عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Table Spread [Al-Maeda] - Kannada translation

Surah The Table Spread [Al-Maeda] Ayah 120 Location Madanah Number 5

ಓ ಸತ್ಯವಿಶ್ವಾಸಿಗಳೇ! ಕರಾರುಗಳನ್ನು ನೆರವೇರಿಸಿರಿ. ನಿಮಗೆ ಓದಿಕೊಡಲಾಗುವ ಪ್ರಾಣಿಗಳ ಹೊರತಾದ ಮೇಯುವ ಜಾನುವಾರುಗಳನ್ನು ನಿಮಗೆ ಅನುಮತಿಸಲಾಗಿದೆ. ಆದರೆ ನೀವು ಇಹ್ರಾಮ್‍ನಲ್ಲಿರುವಾಗ[1] ಬೇಟೆಯಾಡುವುದಕ್ಕೆ ಅನುಮತಿಯಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವುದನ್ನು ಆದೇಶಿಸುತ್ತಾನೆ.

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಲಾಂಛನಗಳಿಗೆ ಅಗೌರವ ತೋರಬೇಡಿ. ಪವಿತ್ರ ತಿಂಗಳಿಗೆ, ಬಲಿಮೃಗಗಳಿಗೆ, (ಅವುಗಳ ಕೊರಳಲ್ಲಿರುವ) ಪದಕಗಳಿಗೆ, ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯ ಹಾಗೂ ಸಂಪ್ರೀತಿಯನ್ನು ಹುಡುಕುತ್ತಾ ಪವಿತ್ರ ಭವನಕ್ಕೆ ತೀರ್ಥಯಾತ್ರೆ ಮಾಡುವವರಿಗೆ (ಅಗೌರವ ತೋರಬೇಡಿ). ನೀವು ಇಹ್ರಾಮ್‍ನಿಂದ ಮುಕ್ತರಾದರೆ ಬೇಟೆಯಾಡಿರಿ. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದರು ಎಂಬ ಕಾರಣದಿಂದ ಕೆಲವು ಜನರೊಡನೆ ನಿಮಗಿರುವ ದ್ವೇಷವು ಅತಿರೇಕವೆಸಗುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.

ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರಿಗೆ ಕೊಯ್ಯಲಾದವುಗಳನ್ನು ನಿಮಗೆ ನಿಷೇಧಿಸಲಾಗಿದೆ. ಹಾಗೆಯೇ, ಕತ್ತು ಹಿಸುಕಿ ಸಾಯಿಸಲಾದ, ಬಲವಾದ ಪ್ರಹಾರದಿಂದ ಸತ್ತ, ಎತ್ತರದಿಂದ ಬಿದ್ದು ಸತ್ತ, ಕೊಂಬಿನಿಂದ ತಿವಿತಕ್ಕೊಳಗಾಗಿ ಸತ್ತ, ಕಾಡುಪ್ರಾಣಿಗಳು ಹರಿದು ತಿಂದ ಪ್ರಾಣಿಗಳನ್ನು ನಿಮಗೆ ನಿಷೇಧಿಸಲಾಗಿದೆ. ಆದರೆ (ಸಾಯುವ ಮೊದಲೇ) ನೀವು ಕತ್ತು ಕೊಯ್ದ (ದಿಬ್ಹ ಮಾಡಿದ) ಪ್ರಾಣಿಗಳನ್ನು ಇದರಿಂದ ಹೊರತುಪಡಿಸಲಾಗಿದೆ. ಅದೇ ರೀತಿ, ವಿಗ್ರಹಗಳ ಮುಂದೆ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು (ನಿಮಗೆ ನಿಷೇಧಿಸಲಾಗಿದೆ). ಇವೆಲ್ಲವೂ ಕೆಟ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧರ್ಮದ ಬಗ್ಗೆ ಹತಾಶರಾಗಿದ್ದಾರೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. ಹಸಿವು ತಡೆಯಲಾಗದೆ, ನಿಷೇಧಿತ ವಸ್ತುಗಳನ್ನು ತಿನ್ನಲು ನಿರ್ಬಂಧಿತನಾದವನು ಯಾರೋ—ಅವನು ಪಾಪಕ್ಕೆ ವಾಲುವವನಲ್ಲದಿದ್ದರೆ (ಪಾಪ ಮಾಡುವ ಉದ್ದೇಶವನ್ನು ಹೊಂದಿಲ್ಲದಿದ್ದರೆ) ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಅವರಿಗೆ ಏನೆಲ್ಲಾ ಅನುಮತಿಸಲಾಗಿವೆಯೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಎಲ್ಲಾ ಉತ್ತಮ ವಸ್ತುಗಳನ್ನು ನಿಮಗೆ ಅನುಮತಿಸಲಾಗಿದೆ. ಅಲ್ಲಾಹು ನಿಮಗೆ ಕಲಿಸಿಕೊಟ್ಟ ರೀತಿಯಲ್ಲಿ ನೀವು ತರಬೇತಿ ನೀಡಿದ ಬೇಟೆ ಪ್ರಾಣಿಗಳು, ನೀವು ತರಬೇತಿ ನೀಡಿದಂತೆ ಬೇಟೆಯನ್ನು ಹಿಡಿದು ತಂದರೆ ಅವುಗಳನ್ನು ತಿನ್ನಿರಿ. (ಅವುಗಳನ್ನು ಬೇಟೆಗೆ ಕಳುಹಿಸುವಾಗ) ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.

ಇಂದು ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು ಅನುಮತಿಸಲಾಗಿದೆ. ಗ್ರಂಥದವರು ತಯಾರಿಸಿದ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ ಮತ್ತು ನೀವು ತಯಾರಿಸಿದ ಆಹಾರವು ಅವರಿಗೆ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿಗಳಲ್ಲಿ ಸೇರಿದ ಪರಿಶುದ್ಧ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ಅದೇ ರೀತಿ ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ ಸೇರಿದ ಪರಿಶುದ್ಧ ಮಹಿಳೆಯರು—ನೀವು ಅವರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ನೀಡಿದರೆ—ನಿಮಗೆ ಧರ್ಮಸಮ್ಮತವಾಗಿದ್ದಾರೆ. ಆದರೆ ನೀವು ಅವರನ್ನು ವಿವಾಹವಾಗಲು ಬಯಸುವವರಾಗಿರಬೇಕು. ಅವರೊಡನೆ ವ್ಯಭಿಚಾರ ಮಾಡಲು ಅಥವಾ ರಹಸ್ಯವಾಗಿ ಪ್ರೇಮಿಸಲು ಬಯಸುವವರಾಗಿರಬಾರದು. ಯಾರು ಸತ್ಯವಿಶ್ವಾಸವನ್ನು ತಿರಸ್ಕರಿಸುತ್ತಾನೋ ಅವನ ಕರ್ಮವು ನಿಷ್ಫಲವಾಗುವುದು. ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರಿಕೊಳ್ಳುವನು.

ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್‍ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ. ನೀವು ದೊಡ್ಡ ಅಶುದ್ಧಿಯಲ್ಲಿದ್ದರೆ (ಸ್ನಾನ ಮಾಡಿ) ಶುದ್ಧರಾಗಿರಿ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್ ಮಾಡಿ, ಮುಖ ಮತ್ತು ಕೈಗಳನ್ನು ಸವರಿರಿ. ಅಲ್ಲಾಹು ನಿಮಗೆ ತೊಂದರೆ ಮಾಡಲು ಬಯಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ಪೂರ್ತಿ ಮಾಡಿಕೊಡಲು ಬಯಸುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ.

“ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ನೀವು ಹೇಳಿದ ಸಂದರ್ಭ ಅಲ್ಲಾಹು ನಿಮಗೆ ನೀಡಿರುವ ಅನುಗ್ರಹವನ್ನು ಮತ್ತು ಅವನು ನಿಮ್ಮಿಂದ ಬಲಿಷ್ಠ ಕರಾರು ಪಡೆದಿರುವುದನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗಾಗಿ ಸದಾ ದೃಢವಾಗಿ ನಿಂತು ನ್ಯಾಯ-ನಿಷ್ಠೆಗೆ ಸಾಕ್ಷಿಯಾಗಿರಿ. ಕೆಲವು ಜನರೊಡನೆ ನಿಮಗಿರುವ ದ್ವೇಷವು ನ್ಯಾಯಯುತವಾಗಿ ವರ್ತಿಸದಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯಯುತವಾಗಿ ನಡೆದುಕೊಳ್ಳಿ. ಅದು ದೇವಭಯಕ್ಕೆ ಅತ್ಯಂತ ಹತ್ತಿರದಲ್ಲಿದೆ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಕ್ಷಮೆ ಮತ್ತು ಮಹಾ ಪ್ರತಿಫಲದ ವಾಗ್ದಾನ ಮಾಡಿದ್ದಾನೆ.

ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರೇ ನರಕವಾಸಿಗಳು.

ಓ ಸತ್ಯವಿಶ್ವಾಸಿಗಳೇ! ಜನರು ನಿಮ್ಮ ವಿರುದ್ಧ ತಮ್ಮ ಕೈಗಳನ್ನು ಚಾಚಲು ಮುಂದಾದ ಸಂದರ್ಭ, ಅವರ ಕೈಗಳನ್ನು ನಿಮ್ಮಿಂದ ತಡೆಯುವ ಮೂಲಕ ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.

