عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Qaf [Qaf] - Kannada translation

Surah Qaf [Qaf] Ayah 45 Location Maccah Number 50

ಕ್ವಾಫ್. ಈ ಮಹತ್ವಪೂರ್ಣ ಕುರ್‌ಆನಿನ ಮೇಲಾಣೆ.

ಅವರಿಂದಲೇ ಅವರಿಗೆ ಒಬ್ಬ ಮುನ್ನೆಚ್ಚರಿಕೆಗಾರ (ಪ್ರವಾದಿ) ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಡುತ್ತಾರೆ. ಸತ್ಯನಿಷೇಧಿಗಳು ಹೇಳುತ್ತಾರೆ: “ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ.

ನಾವು ಸತ್ತು ಮಣ್ಣಾಗಿ ಬಿಟ್ಟ ಬಳಿಕ (ಪುನಃ ಜೀವ ಪಡೆಯುವೆವೇ)? ಈ ಮರಳುವಿಕೆ ಬಹಳ ದೂರದ (ಅಸಂಭವ್ಯ) ಸಂಗತಿಯಾಗಿದೆ.”

ನಿಶ್ಚಯವಾಗಿಯೂ ಭೂಮಿಯು ಅವರಿಂದ ಏನನ್ನು ಕಡಿಮೆ ಮಾಡುತ್ತಿದೆಯೆಂದು ನಮಗೆ ತಿಳಿದಿದೆ. ನಮ್ಮ ಬಳಿ ಎಲ್ಲವನ್ನೂ ನೆನಪಿಡುವ ಒಂದು ಗ್ರಂಥವಿದೆ.[1]

ವಾಸ್ತವವಾಗಿ, ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಗೊಂದಲಪೂರ್ಣ (ಅನಿಶ್ಚಿತ) ಸ್ಥಿತಿಯಲ್ಲಿದ್ದಾರೆ.

ಅವರ ಮೇಲ್ಭಾಗದಲ್ಲಿರುವ ಆಕಾಶವನ್ನು ಅವರು ನೋಡುವುದಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವು ಎಂದು? ಅದರಲ್ಲಿ ಯಾವುದೇ ಬಿರುಕುಗಳಿಲ್ಲ.

ನಾವು ಭೂಮಿಯನ್ನು ಹರಡಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ಎಲ್ಲಾ ವಿಧಗಳ ಸುಂದರ ವಸ್ತುಗಳನ್ನು ಬೆಳೆಸಿದೆವು.

(ಅಲ್ಲಾಹನ ಕಡೆಗೆ ಮರಳುವ) ಪ್ರತಿಯೊಬ್ಬ ದಾಸನಿಗೂ ಅಂತರ್ದೃಷ್ಟಿ ಮತ್ತು ಉಪದೇಶದ ರೂಪದಲ್ಲಿ.

ನಾವು ಆಕಾಶದಿಂದ ಸಮೃದ್ಧವಾದ ಮಳೆಯನ್ನು ಸುರಿಸಿದೆವು. ಅದರ ಮೂಲಕ ತೋಟಗಳನ್ನು ಮತ್ತು ಕಟಾವು ಮಾಡುವ ಧಾನ್ಯಗಳನ್ನು ಬೆಳೆಸಿದೆವು.

ಮತ್ತು ಪದರ ಪದರ ಗೊನೆಗಳಿರುವ ಎತ್ತರವಾದ ಖರ್ಜೂರದ ಮರಗಳನ್ನು (ಬೆಳೆಸಿದೆವು)

ದಾಸರ ಉಪಜೀವನಕ್ಕಾಗಿ. ನಾವು ಅದರಿಂದ (ಆ ನೀರಿನಿಂದ) ನಿರ್ಜೀವವಾಗಿದ್ದ ಪ್ರದೇಶಕ್ಕೆ ಜೀವವನ್ನು ನೀಡಿದೆವು. ಇದೇ ರೀತಿ (ಸಮಾಧಿಗಳಿಂದ ನಿಮ್ಮನ್ನು) ಹೊರತೆಗೆಯಲಾಗುವುದು.

ಇವರಿಗಿಂತ ಮೊದಲು ನೂಹರ ಜನತೆ, ರಸ್ಸ್‌ನ ಜನರು ಮತ್ತು ಸಮೂದ್ ಗೋತ್ರದವರು ಸತ್ಯವನ್ನು ನಿಷೇಧಿಸಿದರು.

ಆದ್ ಗೋತ್ರದವರು, ಫರೋಹ ಮತ್ತು ಲೂತರ ಸಹೋದರರು (ಜನರು) ಕೂಡ.

ಐಕತ್‌ನ ಜನರು ಮತ್ತು ತುಬ್ಬಅ್‌ನ ಜನರು ಕೂಡ. ಅವರೆಲ್ಲರೂ ಸಂದೇಶವಾಹಕರುಗಳನ್ನು ನಿಷೇಧಿಸಿದರು. ಆದ್ದರಿಂದ ಅವರ ಮೇಲೆ ನನ್ನ ವಾಗ್ದಾನವು ಖಾತ್ರಿಯಾಗಿ ಬಿಟ್ಟಿತು.

