عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Council, Consultation [Ash-Shura] - Kannada translation

Surah Council, Consultation [Ash-Shura] Ayah 53 Location Maccah Number 42

ಹಾ-ಮೀಮ್.

ಐನ್-ಸೀನ್-ಕ್ವಾಫ್.

ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹು ನಿಮಗೆ ಮತ್ತು ನಿಮಗಿಂತ ಮೊದಲಿನವರಿಗೆ ಈ ರೀತಿ ದೇವವಾಣಿಯನ್ನು ನೀಡುತ್ತಾನೆ.

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಅವನು ಅತ್ಯುನ್ನತನು ಮತ್ತು ಮಹಾಮಹಿಮನಾಗಿದ್ದಾನೆ.

ಆಕಾಶಗಳು ಅವುಗಳ ಮೇಲ್ಭಾಗದಿಂದ ಇನ್ನೇನು ಒಡೆದು ಚೂರಾಗುವಂತಿದೆ. ದೇವದೂತರು‍ಗಳು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಭೂಮಿಯಲ್ಲಿರುವವರಿಗಾಗಿ ಕ್ಷಮೆಯಾಚಿಸುತ್ತಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ತನ್ನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದವರನ್ನು ಅಲ್ಲಾಹು ಗಮನಿಸುತ್ತಿದ್ದಾನೆ.[1] ಅವರ ವಿಷಯದಲ್ಲಿ ನಿಮಗೆ ಯಾವುದೇ ಹೊಣೆಗಾರಿಕೆಯಿಲ್ಲ.

ಈ ರೀತಿ ನಾವು ನಿಮಗೆ ಅರಬ್ಬಿ ಭಾಷೆಯಲ್ಲಿರುವ ಕುರ್‌ಆನನ್ನು ದೇವವಾಣಿಯಾಗಿ ನೀಡಿದೆವು. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನಲ್ಲಿರುವವರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ. ಒಟ್ಟುಗೂಡಿಸುವ ದಿನದ ಬಗ್ಗೆಯೂ ನೀವು ಎಚ್ಚರಿಕೆ ನೀಡುವುದಕ್ಕಾಗಿ. ಆ ದಿನ ಬರುವುದರಲ್ಲಿ ಸಂದೇಹವೇ ಇಲ್ಲ. ಅಂದು ಒಂದು ಗುಂಪು ಸ್ವರ್ಗದಲ್ಲಿ ಮತ್ತು ಇನ್ನೊಂದು ಗುಂಪು ಜ್ವಲಿಸುವ ನರಕದಲ್ಲಿರುವುದು.

ಅಲ್ಲಾಹು ಇಚ್ಛಿಸುತ್ತಿದ್ದರೆ ಅವರನ್ನು (ಮನುಷ್ಯರನ್ನು) ಏಕೈಕ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ಇಚ್ಛಿಸುವವರನ್ನು ತನ್ನ ದಯೆಯಲ್ಲಿ ಪ್ರವೇಶ ಮಾಡಿಸುತ್ತಾನೆ. ಅಕ್ರಮಿಗಳಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರುವುದಿಲ್ಲ.

ಅವರು ಅವನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದ್ದಾರೆಯೇ? ಆದರೆ ಅಲ್ಲಾಹು ಮಾತ್ರ ರಕ್ಷಕನು. ಅವನು ಮೃತರಿಗೆ ಜೀವ ನೀಡುತ್ತಾನೆ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. (ಹೇಳಿರಿ): “ಅವನೇ ನನ್ನ ಪರಿಪಾಲಕನಾದ ಅಲ್ಲಾಹು. ನಾನು ಅವನಲ್ಲಿಯೇ ಭರವಸೆಯಿಟ್ಟಿದ್ದೇನೆ ಮತ್ತು ಅವನ ಬಳಿಗೆ ವಿನಮ್ರತೆಯಿಂದ ಮರಳುತ್ತೇನೆ.”