ಅಲ್ಲಾಹು ಇಸ್ರಾಯೇಲ್ ಮಕ್ಕಳಿಂದ ಈಗಾಗಲೇ ಕರಾರನ್ನು ಪಡೆದಿದ್ದಾನೆ. ನಾವು ಅವರಲ್ಲಿ ಹನ್ನೆರಡು ಜನರನ್ನು ಮುಖಂಡರನ್ನಾಗಿ ಮಾಡಿ ಕಳುಹಿಸಿದೆವು. ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮ್ಮ ಜೊತೆಯಲ್ಲಿದ್ದೇನೆ. ನೀವು ನಮಾಝ್ ಸಂಸ್ಥಾಪಿಸಿದರೆ, ಝಕಾತ್ ನೀಡಿದರೆ, ನನ್ನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟರೆ, ಅವರಿಗೆ ಬೆಂಬಲ ನೀಡಿದರೆ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡಿದರೆ, ನಿಶ್ಚಯವಾಗಿಯೂ ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸುವೆನು. ಆದರೆ ಅದರ ಬಳಿಕವೂ ನಿಮ್ಮಲ್ಲಿ ಸತ್ಯವನ್ನು ನಿಷೇಧಿಸುವವನು ನೇರ ಮಾರ್ಗದಿಂದ ತಪ್ಪಿ ಹೋಗಿದ್ದಾನೆ.”

ಅವರು ಕರಾರು ಉಲ್ಲಂಘಿಸಿದ ಕಾರಣ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ.[1] ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತೇ ಬಿಟ್ಟರು. ಅವರು ಮಾಡುವ ವಂಚನೆಯನ್ನು ನೀವು ಗಮನಿಸುತ್ತಲೇ ಇರುವಿರಿ—ಅವರಲ್ಲಿ ಕೆಲವರ ಹೊರತು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪನ್ನು) ಕಡೆಗಣಿಸಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.

“ನಾವು ಕ್ರೈಸ್ತರು” ಎಂದು ಹೇಳಿದವರಿಂದಲೂ ನಾವು ಕರಾರನ್ನು ಪಡೆದಿದ್ದೇವೆ. ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತುಬಿಟ್ಟರು. ಆದ್ದರಿಂದ ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟುಮಾಡಿದೆವು. ಅವರು ಮಾಡಿದ ದುಷ್ಕರ್ಮಗಳ ಬಗ್ಗೆ ಅಲ್ಲಾಹು ಸದ್ಯವೇ ಅವರಿಗೆ ತಿಳಿಸಿಕೊಡುವನು.

ಓ ಗ್ರಂಥದವರೇ! ನೀವು ಗ್ರಂಥದಿಂದ ಮುಚ್ಚಿಡುವ ಅನೇಕ ವಿಷಯಗಳನ್ನು ಬಹಿರಂಗಪಡಿಸುತ್ತಾ ಮತ್ತು ಹೆಚ್ಚಿನದ್ದನ್ನೂ ಕ್ಷಮಿಸುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. ನಿಮಗೆ ಅಲ್ಲಾಹನಿಂದ ಒಂದು ಬೆಳಕು ಮತ್ತು ಸ್ಪಷ್ಟ ಗ್ರಂಥವು ಬಂದಿದೆ.

ತನ್ನ ಸಂಪ್ರೀತಿಯನ್ನು ಹಿಂಬಾಲಿಸುವವರಿಗೆ ಅಲ್ಲಾಹು ಅದರ ಮೂಲಕ ಶಾಂತಿಯ ಮಾರ್ಗಗಳನ್ನು ತೋರಿಸಿಕೊಡುವನು. ಅವನು ತನ್ನ ಅಪ್ಪಣೆಯಿಂದ ಅವರನ್ನು ಅಂಧಕಾರಗಳಿಂದ ಬೆಳಕಿಗೆ ಹೊರತರುವನು ಮತ್ತು ಅವರನ್ನು ನೇರಮಾರ್ಗಕ್ಕೆ ಮುನ್ನಡೆಸುವನು.

“ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಹೇಳಿರಿ: “ಅಲ್ಲಾಹು ಮರ್ಯಮರ ಮಗ ಮಸೀಹರನ್ನು, ಅವರ ತಾಯಿಯನ್ನು ಮತ್ತು ಭೂಮಿಯಲ್ಲಿರುವ ಸರ್ವ ಮಾನವರನ್ನು ನಾಶ ಮಾಡಲು ಬಯಸಿದರೆ ಅವನನ್ನು ತಡೆಯಲು ಯಾರಿಗೆ ಸಾಧ್ಯವಿದೆ?” ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಯಹೂದಿಗಳು ಮತ್ತು ಕ್ರೈಸ್ತರು ಹೇಳುತ್ತಾರೆ: “ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿಪಾತ್ರರು.”[1] ಹೇಳಿರಿ: “ಹಾಗಾದರೆ, ನೀವು ತಪ್ಪು ಮಾಡಿದರೆ ಅವನು ನಿಮ್ಮನ್ನು ಶಿಕ್ಷಿಸುವುದೇಕೆ?” ಅಲ್ಲ, ವಾಸ್ತವವಾಗಿ ನೀವೆಲ್ಲರೂ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ನೀವೆಲ್ಲರೂ ಅವನ ಬಳಿಗೇ ಮರಳಿ ಹೋಗಬೇಕಾಗಿದೆ.

ಓ ಗ್ರಂಥದವರೇ! ಸಂದೇಶವಾಹಕರ ಆಗಮನವು ನಿಂತುಹೋದ ಬಳಿಕ ಇಗೋ ಸತ್ಯವನ್ನು ವಿವರಿಸಿಕೊಡುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. “ಒಬ್ಬ ಸುವಾರ್ತೆ ನೀಡುವವನು ಮತ್ತು ಮುನ್ನೆಚ್ಚರಿಕೆ ನೀಡುವವನು ನಮ್ಮ ಬಳಿಗೆ ಬರಲಿಲ್ಲ” ಎಂದು ನೀವು ಹೇಳದಿರುವುದಕ್ಕಾಗಿ. ಇಗೋ ನಿಮ್ಮ ಬಳಿಗೆ ಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪ್ರವಾದಿಯು ಬಂದಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ಅಲ್ಲಾಹು ನಿಮ್ಮ ಬಳಿಗೆ ಪ್ರವಾದಿಗಳನ್ನು ಕಳುಹಿಸಿದಾಗ, ನಿಮ್ಮನ್ನು ಅರಸರನ್ನಾಗಿ ಮಾಡಿದಾಗ ಮತ್ತು ಸರ್ವಲೋಕದವರಲ್ಲಿ ಯಾರಿಗೂ ನೀಡದ ಅನೇಕ ಸವಲತ್ತುಗಳನ್ನು ನೀಡಿ ನಿಮ್ಮನ್ನು ಹರಸಿದಾಗ ಅಲ್ಲಾಹು ನಿಮಗೆ ಮಾಡಿದ ಉಪಕಾರವನ್ನು ಸ್ಮರಿಸಿರಿ.

ಓ ನನ್ನ ಜನರೇ! ಅಲ್ಲಾಹು ನಿಮಗೆ ಲಿಖಿತಗೊಳಿಸಿದ ಪವಿತ್ರ ಭೂಮಿಯನ್ನು ಪ್ರವೇಶಿಸಿರಿ. ನೀವು ಬೆನ್ನು ತಿರುಗಿಸಿ ಹಿಂದಿರುಗಬೇಡಿ. ಹಾಗೆ ಮಾಡಿದರೆ ನೀವು ನಷ್ಟಹೊಂದಿದವರಾಗಿ ಬಿಡುವಿರಿ.”[1]

ಅವರು ಹೇಳಿದರು: “ಓ ಮೂಸಾ! ಅಲ್ಲಿ ಮಹಾ ಪರಾಕ್ರಮಿಗಳಾದ ಜನರಿದ್ದಾರೆ. ಅವರು ಅಲ್ಲಿಂದ ಹೊರಟುಹೋಗುವ ತನಕ ನಾವು ಅದನ್ನು ಪ್ರವೇಶಿಸುವುದಿಲ್ಲ. ಅವರೇನಾದರೂ ಹೊರಟುಬಿಟ್ಟರೆ ನಾವು ಖಂಡಿತ ಅದನ್ನು ಪ್ರವೇಶಿಸುವೆವು.”

ದೇವಭಯವುಳ್ಳ ಜನರಲ್ಲಿ ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾದ ಇಬ್ಬರು ಹೇಳಿದರು: “ನೀವು ಹೆಬ್ಬಾಗಿಲ ಮೂಲಕ ಅದರೊಳಗೆ ಪ್ರವೇಶಿಸಿರಿ. ನೀವು ಪ್ರವೇಶಿಸಿದರೆ, ನಿಶ್ಚಯವಾಗಿಯೂ ನೀವು ಜಯಶಾಲಿಗಳಾಗುವಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಭರವಸೆಯಿಡಿರಿ.”

ಅವರು ಹೇಳಿದರು: “ಓ ಮೂಸಾ! ಅವರು ಅಲ್ಲಿರುವ ತನಕ ನಾವು ಅದನ್ನು ಪ್ರವೇಶಿಸುವುದೇ ಇಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪರಿಪಾಲಕ (ಅಲ್ಲಾಹು) ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ.”

ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಾನು ಮತ್ತು ನನ್ನ ಸಹೋದರ ಮಾತ್ರ ನನ್ನ ನಿಯಂತ್ರಣದಲ್ಲಿದ್ದಾರೆ. ಆದ್ದರಿಂದ ನಮ್ಮನ್ನು ಮತ್ತು ವಿಧೇಯತೆಯಿಲ್ಲದ ಈ ಜನರನ್ನು ಪರಸ್ಪರ ಬೇರ್ಪಡಿಸು.”

ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಲ್ವತ್ತು ವರ್ಷಗಳ ಕಾಲ ಆ ಭೂಮಿಯನ್ನು ಅವರಿಗೆ ನಿಷೇಧಿಸಲಾಗಿದೆ. (ಅಲ್ಲಿಯ ತನಕ) ಅವರು ಭೂಮಿಯಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವರು. ವಿಧೇಯತೆಯಿಲ್ಲದ ಆ ಜನರ ಬಗ್ಗೆ ನೀವು ವ್ಯಥೆಪಡಬೇಡಿ.”

