عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The cattle [Al-Anaam] - Kannada translation

Surah The cattle [Al-Anaam] Ayah 165 Location Maccah Number 6

ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ಅಂಧಕಾರಗಳನ್ನು ಹಾಗೂ ಬೆಳಕನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಆದರೂ ಸತ್ಯನಿಷೇಧಿಗಳು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಮಾನರನ್ನು ಕಲ್ಪಿಸುತ್ತಿದ್ದಾರೆ.

ನಿಮ್ಮನ್ನು ಜೇಡಿಮಣ್ಣಿನಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ಅವಧಿಯನ್ನು ನಿಶ್ಚಯಿಸಿದನು. ಅವನ ಬಳಿ ಇನ್ನೊಂದು ನಿಶ್ಚಿತ ಅವಧಿಯಿದೆ. ಹೀಗಿದ್ದೂ ನೀವು ಸಂಶಯಪಡುತ್ತೀರಿ.

ಅವನೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಏಕೈಕ ದೇವನಾದ ಅಲ್ಲಾಹು. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅವನು ತಿಳಿಯುತ್ತಾನೆ. ನೀವು ಮಾಡುವ ಕರ್ಮಗಳನ್ನೂ ಅವನು ತಿಳಿಯುತ್ತಾನೆ.

ಅವರ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳಲ್ಲಿ ಯಾವುದೇ ಒಂದು ದೃಷ್ಟಾಂತವು ಅವರ ಬಳಿಗೆ ಬಂದರೂ, ಅವರು ಅದರಿಂದ ವಿಮುಖರಾಗುತ್ತಿದ್ದರು.

ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದರ ನಿಜಾಂಶಗಳು ನಂತರ ಅವರ ಬಳಿಗೆ ಬರಲಿವೆ.

ಅವರಿಗಿಂತ ಮೊದಲು ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆಂದು ಅವರು ನೋಡಿಲ್ಲವೇ? ನಿಮಗೆ ನೀಡದಂತಹ ಶಕ್ತಿ-ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು. ಅವರಿಗೆ ಆಕಾಶದಿಂದ ಧಾರಾಕಾರ ಮಳೆಯನ್ನು ಸುರಿಸಿಕೊಟ್ಟೆವು. ಅವರ ತಳಭಾಗದಿಂದ ನದಿಗಳು ಹರಿಯುವಂತೆ ಮಾಡಿದೆವು. ನಂತರ ಅವರು ಮಾಡಿದ ಪಾಪಗಳ ಕಾರಣದಿಂದ ನಾವು ಅವರನ್ನು ನಾಶ ಮಾಡಿದೆವು. ಅವರ ನಂತರ ನಾವು ಬೇರೊಂದು ತಲೆಮಾರನ್ನು ಸೃಷ್ಟಿಸಿದೆವು.

ನಾವು ನಿಮಗೆ ಕಾಗದದಲ್ಲಿ ಬರೆದಿರುವ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ, ನಂತರ ಅವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ, “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ” ಎಂದು ಆ ಸತ್ಯನಿಷೇಧಿಗಳು ಹೇಳುತ್ತಿದ್ದರು.

ಅವರು ಹೇಳಿದರು: “ಅವರ (ಪ್ರವಾದಿಯ) ಜೊತೆಯಲ್ಲಿ ಒಬ್ಬ ದೇವದೂತರನ್ನು ಏಕೆ ಇಳಿಸಲಾಗಿಲ್ಲ?” ಆದರೆ ನಾವು ದೇವದೂತರನ್ನು ಇಳಿಸುತ್ತಿದ್ದರೆ ವಿಷಯವು (ಅಂತಿಮವಾಗಿ) ತೀರ್ಮಾನವಾಗುತ್ತಿತ್ತು. ನಂತರ ಅವರಿಗೆ ಕಾಲಾವಕಾಶ ನೀಡಲಾಗುತ್ತಿರಲಿಲ್ಲ.

ನಾವು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೂ ಸಹ ಅವರನ್ನು ಮನುಷ್ಯನಾಗಿ ಮಾಡಿಯೇ ಕಳುಹಿಸುತ್ತಿದ್ದೆವು. ಅವರು ಈಗ ಏನು ಗೊಂದಲ ಮಾಡುತ್ತಿದ್ದಾರೋ ಅದೇ ಗೊಂದಲವನ್ನು ಅವರು ಆಗಲೂ ಮಾಡುತ್ತಿದ್ದರು.[1]

ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಜನರಿಂದ ತಮಾಷೆಗೆ ಗುರಿಯಾಗಿದ್ದಾರೆ. ನಂತರ, ಅವರು ಏನು ತಮಾಷೆ ಮಾಡುತ್ತಿದ್ದರೋ ಅದೇ ಅವರನ್ನು ಆವರಿಸಿಕೊಂಡಿತು.

ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.”

ಕೇಳಿರಿ: “ಭೂಮ್ಯಾಕಾಶಗಳಲ್ಲಿರುವುದು ಯಾರಿಗೆ ಸೇರಿದ್ದು?” ಹೇಳಿರಿ: “ಅಲ್ಲಾಹನಿಗೆ ಸೇರಿದ್ದು.” ಅವನು ದಯೆ ತೋರುವುದನ್ನು ಸ್ವಯಂ ಕಡ್ಡಾಯಗೊಳಿಸಿದ್ದಾನೆ. ಪುನರುತ್ಥಾನದ ದಿನದಂದು ಅವನು ನಿಮ್ಮನ್ನು ಖಂಡಿತ ಒಟ್ಟುಗೂಡಿಸುವನು. ಅದರಲ್ಲಿ ಸಂಶಯವೇ ಇಲ್ಲ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.

ರಾತ್ರಿ ಮತ್ತು ಹಗಲಿನಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

ಹೇಳಿರಿ: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ನಾನು ರಕ್ಷಕನಾಗಿ ಸ್ವೀಕರಿಸಬೇಕೇ? ಅವನು ಆಹಾರ ನೀಡುತ್ತಾನೆ. ಅವನಿಗೆ ಯಾರೂ ಆಹಾರವನ್ನು ನೀಡುವುದಿಲ್ಲ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನಿಗೆ ಶರಣಾದವರಲ್ಲಿ ಮೊದಲಿಗನಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ. ನೀವು ಎಂದಿಗೂ ಬಹುದೇವಾರಾಧಕರಲ್ಲಿ ಸೇರಬಾರದು (ಎಂದು ಕೂಡ ನನಗೆ ಆಜ್ಞಾಪಿಸಲಾಗಿದೆ).”

ಹೇಳಿರಿ: “ನಾನು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಅವಿಧೇಯತೆ ತೋರಿದರೆ, ಒಂದು ಭಯಾನಕ ದಿನದ (ಪುನರುತ್ಥಾನ ದಿನದ) ಶಿಕ್ಷೆ (ನನ್ನ ಮೇಲೆರಗಬಹುದೆಂದು) ನಾನು ಭಯಪಡುತ್ತೇನೆ.”

ಆ ದಿನ ಯಾರು ಶಿಕ್ಷೆಯಿಂದ ಪಾರಾಗುತ್ತಾನೋ ಅವನಿಗೆ ಅಲ್ಲಾಹು ಖಂಡಿತ ದಯೆ ತೋರಿದ್ದಾನೆ. ಅದು ಸ್ಪಷ್ಟ ವಿಜಯವಾಗಿದೆ.

ಅಲ್ಲಾಹು ನಿಮಗೇನಾದರೂ ತೊಂದರೆ ಕೊಟ್ಟರೆ, ಅದನ್ನು ನಿವಾರಿಸಲು ಅವನ ಹೊರತು ಯಾರಿಗೂ ಸಾಧ್ಯವಿಲ್ಲ. ಅವನು ನಿಮಗೇನಾದರೂ ಒಳಿತು ಮಾಡಿದರೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ಅವನಿಗೆ ಅವರ ದಾಸರ ಮೇಲೆ ಪರಮಾಧಿಕಾರವಿದೆ. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.