ಅವನು ಭೂಮ್ಯಾಕಾಶಗಳ ಸೃಷ್ಟಿಕರ್ತನು. ಅವನು ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಮಾಡಿದನು. ಅವನು ಜಾನುವಾರುಗಳಿಂದಲೂ ಜೋಡಿಗಳನ್ನು ಮಾಡಿದನು. ಅದರ ಮೂಲಕ ಅವನು ನಿಮ್ಮನ್ನು ಹಬ್ಬಿಸುತ್ತಾನೆ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

ಭೂಮ್ಯಾಕಾಶಗಳ ಕೀಲಿಗಳು ಅವನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.

ಅಲ್ಲಾಹು ನೂಹರಿಗೆ ಸಂಸ್ಥಾಪಿಸಬೇಕೆಂದು ಆದೇಶಿಸಿದ, ನಿಮಗೆ ದೇವವಾಣಿಯ ಮೂಲಕ ಕಳುಹಿಸಿದ ಮತ್ತು ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ಆದೇಶಿಸಿದ ಅದೇ ಧರ್ಮವನ್ನು ನಾವು ನಿಮಗೆ ನಿಶ್ಚಯಿಸಿದ್ದೇವೆ. ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗಬೇಡಿ. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಅವರಿಗೆ ಸಂಬಂಧಿಸಿದಂತೆ ಭಾರವಾಗಿದೆ. ಅಲ್ಲಾಹು ಅವನು ಇಚ್ಛಿಸುವವರನ್ನು ಅವನು ಆರಿಸಿಕೊಂಡವರಲ್ಲಿ ಸೇರಿಸುತ್ತಾನೆ ಮತ್ತು ಅವನ ಕಡೆಗೆ ತಿರುಗುವವರನ್ನು ಸರಿಯಾದ ಮಾರ್ಗದಲ್ಲಿ ಸೇರಿಸುತ್ತಾನೆ.

ಅವರ ಬಳಿಗೆ ಜ್ಞಾನವು ಬಂದ ಬಳಿಕವೇ ಅವರು ಭಿನ್ನರಾದರು. (ಅದೂ ಕೂಡ) ಅವರು ಪರಸ್ಪರ ಹೊಂದಿದ್ದ ವಿರೋಧದಿಂದಾಗಿ. ಒಂದು ನಿಶ್ಚಿತ ಅವಧಿಯವರೆಗೆ ಮುಂದೂಡುತ್ತೇನೆ ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ (ತಕ್ಷಣ) ತೀರ್ಪು ನೀಡಲಾಗುತ್ತಿತ್ತು. ಅವರ ನಂತರ ಗ್ರಂಥದ ವಾರಸುದಾರರಾದವರು ಯಾರೋ ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ.

ನೀವು ಇದೇ ರೀತಿ ಜನರನ್ನು ಕರೆಯುತ್ತಿರಿ. ನಿಮಗೆ ಏನು ಆಜ್ಞಾಪಿಸಲಾಗಿದೆಯೋ ಅದರಲ್ಲಿ ದೃಢವಾಗಿ ನಿಲ್ಲಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಹೇಳಿರಿ: “ಅಲ್ಲಾಹು ಅವತೀರ್ಣಗೊಳಿಸಿದ ಎಲ್ಲಾ ಗ್ರಂಥಗಳಲ್ಲೂ ನಾನು ವಿಶ್ವಾಸವಿಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯದಿಂದ ವರ್ತಿಸಲು ನನಗೆ ಆಜ್ಞಾಪಿಸಲಾಗಿದೆ. ಅಲ್ಲಾಹನೇ ನಮ್ಮ ಮತ್ತು ನಿಮ್ಮ ಪರಿಪಾಲಕ. ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಮ್ಮ ಮತ್ತು ನಿಮ್ಮ ಮಧ್ಯೆ ಯಾವುದೇ ತರ್ಕವಿಲ್ಲ. ಅಲ್ಲಾಹು ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.”

