عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Crouching [Al-Jathiya] - Kannada translation

Surah Crouching [Al-Jathiya] Ayah 37 Location Maccah Number 45

ಹಾ-ಮೀಮ್.

ಈ ಗ್ರಂಥವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿ ಸತ್ಯವಿಶ್ವಾಸಿಗಳಿಗೆ ಅನೇಕ ದೃಷ್ಟಾಂತಗಳಿವೆ.

ನಿಮ್ಮ ಸೃಷ್ಟಿಯಲ್ಲೂ ಮತ್ತು ಅವನು ಜೀವಿಗಳನ್ನು ಹಬ್ಬಿಸಿರುವುದರಲ್ಲೂ ದೃಢವಿಶ್ವಾಸವಿಡುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಆಹಾರವನ್ನು (ಮಳೆಯನ್ನು) ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಆಲೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

ಇವು ಅಲ್ಲಾಹನ ವಚನಗಳಾಗಿದ್ದು, ನಾವು ಅವುಗಳನ್ನು ನಿಮಗೆ ಸತ್ಯ ಸಮೇತವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಮತ್ತು ಅವನ ವಚನಗಳ ನಂತರ ಇನ್ನು ಯಾವ ಮಾತಿನಲ್ಲಿ ಅವರು ವಿಶ್ವಾಸವಿಡುವರು?

ಪ್ರತಿಯೊಬ್ಬ ಸುಳ್ಳುಗಾರ ಮತ್ತು ಪಾಪಿಗೆ ವಿನಾಶ ಕಾದಿದೆ.

ತನಗೆ ಓದಿಕೊಡಲಾಗುವ ಅಲ್ಲಾಹನ ವಚನಗಳಿಗೆ ಅವನು ಕಿವಿಗೊಡುತ್ತಾನೆ. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ಅಹಂಕಾರದಿಂದ ಹಟತೊಟ್ಟು ನಿಲ್ಲುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.

ಅವನು ನಮ್ಮ ವಚನಗಳಿಂದ ಏನಾದರೂ ತಿಳಿದುಕೊಂಡರೆ ಅದನ್ನು ತಮಾಷೆಯಾಗಿ ಸ್ವೀಕರಿಸುತ್ತಾನೆ. ಅಂತಹ ಜನರಿಗೆ ಅವಮಾನಕರ ಶಿಕ್ಷೆಯಿದೆ.

ನರಕಾಗ್ನಿ ಅವರ ಮುಂಭಾಗದಲ್ಲೇ ಇದೆ! ಅವರು ಏನು ಸಂಪಾದಿಸಿದರೋ ಮತ್ತು ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ರಕ್ಷಕರನ್ನಾಗಿ ಸ್ವೀಕರಿಸಿದರೋ ಯಾವುದೂ ಅವರಿಗೆ ಪ್ರಯೋಜನ ನೀಡುವುದಿಲ್ಲ. ಅವರಿಗೆ ಕಠೋರ ಶಿಕ್ಷೆಯಿದೆ.

ಇದು ಸನ್ಮಾರ್ಗವಾಗಿದೆ. ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ನಿಷೇಧಿಸಿದವರು ಯಾರೋ ಅವರಿಗೆ ಬಹಳ ಕಠೋರವಾದ ಯಾತನಾಮಯ ಶಿಕ್ಷೆಯಿದೆ.

ಅಲ್ಲಾಹನೇ ನಿಮಗೆ ಸಮುದ್ರವನ್ನು ಅಧೀನಗೊಳಿಸಿದವನು. ಅವನ ಅಪ್ಪಣೆಯಂತೆ ನಾವೆಗಳು ಅದರಲ್ಲಿ ಸಂಚರಿಸುವುದಕ್ಕಾಗಿ, ನೀವು ಅವನ ಔದಾರ್ಯದಿಂದ ಬೇಡಿಕೊಳ್ಳುವುದಕ್ಕಾಗಿ ಮತ್ತು ನೀವು ಕೃತಜ್ಞರಾಗುವುದಕ್ಕಾಗಿ.

ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳನ್ನು ಅವನು ತನ್ನ ವತಿಯಿಂದ ನಿಮಗೆ ಅಧೀನಗೊಳಿಸಿದ್ದಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

ಅಲ್ಲಾಹನ ದಿನಗಳನ್ನು ನಿರೀಕ್ಷಿಸದ ಸತ್ಯನಿಷೇಧಿಗಳಿಗೆ ಅವರು ಕ್ಷಮಿಸಿ ಬಿಡಲಿ ಎಂದು ಸತ್ಯವಿಶ್ವಾಸಿಗಳೊಡನೆ ಹೇಳಿರಿ. ಇದು ಅಲ್ಲಾಹು ಆ ಜನರಿಗೆ ಅವರು ಮಾಡಿದ ಕರ್ಮಗಳ ಫಲವನ್ನು ನೀಡುವುದಕ್ಕಾಗಿ.

ಯಾರಾದರೂ ಒಳಿತು ಮಾಡಿದರೆ ಅದು ಅವನ ಒಳಿತಿಗೇ ಆಗಿದೆ. ಯಾರಾದರೂ ಕೆಡುಕು ಮಾಡಿದರೆ ಅದರ ಕೆಡುಕು ಅವನಿಗೇ ಆಗಿದೆ. ನಂತರ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ನಿಮ್ಮನ್ನು ಮರಳಿಸಲಾಗುವುದು.

ನಾವು ಇಸ್ರಾಯೇಲ್ ಮಕ್ಕಳಿಗೆ ಗ್ರಂಥ, ಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದೆವು, ಶುದ್ಧ ವಸ್ತುಗಳಿಂದ ಅವರಿಗೆ ಆಹಾರವನ್ನು ಒದಗಿಸಿದೆವು ಮತ್ತು ಜಗತ್ತಿನ ಎಲ್ಲಾ (ಸಮಕಾಲೀನ) ಜನರಿಗಿಂತ ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದೆವು.

ನಾವು ಅವರಿಗೆ (ಧಾರ್ಮಿಕ) ವಿಷಯಗಳ ಬಗ್ಗೆ ಸ್ಪಷ್ಟ ಪುರಾವೆಗಳನ್ನು ನೀಡಿದೆವು. ಆದರೆ ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಅವರು ಭಿನ್ನಮತ ತಳೆಯಲಿಲ್ಲ. ಅವರು ಪರಸ್ಪರ ಹೊಂದಿದ್ದ ದ್ವೇಷವೇ ಅದಕ್ಕೆ ಕಾರಣವಾಗಿತ್ತು. ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಆ ವಿಷಯದಲ್ಲಿ ಪುನರುತ್ಥಾನ ದಿನದಂದು ನಿಮ್ಮ ಪರಿಪಾಲಕನು (ಅಲ್ಲಾಹು) ಅವರ ನಡುವೆ ತೀರ್ಪು ನೀಡುವನು.

ನಂತರ ನಾವು ನಿಮ್ಮನ್ನು ಧರ್ಮದ ಸ್ಪಷ್ಟ ಮಾರ್ಗದಲ್ಲಿ ನಿಲ್ಲಿಸಿದೆವು. ಆದ್ದರಿಂದ ನೀವು ಅದನ್ನು ಅನುಸರಿಸಿರಿ. ತಿಳುವಳಿಕೆಯಿಲ್ಲದ ಜನರ ಸ್ವೇಚ್ಛೆಗಳನ್ನು ಅನುಸರಿಸಬೇಡಿ.

ಅಲ್ಲಾಹನ ಮುಂದೆ ಇವರು ಯಾವ ರೀತಿಯಲ್ಲೂ ನಿಮಗೆ ಉಪಕಾರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಕ್ರಮಿಗಳು ಪರಸ್ಪರ ಮಿತ್ರರಾಗಿದ್ದಾರೆ. ಅಲ್ಲಾಹು ದೇವಭಯವುಳ್ಳವರ ರಕ್ಷಕನಾಗಿದ್ದಾನೆ.