ಕೇಳಿರಿ: “ಅತಿದೊಡ್ಡ ಸಾಕ್ಷ್ಯ ಯಾವುದು?” ಹೇಳಿರಿ: “ಅಲ್ಲಾಹು ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿದ್ದಾನೆ. ಈ ಕುರ್‌ಆನಿನ ಮೂಲಕ ನಿಮಗೆ ಮತ್ತು ಇದು ತಲುಪುವ ಎಲ್ಲರಿಗೂ ಮುನ್ನೆಚ್ಚರಿಕೆ ನೀಡಲು ನನಗೆ ಈ ಕುರ್‌ಆನನ್ನು ದೇವವಾಣಿಯಾಗಿ ನೀಡಲಾಗಿದೆ. ಅಲ್ಲಾಹನೊಂದಿಗೆ ಬೇರೆ ದೇವರಿದ್ದಾರೆಂದು ನೀವು ನಿಜವಾಗಿಯೂ ಸಾಕ್ಷಿವಹಿಸುತ್ತೀರಾ?” ಹೇಳಿರಿ: “ನಾನು ಸಾಕ್ಷಿವಹಿಸುವುದಿಲ್ಲ.” ಹೇಳಿರಿ: “ಅವನು ಏಕೈಕ ದೇವನು. ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.”

ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು (ಯಹೂದಿಗಳು ಮತ್ತು ಕ್ರೈಸ್ತರು) ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅದನ್ನು (ಕುರ್‌ಆನನ್ನು) ಗುರುತಿಸುತ್ತಾರೆ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.

ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.

ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಸಹಭಾಗಿತ್ವ (ಶಿರ್ಕ್) ಮಾಡಿದವರೊಡನೆ ಕೇಳುವೆವು: “ನೀವು (ನಿಮ್ಮ ದೇವರುಗಳೆಂದು) ವಾದಿಸುತ್ತಿದ್ದ ಆ ಸಹಭಾಗಿಗಳು ಎಲ್ಲಿದ್ದಾರೆ?”

ನಂತರ ಅವರ ಸಹಭಾಗಿತ್ವದ (ಶಿರ್ಕ್‌ನ) ಪರಿಣಾಮವು, “ನಮ್ಮ ಪರಿಪಾಲಕನಾದ ಅಲ್ಲಾಹನ ಮೇಲಾಣೆ! ನಿಶ್ಚಯವಾಗಿಯೂ ನಾವು ಸಹಭಾಗಿತ್ವ (ಶಿರ್ಕ್) ಮಾಡಿಲ್ಲ” ಎಂದು ಹೇಳುವುದರ ಹೊರತು ಇನ್ನೇನೂ ಆಗಿರುವುದಿಲ್ಲ.

ಅವರು ಅವರ ಬಗ್ಗೆಯೇ ಹೇಗೆ ಸುಳ್ಳು ಹೇಳುತ್ತಿದ್ದಾರೆಂದು ನೋಡಿ. ಅವರು (ಅಲ್ಲಾಹನ ಸಹಭಾಗಿಗಳೆಂದು) ಆರೋಪಿಸುತ್ತಿದ್ದ ದೇವರುಗಳೆಲ್ಲವೂ ಅವರನ್ನು ಬಿಟ್ಟು ಮರೆಯಾಗಿ ಹೋದವು.

ಅವರಲ್ಲಿ ಕೆಲವರು ನೀವು (ಕುರ್‌ಆನ್ ಪಠಿಸುವುದನ್ನು) ಕಿವಿಗೊಟ್ಟು ಕೇಳುತ್ತಾರೆ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳ ಮೇಲೆ ಪರದೆಗಳನ್ನು ಮತ್ತು ಅವರ ಕಿವಿಗಳಿಗೆ ಕಿವುಡುತನವನ್ನು ಹಾಕಿದ್ದೇವೆ. ಅವರು ಎಲ್ಲಾ ರೀತಿಯ ದೃಷ್ಟಾಂತಗಳನ್ನು ನೋಡಿದರೂ ವಿಶ್ವಾಸವಿಡುವುದಿಲ್ಲ. ಎಲ್ಲಿಯವರೆಗೆಂದರೆ ಅವರು ತಮ್ಮ ಬಳಿಗೆ ತರ್ಕಿಸುವುದಕ್ಕಾಗಿ ಬಂದರೆ, ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಪುರಾತನ ಕಾಲದ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”

ಅವರು ಆ ಸತ್ಯದಿಂದ ಜನರನ್ನು ತಡೆಯುವುದಲ್ಲದೆ, ಸ್ವಯಂ ಅದರಿಂದ ದೂರವಾಗುತ್ತಿದ್ದಾರೆ. ಅವರು ಸ್ವಯಂ ಅವರನ್ನೇ ನಾಶ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.

ಅವರನ್ನು ನರಕದ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡಿದ್ದರೆ! ಅವರು ಹೇಳುವರು: “ನಮ್ಮನ್ನು ಪುನಃ ಭೂಲೋಕಕ್ಕೆ ಕಳುಹಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಹಾಗೇನಾದರೂ ಕಳುಹಿಸಿದರೆ, ನಾವು ನಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಖಂಡಿತ ನಿಷೇಧಿಸುವುದಿಲ್ಲ; ಮತ್ತು ನಾವು ಖಂಡಿತ ಸತ್ಯವಿಶ್ವಾಸಿಗಳೊಡನೆ ಸೇರುವೆವು.”

ಅಲ್ಲ, ವಾಸ್ತವವಾಗಿ ಅವರು ಇದಕ್ಕೆ ಮೊದಲು ಏನನ್ನು ಮುಚ್ಚಿಟ್ಟಿದ್ದರೋ ಅದು ಈಗ ಅವರಿಗೆ ಬಹಿರಂಗವಾಗಿದೆ. ಅವರನ್ನು ಪುನಃ ಭೂಲೋಕಕ್ಕೆ ಕಳುಹಿಸಲಾದರೂ, ಅವರಿಗೆ ವಿರೋಧಿಸಲಾದ ವಿಷಯಗಳನ್ನೇ ಅವರು ಪುನರಾವರ್ತಿಸುವರು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.

ಅವರು ಹೇಳಿದರು: “ನಮ್ಮ ಈ ಭೂಲೋಕ ಜೀವನದ ಹೊರತು ಬೇರೇನೂ ಇಲ್ಲ. ನಮಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೂ ಇಲ್ಲ.”

ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಿಸಲಾದ ದೃಶ್ಯವನ್ನು ನೀವು ನೋಡಿದ್ದರೆ! ಅವನು ಕೇಳುವನು: “ಇದು ಸತ್ಯವಲ್ಲವೇ?” ಅವರು ಉತ್ತರಿಸುವರು: “ಹೌದು! ನಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ.” ಅವನು ಹೇಳುವನು: “ಹಾಗಾದರೆ ನೀವು ಏನನ್ನು ನಿಷೇಧಿಸಿದಿರೋ ಅದರ ಶಿಕ್ಷೆಯನ್ನು ಅನುಭವಿಸಿರಿ.”

ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಿಶ್ಚಯವಾಗಿಯೂ ನಷ್ಟ ಹೊಂದಿದರು. ಎಲ್ಲಿಯವರೆಗೆಂದರೆ, ಹಠಾತ್ತನೆ ಅಂತಿಮದಿನವು ಬರುವಾಗ, ಅವರು ಹೇಳುವರು: “ನಾವು ಇದರ (ಅಂತಿಮದಿನ) ಬಗ್ಗೆ ನಿರ್ಲಕ್ಷ್ಯ ಮಾಡಿದ ಕಾರಣ ಅಯ್ಯೋ! ನಮ್ಮ ದುರ್ಗತಿಯೇ!” ಅವರು ಅವರ ಬೆನ್ನುಗಳ ಮೇಲೆ ಪಾಪಗಳ ಭಾರವನ್ನು ಹೊರುತ್ತಿರುವರು. ಅವರು ಹೊರುವ ಭಾರವು ಬಹಳ ನಿಕೃಷ್ಟವಾಗಿದೆ.

ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಲ್ಲದೆ ಇನ್ನೇನೂ ಅಲ್ಲ. ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮವಾಗಿದೆ. ನೀವು ಆಲೋಚಿಸುವುದಿಲ್ಲವೇ?

ಅವರು ಹೇಳುವ ಮಾತುಗಳಿಂದ ನಿಮಗೆ ಬೇಸರವಾಗುತ್ತಿದೆಯೆಂದು ನಮಗೆ ಖಂಡಿತ ತಿಳಿದಿದೆ. ಆದರೆ ಅವರು ನಿಮ್ಮನ್ನು ನಿಷೇಧಿಸುವುದಿಲ್ಲ. ಆದರೆ ಆ ಅತಿರೇಕಿಗಳು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಾರೆ.

ನಿಮಗಿಂತ ಮೊದಲೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿದ್ದಾರೆ. ಜನರು ತಮ್ಮನ್ನು ನಿಷೇಧಿಸುವುದನ್ನು ಮತ್ತು ತಮಗೆ ತೊಂದರೆ ನೀಡುವುದನ್ನು ಅವರು ತಾಳಿಕೊಳ್ಳುತ್ತಿದ್ದರು—ನಮ್ಮ ಸಹಾಯವು ಬರುವವರೆಗೆ. ಅಲ್ಲಾಹನ ವಚನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಸಂದೇಶವಾಹಕರುಗಳ ಕೆಲವು ಸಮಾಚಾರಗಳು ನಿಮಗೆ ಈಗಾಗಲೇ ತಲುಪಿವೆ.

ಅವರು ನಿಮ್ಮನ್ನು ತಿರಸ್ಕರಿಸಿ ವಿಮುಖರಾಗುವುದನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾಗುವುದಾದರೆ, ಭೂಮಿಯೊಳಗಿಳಿಯಲು ಒಂದು ಸುರಂಗವನ್ನು, ಅಥವಾ ಆಕಾಶಕ್ಕೇರಲು ಒಂದು ಏಣಿಯನ್ನು ಹುಡುಕಿ, ನಂತರ ಅವರಿಗೊಂದು ದೃಷ್ಟಾಂತವನ್ನು ತಂದುಕೊಡಲು ಸಾಧ್ಯವಾಗುವುದಾದರೆ ತಂದು ಕೊಡಿ. ಅಲ್ಲಾಹು ಇಚ್ಛಿಸಿದರೆ ಅವರೆಲ್ಲರನ್ನೂ ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದ್ದರಿಂದ ನೀವು ಅವಿವೇಕಿಗಳಲ್ಲಿ ಸೇರಬೇಡಿ.

ಕೇಳುವವರು ಮಾತ್ರ ಉತ್ತರಿಸುತ್ತಾರೆ. ಸತ್ತವರನ್ನು ಅಲ್ಲಾಹು ಜೀವ ನೀಡಿ ಎಬ್ಬಿಸುತ್ತಾನೆ. ನಂತರ ಅವರನ್ನು ಅವನ ಬಳಿಗೆ ಮರಳಿಸಲಾಗುತ್ತದೆ.

ಅವರು ಕೇಳುತ್ತಾರೆ: “ಅವರಿಗೆ (ಪ್ರವಾದಿಗೆ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಅವತೀರ್ಣವಾಗಿಲ್ಲ?” ಹೇಳಿರಿ: “ನಿಶ್ಚಯವಾಗಿಯೂ ದೃಷ್ಟಾಂತವನ್ನು ಅವತೀರ್ಣಗೊಳಿಸುವ ಸಾಮರ್ಥ್ಯ ಅಲ್ಲಾಹನಿಗಿದೆ.” ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

ಭೂಮಿಯಲ್ಲಿರುವ ಯಾವುದೇ ಜೀವಿಯಾಗಲಿ ಅಥವಾ (ಆಕಾಶದಲ್ಲಿ) ಎರಡು ರೆಕ್ಕೆಗಳಿಂದ ಹಾರಾಡುವ ಹಕ್ಕಿಗಳಾಗಲಿ, ಅವೆಲ್ಲವೂ ನಿಮ್ಮಂತಿರುವ ಸಮುದಾಯಗಳಾಗಿವೆ. ನಾವು ಗ್ರಂಥದಲ್ಲಿ[1] ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ನಂತರ ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಒಟ್ಟುಗೂಡಿಸಲಾಗುತ್ತದೆ.

ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಕಿವುಡರು, ಮೂಕರು ಮತ್ತು ಕತ್ತಲೆಗಳಲ್ಲಿರುವವರಾಗಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರನ್ನು ದುರ್ಮಾರ್ಗದಲ್ಲಿ ಮಾಡುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ನೇರಮಾರ್ಗದಲ್ಲಿ ಮಾಡುತ್ತಾನೆ.

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಅಂತಿಮದಿನವು ಸಂಭವಿಸಿದರೆ, ನೀವು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುತ್ತೀರಾ? ನೀವು ಸತ್ಯವಂತರಾಗಿದ್ದರೆ ಹೇಳಿರಿ.”

ಇಲ್ಲ, ವಾಸ್ತವವಾಗಿ ನೀವು ಅಲ್ಲಾಹನನ್ನೇ ಕರೆದು ಪ್ರಾರ್ಥಿಸುತ್ತೀರಿ. ಆಗ ಅವನು ಇಚ್ಛಿಸಿದರೆ, ಯಾವುದಕ್ಕಾಗಿ ನೀವು ಅವನನ್ನು ಕರೆದು ಪ್ರಾರ್ಥಿಸಿದಿರೋ ಅದನ್ನು ಅವನು ನಿವಾರಿಸುವನು. (ಆ ಸಂದರ್ಭದಲ್ಲಿ) ನೀವು ಮಾಡುತ್ತಿದ್ದ ಸಹಭಾಗಿತ್ವವನ್ನು (ಶಿರ್ಕ್) ನೀವು ಮರೆತುಬಿಡುತ್ತೀರಿ.

ನಿಮಗಿಂತ ಮೊದಲು ಅನೇಕ ಸಮುದಾಯಗಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿದ್ದೇವೆ. ನಂತರ ಅವರು ವಿನಮ್ರರಾಗುವುದಕ್ಕಾಗಿ ನಾವು ಅವರನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿದೆವು.

ನಮ್ಮ ಶಿಕ್ಷೆಯು ಬಂದಾಗ ಅವರೇಕೆ ವಿನಮ್ರರಾಗಲಿಲ್ಲ? ಆದರೆ ಅವರ ಹೃದಯಗಳು ಕಠೋರವಾದವು. ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಶೈತಾನನು ಅವರಿಗೆ ಅಲಂಕರಿಸಿ ತೋರಿಸಿದನು.

ಅವರಿಗೆ ನೀಡಲಾದ ಹಿತೋಪದೇಶಗಳನ್ನು ಅವರು ಮರೆತಾಗ, ಎಲ್ಲಾ ವಸ್ತುಗಳ ದ್ವಾರಗಳನ್ನು ನಾವು ಅವರಿಗೆ ತೆರೆದುಕೊಟ್ಟೆವು.[1] ಎಲ್ಲಿಯವರೆಗೆಂದರೆ, ಅವರಿಗೆ ನೀಡಲಾದ ಸವಲತ್ತುಗಳನ್ನು ಕಂಡು ಅವರು ಆನಂದಿಸುತ್ತಿದ್ದಾಗ ಹಠಾತ್ತನೆ ನಾವು ಅವರನ್ನು ಹಿಡಿದೆವು. ಆಗ ಅವರು ಸಂಪೂರ್ಣ ಹತಾಶರಾದರು.