ಜನರು ಅಲ್ಲಾಹನ ಮಾತನ್ನು ಅಂಗೀಕರಿಸಿದ[1] ಬಳಿಕ ಅಲ್ಲಾಹನ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ತರ್ಕವು ಅಲ್ಲಾಹನ ದೃಷ್ಟಿಯಲ್ಲಿ ನಿರರ್ಥಕವಾಗಿದೆ. ಅವರ ಮೇಲೆ ಕೋಪವಿದೆ ಮತ್ತು ಅವರಿಗೆ ಕಠೋರ ಶಿಕ್ಷೆಯಿದೆ.

ಅಲ್ಲಾಹು ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ತಕ್ಕಡಿಯನ್ನು (ಕೂಡ ಇಳಿಸಿಕೊಟ್ಟಿದ್ದಾನೆ). ನಿಮಗೇನು ಗೊತ್ತು? ಅಂತ್ಯಸಮಯವು ಸಮೀಪದಲ್ಲೇ ಇರಬಹುದು.

ಅದರಲ್ಲಿ ವಿಶ್ವಾಸವಿಡದವರು ಅದಕ್ಕಾಗಿ (ಅಂತ್ಯಸಮಯಕ್ಕಾಗಿ) ಆತುರಪಡುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅದರ ಬಗ್ಗೆ ಭಯಭೀತರಾಗಿದ್ದಾರೆ. ಅವರು ಅದು ಸತ್ಯವೆಂದು ತಿಳಿದಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಂತ್ಯಸಮಯದ ವಿಷಯದಲ್ಲಿ ತರ್ಕಿಸುವವರು ಯಾರೋ ಅವರು ವಿದೂರ ದುರ್ಮಾರ್ಗದಲ್ಲಿದ್ದಾರೆ.

ಅಲ್ಲಾಹು ಅವನ ದಾಸರ ಮೇಲೆ ದಯೆಯನ್ನು ಹೊಂದಿದ್ದಾನೆ. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ಒದಗಿಸುತ್ತಾನೆ. ಅವನು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.

ಯಾರು ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ ಬೆಳೆಯಲ್ಲಿ ನಾವು ಅಭಿವೃದ್ಧಿಯನ್ನು ನೀಡುವೆವು. ಯಾರು ಇಹಲೋಕದ ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಇಹಲೋಕದಿಂದ ನೀಡುವೆವು. ಪರಲೋಕದಲ್ಲಿ ಅವನಿಗೆ ಯಾವುದೇ ಪಾಲು ಇರುವುದಿಲ್ಲ.

ಅಲ್ಲಾಹು ಆಜ್ಞಾಪಿಸದ ವಿಷಯಗಳನ್ನು ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾರಾದರೂ ದೇವ-ಸಹಭಾಗಿಗಳು ಅವರಿಗಿದ್ದಾರೆಯೇ? ತೀರ್ಪು ನೀಡುವ ದಿನದ ಕುರಿತಾದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.

ಆ ಅಕ್ರಮಿಗಳು (ಪರಲೋಕದಲ್ಲಿ) ಅವರ ಕರ್ಮಗಳ ಬಗ್ಗೆ ಭಯಪಡುವುದನ್ನು ನೀವು ನೋಡುವಿರಿ. ಅದರ ದುಷ್ಫಲವು ಅವರ ಮೇಲೆ ಸಂಭವಿಸಿಯೇ ತೀರುತ್ತದೆ. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಸ್ವರ್ಗದ ಉದ್ಯಾನಗಳಲ್ಲಿರುವರು. ಅವರು ಇಚ್ಛಿಸುವುದೆಲ್ಲವೂ ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಇರುವುದು. ಅದೇ ಮಹಾ ಔದಾರ್ಯ.

ಅದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗಿದ ತನ್ನ ದಾಸರಿಗೆ ಅಲ್ಲಾಹು ನೀಡುವ ಸುವಾರ್ತೆಯಾಗಿದೆ. ಹೇಳಿರಿ: “ಅದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಆದರೆ ಹತ್ತಿರದ ಸಂಬಂಧಿಕರಲ್ಲಿರುವ ಪ್ರೀತಿಯ ಹೊರತು.”[1] ಯಾರು ಒಳಿತು ಮಾಡುತ್ತಾನೋ ಅವನಿಗೆ ನಾವು ಅದರಿಂದಾಗಿ ಒಳಿತನ್ನು ಹೆಚ್ಚಿಸಿಕೊಡುವೆವು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ.

