The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesMuhammad [Muhammad] - Kannada translation
Surah Muhammad [Muhammad] Ayah 38 Location Madanah Number 47
ಸತ್ಯವನ್ನು ನಿಷೇಧಿಸಿದವರು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ ಅವರ ಕರ್ಮಗಳನ್ನು ಅಲ್ಲಾಹು ನಿಷ್ಫಲಗೊಳಿಸುವನು.
ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ಮುಹಮ್ಮದರಿಗೆ ಅವತೀರ್ಣವಾದ ಸಂದೇಶದಲ್ಲಿ—ಅದು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ—ವಿಶ್ವಾಸವಿಟ್ಟವರು ಯಾರೋ ಅವರ ಕೆಡುಕುಗಳನ್ನು ಅಲ್ಲಾಹು ಅಳಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
ಅದೇಕೆಂದರೆ ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವನ್ನು ಅನುಸರಿಸಿದರು. ಈ ರೀತಿ ಅಲ್ಲಾಹು ಜನರಿಗೆ ಅವರ ಸ್ಥಿತಿಗಳನ್ನು ವಿವರಿಸಿಕೊಡುತ್ತಾನೆ.
ನೀವು ಸತ್ಯನಿಷೇಧಿಗಳೊಡನೆ (ಯುದ್ಧದಲ್ಲಿ) ಮುಖಾಮುಖಿಯಾದರೆ ಅವರ ಕತ್ತುಗಳ ಮೇಲೆ ಬೀಸಿರಿ. ಅವರನ್ನು ಚೆನ್ನಾಗಿ ಬಗ್ಗುಬಡಿದ ನಂತರ ಅವರನ್ನು ಬಿಗಿಯಾಗಿ ಬಂಧಿಸಿರಿ. ನಂತರ ಒಂದೋ ಅವರೊಡನೆ ದಾಕ್ಷಿಣ್ಯ ತೋರಿರಿ[1] ಅಥವಾ ವಿಮೋಚನಾ ಶುಲ್ಕವನ್ನು ಪಡೆದು ಅವರನ್ನು ಸ್ವತಂತ್ರಗೊಳಿಸಿರಿ—ಯುದ್ಧವು ಅದರ ಭಾರವನ್ನು ಕಳಚುವ ತನಕ.[2] ಇದೇ ನಿಯಮ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನೇ ಅವರಿಂದ ಪ್ರತೀಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವುದಕ್ಕಾಗಿದೆ. ಯಾರು ಅಲ್ಲಾಹನ ಮಾರ್ಗದಲ್ಲಿ ಹತರಾಗುತ್ತಾರೋ ಅವರ ಕರ್ಮಗಳನ್ನು ಅವನು ಎಂದಿಗೂ ನಿಷ್ಫಲಗೊಳಿಸುವುದಿಲ್ಲ.
ಅವನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
ಅವನು ಅವರಿಗೆ ಪರಿಚಯಿಸಿಕೊಟ್ಟ ಆ ಸ್ವರ್ಗಕ್ಕೆ ಅವನು ಅವರನ್ನು ಪ್ರವೇಶ ಮಾಡಿಸುವನು.
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುತ್ತಾನೆ ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸುತ್ತಾನೆ.
ಸತ್ಯನಿಷೇಧಿಗಳು ಯಾರೋ ಅವರಿಗೆ ವಿನಾಶ ಕಾದಿದೆ. ಅಲ್ಲಾಹು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
ಅದೇಕೆಂದರೆ ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅವರು ದ್ವೇಷಿಸಿದರು. ಆದ್ದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅಲ್ಲಾಹು ಅವರನ್ನು ನಿರ್ನಾಮ ಮಾಡಿದನು. ಸತ್ಯನಿಷೇಧಿಗಳಿಗೆ ಅಂತಹುದೇ ಶಿಕ್ಷೆಯಿದೆ.
ಅದೇಕೆಂದರೆ ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿದ್ದಾನೆ ಮತ್ತು ಸತ್ಯನಿಷೇಧಿಗಳಿಗೆ ಯಾವುದೇ ರಕ್ಷಕರಿಲ್ಲ.
ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಸತ್ಯನಿಷೇಧಿಗಳು (ಇಹಲೋಕದಲ್ಲಿ) ಆನಂದಿಸುತ್ತಾರೆ ಮತ್ತು ಜಾನುವಾರುಗಳು ತಿನ್ನುವಂತೆ ತಿನ್ನುತ್ತಾರೆ. ನರಕವು ಅವರ ವಾಸಸ್ಥಳವಾಗಿದೆ.
ನಿಮ್ಮನ್ನು ಹೊರಹಾಕಿದ ಈ ಊರಿಗಿಂತಲೂ (ಮಕ್ಕಾ) ಬಲಿಷ್ಠವಾದ ಎಷ್ಟು ಊರುಗಳಿವೆ! ಅವರನ್ನು ನಾವು ನಾಶ ಮಾಡಿದೆವು. ಅವರಿಗೆ ಯಾವುದೇ ಸಹಾಯಕರು ಇರಲಿಲ್ಲ.
ತನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಸಾಕ್ಷ್ಯದ ಮೇಲೆ ನಿಂತಿರುವ ವ್ಯಕ್ತಿ ದುಷ್ಕರ್ಮಗಳನ್ನು ಆಕರ್ಷಕವಾಗಿ ತೋರಿಸಲಾದ ಮತ್ತು ಸ್ವೇಚ್ಛೆಗಳ ಹಿಂಬಾಲಕನಾದ ವ್ಯಕ್ತಿಯಂತಾಗುವನೇ?
ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು ಹೇಗಿದೆಯೆಂದರೆ ಅದರಲ್ಲಿ ವಾಸನೆ ಬದಲಾಗದ ನೀರಿನ ಹೊಳೆಗಳಿವೆ, ರುಚಿ ಬದಲಾಗದ ಹಾಲಿನ ಹೊಳೆಗಳಿವೆ, ಕುಡಿಯುವವರಿಗೆ ಆಹ್ಲಾದಕರವಾದ ಶರಾಬಿನ ನದಿಗಳಿವೆ ಮತ್ತು ಶುದ್ಧವಾದ ಜೇನಿನ ನದಿಗಳಿವೆ. ಅಲ್ಲಿ ಅವರಿಗೆ ಎಲ್ಲಾ ತರಹದ ಹಣ್ಣು-ಹಂಪಲುಗಳಿವೆ. ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಯೂ ಇದೆ. (ಇವರ ಸ್ಥಿತಿಯು) ನರಕದಲ್ಲಿ ಶಾಶ್ವತವಾಗಿ ವಾಸಿಸುವವನಂತೆಯೇ? ಅವರಿಗೆ ಕುಡಿಯಲು ನೀಡಲಾಗುವ ಕುದಿಯುವ ನೀರು ಅವರ ಕರುಳುಗಳನ್ನು ತುಂಡು ತುಂಡಾಗಿ ಕತ್ತರಿಸುತ್ತದೆ.
ಅವರಲ್ಲಿ ಕೆಲವರು ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಎಲ್ಲಿಯವರೆಗೆಂದರೆ, ಅವರು ನಿಮ್ಮ ಬಳಿಯಿಂದ ಹೊರಟರೆ ಜ್ಞಾನಿಗಳೊಂದಿಗೆ (ಸಹಾಬಿಗಳೊಂದಿಗೆ) ಕೇಳುತ್ತಾರೆ: “ಅವರು ಈಗ ಹೇಳಿದ್ದೇನು?” ಅವರ ಹೃದಯಗಳ ಮೇಲೆ ಅಲ್ಲಾಹು ಮೊಹರು ಹಾಕಿದ್ದಾನೆ ಮತ್ತು ಅವರು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾರೆ.
ಸನ್ಮಾರ್ಗ ಪಡೆದವರು ಯಾರೋ ಅವರಿಗೆ ಅಲ್ಲಾಹು ಇನ್ನೂ ಹೆಚ್ಚು ಸನ್ಮಾರ್ಗವನ್ನು ದಯಪಾಲಿಸುತ್ತಾನೆ ಮತ್ತು ಅವರಿಗೆ ಅವರ ದೇವಭಯವನ್ನು ನೀಡುತ್ತಾನೆ.