ಅಕ್ರಮವೆಸಗಿದ ಜನರನ್ನು ಬೇರು ಸಹಿತ ನಿರ್ಮೂಲನ ಮಾಡಲಾಯಿತು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮ್ಮ ಶ್ರವಣಶಕ್ತಿ ಮತ್ತು ದೃಷ್ಟಿಯನ್ನು ತೆಗೆದು, ನಿಮ್ಮ ಹೃದಯಗಳಿಗೆ ಮೊಹರು ಹಾಕಿದರೆ, ಅಲ್ಲಾಹನ ಹೊರತು ಅದನ್ನು ತಂದುಕೊಡುವ ದೇವರು ಯಾರು?” ನಾವು ಅವರಿಗೆ ನಮ್ಮ ವಚನಗಳನ್ನು ಹೇಗೆ ವಿವರಿಸಿಕೊಡುತ್ತಿದ್ದೇವೆಂದು ನೋಡಿರಿ. ಅದರ ನಂತರವೂ ಅವರು ವಿಮುಖರಾಗುತ್ತಿದ್ದಾರೆ.

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ಹಠಾತ್ತನೆ ಬಂದರೆ, ಅಥವಾ ಬಹಿರಂಗವಾಗಿ ಬಂದರೆ, ಅಕ್ರಮವೆಸಗಿದ ಜನರ ಹೊರತು ಬೇರೆ ಯಾರಾದರೂ ನಾಶವಾಗುವರೇ?”

ಶುಭವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಮಾತ್ರ ನಾವು ಸಂದೇಶವಾಹಕರನ್ನು ಕಳುಹಿಸುತ್ತೇವೆ. ಆದ್ದರಿಂದ ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸ್ವಯಂ ಸುಧಾರಿಸಿಕೊಳ್ಳುತ್ತಾನೋ—ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

ಆದರೆ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಅವಿಧೇಯತೆ ತೋರಿದ ಕಾರಣ ಶಿಕ್ಷೆಯು ಅವರನ್ನು ಸ್ಪರ್ಶಿಸಲಿದೆ.

ಹೇಳಿರಿ: “ಅಲ್ಲಾಹನ ಖಜಾನೆಗಳು ನನ್ನ ವಶದಲ್ಲಿವೆಯೆಂದು ನಾನು ಹೇಳುವುದಿಲ್ಲ. ನನಗೆ ಅದೃಶ್ಯ ವಿಷಯಗಳು ತಿಳಿದಿಲ್ಲ. ನಾನೊಬ್ಬ ದೇವದೂತನೆಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ದೇವವಾಣಿಯಾಗಿ ನೀಡಲಾದುದನ್ನು ಮಾತ್ರ ನಾನು ಅನುಸರಿಸುತ್ತೇನೆ.” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರೇ? ನೀವೇಕೆ ಆಲೋಚಿಸುವುದಿಲ್ಲ?”

ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ತಮ್ಮನ್ನು ಒಟ್ಟುಗೂಡಿಸಲಾಗುವುದು ಎಂದು ಭಯಪಡುವವರಿಗೆ ಇದರ (ಕುರ್‌ಆನಿನ) ಮೂಲಕ ಎಚ್ಚರಿಕೆ ನೀಡಿರಿ. ಅವರಿಗೆ ಅಲ್ಲಾಹನ ಹೊರತು ಬೇರೆ ರಕ್ಷಕರು ಅಥವಾ ಶಿಫಾರಸುಗಾರರಿಲ್ಲ. ಅವರು ದೇವಭಯವುಳ್ಳವರಾಗುವುದಕ್ಕಾಗಿ.

ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರನ್ನು ದೂರ ಮಾಡಬೇಡಿ.[1] ಅವರನ್ನು ವಿಚಾರಣೆ ಮಾಡುವ ಹೊಣೆ ನಿಮಗಿಲ್ಲ. ನಿಮ್ಮನ್ನು ವಿಚಾರಣೆ ಮಾಡುವ ಹೊಣೆ ಅವರಿಗಿಲ್ಲ. ನೀವು ಅವರನ್ನು ದೂರ ಮಾಡಿದರೆ, ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.

ಹೀಗೆ ನಾವು ಅವರಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸಿದೆವು. “ಅಲ್ಲಾಹು ನಮ್ಮ ನಡುವೆ ಅನುಗ್ರಹ ನೀಡಿ ಆಶೀರ್ವದಿಸಿದ್ದು ಇವರನ್ನೇ ಏನು?” ಎಂದು ಅವರು (ಸತ್ಯನಿಷೇಧಿಗಳು) ಹೇಳುವುದಕ್ಕಾಗಿ. ಕೃತಜ್ಞರಾಗಿರುವವರ ಬಗ್ಗೆ ಅಲ್ಲಾಹು ಅತಿಹೆಚ್ಚು ತಿಳಿದವನಲ್ಲವೇ?

ನಮ್ಮ ವಚನಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: “ನಿಮ್ಮ ಮೇಲೆ ಶಾಂತಿಯಿರಲಿ; ನಿಮ್ಮ ಪರಿಪಾಲಕನು ದಯೆ ತೋರುವುದನ್ನು ಸ್ವಯಂ ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ನಿಮ್ಮಲ್ಲಿ ಒಬ್ಬರು ಅರಿವಿಲ್ಲದೆ ಒಂದು ತಪ್ಪು ಮಾಡಿ, ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡರೆ, ನಿಶ್ಚಯವಾಗಿಯೂ ಅವನು (ಅಲ್ಲಾಹು) ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”

ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅಪರಾಧಿಗಳ ಮಾರ್ಗವು ನಿಚ್ಚಳವಾಗುವುದಕ್ಕಾಗಿ.

ಹೇಳಿರಿ: “ನಿಶ್ಚಯವಾಗಿಯೂ, ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರನ್ನು ಆರಾಧಿಸುವುದನ್ನು ನನಗೆ ವಿರೋಧಿಸಲಾಗಿದೆ.” ಹೇಳಿರಿ: “ನಾನು ನಿಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುವುದಿಲ್ಲ. ಹಿಂಬಾಲಿಸಿದರೆ ನಾನು ಖಂಡಿತ ದಾರಿತಪ್ಪುವೆನು ಮತ್ತು ಸನ್ಮಾರ್ಗಿಗಳಲ್ಲಿ ಸೇರದವನಾಗುವೆನು.”

ಹೇಳಿರಿ: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳಲ್ಲಿದ್ದೇನೆ. ಆದರೆ ನೀವು ಅದನ್ನು ನಿಷೇಧಿಸಿದ್ದೀರಿ. ನೀವು ತ್ವರೆ ಮಾಡುತ್ತಿರುವ ಶಿಕ್ಷೆ ನನ್ನ ವಶದಲ್ಲಿಲ್ಲ. ಆಜ್ಞಾಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. ಅವನು ಸತ್ಯವನ್ನು ತಿಳಿಸುತ್ತಾನೆ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”

ಹೇಳಿರಿ: “ನೀವು ತ್ವರೆ ಮಾಡುವ ಶಿಕ್ಷೆ ನನ್ನ ವಶದಲ್ಲಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ವಿಷಯವು ತೀರ್ಮಾನವಾಗಿ ಬಿಡುತ್ತಿತ್ತು. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.”

ಅಗೋಚರ ವಿಷಯಗಳ ಖಜಾನೆಗಳಿರುವುದು[1] ಅಲ್ಲಾಹನ ಬಳಿ ಮಾತ್ರ. ಅವನಲ್ಲದೆ ಯಾರಿಗೂ ಅದು ತಿಳಿದಿಲ್ಲ. ನೆಲದಲ್ಲಿ ಮತ್ತು ಕಡಲಲ್ಲಿರುವುದನ್ನು ಅವನು ತಿಳಿಯುತ್ತಾನೆ. ಅವನು ತಿಳಿಯದೆ ಒಂದೇ ಒಂದು ಎಲೆಯೂ ಉದುರುವುದಿಲ್ಲ. ಭೂಮಿಯ ಗಾಢಾಂಧಕಾರಗಳಲ್ಲಿರುವ ಒಂದು ಧಾನ್ಯವಾಗಲಿ, ಹಸಿ ಅಥವಾ ಒಣಗಿದ ಯಾವುದೇ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ.”