ನಾವು ಪ್ರಥಮ ಬಾರಿ ಸೃಷ್ಟಿಸಿದಾಗಲೇ ಸುಸ್ತಾದೆವೇ? ಅಲ್ಲ, ವಾಸ್ತವವಾಗಿ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಪಡುತ್ತಾರೆ.

ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿದೆವು. ಅವನ ಮನಸ್ಸು ಅವನೊಡನೆ ಪಿಸುಗುಡುವ ಸಂಗತಿಗಳನ್ನು ನಾವು ತಿಳಿಯುತ್ತೇವೆ. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹತ್ತಿರದಲ್ಲಿದ್ದೇವೆ.

ಇಬ್ಬರು ಪಡೆಯುವವರು (ಕರ್ಮಗಳನ್ನು ದಾಖಲಿಸುವ ದೇವದೂತರು) ಪಡೆಯುವ ಸಂದರ್ಭ. ಒಬ್ಬರು ಬಲಭಾಗದಲ್ಲಿ ಮತ್ತು ಇನ್ನೊಬ್ಬರು ಎಡಭಾಗದಲ್ಲಿ ಕುಳಿತಿರುವರು.

ಮನುಷ್ಯನು ಯಾವುದೇ ಮಾತನ್ನೂ ಹೇಳಲಾರನು—ಅವನ ಬಳಿ ಒಬ್ಬ ವೀಕ್ಷಕನು (ಅದನ್ನು ದಾಖಲಿಸಲು) ಸಿದ್ಧವಾಗಿರದ ಹೊರತು.

ಮರಣದ ಕಡು ಯಾತನೆಯು ಸತ್ಯದೊಂದಿಗೆ ಬರುವುದು. ಯಾವುದರಿಂದ ನೀನು ದೂರವಾಗಲು ಪ್ರಯತ್ನಿಸುತ್ತಿದ್ದೆಯೋ ಅದೇ ಇದು.

ಕಹಳೆಯಲ್ಲಿ ಊದಲಾಗುವುದು. ಅದು ಎಚ್ಚರಿಕೆಯ ದಿನವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೊತೆಗೆ ಒಬ್ಬ ಸಾಗಾಟಗಾರ ಮತ್ತು ಸಾಕ್ಷಿಯನ್ನು ಹೊಂದಿರುವ ಸ್ಥಿತಿಯಲ್ಲಿ ಬರುವರು.[1]

“ನಿಶ್ಚಯವಾಗಿಯೂ ನೀನು ಇದನ್ನು ನಿರ್ಲಕ್ಷಿಸಿದ್ದೆ. ಆದರೆ ನಾವು ನಿನ್ನ ಮುಂಭಾಗದಿಂದ ಪರದೆಯನ್ನು ನಿವಾರಿಸಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ಹರಿತವಾಗಿದೆ.”

ಅವನ ಜೊತೆಗಾರನು (ದೇವದೂತ) ಹೇಳುವನು: “ನನ್ನ ಬಳಿಯಿರುವ ಇದು (ದಾಖಲೆ) ಸಿದ್ಧವಾಗಿದೆ.”

(ಅಲ್ಲಾಹು ಆಜ್ಞಾಪಿಸುವನು): “ಅವನನ್ನು ನರಕಕ್ಕೆ ಎಸೆದು ಬಿಡಿ—ಪ್ರತಿಯೊಬ್ಬ ಸತ್ಯನಿಷೇಧಿ ದುಷ್ಕರ್ಮಿಯನ್ನು.

ಒಳಿತನ್ನು ತಡೆಯುವ ಅತಿರೇಕಿ ಸಂಶಯಪಿಶಾಚಿಯನ್ನು.

ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ನಿಶ್ಚಯಿಸಿದವನನ್ನು. ಅವನನ್ನು ಕಠೋರ ಶಿಕ್ಷೆಗೆ ಎಸೆದುಬಿಡಿ.”

ಅವನ ಜೊತೆಗಾರನು[1] ಹೇಳುವನು: “ನಮ್ಮ ಪರಿಪಾಲಕನೇ! ನಾನು ಅವನನ್ನು ದಾರಿತಪ್ಪಿಸಿಲ್ಲ. ಬದಲಿಗೆ, ಅವನೇ ವಿದೂರ ದುರ್ಮಾರ್ಗದಲ್ಲಿದ್ದ.”

ಅಲ್ಲಾಹು ಹೇಳುವನು: “ನನ್ನ ಮುಂದೆ ತರ್ಕ ಮಾಡಿಬೇಡಿ. ನಾನು ಈಗಾಗಲೇ ನಿಮ್ಮ ಬಳಿಗೆ ಎಚ್ಚರಿಕೆಯನ್ನು ಕಳುಹಿಸಿದ್ದೇನೆ.

ನನ್ನ ಬಳಿ ಮಾತು ಬದಲಾಗುವುದಿಲ್ಲ. ನಾನು ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ.”