ಅವರಿಗೆ ಆದಮರ ಇಬ್ಬರು ಮಕ್ಕಳ ಸಮಾಚಾರವನ್ನು ಸತ್ಯಸಹಿತ ಓದಿ ಕೊಡಿ. ಅವರಿಬ್ಬರು ಬಲಿ ಅರ್ಪಿಸಿದ ಸಂದರ್ಭ. ಆಗ ಅವರಲ್ಲಿ ಒಬ್ಬನ ಬಲಿ ಸ್ವೀಕಾರವಾದರೆ ಇನ್ನೊಬ್ಬನದ್ದು ಸ್ವೀಕಾರವಾಗಲಿಲ್ಲ. ಅವನು (ಬಲಿ ಸ್ವೀಕಾರವಾಗದವನು) ಹೇಳಿದನು: “ನಾನು ನಿನ್ನನ್ನು ಖಂಡಿತ ಕೊಲ್ಲುತ್ತೇನೆ.” ಇನ್ನೊಬ್ಬನು ಹೇಳಿದನು: “ಅಲ್ಲಾಹು ದೇವಭಯವುಳ್ಳವರಿಂದ ಮಾತ್ರ ಸ್ವೀಕರಿಸುತ್ತಾನೆ.

ನನ್ನನ್ನು ಕೊಲ್ಲಲು ನೀನು ನಿನ್ನ ಕೈಯನ್ನು ನನ್ನ ಕಡೆಗೆ ಚಾಚಿದರೂ ನಾನು ನಿನ್ನನ್ನು ಕೊಲ್ಲಲು ನನ್ನ ಕೈಯನ್ನು ನಿನ್ನ ಕಡೆಗೆ ಚಾಚುವುದಿಲ್ಲ. ನಿಶ್ಚಯವಾಗಿಯೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ.

ನೀನು ನನ್ನ ಪಾಪ ಮತ್ತು ನಿನ್ನ ಪಾಪದೊಂದಿಗೆ ಹಿಂದಿರುಗಿ ನರಕವಾಸಿಗಳಲ್ಲಿ ಸೇರಬೇಕೆಂದು ನಾನು ಬಯಸುತ್ತೇನೆ. ಅದು ಅಕ್ರಮಿಗಳಿಗೆ ದೊರೆಯುವ ಪ್ರತಿಫಲವಾಗಿದೆ.”

ಆಗ ಅವನ ಸಹೋದರನನ್ನು ಕೊಲ್ಲುವಂತೆ ಅವನ ಮನಸ್ಸು ಅವನನ್ನು ಪ್ರೇರೇಪಿಸಿತು. ಅವನು ಅವನನ್ನು ಕೊಂದನು ಮತ್ತು ನಷ್ಟಹೊಂದಿದವರಲ್ಲಿ ಸೇರಿದವನಾದನು.

ಆಗ ಅವನ ಸಹೋದರನ ಕಳೇಬರವನ್ನು ದಫನ ಮಾಡುವುದು ಹೇಗೆಂದು ಅವನಿಗೆ ತೋರಿಸಿಕೊಡಲು ಅಲ್ಲಾಹು ಭೂಮಿಯನ್ನು ಅಗೆಯುವ ಒಂದು ಕಾಗೆಯನ್ನು ಕಳುಹಿಸಿದನು. ಅವನು ಹೇಳಿದನು: “ಅಯ್ಯೋ ನನ್ನ ದುರ್ಗತಿಯೇ! ಈ ಕಾಗೆಯಂತೆ ನನ್ನ ಸಹೋದರನ ಕಳೇಬರವನ್ನು ದಫನ ಮಾಡಲು ಕೂಡ ನನಗೆ ಸಾಧ್ಯವಾಗಲಿಲ್ಲವೇ?” ಹೀಗೆ ಅವನು ವಿಷಾದಪಡುವವರಲ್ಲಿ ಸೇರಿದವನಾದನು.

ಇದೇ ಕಾರಣದಿಂದ, ನಾವು ಇಸ್ರಾಯೇಲ್ ಮಕ್ಕಳಿಗೆ ಹೀಗೆ ವಿಧಿಸಿದೆವು: ಕೊಲೆಗೆ ಪ್ರತೀಕಾರವಾಗಿ ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಿದ್ದಕ್ಕಾಗಿ ಹೊರತು ಒಬ್ಬ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆ ಮತ್ತು ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಕುಲದ ಜೀವವನ್ನು ಉಳಿಸಿದ್ದಕ್ಕೆ ಸಮಾನವಾಗಿದೆ. ನಮ್ಮ ಸಂದೇಶವಾಹಕರು ಈಗಾಗಲೇ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದಾರೆ. ನಂತರ ಆ ಬಳಿಕವೂ ಅವರಲ್ಲಿ ಅನೇಕ ಮಂದಿ ಭೂಮಿಯಲ್ಲಿ ಅತಿರೇಕವೆಸಗುತ್ತಲೇ ಇದ್ದಾರೆ.

ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಹೋರಾಡುವವರು ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಯತ್ನಿಸುವವರು ಯಾರೋ—ಅವರಿಗೆ ನೀಡಲಾಗುವ ಪ್ರತಿಫಲವು ಅವರನ್ನು ಸಾಯಿಸುವುದು, ಅಥವಾ ಶಿಲುಬೆಗೇರಿಸುವುದು, ಅಥವಾ ಅವರ ಕೈಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸುವುದು ಅಥವಾ ಅವರನ್ನು ಗಡಿಪಾರು ಮಾಡುವುದು ಮಾತ್ರವಾಗಿದೆ. ಅದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಪರಲೋಕದಲ್ಲಿ ಅವರಿಗೆ ಕಠೋರ ಶಿಕ್ಷೆಯಿದೆ.

ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗುವುದಕ್ಕೆ ಮೊದಲು ಪಶ್ಚಾತ್ತಾಪಪಟ್ಟು ಮರಳಿದವರು ಇದರಿಂದ ಹೊರತಾಗಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಅವನಿಗೆ ಸಮೀಪಗೊಳಿಸುವ ವಸೀಲ (ಮಾಧ್ಯಮ)ವನ್ನು ಹುಡುಕಿರಿ;[1] ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

ನಿಶ್ಚಯವಾಗಿಯೂ ಸತ್ಯನಿಷೇಧಿಗಳ ಬಳಿ ಭೂಮಿಯಲ್ಲಿರುವ ಎಲ್ಲಾ ವಸ್ತುಗಳೂ ಮತ್ತು ಅದರಷ್ಟೇ ಬೇರೆಯೂ ಇದ್ದು, ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಅವರು ಅದನ್ನು ಪರಿಹಾರವಾಗಿ ನೀಡಿದರೆ, ಅವರಿಂದ ಅದನ್ನು ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.

ಅವರು ನರಕದಿಂದ ಹೊರಬರಲು ಬಯಸುವರು. ಆದರೆ ಅದರಿಂದ ಹೊರಬರಲು ಅವರಿಗೆ ಸಾಧ್ಯವಿಲ್ಲ. ಅವರಿಗೆ ಶಾಶ್ವತ ಶಿಕ್ಷೆಯಿದೆ.

ಕಳ್ಳತನ ಮಾಡುವವನ ಮತ್ತು ಕಳ್ಳತನ ಮಾಡುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಮಾಡಿದ ದುಷ್ಕರ್ಮಕ್ಕೆ ಪ್ರತಿಫಲವಾಗಿದೆ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಆದರೆ ಅಕ್ರಮವೆಸಗಿದ ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಳ್ಳುವವರು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಓ ಸಂದೇಶವಾಹಕರೇ! ನಾವು ಸತ್ಯವಿಶ್ವಾಸಿಗಳೆಂದು ಬಾಯಿಂದ ಹೇಳುವವರು—ಆದರೆ ಹೃದಯಗಳಲ್ಲಿ ವಿಶ್ವಾಸವಿಲ್ಲದವರು (ಕಪಟವಿಶ್ವಾಸಿಗಳು) ಮತ್ತು ಸುಳ್ಳನ್ನು ಕಿವಿಗೊಟ್ಟು ಕೇಳುವ, ನಿಮ್ಮ ಬಳಿಗೆ ಬರದ ಜನರ ಮಾತುಗಳನ್ನು ಕಿವಿಗೊಟ್ಟು ಕೇಳುವ, ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುವ ಮತ್ತು ನಿಮಗೆ ಪ್ರವಾದಿಯ ಬಳಿ ಇದೇ ತೀರ್ಪು ಸಿಕ್ಕಿದರೆ ಸ್ವೀಕರಿಸಿರಿ, ಇಲ್ಲದಿದ್ದರೆ ಜಾಗರೂಕರಾಗಿರಿ ಎಂದು ಹೇಳುವ ಯಹೂದಿಗಳು ಸತ್ಯನಿಷೇಧದಲ್ಲಿ ತ್ವರೆ ಮಾಡುವುದನ್ನು ಕಂಡು ನೀವು ಬೇಸರಪಡಬೇಡಿ. ಅಲ್ಲಾಹು ಯಾರನ್ನು ನಾಶ ಮಾಡಲು ಬಯಸುತ್ತಾನೋ—ಅವನನ್ನು ಅಲ್ಲಾಹನಿಂದ ರಕ್ಷಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹು ಅವರ ಹೃದಯಗಳನ್ನು ಶುದ್ಧೀಕರಿಸಲು ಬಯಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅವಮಾನವಿದೆ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆ.

ಅವರು ಸುಳ್ಳನ್ನು ಕಿವಿಗೊಟ್ಟು ಕೇಳುವವರು ಮತ್ತು ನಿಷಿದ್ಧ ಧನವನ್ನು ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ (ತೀರ್ಪಿಗಾಗಿ) ಬಂದರೆ ನೀವು ಅವರ ನಡುವೆ ತೀರ್ಪು ನೀಡಿರಿ ಅಥವಾ ಅವರನ್ನು ನಿರ್ಲಕ್ಷಿಸಿರಿ. ನೀವು ಅವರನ್ನು ನಿರ್ಲಕ್ಷಿಸಿದರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಇನ್ನು ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಿರಿ. ನಿಶ್ಚಯವಾಗಿಯೂ ನ್ಯಾಯಯುತವಾಗಿ ವರ್ತಿಸುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.