ರಾತ್ರಿಯಲ್ಲಿ (ನಿದ್ರಿಸುವಾಗ) ಅವನು ನಿಮ್ಮ ಆತ್ಮಗಳನ್ನು ವಶಪಡಿಸುತ್ತಾನೆ ಮತ್ತು ನೀವು ಹಗಲಿನಲ್ಲಿ ಮಾಡಿದ ಕರ್ಮಗಳನ್ನು ತಿಳಿಯುತ್ತಾನೆ. ನಂತರ ನಿಶ್ಚಿತ ಜೀವಿತಾವಧಿಯನ್ನು ಪೂರ್ಣಗೊಳಿಸಲು ಅವನು ನಿಮ್ಮನ್ನು ಹಗಲಿನಲ್ಲಿ (ನಿದ್ದೆಯಿಂದ) ಎಬ್ಬಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೆ ಮರಳಿಸಲಾಗುತ್ತದೆ. ನಂತರ ನೀವು ಮಾಡಿದ ಕರ್ಮಗಳನ್ನು ಅವನು ನಿಮಗೆ ತಿಳಿಸುತ್ತಾನೆ.

ಅವನಿಗೆ ಅವನ ದಾಸರ ಮೇಲೆ ಪರಮಾಧಿಕಾರವಿದೆ. ನಿಮ್ಮ ಮೇಲ್ನೋಟಕ್ಕೆ ಅವನು ಕಾವಲುಗಾರರನ್ನು (ದೇವದೂತರನ್ನು) ಕಳುಹಿಸುತ್ತಾನೆ. ಎಲ್ಲಿಯವರೆಗೆಂದರೆ, ನಿಮ್ಮಲ್ಲಿ ಒಬ್ಬನಿಗೆ ಮರಣವು ಸನ್ನಿಹಿತವಾದಾಗ, ನಮ್ಮ ದೂತರು ಅವನ ಆತ್ಮವನ್ನು ವಶಪಡಿಸುತ್ತಾರೆ. ಅವರು (ಕರ್ತವ್ಯ ನಿರ್ವಹಣೆಯಲ್ಲಿ) ಲೋಪವೆಸಗುವುದಿಲ್ಲ.

ನಂತರ ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುತ್ತದೆ. ತಿಳಿಯಿರಿ! ಆಜ್ಞಾಧಿಕಾರವಿರುವುದು ಅವನಿಗೆ ಮಾತ್ರ. ಅವನು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.

ಹೇಳಿರಿ: “ಅಲ್ಲಾಹು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳುತ್ತಾ ನೀವು ವಿನಮ್ರತೆಯಿಂದ ಮತ್ತು ರಹಸ್ಯವಾಗಿ ಅವನನ್ನು ಕರೆದು ಪ್ರಾರ್ಥಿಸುವಾಗ, ನೆಲ ಮತ್ತು ಕಡಲಿನ ಗಾಢಾಂಧಕಾರಗಳಿಂದ ನಿಮ್ಮನ್ನು ಕಾಪಾಡುವುದು ಯಾರು?

ಹೇಳಿರಿ: “ಅದರಿಂದ ಮತ್ತು ಇತರೆಲ್ಲಾ ಅನಾಹುತಗಳಿಂದ ಅಲ್ಲಾಹನೇ ನಿಮ್ಮನ್ನು ಪಾರು ಮಾಡುತ್ತಾನೆ. ಅದರ ಬಳಿಕವೂ ನೀವು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತೀರಿ.”

ಹೇಳಿರಿ: “ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲುಗಳ ಅಡಿಭಾಗದಿಂದ ನಿಮಗೆ ಶಿಕ್ಷೆಯನ್ನು ಕಳುಹಿಸಲು, ಅಥವಾ ನಿಮ್ಮನ್ನು ವಿಭಿನ್ನ ಪಂಗಡಗಳನ್ನಾಗಿ ಮಾಡಿ ಗೊಂದಲಗೊಳಿಸಿ, ನೀವು ಪರಸ್ಪರ ಹಿಂಸೆ ಅನುಭವಿಸುವಂತೆ ಮಾಡಲು ಅವನಿಗೆ ಸಾಮರ್ಥ್ಯವಿದೆ.” ನಾವು ಹೇಗೆ ವಚನಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ಅವರು ಅರ್ಥಮಾಡಿಕೊಳ್ಳುವುದಕ್ಕಾಗಿ.

ಇದು ಸತ್ಯವಾಗಿದ್ದೂ ಸಹ ನಿಮ್ಮ ಜನರು ಇದನ್ನು ನಿಷೇಧಿಸಿದ್ದಾರೆ. ಹೇಳಿರಿ: “ನಾನು ನಿಮ್ಮ ಮೇಲ್ನೋಟ ವಹಿಸುವವನಲ್ಲ.”

ಪ್ರತಿಯೊಂದು ಘಟನೆಗೂ ಒಂದು ನಿಶ್ಚಿತ ಸಮಯವಿದೆ. ನೀವು ಸದ್ಯವೇ ತಿಳಿಯುವಿರಿ.

ಜನರು ಅಲ್ಲಾಹನ ವಚನಗಳ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ಕಂಡರೆ, ಅವರು ಬೇರೆ ವಿಷಯಕ್ಕೆ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ. ಶೈತಾನನು ನಿಮಗೆ ಮರೆಯುವಂತೆ ಮಾಡಿದರೆ ನೆನಪಾದ ನಂತರ ಅಕ್ರಮವೆಸಗುವ ಆ ಜನರೊಡನೆ ಕುಳಿತುಕೊಳ್ಳಬೇಡಿ.

ಅವರ ವಿಚಾರಣೆ ಮಾಡುವ ಯಾವುದೇ ಹೊಣೆ ದೇವಭಯವುಳ್ಳವರಿಗಿಲ್ಲ. ಆದರೆ ಅವರಿಗೆ ನೆನಪಿಸಿಕೊಡಬೇಕು. ಅವರು ದೇವಭಯದಿಂದ ಜೀವಿಸುವುದಕ್ಕಾಗಿ.

ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರನ್ನು ಹಾಗೂ ಇಹಲೋಕದ ಜೀವನಕ್ಕೆ ಮರುಳಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಜನರು ತಮ್ಮ ಕರ್ಮಗಳ ಕಾರಣದಿಂದ ನಾಶವಾಗದಿರುವುದಕ್ಕಾಗಿ ಇದರ (ಕುರ್‌ಆನಿನ) ಮೂಲಕ ಅವರಿಗೆ ಉಪದೇಶ ನೀಡಿ. ಅವರಿಗೆ ಅಲ್ಲಾಹನ ಹೊರತು ಯಾವುದೇ ರಕ್ಷಕ ಅಥವಾ ಶಿಫಾರಸುಗಾರನಿಲ್ಲ. ಅವರು ಎಲ್ಲಾ ರೀತಿಯ ಪರಿಹಾರಗಳನ್ನು ನೀಡಿದರೂ ಅದನ್ನು ಅವರಿಂದ ಸ್ವೀಕರಿಸಲಾಗುವುದಿಲ್ಲ. ಅವರೇ ತಮ್ಮ ಕರ್ಮಗಳ ಕಾರಣದಿಂದ ನಾಶವಾದವರು. ಅವರು ಸತ್ಯವನ್ನು ನಿಷೇಧಿಸುವ ಕಾರಣ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ.