ಅವರು (ಪ್ರವಾದಿ) ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹು ಇಚ್ಛಿಸಿದರೆ ನಿಮ್ಮ ಹೃದಯಕ್ಕೆ ಮೊಹರು ಹಾಕುವನು. ಅಲ್ಲಾಹು ತನ್ನ ವಚನಗಳ ಮೂಲಕ ಅಸತ್ಯವನ್ನು ಅಳಿಸುತ್ತಾನೆ ಮತ್ತು ಸತ್ಯವನ್ನು ಸ್ಥಿರಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.

ಅವನು ತನ್ನ ದಾಸರಿಂದ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರ ತಪ್ಪುಗಳನ್ನು ಮನ್ನಿಸುತ್ತಾನೆ. ನೀವು ಮಾಡುತ್ತಿರುವುದೆಲ್ಲವನ್ನೂ ಅವನು ತಿಳಿಯುತ್ತಾನೆ.

ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ (ಅವರ ಪ್ರಾರ್ಥನೆಗಳಿಗೆ) ಅವನು ಉತ್ತರ ನೀಡುತ್ತಾನೆ ಮತ್ತು ತನ್ನ ಔದಾರ್ಯವನ್ನು ಅವರಿಗೆ ಹೆಚ್ಚಿಸಿಕೊಡುತ್ತಾನೆ. ಸತ್ಯನಿಷೇಧಿಗಳಿಗೆ ಕಠೋರ ಶಿಕ್ಷೆಯಿದೆ.

ಅಲ್ಲಾಹು ಅವನ ದಾಸರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಿದ್ದರೆ ಅವರು ಭೂಮಿಯಲ್ಲಿ ಅತಿರೇಕವೆಸಗುತ್ತಿದ್ದರು. ಆದರೆ ಅವನು ಇಚ್ಛಿಸುವ ಒಂದು ನಿರ್ಣಯಕ್ಕೆ ಅನುಗುಣವಾಗಿಯೇ ಅವನು ಇಳಿಸಿಕೊಡುತ್ತಾನೆ. ನಿಶ್ಚಯವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿದವನು ಮತ್ತು ನೋಡುವವನಾಗಿದ್ದಾನೆ.

ಅವನೇ ಮನುಷ್ಯರು ನಿರಾಶರಾದ ಬಳಿಕ ಮಳೆಯನ್ನು ಸುರಿಸುವವನು ಮತ್ತು ತನ್ನ ದಯೆಯನ್ನು ಹಬ್ಬಿಸುವವನು. ಅವನು ರಕ್ಷಕನು ಮತ್ತು ಸ್ತುತ್ಯರ್ಹನಾಗಿದ್ದಾನೆ.

ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಹಾಗೂ ಅವುಗಳಲ್ಲಿ ಜೀವಿಗಳನ್ನು ಹಬ್ಬಿಸಿದ್ದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಅವನು ಇಚ್ಛಿಸುವಾಗ ಅವರೆಲ್ಲರನ್ನು ಒಟ್ಟುಗೂಡಿಸುವ ಸಾಮರ್ಥ್ಯ ಅವನಿಗಿದೆ.

ನಿಮಗೇನಾದರೂ ವಿಪತ್ತು ಸಂಭವಿಸಿದರೆ ಅದು ನಿಮ್ಮ ಕೈಗಳು ಮಾಡಿದ ಕರ್ಮಗಳ ಪ್ರತಿಫಲವಾಗಿದೆ. ಹೆಚ್ಚಿನವುಗಳನ್ನು ಅವನು ಮನ್ನಿಸುತ್ತಾನೆ.

ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರು ಅಥವಾ ಸಹಾಯಕರಿಲ್ಲ.

ಸಮುದ್ರಗಳಲ್ಲಿ ಚಲಿಸುವ ಬೆಟ್ಟಗಳಂತಹ ಹಡಗುಗಳು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.

ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ದಗೊಳಿಸುವನು. ಆಗ ಅವು ಸಮುದ್ರಗಳಲ್ಲಿ ನಿಶ್ಚಲವಾಗಿ ನಿಲ್ಲುವುವು. ನಿಶ್ಚಯವಾಗಿಯೂ ತಾಳ್ಮೆಯಿರುವ ಮತ್ತು ಕೃತಜ್ಞರಾಗಿರುವ ಎಲ್ಲರಿಗೂ ಅದರಲ್ಲಿ ದೃಷ್ಟಾಂತಗಳಿವೆ.

ಅಥವಾ ಅವರು ಮಾಡಿದ ಕರ್ಮಗಳ ಫಲವಾಗಿ ಅವನು ಅವುಗಳನ್ನು (ಹಡಗುಗಳನ್ನು) ನಾಶ ಮಾಡುವನು. ಹೆಚ್ಚಿನವುಗಳನ್ನು ಅವನು ಮನ್ನಿಸುತ್ತಾನೆ.

ನಮ್ಮ ವಚನಗಳ ವಿಷಯದಲ್ಲಿ ತರ್ಕಿಸುವವರು ಯಾರೋ ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಸ್ಥಳವಿಲ್ಲವೆಂದು ತಿಳಿದಿರಲಿ!

ನಿಮಗೇನಾದರೂ ನೀಡಲಾಗಿದ್ದರೆ ಅದು ಇಹಲೋಕ ಜೀವನದ (ತಾತ್ಕಾಲಿಕ) ಸವಲತ್ತುಗಳು ಮಾತ್ರ. ಅಲ್ಲಾಹನ ಬಳಿಯಿರುವುದು ಅತ್ಯುತ್ತಮ ಮತ್ತು ಆತಿಹೆಚ್ಚು ಬಾಳಿಕೆಯುಳ್ಳದ್ದಾಗಿದ್ದು, ಅದು ಸತ್ಯವಿಶ್ವಾಸಿಗಳಿಗೆ ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಟ್ಟವರಿಗೆ ದೊರೆಯುತ್ತದೆ.

ಅವರು ಮಹಾಪಾಪಗಳು ಮತ್ತು ಅಶ್ಲೀಲಕೃತ್ಯಗಳಿಂದ ದೂರವಾಗುತ್ತಾರೆ ಮತ್ತು ಕೋಪ ಬರುವಾಗ ಕ್ಷಮಿಸುತ್ತಾರೆ.

ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ತಮ್ಮ ಕೆಲಸಕಾರ್ಯಗಳನ್ನು ಪರಸ್ಪರ ಸಮಾಲೋಚನೆಯಿಂದ ತೀರ್ಮಾನಿಸುತ್ತಾರೆ ಮತ್ತು ನಾವು ಒದಗಿಸಿದ (ಧನದಿಂದ) ಖರ್ಚು ಮಾಡುತ್ತಾರೆ.

ಅವರ ಮೇಲೆ ಯಾವುದಾದರೂ ದೌರ್ಜನ್ಯವುಂಟಾದರೆ ಅವರು ಪ್ರತೀಕಾರ ಮಾತ್ರ ತೆಗೆದುಕೊಳ್ಳುತ್ತಾರೆ.[1]

ಕೆಡುಕಿನ ಪ್ರತಿಫಲವು ಅದರಂತಿರುವ ಕೆಡುಕಾಗಿದೆ. ಆದರೆ ಯಾರಾದರೂ ಮನ್ನಿಸಿದರೆ ಮತ್ತು ಸಂಧಾನ ಮಾಡಿಕೊಂಡರೆ ಅವನಿಗೆ ಪ್ರತಿಫಲ ನೀಡುವುದು ಅಲ್ಲಾಹನ ಹೊಣೆಗಾರಿಕೆಯಾಗಿದೆ. ನಿಶ್ಚಯವಾಗಿಯೂ ಅವನು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.