ಆದರೆ ಅವರ ಬಳಿ ತೌರಾತ್ ಇದ್ದು ಅದರಲ್ಲಿ ಅಲ್ಲಾಹನ ತೀರ್ಪು ಇರುವಾಗ ಅವರು (ಅದನ್ನು ಬಿಟ್ಟು) ತೀರ್ಪಿಗಾಗಿ ನಿಮ್ಮ ಬಳಿಗೆ ಬರುವುದು ಹೇಗೆ? ನಂತರ ಅದರ ಬಳಿಕವೂ ಅವರು ವಿಮುಖರಾಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ.

ನಿಶ್ಚಯವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿದೆ. (ಅಲ್ಲಾಹನಿಗೆ) ಶರಣಾದ ಪ್ರವಾದಿಗಳು, ದೇವನಿಷ್ಠರು ಮತ್ತು ವಿದ್ವಾಂಸರು ಅದರಲ್ಲಿರುವಂತೆ ಯಹೂದಿಗಳ ನಡುವೆ ತೀರ್ಪು ನೀಡುತ್ತಿದ್ದರು. ಏಕೆಂದರೆ ಅಲ್ಲಾಹನ ಗ್ರಂಥದ ಸಂರಕ್ಷಣೆಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. ಆದ್ದರಿಂದ ನೀವು ಜನರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ನನ್ನ ವಚನಗಳನ್ನು ಕೀಳು ದರಕ್ಕೆ ಮಾರಾಟ ಮಾಡಬೇಡಿ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಸತ್ಯನಿಷೇಧಿಗಳು.

ನಾವು ಅವರಿಗೆ ಅದರಲ್ಲಿ (ತೌರಾತ್‍ನಲ್ಲಿ) ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಹಲ್ಲಿಗೆ ಹಲ್ಲು ಮತ್ತು ಗಾಯಗಳಿಗೆ ಪ್ರತೀಕಾರ ಪಡೆಯಬೇಕೆಂದು ಆದೇಶಿಸಿದ್ದೇವೆ. ಯಾರಾದರೂ (ಪ್ರತೀಕಾರ ಪಡೆಯದೆ) ಕ್ಷಮಿಸಿದರೆ, ಅದು ಅವನಿಗೆ ಪರಿಹಾರವಾಗಿದೆ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳು.

ನಂತರ ಅವರ ಹಿಂದೆಯೇ ನಾವು ಮರ್ಯಮರ ಮಗ ಈಸಾರನ್ನು—ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವುದಕ್ಕಾಗಿ ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿತ್ತು. ಅದು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವ ಗ್ರಂಥವಾಗಿದೆ ಮತ್ತು ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಹಿತೋಪದೇಶವಾಗಿದೆ.

ಇಂಜೀಲ್‍ನ ಅನುಯಾಯಿಗಳು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ತೀರ್ಪು ನೀಡಲಿ.[1] ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ದುಷ್ಕರ್ಮಿಗಳು.

(ಪ್ರವಾದಿಯವರೇ) ನಿಮಗೂ ನಾವು ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಆದ್ದರಿಂದ ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ನೀವು ಅವರ ನಡುವೆ ತೀರ್ಪು ನೀಡಿರಿ. ನಿಮಗೆ ಅವತೀರ್ಣವಾದ ಸತ್ಯವನ್ನು ತೊರೆದು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದ್ದೇವೆ. ಅಲ್ಲಾಹು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ನಿಮಗೆ ಏನು ನೀಡಿದ್ದಾನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸಲು (ಇಚ್ಛಿಸುತ್ತಾನೆ). ಆದ್ದರಿಂದ ನೀವು ಸತ್ಕರ್ಮಗಳಲ್ಲಿ ತ್ವರೆಯಿಂದ ಮುನ್ನುಗ್ಗಿರಿ. ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳಬೇಕಾಗಿದೆ. ಆಗ ನೀವು ಭಿನ್ನಮತ ತಳೆದ ವಿಷಯಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.

ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಅವರ ನಡುವೆ ತೀರ್ಪು ನೀಡಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ತಪ್ಪಿಸಿಬಿಡುವ ಬಗ್ಗೆ ಜಾಗರೂಕರಾಗಿರಿ. ಅವರೇನಾದರೂ ವಿಮುಖರಾದರೆ, ತಿಳಿಯಿರಿ! ಅವರ ಕೆಲವು ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಶಿಕ್ಷಿಸಲು ಬಯಸುತ್ತಿದ್ದಾನೆ. ನಿಶ್ಚಯವಾಗಿಯೂ ಮನುಷ್ಯರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.

ಅವರು ಅಜ್ಞಾನಕಾಲದ ತೀರ್ಪನ್ನು ಬಯಸುತ್ತಿದ್ದಾರೆಯೇ? ದೃಢವಿಶ್ವಾಸವಿಡುವ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರು?

ಓ ಸತ್ಯವಿಶ್ವಾಸಿಗಳೇ! ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ನಿಮ್ಮಲ್ಲಿ ಯಾರು ಅವರನ್ನು ಆಪ್ತಮಿತ್ರರಾಗಿ ಸ್ವೀಕರಿಸುತ್ತಾನೋ ಅವನು ಅವರಲ್ಲಿ ಸೇರುತ್ತಾನೆ. ನಿಶ್ಚಯವಾಗಿಯೂ ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗ ತೋರಿಸುವುದಿಲ್ಲ.

ಹೃದಯಗಳಲ್ಲಿ ರೋಗವಿರುವವರು (ಕಪಟವಿಶ್ವಾಸಿಗಳು) ಅವರೊಡನೆ ಸೇರಲು ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಹೇಳುತ್ತಾರೆ: “ನಮಗೇನಾದರೂ ಆಪತ್ತು ಸಂಭವಿಸಬಹುದೆಂದು ನಮಗೆ ಭಯವಾಗುತ್ತಿದೆ.” ಆದರೆ ಅಲ್ಲಾಹು ನಿಮಗೆ ಗೆಲುವನ್ನು ಅಥವಾ ತನ್ನ ಕಡೆಯ ಏನಾದರೂ ಆದೇಶವನ್ನು ನೀಡಬಹುದು. ಆಗ ಅವರು ತಮ್ಮ ಮನಸ್ಸಿನಲ್ಲಿ ರಹಸ್ಯವಾಗಿಟ್ಟ ವಿಚಾರಗಳನ್ನು ನೆನೆದು ವಿಷಾದಪಡುವರು.

ಸತ್ಯವಿಶ್ವಾಸಿಗಳು ಹೇಳುವರು: “ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಎಂದು ಅಲ್ಲಾಹನ ಮೇಲೆ ಬಲವಾಗಿ ಆಣೆ ಮಾಡಿದವರು ಇವರೇ ಏನು?” ಅವರ ಕರ್ಮಗಳು ನಿಷ್ಫಲವಾದವು ಮತ್ತು ಅವರು ನಷ್ಟಹೊಂದಿದವರಾಗಿ ಬಿಟ್ಟರು.

ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲಿ ಯಾರಾದರೂ ಧರ್ಮಪರಿತ್ಯಾಗ ಮಾಡಿದರೆ, ಸದ್ಯವೇ ಅಲ್ಲಾಹು (ನಿಮ್ಮ ಬದಲಿಗೆ) ಬೇರೆ ಜನರನ್ನು ತರುವನು. ಅವನು ಅವರನ್ನು ಪ್ರೀತಿಸುವನು ಮತ್ತು ಅವರು ಅವನನ್ನು ಪ್ರೀತಿಸುವರು. ಅವರು ಸತ್ಯವಿಶ್ವಾಸಿಗಳ ಮುಂದೆ ದೈನ್ಯತೆ ಮತ್ತು ಸತ್ಯನಿಷೇಧಿಗಳ ಮುಂದೆ ಪೌರುಷವನ್ನು ಪ್ರಕಟಿಸುವರು. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವರು ಮತ್ತು ಆಕ್ಷೇಪಿಸುವವನ ಯಾವುದೇ ಆಕ್ಷೇಪಕ್ಕೂ ಭಯಪಡಲಾರರು. ಅದು ಅಲ್ಲಾಹನ ಔದಾರ್ಯವಾಗಿದೆ. ಅವನು ಇಚ್ಛಿಸುವವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.[1]

ಅಲ್ಲಾಹು, ಅವನ ಸಂದೇಶವಾಹಕರು ಮತ್ತು ನಮಾಝ್ ಸಂಸ್ಥಾಪಿಸುವ, ಝಕಾತ್ ನೀಡುವ ಹಾಗೂ ಭಯಭಕ್ತಿಯಿಂದ ತಲೆಬಾಗುವ ಸತ್ಯವಿಶ್ವಾಸಿಗಳೇ ನಿಮ್ಮ ಆಪ್ತಮಿತ್ರರು.

ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಯಾರು ಆಪ್ತಮಿತ್ರರಾಗಿ ಸ್ವೀಕರಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹನ ಪಕ್ಷದವರೇ ವಿಜಯಿಗಳು.

ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ (ಯಹೂದಿಗಳು ಮತ್ತು ಕ್ರೈಸ್ತರಲ್ಲಿ) ನಿಮ್ಮ ಧರ್ಮವನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸಿದವರನ್ನು ಮತ್ತು ಸತ್ಯನಿಷೇಧಿಗಳನ್ನು ನೀವು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.

ನೀವು ನಮಾಝ್‍ಗಾಗಿ ಕರೆ ನೀಡಿದರೆ, ಅವರು ಅದನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ ಅವರು ಬುದ್ಧಿಯಿಲ್ಲದ ಜನರಾಗಿದ್ದಾರೆ.

ಹೇಳಿರಿ: “ಓ ಗ್ರಂಥದವರೇ! ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಮಗಿಂತ ಮೊದಲು ಅವತೀರ್ಣವಾದ ಗ್ರಂಥದಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಕಾರಣದಿಂದ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿರುವ ಕಾರಣದಿಂದ ನೀವು ನಮ್ಮನ್ನು ದ್ವೇಷಿಸುತ್ತೀರಾ?”

ಹೇಳಿರಿ: “ಅಲ್ಲಾಹನ ಬಳಿ ಅದಕ್ಕಿಂತಲೂ ಕೆಟ್ಟ ಪ್ರತಿಫಲವನ್ನು ಹೊಂದಿರುವವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹು ಶಪಿಸಿದನೋ, ಯಾರ ಮೇಲೆ ಅವನು ಸಿಟ್ಟಾದನೋ, ಯಾವ ಗುಂಪಿಗೆ ಸೇರಿದವರನ್ನು ಅವನು ಕಪಿಗಳನ್ನಾಗಿ ಮತ್ತು ಹಂದಿಗಳನ್ನಾಗಿ ಮಾಡಿದನೋ, ಯಾರು ಮಿಥ್ಯ ದೇವರುಗಳನ್ನು ಆರಾಧಿಸಿದರೋ, ಅವರೇ ಅತ್ಯಂತ ತುಚ್ಛ ಸ್ಥಾನದಲ್ಲಿರುವವರು ಮತ್ತು ನೇರಮಾರ್ಗದಿಂದ ಅತಿಯಾಗಿ ತಪ್ಪಿಹೋದವರು.”

ನಿಮ್ಮ ಬಳಿ ಬಂದಾಗ, ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ವಾಸ್ತವವಾಗಿ ಅವರು ಸತ್ಯನಿಷೇಧದೊಂದಿಗೇ ಬಂದಿದ್ದರು ಮತ್ತು ಅವರು ಸತ್ಯನಿಷೇಧದೊಂದಿಗೇ ಹೊರಟುಹೋದರು. ಅವರು ಅಡಗಿಸಿಡುವ ವಿಷಯಗಳನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.

ಅವರಲ್ಲಿ ಹೆಚ್ಚಿನವರೂ ಪಾಪಗಳಲ್ಲಿ, ಅತಿಕ್ರಮಗಳಲ್ಲಿ ಮತ್ತು ನಿಷಿದ್ಧ ಧನವನ್ನು ತಿನ್ನುವುದರಲ್ಲಿ ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ!

ಅವರು ಕೆಟ್ಟ ಮಾತುಗಳನ್ನು ಹೇಳುವುದನ್ನು ಮತ್ತು ನಿಷಿದ್ಧ ಧನ ತಿನ್ನುವುದನ್ನು ಅವರಲ್ಲಿರುವ ದೇವನಿಷ್ಠರು ಮತ್ತು ವಿದ್ವಾಂಸರು ಏಕೆ ವಿರೋಧಿಸುವುದಿಲ್ಲ? ಅವರು ಮಾಡುವ ಕೆಲಸಗಳು ಬಹಳ ನಿಕೃಷ್ಟವಾಗಿವೆ.

“ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆ” ಎಂದು ಯಹೂದಿಗಳು ಹೇಳಿದರು.[1] ಅವರ ಕೈಗಳನ್ನೇ ಸಂಕೋಲೆಯಿಂದ ಬಂಧಿಸಲಾಗಿದೆ ಮತ್ತು ಅವರ ಈ ಮಾತಿನಿಂದಾಗಿ ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅಲ್ಲ, ವಾಸ್ತವವಾಗಿ ಅಲ್ಲಾಹನ ಎರಡು ಕೈಗಳೂ ಚಾಚಿಕೊಂಡಿವೆ. ಅವನು ಇಚ್ಛಿಸುವಂತೆ ಅವನು ಖರ್ಚು ಮಾಡುತ್ತಾನೆ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟು ಮಾಡಿದ್ದೇವೆ. ಅವರು ಯುದ್ಧಕ್ಕೆ ಬೆಂಕಿ ಉರಿಸಿದಾಗಲೆಲ್ಲಾ ಅಲ್ಲಾಹು ಅದನ್ನು ನಂದಿಸುತ್ತಾನೆ. ಅವರು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಪರಿಶ್ರಮಿಸುತ್ತಾರೆ. ಆದರೆ ಅಲ್ಲಾಹು ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ.

ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ದೇವಭಯದಿಂದ ಜೀವಿಸಿದ್ದರೆ ನಾವು ಅವರ ಪಾಪಗಳನ್ನು ಅಳಿಸುತ್ತಿದ್ದೆವು ಮತ್ತು ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುತ್ತಿದ್ದೆವು.

ಅವರು ತೌರಾತ್, ಇಂಜೀಲ್ ಮತ್ತು ಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುತ್ತಿದ್ದರೆ ಅವರ ಮೇಲ್ಭಾಗದಿಂದ ಮತ್ತು ಕಾಲುಗಳ ಅಡಿಭಾಗದಿಂದ ಅವರಿಗೆ ತಿನ್ನಲು ಆಹಾರವು ದೊರೆಯುತ್ತಿತ್ತು. ಅವರಲ್ಲಿ ಮಿತವಾದಿಗಳಾದ ಜನರಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರ ಕರ್ಮಗಳೂ ಅತ್ಯಂತ ನಿಕೃಷ್ಟವಾಗಿವೆ.

ಓ ಸಂದೇಶವಾಹಕರೇ! ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದುದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ ನೀವು ಅವನ ಸಂದೇಶವನ್ನು ತಲುಪಿಸಿಲ್ಲ. ಅಲ್ಲಾಹು ನಿಮ್ಮನ್ನು ಜನರಿಂದ ರಕ್ಷಿಸುವನು. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗ ತೋರಿಸುವುದಿಲ್ಲ.

ಹೇಳಿರಿ: “ಓ ಗ್ರಂಥದವರೇ! ನೀವು ತೌರಾತ್, ಇಂಜೀಲ್ ಮತ್ತು ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುವ ತನಕ ನಿಮಗೆ ಯಾವುದೇ ಅಸ್ತಿತ್ವವಿಲ್ಲ.” (ಪ್ರವಾದಿಯವರೇ) ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಆದ್ದರಿಂದ ಆ ಸತ್ಯನಿಷೇಧಿಗಳ ಬಗ್ಗೆ ನೀವು ದುಃಖಿಸಬೇಡಿ.

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಸಾಬಿಗಳು, ಕ್ರೈಸ್ತರು—ಇವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮವೆಸಗುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]

ನಾವು ಇಸ್ರಾಯೇಲ್ ಮಕ್ಕಳಿಂದ ಕರಾರನ್ನು ಪಡೆದೆವು ಮತ್ತು ಅವರ ಬಳಿಗೆ ಸಂದೇಶವಾಹಕರನ್ನು ಕಳುಹಿಸಿದೆವು. ಅವರಿಗೆ ಇಷ್ಟವಿಲ್ಲದ ವಿಷಯಗಳೊಂದಿಗೆ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ, ಅವರಲ್ಲಿ ಕೆಲವರನ್ನು ಅವರು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆ ಮಾಡಿದರು.

ಯಾವುದೇ ಶಿಕ್ಷೆ ಎರಗುವುದಿಲ್ಲವೆಂದು ಅವರು ಭಾವಿಸಿದರು. ಆದ್ದರಿಂದ ಅವರು ಕುರುಡರು ಮತ್ತು ಕಿವುಡರಾದರು. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅನಂತರ ಪುನಃ ಅವರಲ್ಲಿ ಹೆಚ್ಚಿನವರು ಕುರುಡರು ಮತ್ತು ಕಿವುಡರಾದರು. ಅಲ್ಲಾಹು ಅವರು ಮಾಡುತ್ತಿರುವುದನ್ನು ನೋಡುತ್ತಿದ್ದಾನೆ.

“ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಆದರೆ ಮಸೀಹರು ಹೇಳಿದ್ದೇನೆಂದರೆ: “ಓ ಇಸ್ರಾಯೇಲ್ ಮಕ್ಕಳೇ! ನೀವು ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಆರಾಧಿಸಿರಿ.” ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ, ಅವನಿಗೆ ಅಲ್ಲಾಹು ಸ್ವರ್ಗವನ್ನು ಖಂಡಿತ ನಿಷೇಧಿಸಿದ್ದಾನೆ. ಅವನ ವಾಸಸ್ಥಳ ನರಕಾಗ್ನಿಯಾಗಿದೆ.[1] ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ.

“ಅಲ್ಲಾಹು ಮೂವರಲ್ಲಿ ಒಬ್ಬನು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯನಿಷೇಧಿಗಳಾಗಿದ್ದಾರೆ.[1] ಆದರೆ ಏಕೈಕ ಆರಾಧ್ಯನಾದ ಅಲ್ಲಾಹನ ಹೊರತು ಅನ್ಯ ದೇವರಿಲ್ಲ. ಅವರು ಹಾಗೆ ಹೇಳುವುದನ್ನು ನಿಲ್ಲಿಸದಿದ್ದರೆ, ಅವರಲ್ಲಿರುವ ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯು ಸ್ಪರ್ಶಿಸುವುದು ನಿಶ್ಚಿತ.

ಅವರಿಗೆ ಅಲ್ಲಾಹನ ಕಡೆಗೆ ಪಶ್ಚಾತ್ತಾಪದಿಂದ ಮರಳಿ ಅವನಲ್ಲಿ ಕ್ಷಮೆಯಾಚಿಸಬಾರದೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

ಮರ್ಯಮರ ಮಗ ಮಸೀಹರು ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರು ಬಂದು ಹೋಗಿದ್ದಾರೆ. ಅವರ ತಾಯಿ ಸತ್ಯವಂತೆ. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಅವರಿಗೆ ಹೇಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ನಂತರ ಅವರು ಹೇಗೆ (ಸತ್ಯದಿಂದ) ತಪ್ಪಿಹೋಗುತ್ತಿದ್ದಾರೆಂದು ನೋಡಿ.[1]

ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರ ಅಥವಾ ತೊಂದರೆ ಮಾಡದವುಗಳನ್ನು ಆರಾಧಿಸುತ್ತಿದ್ದೀರಾ? ಅಲ್ಲಾಹನಾದರೋ ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.”

ಹೇಳಿರಿ: “ಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಸತ್ಯಕ್ಕೆ ವಿರುದ್ಧವಾಗಿ ಹದ್ದುಮೀರಬೇಡಿ. ಈಗಾಗಲೇ ದಾರಿತಪ್ಪಿರುವ, ಅನೇಕ ಜನರನ್ನು ದಾರಿತಪ್ಪಿಸುತ್ತಿರುವ ಮತ್ತು ನೇರಮಾರ್ಗದಿಂದ ತಪ್ಪಿಹೋಗಿರುವ ಜನರ ಸ್ವೇಚ್ಛಾಚಾರಗಳನ್ನು ಹಿಂಬಾಲಿಸಬೇಡಿ.

ಇಸ್ರಾಯೇಲ್ ಮಕ್ಕಳಲ್ಲಿರುವ ಸತ್ಯನಿಷೇಧಿಗಳು ದಾವೂದರ ಮತ್ತು ಮರ್ಯಮರ ಮಗ ಈಸಾರ ನಾಲಗೆಯಿಂದ ಶಾಪಕ್ಕೆ ಗುರಿಯಾಗಿದ್ದಾರೆ. ಅದು ಅವರು ಅವಿಧೇಯತೆ ತೋರಿದ ಮತ್ತು ಅತಿರೇಕವೆಸಗಿದ ಕಾರಣದಿಂದಾಗಿದೆ.

ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಅವರು ಪರಸ್ಪರ ವಿರೋಧಿಸುತ್ತಿರಲಿಲ್ಲ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ.

ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರಾಗಿ ಸ್ವೀಕರಿಸುವುದನ್ನು ನೀವು ಕಾಣುವಿರಿ. ಅವರು ಸ್ವತಃ ಅವರಿಗಾಗಿ ಮುಂದಕ್ಕೆ ಕಳುಹಿಸಿರುವ ಕರ್ಮಗಳು ಬಹಳ ನಿಕೃಷ್ಟವಾಗಿವೆ. (ಇದರಿಂದಾಗಿ) ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾದರು ಮತ್ತು ಅವರು ಶಾಶ್ವತ ಶಿಕ್ಷೆಯನ್ನು ಅನುಭವಿಸುವರು.

ಅವರು ಅಲ್ಲಾಹನಲ್ಲಿ, ಪ್ರವಾದಿಯಲ್ಲಿ ಮತ್ತು ಅವರಿಗೆ (ಪ್ರವಾದಿಗೆ) ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಿದ್ದರೆ ಅವರನ್ನು (ಸತ್ಯನಿಷೇಧಿಗಳನ್ನು) ಆಪ್ತಮಿತ್ರರಾಗಿ ಸ್ವೀಕರಿಸುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ.

ಯಹೂದಿಗಳು ಮತ್ತು ಬಹುದೇವಾರಾಧಕರು ಸತ್ಯವಿಶ್ವಾಸಿಗಳ ಕಡುವೈರಿಗಳಾಗಿರುವುದನ್ನು ನೀವು ಕಾಣುವಿರಿ. “ನಾವು ಕ್ರೈಸ್ತರು” ಎಂದು ಹೇಳುವವರು ಸತ್ಯವಿಶ್ವಾಸಿಗಳೊಂದಿಗೆ ಅತಿಹತ್ತಿರದ ಮಮತೆಯುಳ್ಳವರಾಗಿ ಕಾಣುವಿರಿ. ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿದ್ದಾರೆ ಮತ್ತು ಅವರು ಅಹಂಕಾರಿಗಳಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.

ಸಂದೇಶವಾಹಕರಿಗೆ ಅವತೀರ್ಣವಾದ ಸಂದೇಶಕ್ಕೆ ಕಿವಿಗೊಟ್ಟಾಗ, ಸತ್ಯವನ್ನು ತಿಳಿದು ಅವರ ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷಿಯಾದವರಲ್ಲಿ ನಮ್ಮನ್ನೂ ಸೇರಿಸು.

ಅಲ್ಲಾಹನಲ್ಲಿ ಮತ್ತು ನಮಗೆ ಬಂದ ಸಂದೇಶದಲ್ಲಿ ವಿಶ್ವಾಸವಿಡದಿರಲು ನಮಗೇನಾಗಿದೆ? ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ನೀತಿವಂತರೊಂದಿಗೆ ಸ್ವರ್ಗ ಪ್ರವೇಶ ಮಾಡಿಸಬೇಕೆಂದು ನಾವು ಆಸೆಪಡುತ್ತೇವೆ.”

ಅವರು ಹೇಳಿದ ಮಾತಿನಿಂದಾಗಿ ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಪ್ರತಿಫಲವಾಗಿ ನೀಡಿದನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಒಳಿತು ಮಾಡುವವರಿಗಿರುವ ಪ್ರತಿಫಲವಾಗಿದೆ.

ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ನರಕವಾಸಿಗಳು.

ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ಅನುಮತಿಸಿದ ಉತ್ತಮ ವಸ್ತುಗಳನ್ನು ನಿಷೇಧಿಸಬೇಡಿ ಮತ್ತು ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ಎಲ್ಲೆ ಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.

ಅಲ್ಲಾಹು ನಿಮಗೆ ಒದಗಿಸಿದ ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನು ತಿನ್ನಿರಿ. ಯಾರ ಮೇಲೆ ನೀವು ವಿಶ್ವಾಸವಿಡುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ.

ನೀವು ಅರ್ಥವಿಲ್ಲದೆ[1] ಮಾಡುವ ಪ್ರತಿಜ್ಞೆಗಳಿಗಾಗಿ ಅಲ್ಲಾಹು ನಿಮ್ಮನ್ನು ಹಿಡಿಯುವುದಿಲ್ಲ. ಆದರೆ ನೀವು ದೃಢನಿರ್ಧಾರದಿಂದ ಮಾಡಿದ ಪ್ರತಿಜ್ಞೆಗಳಿಗಾಗಿ ಅವನು ನಿಮ್ಮನ್ನು ಹಿಡಿಯುತ್ತಾನೆ. ಅದಕ್ಕೆ ಪರಿಹಾರವೇನೆಂದರೆ, ಹತ್ತು ಮಂದಿ ಬಡವರಿಗೆ ನೀವು ನಿಮ್ಮ ಮನೆಯವರಿಗೆ ಉಣಿಸುವ ಮಧ್ಯಮ ರೀತಿಯ ಆಹಾರವನ್ನು ಉಣಿಸುವುದು, ಅಥವಾ ಅವರಿಗೆ ಬಟ್ಟೆ-ಬರೆ ನೀಡುವುದು, ಅಥವಾ ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸುವುದು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಮೂರು ದಿನ ಉಪವಾಸ ಆಚರಿಸಬೇಕು. ಇದು ನೀವು ನಿಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ನೀಡಬೇಕಾದ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಕಾಯ್ದುಕೊಳ್ಳಿರಿ. ಹೀಗೆ ಅಲ್ಲಾಹು ನಿಮಗೆ ಅವನ ವಚನಗಳನ್ನು ವಿವರಿಸಿಕೊಡುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ.

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಮದ್ಯ, ಜೂಜು, ಬಲಿಪೀಠಗಳು ಮತ್ತು ಅದೃಷ್ಟ ಪರೀಕ್ಷಿಸುವ ಬಾಣಗಳು ಪೈಶಾಚಿಕವಾದ ಹೊಲಸು ಕೃತ್ಯಗಳಾಗಿವೆ. ಆದ್ದರಿಂದ ನೀವು ಅವುಗಳಿಂದ ದೂರವಿರಿ. ನೀವು ಯಶಸ್ವಿಯಾಗುವುದಕ್ಕಾಗಿ.[1]

ಮದ್ಯ ಮತ್ತು ಜೂಜಿನ ಮೂಲಕ ನಿಮ್ಮ ನಡುವೆ ವೈರ ಹಾಗೂ ದ್ವೇಷವನ್ನು ಬಿತ್ತಲು ಮತ್ತು ನಿಮ್ಮನ್ನು ಅಲ್ಲಾಹನ ಸ್ಮರಣೆ ಹಾಗೂ ನಮಾಝ್‍ನಿಂದ ತಡೆಯಲು ಶೈತಾನನು ಬಯಸುತ್ತಾನೆ. ಆದ್ದರಿಂದ (ಇನ್ನಾದರೂ) ನೀವು ಅದನ್ನು ನಿಲ್ಲಿಸುವಿರಾ?

ನೀವು ಅಲ್ಲಾಹನ ಆಜ್ಞೆಗಳನ್ನು ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಪಾಲಿಸಿರಿ ಮತ್ತು ಜಾಗರೂಕರಾಗಿರಿ. ನೀವು ವಿಮುಖರಾದರೆ ತಿಳಿಯಿರಿ! ನಮ್ಮ ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರವಾಗಿದೆ.