ಹೇಳಿರಿ: “ಅಲ್ಲಾಹನನ್ನು ಬಿಟ್ಟು ನಮಗೆ ಉಪಕಾರ ಅಥವಾ ತೊಂದರೆ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸಬೇಕೇ? ಅಲ್ಲಾಹು ನಮಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ನಾವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿ ಹೋಗುವಂತಾಗಬೇಕೇ? “ನಮ್ಮ ಬಳಿ ಬಾ” ಎಂದು ಸನ್ಮಾರ್ಗಕ್ಕೆ ಕರೆಯುವ ಗೆಳೆಯರಿದ್ದೂ ಸಹ, ಶೈತಾನರ ಆಮಿಷಕ್ಕೆ ಬಲಿಯಾಗಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ ಅಲೆದಾಡುವ ವ್ಯಕ್ತಿಯಂತೆ ನಾವಾಗಬೇಕೇ?” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.”

“ನಮಾಝ್ ಸಂಸ್ಥಾಪಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ” ಎಂದು ಕೂಡ (ನಮಗೆ ಆಜ್ಞಾಪಿಸಲಾಗಿದೆ). ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುವುದು.

ಭೂಮ್ಯಾಕಾಶಗಳನ್ನು ಸತ್ಯ ಸಹಿತ ಸೃಷ್ಟಿಸಿದವನು ಅವನೇ. ಅವನು “ಉಂಟಾಗು” ಎಂದು ಹೇಳುವ ದಿನ ಅದು ಉಂಟಾಗುತ್ತದೆ. ಅವನ ಮಾತು ಸತ್ಯವಾಗಿದೆ. ಕಹಳೆಯಲ್ಲಿ ಊದಲಾಗುವ ದಿನ ಆಧಿಪತ್ಯವು ಅವನದ್ದಾಗಿದೆ. ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನು. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.

ಇಬ್ರಾಹೀಮರು ತಮ್ಮ ತಂದೆ ಆಝರನೊಡನೆ ಹೇಳಿದ ಸಂದರ್ಭ: “ನೀವು ವಿಗ್ರಹಗಳನ್ನು ದೇವರಾಗಿ ಸ್ವೀಕರಿಸಿದ್ದೀರಾ? ನಿಶ್ಚಯವಾಗಿಯೂ ನೀವು ಮತ್ತು ನಿಮ್ಮ ಜನರು ಸ್ಪಷ್ಟ ದುರ್ಮಾರ್ಗದಲ್ಲಿರುವುದನ್ನು ನಾನು ಕಾಣುತ್ತಿದ್ದೇನೆ.”

ಈ ರೀತಿ ನಾವು ಇಬ್ರಾಹೀಮರಿಗೆ ಭೂಮ್ಯಾಕಾಶಗಳ ಆಧಿಪತ್ಯಗಳನ್ನು ತೋರಿಸಿಕೊಟ್ಟೆವು; ಅವರು ದೃಢವಿಶ್ವಾಸಿಗಳಲ್ಲಿ ಒಳಪಡುವುದಕ್ಕಾಗಿ.

ರಾತ್ರಿಯು ಅವರನ್ನು ಆವರಿಸಿದಾಗ ಅವರು ನಕ್ಷತ್ರವನ್ನು ಕಂಡರು. ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಆದರೆ ಅದು ಕಣ್ಮರೆಯಾದಾಗ ಅವರು ಹೇಳಿದರು: “ಕಣ್ಮರೆಯಾಗುವವರನ್ನು ನಾನು ಇಷ್ಟಪಡುವುದಿಲ್ಲ.”

ನಂತರ ಚಂದ್ರ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ನನ್ನ ಪರಿಪಾಲಕ ನನಗೆ ಸನ್ಮಾರ್ಗ ತೋರಿಸದಿದ್ದರೆ ನಾನು ದಾರಿತಪ್ಪಿದವರಲ್ಲಿ ಸೇರುವುದು ನಿಶ್ಚಿತ.”

ನಂತರ ಸೂರ್ಯ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ! ಇವನು ಬಹಳ ದೊಡ್ಡವನು!” ನಂತರ ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.[1]

ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ (ಅಲ್ಲಾಹನಿಗೆ) ನಾನು ನನ್ನ ಮುಖವನ್ನು ಏಕನಿಷ್ಠೆಯಿಂದ ತಿರುಗಿಸಿದ್ದೇನೆ. ನಾನು ಸಹಭಾಗಿತ್ವ (ಶಿರ್ಕ್) ಮಾಡುವವರಲ್ಲಿ ಸೇರಿದವನಲ್ಲ.”

ಅವರ ಜನರು ಅವರೊಂದಿಗೆ ತರ್ಕಿಸಿದರು. ಅವರು ಹೇಳಿದರು: “ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತೀರಾ? ಅವನು ನನಗೆ ಸನ್ಮಾರ್ಗವನ್ನು ತೋರಿಸಿದ್ದಾನೆ. ನೀವು ಅವನೊಡನೆ ಸಹಭಾಗಿಯಾಗಿ ಮಾಡುವ ಯಾರನ್ನೂ (ಯಾವುದೇ ದೇವರನ್ನೂ) ನಾನು ಭಯಪಡುವುದಿಲ್ಲ. ನನ್ನ ಪರಿಪಾಲಕನು (ಅಲ್ಲಾಹು) ಇಚ್ಛಿಸುವುದು ಮಾತ್ರ ಸಂಭವಿಸುತ್ತದೆ. ನನ್ನ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ. ನೀವು ಉಪದೇಶ ಪಡೆಯುವುದಿಲ್ಲವೇ?

ನೀವು (ಅಲ್ಲಾಹನೊಡನೆ) ಸಹಭಾಗಿಯಾಗಿ ಮಾಡಿದವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಅವತೀರ್ಣಗೊಳಿಸದ ವಸ್ತುಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಲು ನೀವು (ಸ್ವಲ್ಪವೂ) ಭಯಪಡುವುದಿಲ್ಲ. ಹೀಗಿರುವಾಗ ಈ ಎರಡು ಪಕ್ಷಗಳಲ್ಲಿ ನಿರ್ಭಯಕ್ಕೆ ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”[1]

ಸತ್ಯವಿಶ್ವಾಸಿಗಳು ಮತ್ತು ತಮ್ಮ ವಿಶ್ವಾಸದಲ್ಲಿ ಸಹಭಾಗಿತ್ವವನ್ನು (ಶಿರ್ಕ್) ಬೆರೆಸದವರು ಯಾರೋ—ಅವರಿಗೆ ನಿರ್ಭಯವಿದೆ. ಅವರೇ ಸನ್ಮಾರ್ಗ ಪಡೆದವರು.

ಇದು ನಾವು ಇಬ್ರಾಹೀಮರಿಗೆ ಅವರ ಜನರ ವಿರುದ್ಧ ತರ್ಕಿಸಲು ನೀಡಿದ ಪುರಾವೆಯಾಗಿದೆ. ನಾವು ಇಚ್ಛಿಸುವವರ ಸ್ಥಾನಮಾನಗಳನ್ನು ನಾವು ಏರಿಸುತ್ತೇವೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.

ನಾವು ಅವರಿಗೆ ಇಸ್‍ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರಿಗೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಅವರಿಗಿಂತ ಮೊದಲು ನಾವು ನೂಹರಿಗೆ ಸನ್ಮಾರ್ಗವನ್ನು ತೋರಿಸಿದೆವು. ಅವರ ಸಂತಾನದಲ್ಲಿ ಸೇರಿದ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನರಿಗೂ ಕೂಡ. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.

ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸರಿಗೂ ಕೂಡ. ಅವರೆಲ್ಲರೂ ನೀತಿವಂತರಲ್ಲಿ ಸೇರಿದವರು.

ಇಸ್ಮಾಈಲ್, ಅಲ್‍ಯಸಅ್, ಯೂನುಸ್ ಮತ್ತು ಲೂತರಿಗೂ ಕೂಡ. ಅವರೆಲ್ಲರನ್ನೂ ನಾವು ಸರ್ವಲೋಕದವರಲ್ಲಿ ಶ್ರೇಷ್ಠಗೊಳಿಸಿದೆವು.