ಇದು (ಕುರ್‌ಆನ್) ಮನುಷ್ಯರಿಗೆ ಒಳದೃಷ್ಟಿಯಾಗಿದೆ ಮತ್ತು ದೃಢವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಹಾಗೂ ದಯೆಯಾಗಿದೆ.

ಕೆಡುಕು ಮಾಡಿದವರು ಯಾರೋ ಅವರನ್ನು ನಾವು ಸತ್ಯವಿಶ್ವಾಸಿಗಳಾಗಿದ್ದು ಸತ್ಕರ್ಮವೆಸಗುವವರಂತೆ—ಅವರಿಬ್ಬರ ಜೀವನ ಮತ್ತು ಮರಣಗಳು ಸಮಾನವಾಗುವ ರೀತಿಯಲ್ಲಿ—ಮಾಡುವೆವೆಂದು ಭಾವಿಸಿದ್ದಾರೆಯೇ? ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.

ಅಲ್ಲಾಹು ಭೂಮ್ಯಾಕಾಶಗಳನ್ನು ಸತ್ಯ ಸಮೇತ ಸೃಷ್ಟಿಸಿದ್ದಾನೆ. ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

ತನ್ನ ಸ್ವೇಚ್ಛೆಯನ್ನೇ ದೇವನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿದ್ದೀರಾ?[1] ಅಲ್ಲಾಹು ತಿಳಿದೇ ಅವನನ್ನು ದಾರಿತಪ್ಪಿಸಿದ್ದಾನೆ, ಅವನ ಕಿವಿ ಮತ್ತು ಹೃದಯಕ್ಕೆ ಮೊಹರು ಹಾಕಿದ್ದಾನೆ ಮತ್ತು ಅವನ ಕಣ್ಣಿನ ಮೇಲೆ ಒಂದು ಪರದೆಯನ್ನಿಟ್ಟಿದ್ದಾನೆ. ಅಲ್ಲಾಹನ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರು? ನೀವು ಉಪದೇಶ ಸ್ವೀಕರಿಸುವುದಿಲ್ಲವೇ?

ಅವರು ಹೇಳಿದರು: “ಜೀವನವೆಂದರೆ ನಮ್ಮ ಇಹಲೋಕ ಜೀವನ ಮಾತ್ರವಾಗಿದೆ. ನಾವು ಸಾಯುತ್ತೇವೆ ಮತ್ತು ಬದುಕುತ್ತೇವೆ. ಕಾಲವಲ್ಲದೆ ಬೇರೇನೂ ನಮ್ಮನ್ನು ನಾಶ ಮಾಡುವುದಿಲ್ಲ.” ವಾಸ್ತವವಾಗಿ ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹಿಸಿ ಹೇಳುತ್ತಾರೆ.

ನಮ್ಮ ಸ್ಪಷ್ಟ ವಚನಗಳನ್ನು ಅವರಿಗೆ ಓದಿಕೊಡಲಾದರೆ ಅವರು ಹೇಳುವ ತರ್ಕವು: “ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಕರೆತನ್ನಿರಿ” ಎಂದು ಮಾತ್ರವಾಗಿರುತ್ತದೆ.

ಹೇಳಿರಿ: “ಅಲ್ಲಾಹು ನಿಮಗೆ ಜೀವ ನೀಡುತ್ತಾನೆ. ನಂತರ ಅವನು ಸಾವನ್ನು ನೀಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವನು ನಿಮ್ಮನ್ನು ಒಟ್ಟುಗೂಡಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅಂತ್ಯಸಮಯವು ಅಸ್ತಿತ್ವಕ್ಕೆ ಬರುವ ದಿನದಂದು ಮಿಥ್ಯವಾದಿಗಳು ನಷ್ಟ ಹೊಂದುವರು.