ದೌರ್ಜನ್ಯಕ್ಕೆ ಗುರಿಯಾದ ನಂತರ ಯಾರಾದರೂ (ಅದಕ್ಕೆ ಸಮಾನವಾದ) ಪ್ರತೀಕಾರ ಕೈಗೊಂಡರೆ ಅಂತಹ ಜನರ ಮೇಲೆ (ತಪ್ಪು ಹೊರಿಸಲು) ಯಾವುದೇ ಮಾರ್ಗವಿಲ್ಲ.

ಮಾರ್ಗವಿರುವುದು ಜನರಿಗೆ ಅನ್ಯಾಯವೆಸಗುವ ಮತ್ತು ಭೂಮಿಯಲ್ಲಿ ಅನ್ಯಾಯವಾಗಿ ಅತಿರೇಕವೆಸಗುವವರ ಮೇಲೆ ಮಾತ್ರವಾಗಿದೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.

ಯಾರಾದರೂ ತಾಳ್ಮೆ ವಹಿಸಿದರೆ ಮತ್ತು ಕ್ಷಮಿಸಿದರೆ ನಿಶ್ಚಯವಾಗಿಯೂ ಅದು ಮಹಾ ಸ್ಥೈರ್ಯದ ವಿಷಯಗಳಲ್ಲಿ ಸೇರಿದ್ದಾಗಿದೆ.

ಅಲ್ಲಾಹು ಯಾರನ್ನಾದರೂ ದಾರಿತಪ್ಪಿಸಿದರೆ, ನಂತರ ಅವನಿಗೆ ಯಾವುದೇ ರಕ್ಷಕನಿರುವುದಿಲ್ಲ. ಅಕ್ರಮಿಗಳು ಶಿಕ್ಷೆಯನ್ನು ನೇರವಾಗಿ ನೋಡುವಾಗ ಮರಳಿ (ಭೂಮಿಗೆ) ಹೋಗಲು ಯಾವುದಾದರೂ ದಾರಿಯಿದೆಯೇ ಎಂದು ಕೇಳುವುದನ್ನು ನಿಮಗೆ ಕಾಣಬಹುದು.

ಅವಮಾನದಿಂದ ಶರಣಾಗತರಾದ ಸ್ಥಿತಿಯಲ್ಲಿ ಅವರನ್ನು ಅದರ (ನರಕಾಗ್ನಿಯ) ಮುಂದೆ ಪ್ರದರ್ಶಿಸಲಾಗುವುದನ್ನು ನೀವು ನೋಡುವಿರಿ. ಅವರು ಕುಡಿನೋಟದಿಂದ ನೋಡುತ್ತಿರುವರು. ಸತ್ಯವಿಶ್ವಾಸಿಗಳು ಹೇಳುವರು: “ಪುನರುತ್ಥಾನ ದಿನದಂದು ಯಾರು ತಮ್ಮನ್ನು ಮತ್ತು ತಮ್ಮ ಸಂಬಂಧಿಕರನ್ನು ಕಳೆದುಕೊಳ್ಳುತ್ತಾರೋ ಅವರೇ ನಷ್ಟ ಹೊಂದಿದವರು. ತಿಳಿಯಿರಿ! ನಿಶ್ಚಯವಾಗಿಯೂ ಅಕ್ರಮಿಗಳು ಶಾಶ್ವತ ಶಿಕ್ಷೆಯಲ್ಲಿದ್ದಾರೆ.”

ಅಲ್ಲಾಹನ ಹೊರತು ಅವರಿಗೆ ಸಹಾಯ ಮಾಡುವ ಬೇರೆ ಯಾವ ರಕ್ಷಕರೂ ಅವರಿಗಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯಿಲ್ಲ.

ಅಲ್ಲಾಹನ ಕಡೆಯ ಒಂದು ದಿನವು ಬರುವುದಕ್ಕೆ ಮೊದಲೇ ನಿಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರ ನೀಡಿರಿ. ಆ ದಿನವನ್ನು ದೂರೀಕರಿಸಲು ಯಾರಿಗೂ ಸಾಧ್ಯವಿಲ್ಲ. ಅಂದು ನಿಮಗೆ ಯಾವುದೇ ಆಶ್ರಯತಾಣವಿಲ್ಲ ಮತ್ತು ಅಡಗಿ ಕುಳಿತು ಆಜ್ಞಾತರಾಗಲೂ ನಿಮಗೆ ಸಾಧ್ಯವಿಲ್ಲ.

ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲೆ ಕಾವಲುಗಾರರಾಗಿ ಕಳುಹಿಸಿಲ್ಲ. ನಿಮ್ಮ ಕರ್ತವ್ಯವು ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ ಅವನು ಸಂತೋಷಪಡುತ್ತಾನೆ. ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ಕರ್ಮಗಳ ಪ್ರತಿಫಲವಾಗಿ ಅವರಿಗೆ ಏನಾದರೂ ವಿಪತ್ತು ಸಂಭವಿಸಿದರೆ ನಿಶ್ಚಯವಾಗಿಯೂ ಮನುಷ್ಯನು ಕೃತಘ್ನನಾಗಿ ಬಿಡುತ್ತಾನೆ.

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಇಚ್ಛಿಸುವವರಿಗೆ ಹೆಣ್ಣು ಮಕ್ಕಳನ್ನು ಕರುಣಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಗಂಡು ಮಕ್ಕಳನ್ನು ಕರುಣಿಸುತ್ತಾನೆ.

ಅಥವಾ ಅವರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಜೊತೆಯಾಗಿ ಕರುಣಿಸುತ್ತಾನೆ. ಅವನು ಇಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.

ಅಲ್ಲಾಹು ಒಬ್ಬ ಮನುಷ್ಯನೊಡನೆ ನೇರವಾಗಿ ಮಾತನಾಡುವುದು ಅಸಂಭವ್ಯವಾಗಿದೆ. ದೇವವಾಣಿಯ ಮೂಲಕ, ಅಥವಾ ಒಂದು ಪರದೆಯ ಹಿಂದಿನಿಂದ, ಅಥವಾ ಒಬ್ಬ ದೇವದೂತನನ್ನು ಕಳುಹಿಸಿ, ಆ ದೇವದೂತನು ಅಲ್ಲಾಹನ ಆಜ್ಞೆಯಂತೆ ಅಲ್ಲಾಹು ಇಚ್ಛಿಸುವುದನ್ನು ಸಂದೇಶವಾಗಿ ನೀಡುವ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಈ ರೀತಿ ನಾವು ನಮ್ಮ ಆಜ್ಞೆಯಿಂದ ನಿಮಗೆ ಒಂದು ಆತ್ಮವನ್ನು (ಕುರ್‌ಆನನ್ನು) ಇಳಿಸಿಕೊಟ್ಟಿದ್ದೇವೆ. ಗ್ರಂಥವೆಂದರೆ ಏನು ಮತ್ತು ಸತ್ಯವಿಶ್ವಾಸವೆಂದರೆ ಏನು ಮುಂತಾದ ಯಾವುದೂ ನಿಮಗೆ ತಿಳಿದಿರಲಿಲ್ಲ. ಆದರೆ ನಾವು ಅದನ್ನು ಒಂದು ಬೆಳಕಿನಂತೆ ಮಾಡಿದೆವು. ಅದರ ಮೂಲಕ ನಮ್ಮ ದಾಸರಲ್ಲಿ ನಾವು ಇಚ್ಛಿಸಿದವರಿಗೆ ನಾವು ಸನ್ಮಾರ್ಗವನ್ನು ತೋರಿಸುತ್ತೇವೆ. ನಿಶ್ಚಯವಾಗಿಯೂ ನೀವು ನೇರವಾದ ಮಾರ್ಗಕ್ಕೆ ಮಾರ್ಗದರ್ಶನ ಮಾಡುತ್ತಿದ್ದೀರಿ.

ಭೂಮ್ಯಾಕಾಶಗಳಲ್ಲಿರುವುದು ಯಾರದ್ದೋ ಆ ಅಲ್ಲಾಹನ ಮಾರ್ಗಕ್ಕೆ. ತಿಳಿಯಿರಿ! ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ.