عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The private apartments [Al-Hujraat] - Kannada translation

Surah The private apartments [Al-Hujraat] Ayah 18 Location Madanah Number 49

ಸತ್ಯವಿಶ್ವಾಸಿಗಳೇ! ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಿಂತ ಮುಂದೆ ಹೋಗಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

ಸತ್ಯವಿಶ್ವಾಸಿಗಳೇ! ನಿಮ್ಮ ಧ್ವನಿಗಳನ್ನು ಪ್ರವಾದಿಯ ಧ್ವನಿಗಿಂತ ಹೆಚ್ಚಿಸಬೇಡಿ. ನೀವು ಪರಸ್ಪರ ಉಚ್ಛಧ್ವನಿಯಲ್ಲಿ ಮಾತನಾಡುವಂತೆ ಅವರೊಡನೆ ಉಚ್ಛಧ್ವನಿಯಲ್ಲಿ ಮಾತನಾಡಬೇಡಿ. ನೀವು ತಿಳಿಯದೆಯೇ ನಿಮ್ಮ ಕರ್ಮಗಳು ನಿಷ್ಪಲವಾಗದಿರುವುದಕ್ಕಾಗಿ.

ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರ ಬಳಿ ತಮ್ಮ ಧ್ವನಿಗಳನ್ನು ತಗ್ಗಿಸುವವರು ಯಾರೋ ಅವರ ಹೃದಯಗಳನ್ನು ಅಲ್ಲಾಹು ದೇವಭಯಕ್ಕಾಗಿ ಪರೀಕ್ಷಿಸಿದ್ದಾನೆ. ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ.

ನಿಶ್ಚಯವಾಗಿಯೂ ಕೊಠಡಿಗಳ ಹಿಂಭಾಗದಿಂದ ನಿಮ್ಮನ್ನು ಕೂಗಿ ಕರೆಯುವವರು ಯಾರೋ ಅವರಲ್ಲಿ ಹೆಚ್ಚಿನವರು ಬುದ್ಧಿಯಿಲ್ಲದವರಾಗಿದ್ದಾರೆ.

ನೀವು ಅವರ ಬಳಿಗೆ ಹೊರಡುವ ತನಕ ಅವರು ತಾಳ್ಮೆಯಿಂದಿರುತ್ತಿದ್ದರೆ ಅದು ಅವರಿಗೆ ಶ್ರೇಷ್ಠವಾಗಿರುತ್ತಿತ್ತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಸತ್ಯವಿಶ್ವಾಸಿಗಳೇ! ಒಬ್ಬ ದುಷ್ಕರ್ಮಿ ಒಂದು ಮಾಹಿತಿಯೊಂದಿಗೆ ನಿಮ್ಮ ಬಳಿಗೆ ಬಂದರೆ ನೀವು ಅದರ ಬಗ್ಗೆ ಸರಿಯಾಗಿ ತನಿಖೆ ಮಾಡಿರಿ. ನೀವು ಅಜ್ಞಾನದಿಂದ ಯಾರಿಗಾದರೂ ತೊಂದರೆ ಮಾಡಿ ನಂತರ ಅದರ ಕಾರಣದಿಂದ ನೀವು ವಿಷಾದ ಪಡದಿರುವುದಕ್ಕಾಗಿ.

ತಿಳಿಯಿರಿ! ನಿಮ್ಮೊಡನೆ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಮಾತನ್ನು ಕೇಳುತ್ತಿದ್ದರೆ ನೀವು ಕಷ್ಟಪಡುತ್ತಿದ್ದಿರಿ. ಆದರೆ ಅಲ್ಲಾಹು ನಿಮಗೆ ಸತ್ಯವಿಶ್ವಾಸವನ್ನು ಇಷ್ಟವಾಗುವಂತೆ ಮಾಡಿದನು ಮತ್ತು ನಿಮ್ಮ ಹೃದಯಗಳಲ್ಲಿ ಅದನ್ನು ಅಂದಗೊಳಿಸಿಕೊಟ್ಟನು. ನಿಮಗೆ ಸತ್ಯನಿಷೇಧ, ದುಷ್ಕರ್ಮ ಮತ್ತು ಆಜ್ಞೆೋಲ್ಲಂಘನೆಯನ್ನು ಅಸಹ್ಯವಾಗುವಂತೆ ಮಾಡಿದನು. ಅವರೇ ಸನ್ಮಾರ್ಗ ಪಡೆದವರು.

ಅದು ಅಲ್ಲಾಹನ ಕಡೆಯ ಔದಾರ್ಯ ಮತ್ತು ಅನುಗ್ರಹವಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಸತ್ಯವಿಶ್ವಾಸಿಗಳ ಎರಡು ಗುಂಪುಗಳು ಪರಸ್ಪರ ಹೋರಾಟಕ್ಕಿಳಿದರೆ ಅವರ ನಡುವೆ ಸಂಧಾನ ಮಾಡಿರಿ. ನಂತರ ಆ ಎರಡು ಗುಂಪುಗಳಲ್ಲಿ ಒಂದು ಗುಂಪು ಇನ್ನೊಂದು ಗುಂಪಿನ ವಿರುದ್ಧ ಅತಿರೇಕವೆಸಗಿದರೆ ಅತಿರೇಕವೆಸಗಿದ ಗುಂಪಿನ ವಿರುದ್ಧ—ಅವರು ಅಲ್ಲಾಹನ ಆಜ್ಞೆಗೆ ಮರಳುವ ತನಕ ನೀವೆಲ್ಲರೂ ಹೋರಾಡಿರಿ. ಅವರು ಮರಳಿದರೆ ಆ ಎರಡು ಗುಂಪುಗಳ ನಡುವೆ ನ್ಯಾಯಯುತವಾಗಿ ಸಂಧಾನ ಮಾಡಿರಿ. ನ್ಯಾಯದಿಂದ ವರ್ತಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ನ್ಯಾಯಯುತವಾಗಿ ವರ್ತಿಸುವವರನ್ನು ಪ್ರೀತಿಸುತ್ತಾನೆ.

ಸತ್ಯವಿಶ್ವಾಸಿಗಳು ಸಹೋದರರು. ಆದ್ದರಿಂದ ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ಮಾಡಿರಿ. ಅಲ್ಲಾಹನನ್ನು ಭಯಪಡಿರಿ. ನಿಮ್ಮ ಮೇಲೆ ದಯೆ ತೋರಲಾಗುವುದಕ್ಕಾಗಿ.

ಸತ್ಯವಿಶ್ವಾಸಿಗಳೇ! ಪುರುಷರು ಇತರ ಪುರುಷರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ಮಹಿಳೆಯರು ಇತರ ಮಹಿಳೆಯರನ್ನು ತಮಾಷೆ ಮಾಡಬಾರದು. ಅವರು ಇವರಿಗಿಂತ ಶ್ರೇಷ್ಠರಾಗಿರಬಹುದು. ನೀವು ಒಬ್ಬರು ಇನ್ನೊಬ್ಬರ ಕೊರತೆಯನ್ನು ಹೇಳಬೇಡಿ. ಯಾರನ್ನೂ ಅಡ್ಡಹೆಸರಿನಿಂದ ಕರೆಯಬೇಡಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ದುಷ್ಕರ್ಮವು ಬಹಳ ಕೆಟ್ಟ ಹೆಸರಾಗಿದೆ! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರೇ ಅಕ್ರಮಿಗಳು.