(ಆ ದಿನ) ಎಲ್ಲ ಸಮುದಾಯಗಳನ್ನು ಮಂಡಿಯೂರಿದ ಸ್ಥಿತಿಯಲ್ಲಿ ನೀವು ನೋಡುವಿರಿ. ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮದಾಖಲೆಯ ಕಡೆಗೆ ಕರೆಯಲಾಗುವುದು. “ನೀವು ಮಾಡಿರುವ ಕರ್ಮಗಳಿಗೆ ಇಂದು ನಿಮಗೆ ಪ್ರತಿಫಲ ನೀಡಲಾಗುವುದು.

ಇದು ನಮ್ಮ ದಾಖಲೆಯಾಗಿದ್ದು ಇದು ನಿಮ್ಮ ಬಗ್ಗೆ ಸತ್ಯವನ್ನು ಹೇಳಲಿದೆ. ನಿಶ್ಚಯವಾಗಿಯೂ ನೀವು ಮಾಡುತ್ತಿದ್ದ ಎಲ್ಲಾ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೆವು.”

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ಅವರ ಪರಿಪಾಲಕನು (ಅಲ್ಲಾಹು) ಅವನ ದಯೆಯಲ್ಲಿ ಸೇರಿಸುವನು. ಅದೇ ಸ್ಪಷ್ಟವಾದ ವಿಜಯ.

ಸತ್ಯನಿಷೇಧಿಗಳು ಯಾರೋ (ಅವರೊಡನೆ ಹೇಳಲಾಗುವುದು:) “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗಿಲ್ಲವೇ? ಆದರೂ ನೀವು ಅಹಂಕಾರ ತೋರಿದಿರಿ ಮತ್ತು ಪಾಪಿಗಳಾದ ಜನರಾಗಿದ್ದಿರಿ.

ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯಸಮಯದ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾದರೆ, ಅಂತ್ಯಸಮಯವೇನೆಂದು ನಮಗೆ ತಿಳಿದಿಲ್ಲ. ನಮಗೆ ಕೆಲವು ಕಲ್ಪನೆಗಳಿದ್ದವು. ನಮಗೆ ಯಾವುದರ ಬಗ್ಗೆಯೂ ಖಾತ್ರಿಯಿರಲಿಲ್ಲ ಎಂದು ನೀವು ಉತ್ತರಿಸಿದಿರಿ.”

ಅವರು ಮಾಡಿದ ಕರ್ಮಗಳ ಕೆಡುಕುಗಳು ಅವರಿಗೆ ಗೋಚರವಾಗುವುದು ಮತ್ತು ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸುವುದು.

ಅವರೊಡನೆ ಹೇಳಲಾಗುವುದು: “ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತುಬಿಟ್ಟಂತೆ ಇಂದು ನಾವು ನಿಮ್ಮನ್ನೂ ಮರೆತಿದ್ದೇವೆ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಸಹಾಯ ಮಾಡುವವರು ಯಾರೂ ಇಲ್ಲ.

ಅದೇಕೆಂದರೆ ನೀವು ಅಲ್ಲಾಹನ ವಚನಗಳನ್ನು ತಮಾಷೆಯ ವಸ್ತುವಾಗಿ ಸ್ವೀಕರಿಸಿದಿರಿ ಮತ್ತು ಇಹಲೋಕ ಜೀವನವು ನಿಮ್ಮನ್ನು ಮರುಳುಗೊಳಿಸಿತು. ಇಂದು ಅವರನ್ನು ಅಲ್ಲಿಂದ ಹೊರತೆಗೆಯಲಾಗುವುದಿಲ್ಲ ಮತ್ತು ಅವರ ನೆಪಗಳನ್ನು ಸ್ವೀಕರಿಸಲಾಗುವುದಿಲ್ಲ.

ಆದ್ದರಿಂದ ಭೂಮ್ಯಾಕಾಶಗಳ ಪರಿಪಾಲಕನಾದ ಮತ್ತು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

ಭೂಮ್ಯಾಕಾಶಗಳಲ್ಲಿ ಎಲ್ಲಾ ಮಹಾತ್ಮೆಗಳು ಅವನಿಗೇ ಮೀಸಲು. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.