್ಟನು. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಮತ್ತು ನಿಮ್ಮ ಭಾಷೆಗಳಲ್ಲಿ ಹಾಗೂ ವರ್ಣಗಳಲ್ಲಿ ವೈವಿಧ್ಯತೆಯನ್ನು ಮಾಡಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಜ್ಞಾನವಂತರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ನೀವು ರಾತ್ರಿಯಲ್ಲಿ ಮತ್ತು ಹಗಲಲ್ಲಿ ನಿದ್ದೆ ಮಾಡುವುದು ಹಾಗೂ ಅಲ್ಲಾಹನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ನಿಮ್ಮಲ್ಲಿ ಭಯ ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಾ ಮಿಂಚನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆಯನ್ನು ಸುರಿಸಿ ತನ್ಮೂಲಕ ನಿರ್ಜೀವ ಭೂಮಿಗೆ ಜೀವವನ್ನು ನೀಡುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ಭೂಮ್ಯಾಕಾಶವು ಅವನ ಆಜ್ಞೆಯಂತೆ ಅಸ್ತಿತ್ವದಲ್ಲಿರುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ಅವನು ಭೂಮಿಯಿಂದ ನಿಮ್ಮನ್ನು ಒಮ್ಮೆ ಕರೆದು ಬಿಟ್ಟರೆ, ಅಗೋ! ನೀವು ಹೊರಟು ಬರುತ್ತೀರಿ.

ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ಎಲ್ಲರೂ ಅವನ ಆಜ್ಞೆಗೆ ವಿಧೇಯರಾಗಿದ್ದಾರೆ.

ಅವನೇ ಪ್ರಥಮ ಬಾರಿಗೆ ಸೃಷ್ಟಿಸುವವನು ಮತ್ತು ನಂತರ ಅದನ್ನು ಪುನರಾವರ್ತಿಸುವವನು. ಅದು ಅವನಿಗೆ ಅತ್ಯಂತ ಸುಲಭವಾಗಿದೆ. ಅವನಿಗೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತ ಗುಣಲಕ್ಷಣಗಳಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅಲ್ಲಾಹು ನಿಮಗೆ ನಿಮ್ಮಿಂದಲೇ ಒಂದು ಉದಾಹರಣೆಯನ್ನು ನೀಡುತ್ತಾನೆ. ನಾವು ನಿಮಗೆ ನೀಡಿದ ಸವಲತ್ತುಗಳಲ್ಲಿ ನಿಮ್ಮ ಗುಲಾಮರು ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಅಂದರೆ, ನಿಮಗೆ ಮತ್ತು ಅವರಿಗೆ ಸಮಾನ ಸ್ಥಾನಮಾನವಿರುವ ರೀತಿಯಲ್ಲಿ? ನೀವು ಸ್ವತಃ ನಿಮ್ಮ ಬಗ್ಗೆ ಭಯಪಡುವಂತೆ ಅವರ ಬಗ್ಗೆಯೂ ಭಯಪಡುವ ರೀತಿಯಲ್ಲಿ? ಅರ್ಥಮಾಡಿಕೊಳ್ಳುವ ಜನರಿಗೆ ನಾವು ಈ ರೀತಿ ವಚನಗಳನ್ನು ವಿವರಿಸಿಕೊಡುತ್ತೇವೆ.

ಆದರೆ ಅಕ್ರಮವೆಸಗಿದವರು ಯಾವುದೇ ಜ್ಞಾನವಿಲ್ಲದೆ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅಲ್ಲಾಹು ದಾರಿತಪ್ಪಿಸಿದವರಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರಿಗೆ ಯಾವುದೇ ಸಹಾಯಕರೂ ಇರುವುದಿಲ್ಲ.

