The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesYa Seen [Ya Seen] - Kannada translation
Surah Ya Seen [Ya Seen] Ayah 83 Location Maccah Number 36
ಯಾಸೀನ್.
ವಿವೇಕಪೂರ್ಣವಾದ ಕುರ್ಆನಿನ ಮೇಲಾಣೆ.
ನಿಶ್ಚಯವಾಗಿಯೂ ನೀವು ಸಂದೇಶವಾಹಕರುಗಳಲ್ಲಿ ಒಬ್ಬರಾಗಿದ್ದೀರಿ.
ನೀವು ನೇರ ಮಾರ್ಗದಲ್ಲಿದ್ದೀರಿ.
ಈ ಕುರ್ಆನ್ ಪ್ರಬಲನು ಮತ್ತು ಕರುಣಾನಿಧಿಯಾದ ಅಲ್ಲಾಹನಿಂದ ಅವತೀರ್ಣವಾಗಿದೆ.
ನೀವು ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರ ಪೂರ್ವಜರಿಗೆ ಯಾರೂ ಎಚ್ಚರಿಕೆ ನೀಡಿಲ್ಲ. ಆದ್ದರಿಂದ ಅವರು ನಿರ್ಲಕ್ಷ್ಯದಲ್ಲಿದ್ದಾರೆ.[1]
ಅವರಲ್ಲಿ ಹೆಚ್ಚಿನವರ ಮೇಲೂ ಶಿಕ್ಷೆಯ ವಚನವು ಖಾತ್ರಿಯಾಗಿದೆ. ಆದ್ದರಿಂದ ಅವರು ವಿಶ್ವಾಸವಿಡುವುದಿಲ್ಲ.
ನಾವು ಅವರ ಕೊರಳುಗಳಲ್ಲಿ ಸಂಕೋಲೆಗಳನ್ನು ಹಾಕಿದ್ದೇವೆ. ಅದು ಅವರ ಗಲ್ಲಗಳ ತನಕ ಇದೆ. ಆದ್ದರಿಂದ ಅವರು ತಲೆಯೆತ್ತಿಕೊಂಡೇ ಇರುತ್ತಾರೆ.
ನಾವು ಅವರ ಮುಂಭಾಗದಲ್ಲಿ ಒಂದು ಪರದೆಯನ್ನು ಮತ್ತು ಅವರ ಹಿಂಭಾಗದಲ್ಲಿ ಒಂದು ಪರದೆಯನ್ನು ಹಾಕಿ ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಆದ್ದರಿಂದ ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ.
ನೀವು ಅವರಿಗೆ ಎಚ್ಚರಿಕೆ ನೀಡಿದರೂ ಅಥವಾ ಎಚ್ಚರಿಕೆ ನೀಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅವರು ವಿಶ್ವಾಸವಿಡುವುದಿಲ್ಲ.
ಯಾರು ನಿಮ್ಮ ಉಪದೇಶವನ್ನು ಅನುಸರಿಸುತ್ತಾನೋ ಮತ್ತು ಪರಮ ದಯಾಳುವಾದ ಅಲ್ಲಾಹನನ್ನು ಅದೃಶ್ಯ ಸ್ಥಿತಿಯಲ್ಲಿ ಭಯಪಡುತ್ತಾನೋ ಅವನಿಗೆ ಮಾತ್ರ ನಿಮ್ಮ ಎಚ್ಚರಿಕೆ ಪ್ರಯೋಜನ ನೀಡುತ್ತದೆ. ಆದ್ದರಿಂದ ಅವನಿಗೆ ಕ್ಷಮೆ ಮತ್ತು ಉದಾರ ಪ್ರತಿಫಲದ ಸುವಾರ್ತೆಯನ್ನು ತಿಳಿಸಿ.
ನಿಶ್ಚಯವಾಗಿಯೂ ನಾವು ಮೃತರಿಗೆ ಜೀವ ನೀಡುತ್ತೇವೆ. ಅವರು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ಮತ್ತು ಅವರು ಹಿಂದೆಯೇ ಬಿಟ್ಟಿರುವ ಕರ್ಮಗಳನ್ನು ನಾವು ದಾಖಲಿಸಿಡುತ್ತೇವೆ. ನಾವು ಎಲ್ಲಾ ವಿಷಯಗಳನ್ನೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಿಟ್ಟಿದ್ದೇವೆ.
ಅವರಿಗೆ ಒಂದು ಊರಿನ ನಿವಾಸಿಗಳ ಉದಾಹರಣೆಯನ್ನು ತಿಳಿಸಿಕೊಡಿ. ಅಲ್ಲಿಗೆ ಸಂದೇಶವಾಹಕರುಗಳು ಬಂದ ಸಂದರ್ಭ!
ನಾವು ಅವರ ಬಳಿಗೆ ಇಬ್ಬರು ಸಂದೇಶವಾಹಕರುಗಳನ್ನು ಕಳುಹಿಸಿದ್ದೆವು. ಆದರೆ ಅವರು ಆ ಇಬ್ಬರು ಸಂದೇಶವಾಹಕರನ್ನೂ ನಿಷೇಧಿಸಿದರು. ಆಗ ಅವರಿಗೆ ಬಲ ನೀಡುವುದಕ್ಕಾಗಿ ನಾವು ಮೂರನೆಯವರನ್ನು ಕಳುಹಿಸಿದೆವು. ಅವರು ಹೇಳಿದರು: “ನಿಶ್ಚಯವಾಗಿಯೂ ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆ.”
ಜನರು ಹೇಳಿದರು: “ನೀವು ನಮ್ಮಂತೆಯೇ ಇರುವ ಮನುಷ್ಯರಾಗಿದ್ದೀರಿ. ಪರಮ ದಯಾಳು (ಅಲ್ಲಾಹು) ಏನನ್ನೂ ಅವತೀರ್ಣಗೊಳಿಸಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿದ್ದೀರಿ.”
ಸಂದೇಶವಾಹಕರುಗಳು ಹೇಳಿದರು: “ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆಯೆಂದು ನಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ.
ನಮ್ಮ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುವುದು ಮಾತ್ರವಾಗಿದೆ.”
ಜನರು ಹೇಳಿದರು: “ನಾವು ನಿಮ್ಮನ್ನು ಅಪಶಕುನವೆಂದು ಭಾವಿಸಿದ್ದೇವೆ. ನೀವು (ನಿಮ್ಮ ಧರ್ಮಪ್ರಚಾರವನ್ನು) ನಿಲ್ಲಿಸದಿದ್ದರೆ ನಾವು ನಿಮ್ಮನ್ನು ಖಂಡಿತ ಕಲ್ಲೆಸೆದು ಸಾಯಿಸುವೆವು ಮತ್ತು ನಿಮಗೆ ನಮ್ಮ ಕಡೆಯ ಯಾತನಾಮಯ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುವುದು.”
ಸಂದೇಶವಾಹಕರುಗಳು ಹೇಳಿದರು: “ನಿಮ್ಮ ಅಪಶಕುನವು ನಿಮ್ಮ ಜೊತೆಯಲ್ಲೇ ಇದೆ. ನಿಮಗೆ ಉಪದೇಶ ನೀಡಿದರೆ ನೀವು ಅದನ್ನು ಅಪಶಕುನ ಎನ್ನುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”
ನಗರದ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡುತ್ತಾ ಬಂದನು. ಅವನು ಹೇಳಿದನು: “ಓ ನನ್ನ ಜನರೇ! ನೀವು ಸಂದೇಶವಾಹಕರುಗಳನ್ನು ಅನುಸರಿಸಿರಿ.
ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳದ ಮತ್ತು ಸನ್ಮಾರ್ಗದಲ್ಲಿರುವ ಇವರನ್ನು ಅನುಸರಿಸಿರಿ.
ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ? ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
ನಾನು ಅವನನ್ನು (ಅಲ್ಲಾಹನನ್ನು) ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಬೇಕೇ? ಪರಮ ದಯಾಳು (ಅಲ್ಲಾಹು) ನನಗೇನಾದರೂ ತೊಂದರೆ ಕೊಡಲು ಬಯಸಿದರೆ ಅವರು (ಆ ದೇವರುಗಳು) ಮಾಡುವ ಶಿಫಾರಸು ನನಗೆ ಸ್ವಲ್ಪವೂ ಪ್ರಯೋಜನವಾಗುವುದಿಲ್ಲ. ಅವರು ನನ್ನನ್ನು ರಕ್ಷಿಸುವುದೂ ಇಲ್ಲ.
ಹಾಗೇನಾದರೂ ಆದರೆ, ನಾನು ಸ್ಪಷ್ಟವಾಗಿ ದಾರಿತಪ್ಪುವುದು ನಿಶ್ಚಿತ.
ನಿಶ್ಚಯವಾಗಿಯೂ ನಾನು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇನೆ. ಆದ್ದರಿಂದ ನೀವು ನನ್ನ ಮಾತಿಗೆ ಕಿವಿಗೊಡಿ.”
ಆ ವ್ಯಕ್ತಿಯೊಡನೆ ಹೇಳಲಾಯಿತು: “ಸ್ವರ್ಗವನ್ನು ಪ್ರವೇಶಿಸಿ.” ಆ ವ್ಯಕ್ತಿ ಹೇಳಿದರು: “ನನ್ನ ಜನರು ಇದನ್ನು ತಿಳಿಯುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ಅಂದರೆ, ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಕ್ಷಮಿಸಿದ್ದಾನೆ ಮತ್ತು ನನ್ನನ್ನು ಗಣ್ಯರಲ್ಲಿ ಸೇರಿಸಿದ್ದಾನೆಂದು.”[1]
ಅವರ ಬಳಿಕ ಅವರ ಜನರ ಮೇಲೆ ನಾವು ಆಕಾಶದಿಂದ ಯಾವುದೇ ಸೈನ್ಯವನ್ನು ಇಳಿಸಲಿಲ್ಲ. ನಾವು ಆ ರೀತಿ ಇಳಿಸುವವರೂ ಅಲ್ಲ.
ಅದು ಒಂದು ಮಹಾ ಚೀತ್ಕಾರ ಮಾತ್ರವಾಗಿತ್ತು. ಆಗ ಹಠಾತ್ತನೆ ಅವರೆಲ್ಲರೂ ಸರ್ವನಾಶವಾದರು.
ಅಯ್ಯೋ ನನ್ನ ದಾಸರೇ! ಅವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಆ ಸಂದೇಶವಾಹಕರನ್ನು ತಮಾಷೆ ಮಾಡುತ್ತಲೇ ಇದ್ದರು.
ಏನು ಅವರು ನೋಡಿಲ್ಲವೇ? ಅವರಿಗಿಂತ ಮೊದಲು ನಾವು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಮತ್ತು ಅವರಲ್ಲಿ ಯಾರೂ ಇವರ ಬಳಿಗೆ ಮರಳಿ ಬರುವುದಿಲ್ಲವೆಂದು.
ನಿಶ್ಚಯವಾಗಿಯೂ ಅವರಲ್ಲಿ ಯಾರನ್ನೂ ಬಿಡದೆ ಎಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುವುದು.
ಬರಡು ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದಕ್ಕೆ ಜೀವವನ್ನು ನೀಡಿದೆವು ಮತ್ತು ಅದರಿಂದ ಧಾನ್ಯವನ್ನು ಉತ್ಪಾದಿಸಿದೆವು. ಅವರು ಅದರಿಂದ ತಿನ್ನುತ್ತಿದ್ದಾರೆ.
ನಾವು ಅಲ್ಲಿ ಖರ್ಜೂರ ಮತ್ತು ದ್ರಾಕ್ಷಿಗಳ ತೋಟಗಳನ್ನು ಮಾಡಿಕೊಟ್ಟೆವು. ನಾವು ಅದರಲ್ಲಿ ಚಿಲುಮೆಗಳನ್ನೂ ಹರಿಸಿದೆವು.