ಅಂತ್ಯಸಮಯವು ಅವರ ಬಳಿಗೆ ಹಠಾತ್ತನೆ ಬರುವುದನ್ನಲ್ಲದೆ ಬೇರೆ ಏನನ್ನು ಅವರು ಕಾಯುತ್ತಿದ್ದಾರೆ? ಅದರ ಕೆಲವು ಚಿಹ್ನೆಗಳು ಈಗಾಗಲೇ ಬಂದಿವೆ. ನಂತರ ಅವರ ಬಳಿಗೆ ಅಂತ್ಯಸಮಯವು ಬಂದಾಗ ಅವರಿಗೆ ಉಪದೇಶವು ಪ್ರಯೋಜನಪಡುವುದಾದರೂ ಹೇಗೆ?
ತಿಳಿಯಿರಿ! ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ನಿಮ್ಮ ಪಾಪಕ್ಕೆ ಕ್ಷಮೆಯಾಚಿಸಿರಿ. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮೆಯಾಚಿಸಿರಿ. ಅಲ್ಲಾಹು ನಿಮ್ಮ ಚಲನವಲನಗಳನ್ನು ಮತ್ತು ವಾಸಸ್ಥಳವನ್ನು ತಿಳಿದಿದ್ದಾನೆ.
ಸತ್ಯವಿಶ್ವಾಸಿಗಳು ಕೇಳುತ್ತಾರೆ: “ಒಂದು ಅಧ್ಯಾಯವು ಏಕೆ ಅವತೀರ್ಣವಾಗಿಲ್ಲ?” ಆದರೆ ಖಚಿತ ನಿಯಮಗಳಿರುವ ಒಂದು ಅಧ್ಯಾಯವು ಅವತೀರ್ಣವಾಗಿ ಅದರಲ್ಲಿ ಯುದ್ಧದ ಬಗ್ಗೆ ಉಲ್ಲೇಖಿಸಲಾದರೆ ಮೃತ್ಯು ಆವರಿಸಿ ಪ್ರಜ್ಞೆ ಕಳಕೊಂಡ ವ್ಯಕ್ತಿಯು ನೋಡುವಂತೆ, ಹೃದಯಗಳಲ್ಲಿ ರೋಗವಿರುವವರು ನಿಮ್ಮ ಕಡೆಗೆ ನೋಡುವುದನ್ನು ನೀವು ಕಾಣುವಿರಿ. ಅವರಿಗೆ ಅದು ಅತ್ಯಂತ ಅರ್ಹವಾಗಿದೆ.
ಆಜ್ಞಾಪಾಲನೆ ಮಾಡುವುದು ಹಾಗೂ ಉತ್ತಮ ಮಾತನ್ನು ಹೇಳುವುದು. ನಂತರ ವಿಷಯವನ್ನು ತೀರ್ಮಾನಿಸಲಾದಾಗ ಅವರು ಅಲ್ಲಾಹನಿಗೆ ನಿಷ್ಠೆಯನ್ನು ತೋರಿಸಿದರೆ ಅದು ಅವರಿಗೆ ಶ್ರೇಷ್ಠವಾಗಿದೆ.
فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِي ٱلۡأَرۡضِ وَتُقَطِّعُوٓاْ أَرۡحَامَكُمۡ [٢٢]
ನೀವು (ಯುದ್ಧದಿಂದ) ವಿಮುಖರಾದರೆ ಬಹುಶಃ ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಲೂ ಮತ್ತು ನಿಮ್ಮ ಕುಟುಂಬ ಸಂಬಂಧಗಳನ್ನು ಕಡಿಯುತ್ತಲೂ ಇರುವಿರಾ?
ಅಂತಹ ಜನರನ್ನು ಅಲ್ಲಾಹು ಶಪಿಸಿದ್ದಾನೆ, ಅವರನ್ನು ಕಿವುಡರನ್ನಾಗಿ ಮಾಡಿದ್ದಾನೆ ಮತ್ತು ಅವರನ್ನು ಕಣ್ಣು ಕಾಣದವರಂತೆ ಮಾಡಿದ್ದಾನೆ.
ಅವರು ಕುರ್ಆನನ್ನು ಮನನ ಮಾಡುವುದಿಲ್ಲವೇ? ಅಥವಾ (ಅವರ) ಹೃದಯಗಳಿಗೆ ಬೀಗ ಜಡಿಯಲಾಗಿದೆಯೇ?