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಈ ಹಿಂದೆ ಏನು ಸೇವಿಸಿದ್ದಾರೋ ಅದರಲ್ಲಿ ಅವರಿಗೆ ದೋಷವಿಲ್ಲ—ಅವರು ಅಲ್ಲಾಹನನ್ನು ಭಯಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮವೆಸಗಿದರೆ, ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ವಿಶ್ವಾಸವಿಟ್ಟರೆ ಮತ್ತು ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ಒಳಿತು ಮಾಡಿದರೆ. ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.[1]

ಓ ಸತ್ಯವಿಶ್ವಾಸಿಗಳೇ! ಅದೃಶ್ಯ ಸ್ಥಿತಿಯಲ್ಲಿ ಅಲ್ಲಾಹನನ್ನು ಭಯಪಡುವವರು ಯಾರೆಂದು ತಿಳಿಯಲು, ನಿಮ್ಮ ಕೈಗಳು ಮತ್ತು ಈಟಿಗಳು ತಲುಪುವ ರೀತಿಯಲ್ಲಿರುವ ಬೇಟೆ ಪ್ರಾಣಿಯ ಮೂಲಕ ಅಲ್ಲಾಹು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಅದರ ಬಳಿಕವೂ ಯಾರಾದರೂ ಅತಿರೇಕವೆಸಗಿದರೆ ಅವನಿಗೆ ಯಾತನಾಮಯ ಶಿಕ್ಷೆಯಿದೆ.

ಓ ಸತ್ಯವಿಶ್ವಾಸಿಗಳೇ! ನೀವು ಇಹ್ರಾಮ್‍ನಲ್ಲಿರುವಾಗ ಬೇಟೆಯಾಡಿ ಪ್ರಾಣಿಯನ್ನು ಕೊಲ್ಲಬೇಡಿ. ನಿಮ್ಮಲ್ಲಿ ಯಾರಾದರೂ ಉದ್ದೇಶಪೂರ್ವಕ ಬೇಟೆಯಾಡಿ ಪ್ರಾಣಿಯನ್ನು ಕೊಂದರೆ, ಅದಕ್ಕಿರುವ ಪರಿಹಾರವು ಅವನು ಕೊಂದ ಮೃಗವನ್ನು ಹೋಲುತ್ತದೆಯೆಂದು ಇಬ್ಬರು ನ್ಯಾಯಸಮ್ಮತ ಜನರು ತೀರ್ಪು ನೀಡುವ ಪ್ರಾಣಿಯನ್ನು ಕಅಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪುವ ಬಲಿಮೃಗವಾಗಿ ನೀಡುವುದು; ಅಥವಾ ಅದಕ್ಕೆ ಪರಿಹಾರವಾಗಿ ಬಡವರಿಗೆ ಅನ್ನದಾನ ಮಾಡುವುದು; ಅಥವಾ ಅದಕ್ಕೆ ಸಮಾನವಾಗುವಷ್ಟು ಸಂಖ್ಯೆಯ ಉಪವಾಸ ಆಚರಿಸುವುದು.[1] ಅದು ಅವನು ಮಾಡಿದ ಕರ್ಮದ ಫಲವನ್ನು ಅವನು ಅನುಭವಿಸಲಿಕ್ಕಾಗಿ. ಈ ಹಿಂದೆ ಸಂಭವಿಸಿದ ತಪ್ಪುಗಳನ್ನು ಅಲ್ಲಾಹು ಕ್ಷಮಿಸಿದ್ದಾನೆ. ಆದರೆ ಯಾರಾದರೂ ಅದನ್ನು ಪುನರಾವರ್ತಿಸಿದರೆ, ಅಲ್ಲಾಹು ಅವನಿಂದ ಪ್ರತೀಕಾರವನ್ನು ಪಡೆಯುವನು. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.

ನಿಮಗೆ ಸಮುದ್ರ ಬೇಟೆ ಮತ್ತು ಅದರ ಆಹಾರವು ಧರ್ಮಸಮ್ಮತವಾಗಿದೆ. ಇದು ನಿಮಗೆ ಮತ್ತು ಪ್ರಯಾಣಿಕರಿಗೆ ಒಂದು ಅನುಕೂಲವಾಗಿರುವುದಕ್ಕಾಗಿ. ನೀವು ಇಹ್ರಾಮ್‍ನಲ್ಲಿರುವ ತನಕ ನಿಮಗೆ ನೆಲದಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾರ ಬಳಿಗೆ ನಿಮ್ಮನ್ನು ಒಟ್ಟುಗೂಡಿಸಲಾಗುತ್ತದೋ ಆ ಅಲ್ಲಾಹನನ್ನು ಭಯಪಡಿರಿ.

ಪವಿತ್ರ ಭವನವಾದ ಕಅಬಾಲಯವನ್ನು ಮತ್ತು ಯುದ್ಧ ನಿಷೇಧಿತ ತಿಂಗಳನ್ನು ಅಲ್ಲಾಹು ಜನರ ಅಸ್ತಿತ್ವಕ್ಕೆ ಆಧಾರವಾಗಿ ಮಾಡಿದ್ದಾನೆ. (ಅದೇ ರೀತಿ) ಬಲಿಮೃಗವನ್ನು ಮತ್ತು (ಅವುಗಳ) ಕೊರಳಪಟ್ಟಿಗಳನ್ನು ಸಹ. ಇದೇಕೆಂದರೆ, ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅಲ್ಲಾಹು ತಿಳಿದಿದ್ದಾನೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಜ್ಞಾನವಿದೆಯೆಂದು ನೀವು ತಿಳಿಯುವುದಕ್ಕಾಗಿದೆ.

ತಿಳಿಯಿರಿ! ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಅಲ್ಲಾಹು ಕ್ಷಮಿಸುವವನು ಹಾಗೂ ದಯೆ ತೋರುವವನಾಗಿದ್ದಾನೆ.

ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.

ಹೇಳಿರಿ: “ಹೊಲಸು ಮತ್ತು ಶುದ್ಧ ವಸ್ತುಗಳು ಸಮಾನವಲ್ಲ. ಹೊಲಸುಗಳ ಹೆಚ್ಚಳವು ನಿಮ್ಮನ್ನು ಅಚ್ಚರಿಗೊಳಿಸಿದರೂ ಸಹ!” ಆದ್ದರಿಂದ ಓ ಬುದ್ಧಿವಂತರೇ! ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

ಓ ಸತ್ಯವಿಶ್ವಾಸಿಗಳೇ! ಕೆಲವು ವಿಷಯಗಳ ಬಗ್ಗೆ ನೀವು ಪ್ರಶ್ನಿಸಬೇಡಿ. ಅವುಗಳನ್ನು ನಿಮಗೆ ವಿವರಿಸಲಾದರೆ ನಿಮಗೆ ಸಂಕಷ್ಟವಾಗಬಹುದು. ಕುರ್‌ಆನ್ ಅವತೀರ್ಣವಾಗುವಾಗ ನೀವು ಅವುಗಳ ಬಗ್ಗೆ ಪ್ರಶ್ನಿಸಿದರೆ, ಅವುಗಳನ್ನು ನಿಮಗೆ ವಿವರಿಸಿಕೊಡಲಾಗುವುದು. (ಹಿಂದೆ ಸಂಭವಿಸಿದ್ದಕ್ಕೆ) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.

ನಿಮಗಿಂತ ಮೊದಲಿನ ಜನರು ಅವುಗಳ ಬಗ್ಗೆ ಪ್ರಶ್ನಿಸಿದ್ದರು. ನಂತರ ಅವುಗಳ ಕಾರಣದಿಂದ ಅವರು ಸತ್ಯನಿಷೇಧಿಗಳಾದರು.

ಬಹೀರ, ಸಾಇಬ, ವಸೀಲ, ಹಾಮ್ ಮುಂತಾದ ಹರಕೆ ಮೃಗಗಳನ್ನು ಅಲ್ಲಾಹು ನೇಮಿಸಿಲ್ಲ.[1] ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳದವರಾಗಿದ್ದಾರೆ.

“ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶಕ್ಕೆ ಮತ್ತು ಸಂದೇಶವಾಹಕರ ಬಳಿಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮ್ಮ ಪೂರ್ವಜರು ಏನು ಮಾಡುವುದಾಗಿ ನಾವು ಕಂಡೆವೋ ಅದು ನಮಗೆ ಸಾಕು.” ಆದರೆ ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ (ಅವರಿಗೆ ಅದು ಸಾಕೇ?)

ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ನೀವೆಲ್ಲರೂ ಅಲ್ಲಾಹನ ಬಳಿಗೆ ಮರಳಿಹೋಗುವಿರಿ. ಆಗ ಅವನು ನೀವು ಮಾಡಿದ ಕರ್ಮಗಳನ್ನು ನಿಮಗೆ ತಿಳಿಸಿಕೊಡುವನು.

ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲೊಬ್ಬನು ಮರಣಶಯ್ಯೆಯಲ್ಲಿದ್ದು ಉಯಿಲು ಮಾಡುವಾಗ, ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ಅಥವಾ ನಿಮ್ಮವರಲ್ಲದ ಇಬ್ಬರು ಸಾಕ್ಷಿ ನಿಲ್ಲಲಿ—ನೀವು ಭೂಮಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮಗೆ ಮರಣವು ಸನ್ನಿಹಿತವಾದರೆ. ಇನ್ನು ನಿಮಗೆ (ಅವರ ಸಾಕ್ಷಿಯಲ್ಲಿ) ಸಂಶಯವಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದು ನಿಲ್ಲಿಸಿರಿ; ಆಗ ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೀಗೆ ಹೇಳಲಿ: “ನಾವು ಈ ಸಾಕ್ಷಿಗೆ ಬದಲಿಯಾಗಿ ಯಾವುದೇ ಬೆಲೆಯನ್ನು ಪಡೆಯುವುದಿಲ್ಲ, ಅವನು ಹತ್ತಿರದ ಸಂಬಂಧಿಕನಾದರೂ ಸಹ. ಅಲ್ಲಾಹನಿಗಾಗಿರುವ ಸಾಕ್ಷ್ಯವನ್ನು ನಾವು ಅಡಗಿಸುವುದಿಲ್ಲ. ನಾವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನಾವು ಪಾಪಿಗಳಲ್ಲಿ ಸೇರುವೆವು.”