ಅವರು ಅದರ ಹಣ್ಣುಗಳನ್ನು ತಿನ್ನಲೆಂದು. ಅದನ್ನು ಅವರ ಕೈಗಳು ಉತ್ಪಾದಿಸಿಲ್ಲ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?
ಭೂಮಿ ಉತ್ಪಾದಿಸುವ ಸಸ್ಯಲತಾದಿಗಳು, ಅವರ (ಮನುಷ್ಯರ) ವರ್ಗಗಳು ಮತ್ತು ಅವರಿಗೆ ತಿಳಿದಿಲ್ಲದ ವಸ್ತುಗಳು ಮುಂತಾದ ಎಲ್ಲದರಲ್ಲೂ ಜೋಡಿಗಳನ್ನು ಸೃಷ್ಟಿಸಿದ ಅಲ್ಲಾಹು ಪರಿಶುದ್ಧನಾಗಿದ್ದಾನೆ.
ರಾತ್ರಿ ಅವರಿಗೆ ಒಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಎಳೆದು ತೆಗೆಯುತ್ತೇವೆ. ಆಗ ಅಗೋ! ಅವರು ಇರುಳಿನಲ್ಲಿರುತ್ತಾರೆ.
ಸೂರ್ಯ ಅದರ ನಿಶ್ಚಿತ ಪಥದಲ್ಲಿ ಚಲಿಸುತ್ತಿದೆ. ಅದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.
ನಾವು ಚಂದ್ರನಿಗೆ ಕೆಲವು ಹಂತಗಳನ್ನು ನಿರ್ಣಯಿಸಿದ್ದೇವೆ. ಎಲ್ಲಿಯವರೆಗೆಂದರೆ, ಅದು ಹಳೆಯ ಖರ್ಜೂರದ ದಿಂಡಿನ ರೂಪಕ್ಕೆ ಮರಳುತ್ತದೆ.
ಸೂರ್ಯನಿಗೆ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ರಾತ್ರಿ ಹಗಲನ್ನು ದಾಟಿಹೋಗುವುದಿಲ್ಲ. ಎಲ್ಲವೂ ಅವುಗಳ ನಿಶ್ಚಿತ ಕಕ್ಷೆಗಳಲ್ಲಿ ಈಜುತ್ತಿವೆ.
ನಾವು ಅವರ ಸಂತಾನವನ್ನು ತುಂಬಿ ತುಳುಕುವ ನಾವೆಯಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.
ಅವರು ಸವಾರಿ ಮಾಡಲು ಬಳಸುವ ಇಂತಹ ಅನೇಕ ವಸ್ತುಗಳನ್ನು ನಾವು ಸೃಷ್ಟಿಸಿದ್ದೇವೆ.
ನಾವು ಇಚ್ಛಿಸಿದರೆ ಅವರನ್ನು ಮುಳುಗಿಸಿ ಬಿಡುವೆವು. ಆಗ ಅವರ ಕೂಗನ್ನು ಕೇಳುವವರು ಯಾರೂ ಇರಲಾರರು. ಅವರು ಸ್ವತಃ ರಕ್ಷಣೆಯನ್ನೂ ಪಡೆಯಲಾರರು.
ಆದರೆ ನಾವು ನಮ್ಮ ಕಡೆಯ ದಯೆಯಿಂದ ಅವರನ್ನು ರಕ್ಷಿಸುತ್ತೇವೆ ಮತ್ತು ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ಸವಲತ್ತುಗಳನ್ನು ನೀಡುತ್ತೇವೆ.
“ಮುಂದೆ ಉಂಟಾಗಲಿರುವ ಮತ್ತು ಈಗಾಗಲೇ ಉಂಟಾಗಿರುವ ಪಾಪಗಳ ಬಗ್ಗೆ ಎಚ್ಚರವಾಗಿರಿ; ನಿಮಗೆ ದಯೆ ತೋರಲಾಗುವುದಕ್ಕಾಗಿ” ಎಂದು ಅವರೊಡನೆ ಹೇಳಲಾದರೆ (ಅವರು ಅದನ್ನು ನಿರ್ಲಕ್ಷಿಸುತ್ತಾರೆ).