ಸತ್ಯವಿಶ್ವಾಸಿಗಳೇ! ಹೆಚ್ಚಿನ ಊಹೆಗಳಿಂದಲೂ ದೂರವಿರಿ. ನಿಶ್ಚಯವಾಗಿಯೂ ಕೆಲವು ಊಹೆಗಳು ಪಾಪವಾಗಿವೆ. ಇನ್ನೊಬ್ಬರ (ಖಾಸಗಿ) ವಿಚಾರಗಳನ್ನು ಕೆದಕಬೇಡಿ. ಇನ್ನೊಬ್ಬರ ಬಗ್ಗೆ ಪರದೂಷಣೆ ಮಾಡಬೇಡಿ. ಸತ್ತು ಮಲಗಿರುವ ತನ್ನ ಸಹೋದರನ ಮಾಂಸವನ್ನು ತಿನ್ನಲು ನಿಮ್ಮಲ್ಲಿ ಯಾರಾದರೂ ಇಷ್ಟಪಡುತ್ತಾರೆಯೇ? ನೀವು ಅದನ್ನು ಅಸಹ್ಯಪಡುತ್ತೀರಿ! ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ.

ಮರುಭೂಮಿ ನಿವಾಸಿಗಳು ಹೇಳಿದರು: “ನಾವು ಸತ್ಯವಿಶ್ವಾಸಿಗಳಾಗಿದ್ದೇವೆ.” ಹೇಳಿರಿ: “ನೀವು ಸತ್ಯವಿಶ್ವಾಸಿಗಳಾಗಿಲ್ಲ, ಬದಲಿಗೆ, ನಾವು ಮುಸ್ಲಿಮರಾಗಿದ್ದೇವೆ ಎಂದು ಹೇಳಿರಿ. ಏಕೆಂದರೆ ಸತ್ಯವಿಶ್ವಾಸವು ನಿಮ್ಮ ಹೃದಯವನ್ನು ಹೊಕ್ಕಿಲ್ಲ. ನೀವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮಗೆ ನಿಮ್ಮ ಕರ್ಮಫಲದಲ್ಲಿ ಏನೂ ಕಡಿಮೆ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”

ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟ ಬಳಿಕ ಸ್ವಲ್ಪವೂ ಸಂಶಯಪಡದವರು ಮತ್ತು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರು ಯಾರೋ ಅವರೇ ಸತ್ಯವಿಶ್ವಾಸಿಗಳು. ಅವರೇ ಸತ್ಯವಂತರು.

ಹೇಳಿರಿ: “ನೀವು ನಿಮ್ಮ ಧಾರ್ಮಿಕತೆಯ ಬಗ್ಗೆ ಅಲ್ಲಾಹನಿಗೆ ತಿಳಿಸುತ್ತಿದ್ದೀರಾ? ವಾಸ್ತವವಾಗಿ, ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ಅಲ್ಲಾಹು ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳನ್ನು ತಿಳಿದವನಾಗಿದ್ದಾನೆ.”

ಅವರು ಇಸ್ಲಾಂ ಸ್ವೀಕರಿಸಿದ್ದು ನಿಮಗೆ ಮಾಡಿದ ಉಪಕಾರವೆಂದು ಅವರು ಪರಿಗಣಿಸುತ್ತಾರೆ. ಹೇಳಿರಿ: “ನೀವು ಇಸ್ಲಾಂ ಸ್ವೀಕರಿಸಿದ್ದು ನನಗೆ ಮಾಡಿದ ಉಪಕಾರವೆಂದು ಪರಿಗಣಿಸಬೇಡಿ. ವಾಸ್ತವವಾಗಿ, ನಿಮಗೆ ಸತ್ಯವಿಶ್ವಾಸಕ್ಕೆ ದಾರಿ ತೋರಿಸಿದ್ದು ಅಲ್ಲಾಹು ನಿಮಗೆ ಮಾಡಿದ ಉಪಕಾರವಾಗಿದೆ. ನೀವು ಸತ್ಯವಂತರಾಗಿದ್ದರೆ.”

ನಿಶ್ಚಯವಾಗಿಯೂ ಅಲ್ಲಾಹು ಭೂಮ್ಯಾಕಾಶಗಳ ಅದೃಶ್ಯಗಳನ್ನು ತಿಳಿಯುತ್ತಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ವೀಕ್ಷಿಸುತ್ತಿದ್ದಾನೆ.