ನಾವು ನರಕದೊಂದಿಗೆ, “ನೀನು ತುಂಬಿದೆಯಾ?” ಎಂದು ಕೇಳುವ ಸಂದರ್ಭ. ಆಗ ಅದು ಕೇಳುವುದು: “ಹೆಚ್ಚು ಏನಾದರೂ ಇದೆಯೇ?”

ಸ್ವರ್ಗವನ್ನು ದೇವಭಯವುಳ್ಳವರ ಹತ್ತಿರಕ್ಕೆ ತರಲಾಗುವುದು. ಅದು ಅವರಿಗೆ ಸ್ವಲ್ಪವೂ ದೂರವಿರಲಾರದು.

“ಇದು ನಿಮಗೆ—ನಿಮ್ಮ ಪೈಕಿ (ಅಲ್ಲಾಹನ ಕಡೆಗೆ ಪಶ್ಚಾತ್ತಪಪಟ್ಟು) ಮರಳುವ ಮತ್ತು (ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು) ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಗೆ—ವಾಗ್ದಾನ ಮಾಡಲಾದ ಸಂಗತಿಯಾಗಿದೆ.

ಅದೃಶ್ಯ ಸ್ಥಿತಿಯಲ್ಲಿ ಪರಮ ದಯಾಮಯನನ್ನು (ಅಲ್ಲಾಹನನ್ನು) ಭಯಪಟ್ಟು (ಅಲ್ಲಾಹನ ಕಡೆಗೆ) ತಿರುಗಿದ ಹೃದಯದೊಂದಿಗೆ ಬಂದವನಿಗೆ.

ನೀವು ಸುರಕ್ಷಿತವಾಗಿ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಿ. ಇದು ಶಾಶ್ವತ ವಾಸದ ದಿನವಾಗಿದೆ.”

ಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ನಮ್ಮ ಬಳಿ ಇನ್ನೂ ಹೆಚ್ಚಿಗೆಯಿದೆ.

ಇವರಿಗಿಂತ ಮೊದಲು ನಾವು ಅನೇಕ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಊರಿಡೀ ಜಾಲಾಡಿ ನೋಡಿದರು—ಓಡಿ ಪಾರಾಗಲು ಯಾವುದಾದರೂ ಸ್ಥಳವಿದೆಯೇ ಎಂದು!

ನಿಶ್ಚಯವಾಗಿಯೂ ಅದರಲ್ಲಿ ನೀತಿಪಾಠವಿದೆ—ಹೃದಯವುಳ್ಳ ವ್ಯಕ್ತಿಗೆ ಅಥವಾ ಹೃದಯ ಸಾನಿಧ್ಯತೆಯಿಂದ ಕಿವಿಗೊಟ್ಟು ಕೇಳುವವನಿಗೆ.

ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದೆವು. ಆಯಾಸವು ನಮ್ಮನ್ನು ಸ್ಪರ್ಶಿಸಲೇ ಇಲ್ಲ.

ಆದ್ದರಿಂದ ಅವರು ಹೇಳುವ ಮಾತುಗಳ ಬಗ್ಗೆ ತಾಳ್ಮೆಯಿಂದಿರಿ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ.

ರಾತ್ರಿಯ ಸಮಯದಲ್ಲೂ ಮತ್ತು ನಮಾಝ್ ನಿರ್ವಹಿಸಿದ ಬಳಿಕವೂ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.

ಕಿವಿಗೊಟ್ಟು ಕೇಳಿರಿ. ಕರೆಯುವವನು ಹತ್ತಿರದಲ್ಲೇ ಇರುವ ಒಂದು ಸ್ಥಳದಿಂದ ಕೂಗಿ ಕರೆಯುವ ದಿನ.

ಆ ಭಯಾನಕ ಚೀತ್ಕಾರವನ್ನು ಖಾತ್ರಿಯಾಗಿ ಕೇಳುವ ದಿನ! ಅದು ಹೊರಡುವ ದಿನವಾಗಿದೆ.

ನಿಶ್ಚಯವಾಗಿಯೂ ನಾವು ಜೀವ ಮತ್ತು ಮರಣವನ್ನು ನೀಡುವೆವು. ಗಮ್ಯಸ್ಥಾನವು ನಮ್ಮ ಬಳಿಯೇ ಆಗಿದೆ.

ಭೂಮಿಯು ಒಡೆದು ಸೀಳಾಗಿ ಅವರು ತರಾತುರಿಯಿಂದ (ಹೊರಬರುವ) ದಿನ. ಅವರನ್ನು ಒಟ್ಟುಗೂಡಿಸುವುದು ನಮ್ಮ ಮಟ್ಟಿಗೆ ಬಹಳ ಸುಲಭವಾಗಿದೆ.

ಅವರು ಏನು ಹೇಳುತ್ತಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನೀವು ಅವರ ಮೇಲೆ ಸರ್ವಾಧಿಕಾರವಿರುವವರಲ್ಲ. ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ಕುರ್‌ಆನ್‍ನ ಮೂಲಕ ಉಪದೇಶವನ್ನು ನೀಡಿರಿ.