ನಿಶ್ಚಯವಾಗಿಯೂ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಅದರಿಂದ ಮುಖ ತಿರುಗಿಸಿ ನಡೆದವರು ಯಾರೋ ಅವರಿಗೆ ಶೈತಾನನು (ಅವರ ಕೃತ್ಯಗಳನ್ನು) ಸುಂದರವಾಗಿ ತೋರಿಸಿದ್ದಾನೆ ಮತ್ತು ಅವರಿಗೆ (ವ್ಯರ್ಥ ನಿರೀಕ್ಷೆಗಳನ್ನು) ದೀರ್ಘಗೊಳಿಸಿಕೊಟ್ಟಿದ್ದಾನೆ.
ಅದೇಕೆಂದರೆ ಅವರು (ಕಪಟವಿಶ್ವಾಸಿಗಳು) ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ದ್ವೇಷಿಸುವವರೊಡನೆ (ಯಹೂದಿಗಳೊಡನೆ) ಹೇಳಿದರು: “ಕೆಲವು ವಿಷಯಗಳಲ್ಲಿ ನಾವು ನಿಮ್ಮ ಮಾತನ್ನು ಕೇಳುತ್ತೇವೆ.” ಅವರು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.
ಹಾಗಾದರೆ ದೇವದೂತರುಗಳು ಅವರ ಮುಖ ಮತ್ತು ಬೆನ್ನುಗಳಿಗೆ ಥಳಿಸುತ್ತಾ ಅವರನ್ನು ಆತ್ಮವನ್ನು ವಶಪಡಿಸುವಾಗ ಅವರ ಸ್ಥಿತಿ ಹೇಗಿರಬಹುದು?
ಅದೇಕೆಂದರೆ ಅವರು ಅಲ್ಲಾಹನಿಗೆ ಕೋಪ ತರುವ ವಿಷಯಗಳನ್ನು ಅನುಸರಿಸಿದರು ಮತ್ತು ಅವನು ಇಷ್ಟಪಡುವುದನ್ನು ದ್ವೇಷಿಸಿದರು. ಆದ್ದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
ಹೃದಯಗಳಲ್ಲಿ ರೋಗವಿರುವವರು ಅಲ್ಲಾಹು ಅವರ ಆಂತರ್ಯದಲ್ಲಿರುವ ಹಗೆಯನ್ನು ಬಹಿರಂಗಪಡಿಸುವುದಿಲ್ಲವೆಂದು ಭಾವಿಸಿದ್ದಾರೆಯೇ?
ನಾವು ಇಚ್ಛಿಸಿದರೆ ಅವರನ್ನು ನಿಮಗೆ ತೋರಿಸುತ್ತಿದ್ದೆವು. ಆಗ ಅವರ ಲಕ್ಷಣಗಳಿಂದ ನೀವು ಅವರನ್ನು ಗುರುತಿಸುತ್ತಿದ್ದಿರಿ. ಅವರು ಮಾತನಾಡುವ ಶೈಲಿಯಿಂದಲೂ ನಿಮಗೆ ಖಂಡಿತ ಅವರನ್ನು ಗುರುತಿಸಬಹುದು. ಅಲ್ಲಾಹು ನಿಮ್ಮ ಎಲ್ಲಾ ಕರ್ಮಗಳನ್ನು ತಿಳಿಯುತ್ತಾನೆ.
ನಿಶ್ಚಯವಾಗಿಯೂ ನಾವು ನಿಮ್ಮನ್ನು ಪರೀಕ್ಷಿಸುವೆವು. ನಿಮ್ಮಲ್ಲಿರುವ ಹೋರಾಟಗಾರರು ಯಾರು ಮತ್ತು ಸಹಿಷ್ಣುತೆಯುಳ್ಳವರು ಯಾರು ಎಂದು ಗುರುತಿಸಿ ತಿಳಿಯುವ ತನಕ ಮತ್ತು ನಿಮ್ಮ ವಿಚಾರಗಳನ್ನು ಪರೀಕ್ಷಿಸಿ ತಿಳಿಯುವ ತನಕ.