ಆದ್ದರಿಂದ ನೀವು ಏಕನಿಷ್ಠರಾಗಿ ನಿಮ್ಮ ಮುಖವನ್ನು ಧರ್ಮದ ಕಡೆಗೆ ತಿರುಗಿಸಿರಿ. ಅದು ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿದ ಸಹಜ ಮನೋಧರ್ಮವಾಗಿದೆ. ಅಲ್ಲಾಹನ ಸೃಷ್ಟಿ ನಿಯಮಕ್ಕೆ ಯಾವುದೇ ಬದಲಾವಣೆಯಿಲ್ಲ. ಅದೇ ನೇರವಾದ ಧರ್ಮ. ಆದರೆ ಮನುಷ್ಯರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

ಅಲ್ಲಾಹನ ಕಡೆಗೆ ತಿರುಗಿ ಅವನನ್ನು ಭಯಪಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಬಹುದೇವಾರಾಧಕರಲ್ಲಿ ಸೇರಬೇಡಿ.

ಅಂದರೆ, ತಮ್ಮ ಧರ್ಮವನ್ನು ಒಡೆದು ಹಲವಾರು ಪಂಗಡಗಳಾಗಿ ಬಿಟ್ಟವರು. ಪ್ರತಿಯೊಂದು ಪಂಗಡವೂ ಅದರ ಕೈಯಲ್ಲಿ ಏನಿದೆಯೋ ಅದರಲ್ಲಿ ಸಂಭ್ರಮಿಸುತ್ತಿದೆ.

ಜನರಿಗೆ ಏನಾದರೂ ತೊಂದರೆಯುಂಟಾದರೆ, ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಸಂಪೂರ್ಣವಾಗಿ ತಿರುಗಿ ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ನಂತರ ಅಲ್ಲಾಹು ಅವರಿಗೆ ತನ್ನ ದಯೆಯ ರುಚಿಯನ್ನು ತೋರಿಸಿದರೆ, ಅವರಲ್ಲೊಂದು ಗುಂಪು ತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.

ನಾವು ಅವರಿಗೆ ದಯಪಾಲಿಸಿದ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದು! ಸರಿ, ನೀವು ಆನಂದಿಸಿ. ಸದ್ಯವೇ ನಿಮಗೆ ತಿಳಿಯಲಿದೆ.

ನಾವು ಅವರಿಗೆ ಏನಾದರೂ ಸಾಕ್ಷ್ಯಾಧಾರವನ್ನು ಅವತೀರ್ಣಗೊಳಿಸಿದ್ದು, ಅದು ಅವರು ಮಾಡುತ್ತಿರುವ ಸಹಭಾಗಿತ್ವದ (ಶಿರ್ಕ್‌) ಬಗ್ಗೆ ಮಾತನಾಡುತ್ತದೆಯೇ?

ನಾವು ಮನುಷ್ಯರಿಗೆ ದಯೆಯ ರುಚಿಯನ್ನು ತೋರಿಸಿದರೆ ಅವರು ಸಂತೋಷಪಡುತ್ತಾರೆ. ಆದರೆ, ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ ಅಗೋ! ಅವರು ಹತಾಶರಾಗಿ ಬಿಡುತ್ತಾರೆ.

ಅಲ್ಲಾಹು ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆಂದು ಅವರು ನೋಡಿಲ್ಲವೇ?ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

ಆದ್ದರಿಂದ ನೀವು ಕುಟುಂಬ ಸಂಬಂಧಿಕರಿಗೆ ಅವರ ಹಕ್ಕನ್ನು ನೀಡಿರಿ. ಬಡವರಿಗೂ, ಪ್ರಯಾಣಿಕರಿಗೂ (ಅವರ ಹಕ್ಕನ್ನು ನೀಡಿರಿ). ಅಲ್ಲಾಹನ ಮುಖವನ್ನು ಬಯಸುವವರಿಗೆ ಅದು ಉತ್ತಮವಾಗಿದೆ. ಅವರೇ ಯಶಸ್ವಿಯಾದವರು.

ಜನರ ಧನದಲ್ಲಿ ಹೆಚ್ಚಾಗುತ್ತಾ ಇರಲು ನೀವು ಏನನ್ನು ಬಡ್ಡಿಗೆ ನೀಡುತ್ತೀರೋ ಅದು ಅಲ್ಲಾಹನ ಬಳಿ ಹೆಚ್ಚಾಗುವುದಿಲ್ಲ. ಆದರೆ ನೀವು ಅಲ್ಲಾಹನ ಮುಖವನ್ನು ಬಯಸಿ ನೀಡುವ ಝಕಾತ್—ಅವರೇ ಇಮ್ಮಡಿ ಪ್ರತಿಫಲವನ್ನು ಪಡೆಯುವವರು.

ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು. ನಂತರ ಅವನು ನಿಮಗೆ ಉಪಜೀವನವನ್ನು ಒದಗಿಸಿದನು. ನಂತರ ಅವನು ನಿಮ್ಮನ್ನು ಮೃತಪಡಿಸುತ್ತಾನೆ. ನಂತರ ಪುನಃ ನಿಮಗೆ ಜೀವವನ್ನು ನೀಡುತ್ತಾನೆ. ನೀವು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಯಾರಾದರೂ ಒಬ್ಬರು ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡುವರೇ? ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.

ಮನುಷ್ಯರು ಮಾಡಿದ ದುಷ್ಕರ್ಮಗಳ ಕಾರಣದಿಂದ ನೆಲದಲ್ಲೂ, ಕಡಲಲ್ಲೂ ವಿನಾಶವು ಹರಡಿಕೊಂಡಿದೆ. ಅವರು ಮಾಡಿದ ಕೆಲವು ಕರ್ಮಗಳ ರುಚಿಯನ್ನು ಅವರಿಗೆ ತೋರಿಸಲೆಂದು. ಅವರು (ಸತ್ಯಮಾರ್ಗಕ್ಕೆ) ಮರಳಿ ಬರುವುದಕ್ಕಾಗಿ.

ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಹಿಂದಿನ ಕಾಲದ ಜನರ ಅಂತ್ಯವು ಹೇಗಿತ್ತೆಂದು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.”

ಯಾರಿಗೂ ತಡೆಯೊಡ್ಡಲು ಸಾಧ್ಯವಾಗದ ಒಂದು ದಿನ ಬರುವುದಕ್ಕೆ ಮೊದಲು ನೀವು ನಿಮ್ಮ ಮುಖವನ್ನು ನೇರವಾದ ಧರ್ಮದ ಕಡೆಗೆ ತಿರುಗಿಸಿರಿ. ಅಂದು ಎಲ್ಲರೂ ಬೇರೆ ಬೇರೆಯಾಗಿ ಬಿಡುವರು.

ಯಾರು ಸತ್ಯವನ್ನು ನಿಷೇಧಿಸುತ್ತಾರೋ ಅವರ ಸತ್ಯನಿಷೇಧವು ಅವರಿಗೇ ಕೆಡುಕಾಗಿದೆ. ಯಾರು ಸತ್ಕರ್ಮವೆಸಗುತ್ತಾರೋ ಅವರು ಸ್ವಯಂ ಅವರಿಗೇ ವಾಸ್ತವ್ಯಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

ಅಲ್ಲಾಹು ತನ್ನ ಔದಾರ್ಯದಿಂದ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಪ್ರತಿಫಲವನ್ನು ನೀಡಲೆಂದು. ಅವನು ಸತ್ಯನಿಷೇಧಿಗಳನ್ನು ಎಂದಿಗೂ ಇಷ್ಟಪಡುವುದಿಲ್ಲ.

ನಿಮಗೆ ಮಳೆಯ ಬಗ್ಗೆ ಸಿಹಿ ಸುದ್ದಿ ನೀಡಲು, ಅವನ ದಯೆಯ ರುಚಿಯನ್ನು ನಿಮಗೆ ತೋರಿಸಲು, ನಾವೆಗಳು ಅವನ ಆಜ್ಞೆಯಂತೆ (ಸಮುದ್ರದಲ್ಲಿ) ಚಲಿಸಲು ಮತ್ತು ಅವನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕಲು ಅವನು ಗಾಳಿಗಳನ್ನು ಕಳುಹಿಸುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಕೃತಜ್ಞರಾಗುವುದಕ್ಕಾಗಿ.

ನಾವು ನಿಮಗಿಂತ ಮೊದಲು ಅನೇಕ ಪ್ರವಾದಿಗಳನ್ನು ಅವರ ಜನರ ಬಳಿಗೆ ಕಳುಹಿಸಿದ್ದೇವೆ. ಅವರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆಗ ನಾವು ಅಪರಾಧವೆಸಗಿದ ಜನರಿಂದ ಪ್ರತೀಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಅಲ್ಲಾಹು ಗಾಳಿಗಳನ್ನು ಕಳುಹಿಸುತ್ತಾನೆ. ಅವು ಮೋಡಗಳನ್ನು ಎತ್ತಿಕೊಳ್ಳುತ್ತವೆ. ನಂತರ ಅಲ್ಲಾಹು ಅವನು ಇಚ್ಛಿಸುವಂತೆ ಅದನ್ನು ಆಕಾಶದಲ್ಲಿ ಹರಡುತ್ತಾನೆ. ನಂತರ ಅದನ್ನು ತುಣುಕುಗಳನ್ನಾಗಿ ಮಾಡುತ್ತಾನೆ. ಆಗ ಅದರ ಎಡೆಯಿಂದ ಮಳೆಹನಿಗಳು ಹೊರಬರುವುದನ್ನು ನೀವು ಕಾಣುತ್ತೀರಿ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರ ಮೇಲೆ ಅದನ್ನು ಸುರಿಸಿದಾಗ ಅಗೋ! ಅವರು ಸಂತೋಷಪಡುತ್ತಾರೆ.

ಆ ಮಳೆಯು ಅವರ ಮೇಲೆ ಸುರಿಯುವುದಕ್ಕೆ ಮೊದಲು ಖಂಡಿತವಾಗಿಯೂ ಅವರು ನಿರಾಶರಾಗಿದ್ದರು.

ಅಲ್ಲಾಹನ ದಯೆಯ ಪರಿಣಾಮಗಳನ್ನು ನೋಡಿರಿ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಹೇಗೆ ಜೀವ ನೀಡುತ್ತಾನೆಂದು. ಅಂತಹವನು ಸತ್ತವರಿಗೆ ಜೀವ ನೀಡುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ನಾವು ಬಿರುಗಾಳಿಯನ್ನು ಕಳುಹಿಸಿ ಅದು ಅವರ ಹೊಲಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುವುದನ್ನು (ಬಾಡಿಸುವುದನ್ನು) ಕಂಡರೂ ಅವರು ಅದರ ಬಳಿಕವೂ ಕೃತಘ್ನರಾಗಿಯೇ ಇರುವರು.

ಸತ್ತವರಿಗೆ ಕೇಳುವಂತೆ ಮಾಡಲು ನಿಮಗೆ ಖಂಡಿತ ಸಾಧ್ಯವಿಲ್ಲ. ಕಿವುಡರು ಬೆನ್ನು ತಿರುಗಿಸಿ ನಡೆದರೆ ಅವರಿಗೆ ಕರೆ ಕೇಳುವಂತೆ ಮಾಡಲು ಕೂಡ ನಿಮಗೆ ಸಾಧ್ಯವಿಲ್ಲ.

ಕುರುಡರನ್ನು ಅವರ ದುರ್ಮಾರ್ಗದಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ದಾರಿ ತೋರಿಸಲು ನಿಮಗೆ ಸಾಧ್ಯವಿಲ್ಲ. ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟು ನಂತರ ಶರಣಾಗುವವರು ಯಾರೋ ಅವರಿಗೆ ಮಾತ್ರ ನೀವು ಕೇಳುವಂತೆ ಮಾಡಬಲ್ಲಿರಿ.