ಅವರ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತಗಳಲ್ಲಿ ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದರೂ ಅವರು ಅದನ್ನು ನಿರ್ಲಕ್ಷಿಸಿ ವಿಮುಖರಾಗುತ್ತಿದ್ದರು.
“ಅಲ್ಲಾಹು ನಿಮಗೆ ಒದಗಿಸಿದ ಸಂಪತ್ತಿನಿಂದ ಖರ್ಚು ಮಾಡಿರಿ”[1] ಎಂದು ಅವರೊಡನೆ ಹೇಳಲಾದರೆ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಅಲ್ಲಾಹು ಇಚ್ಛಿಸಿದರೆ ಅವನೇ ಆಹಾರ ನೀಡಬಹುದಾದ ಈ ಜನರಿಗೆ ನಾವೇಕೆ ಆಹಾರ ನೀಡಬೇಕು? ನಿಜಕ್ಕೂ ನೀವು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”[2]
ಅವರು ಹೇಳುತ್ತಾರೆ: “ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ನಿಜವಾಗುತ್ತದೆಂದು ಹೇಳಿರಿ.”
ಅವರು ಒಂದು ಮಹಾ ಚೀತ್ಕಾರವನ್ನು ಮಾತ್ರ ಕಾಯುತ್ತಿದ್ದಾರೆ. ಅವರು ಪರಸ್ಪರ ತರ್ಕಿಸುತ್ತಿರುವಾಗಲೇ ಅದು ಅವರನ್ನು ಹಿಡಿಯುವುದು.
ಆಗ ಯಾವುದೇ ಉಯಿಲು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ತಮ್ಮ ಮನೆಯವರ ಬಳಿಗೆ ಮರಳಲೂ ಸಾಧ್ಯವಾಗುವುದಿಲ್ಲ.
ಕಹಳೆಯಲ್ಲಿ ಊದಲಾಗುವುದು. ಆಗ ಅಗೋ! ಅವರು ಸಮಾಧಿಗಳಿಂದ ಎದ್ದು ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಧಾವಿಸುವರು.
ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಮ್ಮನ್ನು ನಿದ್ದೆಯಿಂದ ಎಬ್ಬಿಸಿದ್ದು ಯಾರು?” (ಆಗ ಅವರಿಗೆ ಉತ್ತರ ನೀಡಲಾಗುವುದು): “ಇದು ಪರಮ ದಯಾಳು (ಅಲ್ಲಾಹು) ಮಾಡಿದ ವಾಗ್ದಾನವಾಗಿದೆ ಮತ್ತು ಸಂದೇಶವಾಹಕರುಗಳು ಈ ಸತ್ಯವನ್ನು ನಿಮಗೆ ತಿಳಿಸಿದ್ದರು.”
ಅದು ಕೇವಲ ಒಂದು ಚೀತ್ಕಾರ ಮಾತ್ರವಾಗಿರುತ್ತದೆ. ಆಗ ಅಗೋ! ಅವರೆಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುತ್ತದೆ.
ಆ ದಿನ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.
ನಿಶ್ಚಯವಾಗಿಯೂ ಅಂದು ಸ್ವರ್ಗವಾಸಿಗಳು (ಆನಂದದಾಯಕ) ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವರು.
ಅವರು ಮತ್ತು ಅವರ ಮಡದಿಯರು ನೆರಳುಗಳಲ್ಲಿ ಮಂಚಗಳ ಮೇಲೆ ಒರಗಿ ಕುಳಿತಿರುವರು.
ಅಲ್ಲಿ ಅವರಿಗೆ ಅನೇಕ ತರಹದ ಹಣ್ಣು-ಹಂಪಲುಗಳಿರುವುವು. ಅವರು ಕೇಳುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು.
ಕರುಣಾನಿಧಿಯಾದ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವರಿಗೆ ಸಲಾಂ ಹೇಳಲಾಗುವುದು.
“ಅಪರಾಧಿಗಳೇ! ಇಂದು ನೀವು ಬೇರ್ಪಟ್ಟು ನಿಲ್ಲಿರಿ” (ಎಂದು ಘೋಷಿಸಲಾಗುವುದು).