ಅವರ ಪೂರ್ವಜರು, ಅವರ ಮಕ್ಕಳು ಮತ್ತು ಸಹೋದರರಿಗೂ ಕೂಡ. ಅವರನ್ನು ನಾವು ವಿಶೇಷವಾಗಿ ಆರಿಸಿದೆವು ಮತ್ತು ನೇರಮಾರ್ಗಕ್ಕೆ ಮುನ್ನಡೆಸಿದೆವು.

ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅದನ್ನು ತೋರಿಸುತ್ತಾನೆ. ಅವರು (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಿದ್ದರೆ ಅವರು ಮಾಡಿದ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.

ಇವರಿಗೇ ನಾವು ಗ್ರಂಥ, ವಿವೇಕ ಮತ್ತು ಪ್ರವಾದಿತ್ವಗಳನ್ನು ನೀಡಿದ್ದು. ಇವರು (ಸತ್ಯನಿಷೇಧಿಗಳು) ಅವುಗಳನ್ನು ನಿಷೇಧಿಸಿದರೆ, ಅವುಗಳನ್ನು ನಿಷೇಧಿಸದ ಜನರಿಗೆ ನಾವು ಅದನ್ನು ವಹಿಸಿಕೊಟ್ಟಿದ್ದೇವೆ.

ಇವರಿಗೇ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದ್ದು. ಆದ್ದರಿಂದ ಅವರ ಸನ್ಮಾರ್ಗವನ್ನು ಅನುಸರಿಸಿರಿ. ಹೇಳಿರಿ: “ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲ ಕೇಳುವುದಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶ ಮಾತ್ರವಾಗಿದೆ.”

“ಅಲ್ಲಾಹು ಮನುಷ್ಯನಿಗೆ (ಪ್ರವಾದಿಗೆ) ಏನೂ ಅವತೀರ್ಣಗೊಳಿಸಿಲ್ಲ” ಎಂದು ಅವರು ಹೇಳಿದಾಗ, ಅವರು ಅಲ್ಲಾಹನಿಗೆ ಮಹತ್ವ ನೀಡಬೇಕಾದ ರೀತಿಯಲ್ಲಿ ಮಹತ್ವ ನೀಡಲಿಲ್ಲ. ಕೇಳಿರಿ: “ಜನರಿಗೆ ಬೆಳಕು ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ನೀವು ಅದನ್ನು ಕಾಗದದ ತುಂಡುಗಳಾಗಿ ಮಾಡಿ, ಅದರ ಕೆಲವು ಭಾಗವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನದ್ದನ್ನು ಮುಚ್ಚಿಡುತ್ತೀರಿ. ನಿಮಗೆ ಮತ್ತು ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು (ಆ ಗ್ರಂಥದ ಮೂಲಕ) ಕಲಿಸಿಕೊಡಲಾಗಿತ್ತು.” ಹೇಳಿರಿ: “(ಅದನ್ನು ಅವತೀರ್ಣಗೊಳಿಸಿದ್ದು) ಅಲ್ಲಾಹು.” ನಂತರ ಅವರನ್ನು ಅವರ ವ್ಯರ್ಥ ಮಾತುಗಳಲ್ಲಿ ಆಟವಾಡಲು ಬಿಟ್ಟುಬಿಡಿ.

ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಇದು ಇದಕ್ಕಿಂತ ಮೊದಲಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನ ಜನರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ). ಪರಲೋಕದಲ್ಲಿ ವಿಶ್ವಾಸವಿಡುವವರು ಈ ಗ್ರಂಥದಲ್ಲಿ ವಿಶ್ವಾಸವಿಡುತ್ತಾರೆ. ಅವರು ತಮ್ಮ ನಮಾಝ್‍ಗಳನ್ನು ಸಂರಕ್ಷಿಸುತ್ತಾರೆ.

ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ತನಗೆ ದೇವವಾಣಿ ಅವತೀರ್ಣವಾಗದಿದ್ದರೂ ಅವತೀರ್ಣವಾಗಿದೆಯೆಂದು ಹೇಳುವವನಿಗಿಂತ, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ನಾನು ಕೂಡ ಅವತೀರ್ಣಗೊಳಿಸುತ್ತೇನೆ ಎಂದು ಹೇಳುವವನಿಗಿಂತ ದೊಡ್ಡ ಅಕ್ರಮಿ ಯಾರು? ಅಕ್ರಮಿಗಳು ಮರಣ ಯಾತನೆ ಅನುಭವಿಸುವ ಭಯಾನಕ ದೃಶ್ಯವನ್ನು ನೀವೇನಾದರೂ ನೋಡಿರುತ್ತಿದ್ದರೆ! ದೇವದೂತರುಗಳು ಅವರ ಬಳಿಗೆ ತಮ್ಮ ಕೈಗಳನ್ನು ಚಾಚುತ್ತಾ ಹೇಳುತ್ತಾರೆ: “ನಿಮ್ಮ ಆತ್ಮಗಳನ್ನು ಹೊರಹಾಕಿರಿ; ನೀವು ಅಲ್ಲಾಹನ ಮೇಲೆ ಸತ್ಯಕ್ಕೆ ದೂರವಾದುದನ್ನು ಹೇಳಿದ ಕಾರಣ ಮತ್ತು ಅಹಂಕಾರದಿಂದ ಅವನ ವಚನಗಳನ್ನು ನಿಷೇಧಿಸಿದ ಕಾರಣ ಇಂದು ನಿಮಗೆ ಹೀನಾಯ ಶಿಕ್ಷೆ ನೀಡಲಾಗುವುದು.”

(ಅವರೊಡನೆ ಹೇಳಲಾಗುವುದು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆ, ನೀವು ಒಬ್ಬೊಬ್ಬರಾಗಿ ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ನೀಡಿದ ಸವಲತ್ತುಗಳನ್ನು ನಿಮ್ಮ ಬೆನ್ನ ಹಿಂದೆ ಬಿಟ್ಟು ಬಂದಿದ್ದೀರಿ. ನೀವು (ಅಲ್ಲಾಹನ) ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸುಗಾರರನ್ನು ನಾವು ನಿಮ್ಮ ಜೊತೆಗೆ ಕಾಣುತ್ತಿಲ್ಲ. ನಿಮ್ಮ ಆ ಸಂಬಂಧಗಳು ಮುರಿದು ಬಿದ್ದಿವೆ. ನೀವು (ದೇವರುಗಳೆಂದು) ವಾದಿಸುತ್ತಿದ್ದವರೆಲ್ಲರೂ ನಿಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ.”[1]

ನಿಶ್ಚಯವಾಗಿಯೂ ಅಲ್ಲಾಹು ಧಾನ್ಯವನ್ನು ಮತ್ತು ಖರ್ಜೂರದ ಬೀಜವನ್ನು ಸೀಳುತ್ತಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಅವನೇ ಅಲ್ಲಾಹು. ಹೀಗಿದ್ದೂ ನೀವು ದಾರಿತಪ್ಪುತ್ತಿರುವುದು ಹೇಗೆ?

ಅವನು ಪ್ರಭಾತವನ್ನು ಸೀಳುತ್ತಾನೆ. ಅವನು ರಾತ್ರಿಯನ್ನು ವಿಶ್ರಾಂತಿಯನ್ನಾಗಿ ಮಾಡಿದ್ದಾನೆ ಮತ್ತು ಸೂರ್ಯ-ಚಂದ್ರರನ್ನು ಕಾಲಗಣನೆಗೆ ಆಧಾರವಾಗಿ ಮಾಡಿದ್ದಾನೆ ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.