ಅಲ್ಲಾಹು ನಿಮ್ಮನ್ನು ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದನು. ನಂತರ ದೌರ್ಬಲ್ಯದ ಬಳಿಕ ಅವನು ನಿಮಗೆ ಶಕ್ತಿಯನ್ನು ನೀಡಿದನು. ನಂತರ ಶಕ್ತಿಯನ್ನು ನೀಡಿದ ಬಳಿಕ ಅವನು ನಿಮ್ಮನ್ನು ಪುನಃ ದುರ್ಬಲರಾಗಿ ಮತ್ತು ಕೂದಲು ನೆರೆತವರಾಗಿ ಮಾಡಿದನು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.

ಅಂತ್ಯಸಮಯವು ಸಂಭವಿಸುವ ದಿನದಂದು ಅಪರಾಧಿಗಳು ಆಣೆ ಮಾಡುತ್ತಾ, “ನಾವು (ಇಹಲೋಕದಲ್ಲಿ) ಒಂದು ತಾಸಿಗಿಂತ ಹೆಚ್ಚು ವಾಸವಾಗಿರಲಿಲ್ಲ” ಎಂದು ಹೇಳುವರು. ಈ ರೀತಿ ಅವರನ್ನು (ಸತ್ಯದಿಂದ) ತಪ್ಪಿಸಿಬಿಡಲಾಗಿದೆ.

ಜ್ಞಾನ ಮತ್ತು ವಿಶ್ವಾಸವನ್ನು ನೀಡಲಾದವರು ಹೇಳುವರು: “ನೀವು ಅಲ್ಲಾಹನ ದಾಖಲೆಯಲ್ಲಿರುವಂತೆ ಪುನರುತ್ಥಾನ ದಿನದವರೆಗೆ ವಾಸವಾಗಿದ್ದಿರಿ. ಇಗೋ ಇದೇ ಪುನರುತ್ಥಾನದ ದಿನ! ಆದರೆ ನಿಮಗೆ ಅದು ತಿಳಿದಿಲ್ಲ.”

ಅಕ್ರಮಿಗಳಿಗೆ ಆ ದಿನ ಅವರ ನೆಪಗಳು ಯಾವುದೇ ಉಪಕಾರ ಮಾಡುವುದಿಲ್ಲ. ಅವರೊಡನೆ ಪಶ್ಚಾತ್ತಾಪಪಡುವಂತೆಯೂ ಕೇಳಿಕೊಳ್ಳಲಾಗುವುದಿಲ್ಲ.

ನಾವು ಈ ಕುರ್‌ಆನ್‍ನಲ್ಲಿ ಜನರಿಗೋಸ್ಕರ ಎಲ್ಲ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ನೀವು ಒಂದು ದೃಷ್ಟಾಂತದೊಂದಿಗೆ ಅವರ ಬಳಿ ತೆರಳಿದರೂ ಸತ್ಯನಿಷೇಧಿಗಳು ಹೇಳುವರು: “ನೀವು ಖಂಡಿತವಾಗಿಯೂ ಮಿಥ್ಯವಾದಿಗಳಾಗಿದ್ದೀರಿ.”

ಈ ರೀತಿ ಅಲ್ಲಾಹು (ಸತ್ಯವನ್ನು) ಅರ್ಥಮಾಡಿಕೊಳ್ಳಲು ಮುಂದಾಗದವರ ಹೃದಯಗಳಿಗೆ ಮೊಹರು ಹಾಕುವನು.

ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ದೃಢವಿಶ್ವಾಸವಿಲ್ಲದ ಆ ಜನರು ನಿಮ್ಮನ್ನು ತಾಳ್ಮೆಗೆಡುವಂತೆ ಮಾಡದಿರಲಿ.