ನಿಶ್ಚಯವಾಗಿಯೂ ಸತ್ಯನಿಷೇಧಿಗಳು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಮತ್ತು ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸಂದೇಶವಾಹಕರಿಗೆ ವಿರುದ್ಧವಾಗಿ ಚಲಿಸಿದವರು ಯಾರೋ ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲಾರರು. ಅಲ್ಲಾಹು ಅವರ ಕರ್ಮಗಳನ್ನು ಸದ್ಯವೇ ನಿಷ್ಫಲಗೊಳಿಸುವನು.
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಆಜ್ಞೆಗಳನ್ನು ಅನುಸರಿಸಿರಿ ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಅನುಸರಿಸಿರಿ. ನಿಮ್ಮ ಕರ್ಮಗಳನ್ನು ನಿಷ್ಫಲಗೊಳಿಸಬೇಡಿ.
ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಹಾಗೂ ನಂತರ ಸತ್ಯನಿಷೇಧಿಗಳಾಗಿಯೇ ಸಾವನ್ನಪ್ಪಿದವರು ಯಾರೋ ಅವರಿಗೆ ಅಲ್ಲಾಹು ಎಂದೂ ಕ್ಷಮಿಸುವುದಿಲ್ಲ.
ಆದ್ದರಿಂದ ನೀವು ಬಲಹೀನರಂತೆ ಶಾಂತಿ-ಸಂಧಾನಕ್ಕೆ ಮುಂದಾಗಬೇಡಿ. ವಾಸ್ತವವಾಗಿ ನೀವೇ ಶ್ರೇಷ್ಠರು. ಅಲ್ಲಾಹು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮ ಕರ್ಮಗಳನ್ನು ಎಂದಿಗೂ ವ್ಯರ್ಥಗೊಳಿಸುವುದಿಲ್ಲ.
ನಿಶ್ಚಯವಾಗಿಯೂ ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಾಗಿದೆ. ನೀವು ವಿಶ್ವಾಸವಿಟ್ಟು ದೇವಭಯದಿಂದ ಜೀವಿಸುವುದಾದರೆ ಅವನು ನಿಮ್ಮ ಪ್ರತಿಫಲವನ್ನು ನಿಮಗೆ ಕೊಡುವನು. ಅವನು ನಿಮ್ಮಿಂದ ನಿಮ್ಮ ಆಸ್ತಿಯನ್ನು ಕೇಳುವುದಿಲ್ಲ.
ಅವನೇನಾದರೂ ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳಿದರೆ ಮತ್ತು ಒತ್ತಾಯಪಡಿಸಿದರೆ, ನೀವು ಜಿಪುಣತನ ತೋರುತ್ತೀರಿ ಮತ್ತು ನಿಮ್ಮ ಆಂತರ್ಯದಲ್ಲಿರುವ ಹಗೆಯನ್ನು ಹೊರಹಾಕುತ್ತೀರಿ.
ತಿಳಿಯಿರಿ! ನಿಮ್ಮನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಕರೆಯಲಾಗುತ್ತದೆ. ಆಗ ನಿಮ್ಮಲ್ಲಿ ಕೆಲವರು ಜಿಪುಣತನ ತೋರುತ್ತಾರೆ. ಯಾರಾದರೂ ಜಿಪುಣತನ ತೋರಿದರೆ ಅವನು ಜಿಪುಣತನ ತೋರುವುದು ಸ್ವಯಂ ಅವನ ವಿರುದ್ಧವೇ ಆಗಿದೆ. ಅಲ್ಲಾಹನಿಗೆ ಯಾರ ಅಗತ್ಯವೂ ಇಲ್ಲ. ಆದರೆ ನಿಮಗೆ ಅಲ್ಲಾಹನ ಅಗತ್ಯವಿದೆ. ನೀವೇನಾದರೂ ತಿರುಗಿ ನಡೆದರೆ ಅವನು ನಿಮಗೆ ಬದಲಿಯಾಗಿ ನಿಮ್ಮ ಹೊರತಾದ ಬೇರೆ ಜನರನ್ನು ತರುವನು. ನಂತರ ಅವರು ನಿಮ್ಮಂತೆ ಆಗಿರಲಾರರು.