ಓ ಆದಮ್ ಸಂತತಿಗಳೇ! ನೀವು ಶೈತಾನನನ್ನು ಆರಾಧಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಸ್ಪಷ್ಟ ವೈರಿಯಾಗಿದ್ದಾನೆ ಎಂದು ನಾನು ನಿಮಗೆ ಆದೇಶಿಸಿರಲಿಲ್ಲವೇ?
ನನ್ನನ್ನು ಮಾತ್ರ ಆರಾಧಿಸಿರಿ. ಇದೇ ನೇರ ಮಾರ್ಗ ಎಂದು.
ನಿಶ್ಚಯವಾಗಿಯೂ ನಿಮ್ಮಲ್ಲಿ ಸೇರಿದ ಎಷ್ಟೋ ಜನರನ್ನು ಅವನು ದಾರಿತಪ್ಪಿಸಿದ್ದಾನೆ. ಆದರೂ ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?
ಇದೇ ನಿಮಗೆ ಎಚ್ಚರಿಕೆ ನೀಡಲಾದ ಆ ನರಕಾಗ್ನಿ!
ನಿಮ್ಮ ಸತ್ಯನಿಷೇಧದ ಪ್ರತಿಫಲ ಪಡೆಯಲು ನೀವು ಇಂದು ಅದನ್ನು ಪ್ರವೇಶಿಸಿರಿ.
ಇಂದು ನಾವು ಅವರ ಬಾಯಿಗಳಿಗೆ ಮೊಹರು ಹಾಕುವೆವು, ಅವರ ಕೈಗಳು ನಮ್ಮೊಡನೆ ಮಾತನಾಡುವುವು ಮತ್ತು ಅವರ ಕಾಲುಗಳು ಅವರು ಮಾಡಿದ ದುಷ್ಕರ್ಮಗಳಿಗೆ ಸಾಕ್ಷಿ ಹೇಳುವುವು.
ನಾವು ಬಯಸಿದರೆ ಅವರ ಕಣ್ಣುಗಳನ್ನು ಕುರುಡಾಗಿಸುವೆವು. ಆದರೂ ಅವರು ಮಾರ್ಗದ ಕಡೆಗೆ ಧಾವಿಸುವರು. ಆದರೆ ಅವರಿಗೆ ನೋಡಲು ಸಾಧ್ಯವಾಗುವುದು ಹೇಗೆ?
ನಾವು ಬಯಸಿದರೆ ಅವರು ನಿಂತ ಸ್ಥಳದಲ್ಲಿಯೇ ಅವರ ರೂಪವನ್ನು ವಿರೂಪಗೊಳಿಸುವೆವು. ಆಗ ಅವರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಿಂದಕ್ಕೆ ಮರಳಲೂ ಸಾಧ್ಯವಾಗುವುದಿಲ್ಲ.
ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೆಯೋ ಅವನ ಸೃಷ್ಟಿಯನ್ನು ನಾವು ತಿರುಗುಮುರುಗು ಮಾಡುತ್ತೇವೆ. ಆದರೂ ಅವರು ಅರ್ಥಮಾಡಿಕೊಳ್ಳುವುದಿಲ್ಲವೇ?
ನಾವು ಅವರಿಗೆ (ಪ್ರವಾದಿಗೆ) ಕಾವ್ಯವನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶ ಮತ್ತು ಸ್ಪಷ್ಟ ಕುರ್ಆನ್ ಆಗಿದೆ.
ಇದು ಜೀವಂತವಿರುವವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಖಾತ್ರಿಯಾಗುವುದಕ್ಕಾಗಿದೆ.
ನಮ್ಮ ಕೈಗಳು ನಿರ್ಮಿಸಿದ ವಸ್ತುಗಳಲ್ಲಿ ಸೇರಿದ ಜಾನುವಾರುಗಳನ್ನು ನಾವು ಅವರಿಗೋಸ್ಕರ ಸೃಷ್ಟಿಸಿದ್ದೇವೆಂದು ಅವರು ನೋಡಿಲ್ಲವೇ? ಅವರು ಅವುಗಳ ಮಾಲಿಕರಾಗಿದ್ದಾರೆ.
ನಾವು ಅವುಗಳನ್ನು ಅವರಿಗೆ ಪಳಗಿಸಿಕೊಟ್ಟಿದ್ದೇವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ಅವರ ಸವಾರಿ ಮಾಡುತ್ತಾರೆ ಮತ್ತು ಕೆಲವು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ.
ಅವುಗಳಲ್ಲಿ ಅವರಿಗೆ ಅನೇಕ ಪ್ರಯೋಜನಗಳಿವೆ; ಪಾನೀಯವೂ ಇದೆ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?
ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆ ದೇವರುಗಳು ಅವರಿಗೆ ಸಹಾಯ ಮಾಡುವುದಕ್ಕಾಗಿ.
ಆದರೆ ಅವರಿಗೆ ಸಹಾಯ ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. (ಆದರೂ) ಅವರು ಆ ದೇವರುಗಳಿಗಿರುವ ಸನ್ನದ್ಧ ಸೈನ್ಯವಾಗಿ ಬಿಟ್ಟಿದ್ದಾರೆ.
ಆದ್ದರಿಂದ ಅವರು ಹೇಳುವ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾವು ಖಂಡಿತ ತಿಳಿಯುತ್ತೇವೆ.
ಮನುಷ್ಯನು ನೋಡಿಲ್ಲವೇ? ನಾವು ಅವನನ್ನು ಒಂದು ವೀರ್ಯದಿಂದ ಸೃಷ್ಟಿಸಿದ್ದೇವೆಂದು? ನಂತರ ಇದ್ದಕ್ಕಿದ್ದಂತೆ ಅವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ.
ಅವನು ನಮಗೆ ಒಂದು ಉದಾಹರಣೆಯನ್ನು ತಿಳಿಸುತ್ತಾನೆ. ಆದರೆ ಸ್ವತಃ ತನ್ನ ಸೃಷ್ಟಿಯನ್ನೇ ಅವನು ಮರೆತು ಬಿಟ್ಟಿದ್ದಾನೆ. ಅವನು ಕೇಳುತ್ತಾನೆ: “ಕೊಳೆತ ಮೂಳೆಗಳಿಗೆ ಜೀವ ನೀಡುವುದು ಯಾರು?”
ಹೇಳಿರಿ: “ಅದನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುತ್ತಾನೆ. ಅವನು ಎಲ್ಲಾ ಸೃಷ್ಟಿಗಳ ಬಗ್ಗೆ ಸ್ಪಷ್ಟ ಜ್ಞಾನವುಳ್ಳವನಾಗಿದ್ದಾನೆ.”
ಅವನು ಯಾರೆಂದರೆ, ನಿಮಗೆ ಹಸಿರು ಮರದಿಂದ ಬೆಂಕಿಯನ್ನು ನಿರ್ಮಿಸಿ ಕೊಟ್ಟವನು. ಆಗ ಅಗೋ! ನೀವು ಅದರಿಂದ ಬೆಂಕಿ ಉರಿಸುತ್ತೀರಿ.
ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ ಅವರಂತಿರುವ ಮನುಷ್ಯರನ್ನು ಸೃಷ್ಟಿಸುವ ಸಾಮರ್ಥ್ಯವಿಲ್ಲವೇ? ಹೌದು (ಖಂಡಿತ ಸಾಮರ್ಥ್ಯವಿದೆ)! ಅವನು ಎಲ್ಲವನ್ನು ಸೃಷ್ಟಿಸುವವನು ಮತ್ತು ಸರ್ವಜ್ಞನಾಗಿದ್ದಾನೆ.
ಅವನು ಯಾವುದೇ ವಸ್ತುವನ್ನು ಬಯಸಿದರೆ, ಅದಕ್ಕೆ “ಉಂಟಾಗು” ಎಂಬ ಆಜ್ಞೆಯನ್ನು ಮಾತ್ರ ನೀಡುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!
ಎಲ್ಲ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಪರಮ ಪರಿಶುದ್ಧನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.