ಅವರಿಬ್ಬರು ದೋಷಿಗಳೆಂದು ಸಾಬೀತಾದರೆ, ಅವರು ಯಾರಿಗೆ ಅನ್ಯಾಯ ಮಾಡಿದರೋ ಅವರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ಆಪ್ತರಾಗಿರುವ ಇಬ್ಬರು ಅವರ ಸ್ಥಾನದಲ್ಲಿ ನಿಂತು, ಅಲ್ಲಾಹನ ಮೇಲೆ ಆಣೆ ಮಾಡಿ, “ಅವರ ಸಾಕ್ಷಿಗಿಂತ ನಮ್ಮ ಸಾಕ್ಷಿಯೇ ಹೆಚ್ಚು ಸತ್ಯವಾಗಿದೆ, ನಾವು ಯಾವುದೇ ಅತಿರೇಕವನ್ನೆಸಗಿಲ್ಲ; ನಾವೇನಾದರೂ ಹಾಗೆ ಮಾಡಿದರೆ ನಾವು ಅಕ್ರಮವೆಸಗಿದವರಲ್ಲಿ ಸೇರುವೆವು” ಎಂದು ಸಾಕ್ಷಿ ಹೇಳಲಿ.

ಅವರು ಸರಿಯಾದ ವಿಧದಲ್ಲಿ ಸಾಕ್ಷಿ ನುಡಿಯಲು, ಅಥವಾ ಅವರು ಆಣೆ ಮಾಡಿದ ಬಳಿಕ (ವಾರಸುದಾರರಿಗೆ) ಆಣೆ ಮಾಡಲು ಅವಕಾಶ ನೀಡಲಾಗುವುದೆಂಬ ಭಯವು ಅವರಲ್ಲುಂಟಾಗಲು ಇದು ಹೆಚ್ಚು ಸೂಕ್ತವಾಗಿದೆ. ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳಿಗೆ) ಕಿವಿಗೊಡಿರಿ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

ಅಲ್ಲಾಹು ಸಂದೇಶವಾಹಕರನ್ನು ಒಟ್ಟುಗೂಡಿಸಿ, “ನಿಮಗೇನು ಉತ್ತರ ಸಿಕ್ಕಿತು?” ಎಂದು ಕೇಳುವ ದಿನ. ಅವರು ಹೇಳುವರು: “ನಮಗೇನೂ ತಿಳಿದಿಲ್ಲ. ನೀನೇ ಅದೃಶ್ಯ ವಿಷಯಗಳನ್ನು ಚೆನ್ನಾಗಿ ತಿಳಿದವನು.”

ಅಲ್ಲಾಹು (ಈಸಾರೊಂದಿಗೆ) ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ನಾನು ಪವಿತ್ರಾತ್ಮನ ಮೂಲಕ ನಿಮಗೆ ಬೆಂಬಲ ನೀಡಿ ನೀವು ತೊಟ್ಟಿಲಲ್ಲಿಯೂ ಮಧ್ಯವಯಸ್ಸಿನಲ್ಲಿಯೂ ಜನರೊಂದಿಗೆ ಮಾತನಾಡುತ್ತಿದ್ದ ಸಂದರ್ಭ; ನಾನು ನಿಮಗೆ ಗ್ರಂಥವನ್ನು, ವಿವೇಕವನ್ನು, ತೌರಾತ್ ಮತ್ತು ಇಂಜೀಲನ್ನು ಕಲಿಸಿಕೊಟ್ಟ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಜೇಡಿಮಣ್ಣಿನಿಂದ ಹಕ್ಕಿಯ ರೂಪವನ್ನು ತಯಾರಿಸಿ ಅದರಲ್ಲಿ ಊದಿದಾಗ ನನ್ನ ಅಪ್ಪಣೆಯಿಂದ ಅದು ಹಕ್ಕಿಯಾಗಿ ಮಾರ್ಪಡುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಸತ್ತವರನ್ನು (ಸಮಾಧಿಯಿಂದ) ಹೊರತರುತ್ತಿದ್ದ ಸಂದರ್ಭ ಮತ್ತು ನೀವು ಇಸ್ರಾಯೇಲ್ ಮಕ್ಕಳ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಹೋದಾಗ ಅವರಲ್ಲಿರುವ ಸತ್ಯನಿಷೇಧಿಗಳು, ಇದು ಸ್ಪಷ್ಟ ವಾಮಾಚಾರವಾಗಿದೆಯೆಂದು ಹೇಳಿದಾಗ ನಿಮ್ಮನ್ನು ಅವರಿಂದ ಪಾರು ಮಾಡಿದ ಸಂದರ್ಭ ನಾನು ನಿಮಗೆ ಮತ್ತು ನಿಮ್ಮ ತಾಯಿಗೆ ಅನುಗ್ರಹಿಸಿದ ಅನುಗ್ರಹಗಳನ್ನು ಸ್ಮರಿಸಿರಿ.”

“ನನ್ನಲ್ಲಿ ಮತ್ತು ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡಿ” ಎಂದು ನಾನು ಹವಾರಿಗಳಿಗೆ ದಿವ್ಯಪ್ರೇರಣೆ ನೀಡಿದ ಸಂದರ್ಭ. ಅವರು ಹೇಳಿದರು: “ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಮುಸ್ಲಿಮರು ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.”

ಹವಾರಿಗಳು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಮರ್ಯಮರ ಮಗ ಈಸಾ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಧ್ಯವೇ?” ಈಸಾ ಹೇಳಿದರು: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.”

ಅವರು ಹೇಳಿದರು: “ಅದರಿಂದ ಆಹಾರ ಸೇವಿಸಿ ನಮ್ಮ ಮನಸ್ಸನ್ನು ಸಮಾಧಾನಪಡಿಸಲು, ನೀವು ನಮಗೆ ತಿಳಿಸಿದ್ದೆಲ್ಲವೂ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಮತ್ತು ನಾವು ಅದಕ್ಕೆ ಸಾಕ್ಷಿಗಳಾಗಲು ಬಯಸುತ್ತೇವೆ.”

ಮರ್ಯಮರ ಮಗ ಈಸಾ ಹೇಳಿದರು: “ಓ ನಮ್ಮ ಪರಿಪಾಲಕನಾದ ಅಲ್ಲಾಹನೇ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮಲ್ಲಿ ಮೊದಲಿನವರಿಗೆ ಮತ್ತು ಕೊನೆಯವರಿಗೆ ಒಂದು ಹಬ್ಬವಾಗಲಿ ಮತ್ತು ನಿನ್ನ ಕಡೆಯ ಒಂದು ದೃಷ್ಟಾಂತವಾಗಲಿ. ನಮಗೆ ಆಹಾರವನ್ನು ನೀಡು. ಆಹಾರ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”

ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮಗೆ ಅದನ್ನು ಇಳಿಸಿಕೊಡುವೆನು. ಆದರೆ, ಅದರ ನಂತರವೂ ನಿಮ್ಮಲ್ಲಿ ಯಾರಾದರೂ ಸತ್ಯನಿಷೇಧಿಯಾದರೆ, ಸರ್ವಲೋಕದವರಲ್ಲಿ ಯಾರಿಗೂ ನೀಡದ ಕಠೋರ ಶಿಕ್ಷೆಯನ್ನು ನಾನು ಅವನಿಗೆ ನೀಡುವೆನು.”

ಅಲ್ಲಾಹು ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿ ಸ್ವೀಕರಿಸಿರಿ ಎಂದು ನೀವು ಜನರಿಗೆ ಹೇಳಿದ್ದೀರಾ?” ಈಸಾ ಹೇಳುವರು: “ನೀನು ಮಹಾ ಪರಿಶುದ್ಧನು. ನನಗೆ ಹೇಳಲು ಹಕ್ಕಿಲ್ಲದ ಒಂದು ಮಾತನ್ನು ನಾನು ಹೇಗೆ ಹೇಳುವೆನು? ನಾನು ಹಾಗೆ ಹೇಳಿದ್ದರೆ ನಿಶ್ಚಯವಾಗಿಯೂ ನಿನಗೆ ಅದು ತಿಳಿದಿರುತ್ತಿತ್ತು. ನನ್ನ ಮನಸ್ಸಿನಲ್ಲಿರುವುದು ನಿನಗೆ ತಿಳಿಯುತ್ತದೆ. ಆದರೆ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿಯುವುದಿಲ್ಲ. ನಿಶ್ಚಯವಾಗಿಯೂ ನೀನು ಅದೃಶ್ಯ ವಿಷಯಗಳನ್ನು ತಿಳಿದವನಾಗಿರುವೆ.

ನೀನು ನನಗೆ ಆದೇಶಿಸಿದ್ದನ್ನು—ಅಂದರೆ ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂಬುದನ್ನು ಬಿಟ್ಟು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. ನಾನು ಎಲ್ಲಿಯ ತನಕ ಅವರೊಂದಿಗೆ ಇದ್ದೆನೋ ಅಲ್ಲಿಯ ತನಕ ನಾನು ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಎತ್ತಿಕೊಂಡ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವೆ.

ನೀನು ಅವರನ್ನು ಶಿಕ್ಷಿಸುವುದಾದರೆ ನಿಶ್ಚಯವಾಗಿಯೂ ಅವರು ನಿನ್ನ ದಾಸರಾಗಿದ್ದಾರೆ. ಆದರೆ ನೀನು ಅವರನ್ನು ಕ್ಷಮಿಸುವುದಾದರೆ, ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.”

ಅಲ್ಲಾಹು ಹೇಳುವನು: “ಇದು ಸತ್ಯವಂತರಿಗೆ ಅವರ ಸತ್ಯವು ಪ್ರಯೋಜನ ನೀಡುವ ದಿನವಾಗಿದೆ. ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಿದ್ದಾನೆ ಮತ್ತು ಅವರು ಅಲ್ಲಾಹನ ಬಗ್ಗೆ ಸಂಪ್ರೀತರಾಗಿದ್ದಾರೆ. ಅದೇ ಮಹಾ ವಿಜಯ.”

ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.