ನೆಲ ಮತ್ತು ಕಡಲಿನ ಗಾಢಾಂಧಕಾರದಲ್ಲಿ ನೀವು ದಾರಿಯನ್ನು ಕಾಣಲು ಅವನು ನಕ್ಷತ್ರಗಳನ್ನು ಉಂಟು ಮಾಡಿದನು. ತಿಳಿಯುವ ಜನರಿಗಾಗಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ವಾಸ್ತವ್ಯ ಮತ್ತು ಸಂಗ್ರಹ ಸ್ಥಳವನ್ನು[1] ಮಾಡಿದನು ಅರ್ಥಮಾಡಿಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

ಆಕಾಶದಿಂದ ಮಳೆ ಸುರಿಸುವವನು ಅವನೇ. ನಂತರ ನಾವು ಅದರಿಂದ ಎಲ್ಲಾ ರೀತಿಯ ಬೆಳೆಗಳನ್ನು ಉತ್ಪಾದಿಸಿದೆವು. ನಾವು ಅದರಿಂದ ಹಸಿರು ಸಸ್ಯಗಳನ್ನು ಉತ್ಪಾದಿಸಿದೆವು. ಆ ಸಸ್ಯಗಳಿಂದ ನಾವು ತುಂಬಿ ತುಳುಕುವ ಧಾನ್ಯಗಳನ್ನು ಉತ್ಪಾದಿಸುತ್ತೇವೆ. ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗು ಹಾಕಲಾದ ಗೊಂಚಲುಗಳು ಹೊರಹೊಮ್ಮುತ್ತವೆ. ನಾವು ದ್ರಾಕ್ಷಿ ತೋಟಗಳನ್ನು ಮತ್ತು ಪರಸ್ಪರ ಹೋಲಿಕೆಯಿದ್ದರೂ ವಿಭಿನ್ನವಾಗಿರುವ ಆಲಿವ್ ಮತ್ತು ದಾಳಿಂಬೆಯನ್ನು ಉತ್ಪಾದಿಸಿದೆವು. ಅವು ಕಾಯಿಬಿಡುವಾಗ ಮತ್ತು ಹಣ್ಣಾಗುವಾಗ ಅವುಗಳನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಾಂತಗಳಿವೆ.

ಅವರು ಜಿನ್ನ್‌ಗಳನ್ನು ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಆದರೆ ವಾಸ್ತವವಾಗಿ ಅವರನ್ನು ಸೃಷ್ಟಿಸಿದ್ದು ಅವನೇ. ಅವರು ಯಾವುದೇ ಜ್ಞಾನವಿಲ್ಲದೆ ಅಲ್ಲಾಹನಿಗೆ ಗಂಡು ಮತ್ತು ಹೆಣ್ಣುಮಕ್ಕಳಿದ್ದಾರೆಂದು ಆರೋಪಿಸಿದರು. ಅವರ ಈ ವರ್ಣನೆಗಳಿಗಿಂತ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ.

ಅವನು ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನಿಗೆ ಹೆಂಡತಿಯೇ ಇಲ್ಲದಿರುವಾಗ ಮಕ್ಕಳಿರುವುದು ಹೇಗೆ? ಅವನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿದನು. ಅವನು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.

ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿದ್ದಾನೆ.

ದೃಷ್ಟಿಗಳು ಅವನನ್ನು ತಲುಪುವುದಿಲ್ಲ. ಆದರೆ ಅವನು ದೃಷ್ಟಿಗಳನ್ನು ತಲುಪುತ್ತಾನೆ.[1] ಅವನು ಸೂಕ್ಷ್ಮಗ್ರಾಹಿ ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.

ನಿಮಗೆ ನಿಮ್ಮ ಪರಿಪಾಲಕನಿಂದ ಕಣ್ತೆರೆಸುವಂತಹ ಪುರಾವೆಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಒಳಿತು ಅವನಿಗೇ ಆಗಿದೆ. ಯಾರು ಕುರುಡನಾಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. (ಹೇಳಿರಿ): “ನಾನು ನಿಮ್ಮ ಕಾವಲುಗಾರನಲ್ಲ.”

ಈ ರೀತಿ ನಾವು ನಾನಾ ವಿಧಗಳಲ್ಲಿ ವಚನಗಳನ್ನು ವಿವರಿಸಿಕೊಡುತ್ತೇವೆ. “ನೀವು (ಯಹೂದಿ-ಕ್ರೈಸ್ತರಿಂದ) ಕಲಿತು ಬಂದಿದ್ದೀರಿ” ಎಂದು ಸತ್ಯನಿಷೇಧಿಗಳು ಹೇಳುವುದಕ್ಕಾಗಿ ಮತ್ತು ತಿಳುವಳಿಕೆಯಿರುವ ಜನರಿಗೆ ಇದನ್ನು ವಿವರಿಸಿಕೊಡುವುದಕ್ಕಾಗಿ.[1]

ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವನ್ನು ಹಿಂಬಾಲಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಬಹುದೇವಾರಾಧಕರಿಂದ ವಿಮುಖರಾಗಿರಿ.

ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರಿಗೆ ಕಾವಲುಗಾರನಾಗಿ ಮಾಡಿಲ್ಲ. ನೀವು ಅವರ ಮೇಲ್ನೋಟ ವಹಿಸಬೇಕಾದವರೂ ಅಲ್ಲ.

ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಆ ದೇವರುಗಳನ್ನು ದೂಷಿಸಬೇಡಿ. ಇದರಿಂದ ಅವರು ತಿಳುವಳಿಕೆಯಿಲ್ಲದೆ ದ್ವೇಷದಿಂದ ಅಲ್ಲಾಹನನ್ನು ದೂಷಿಸಬಹುದು. ಈ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ್ದೇವೆ. ನಂತರ ಅವರನ್ನು ಅವರ ಪರಿಪಾಲಕನ ಬಳಿಗೆ ಮರಳಿಸಲಾಗುವುದು. ಆಗ ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು.

ಅವರಿಗೆ ಒಂದು ದೃಷ್ಟಾಂತವು ಬಂದರೆ ಅವರು ಅದರಲ್ಲಿ ಖಂಡಿತ ವಿಶ್ವಾಸವಿಡುತ್ತಾರೆಂದು ಅವರು ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳಿದರು. ಹೇಳಿರಿ: “ದೃಷ್ಟಾಂತಗಳು ಅಲ್ಲಾಹನ ಬಳಿ ಮಾತ್ರವಿದೆ.” ನಿಮಗೇನು ಗೊತ್ತು? ಅದು ಬಂದರೂ ಕೂಡ ಅವರು ವಿಶ್ವಾಸವಿಡಲಾರರು.

ಅವರು ಇದರಲ್ಲಿ (ಈ ಕುರ್‌ಆನ್‍ನಲ್ಲಿ) ಪ್ರಥಮ ಬಾರಿ ವಿಶ್ವಾಸವಿಡದಂತೆಯೇ (ಈಗಲೂ) ನಾವು ಅವರ ಹೃದಯಗಳನ್ನು ಮತ್ತು ಕಣ್ಣುಗಳನ್ನು ತಿರುಗಿಸಿಬಿಡುವೆವು. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ನಾವು ಅವರನ್ನು ಬಿಟ್ಟುಬಿಡುವೆವು.

ನಾವು ಅವರ ಬಳಿಗೆ ದೇವದೂತರುಗಳನ್ನು ಇಳಿಸಿದರೂ, ಸತ್ತವರು (ಎದ್ದು ಬಂದು) ಅವರೊಡನೆ ಮಾತನಾಡಿದರೂ, ನಾವು ಎಲ್ಲಾ ವಸ್ತುಗಳನ್ನು ಅವರ ಮುಂದೆ ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ಹೊರತು. ಆದರೆ ಅವರಲ್ಲಿ ಹೆಚ್ಚಿನವರು ಅವಿವೇಕಿಗಳಾಗಿದ್ದಾರೆ.

ಈ ರೀತಿ ನಾವು ಪ್ರತಿಯೊಬ್ಬ ಸಂದೇಶವಾಹಕರಿಗೂ ಮನುಷ್ಯರಲ್ಲಿ ಮತ್ತು ಜಿನ್ನ್‌ಗಳಲ್ಲಿ ಸೇರಿದ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರು ವಂಚನಾತ್ಮಕವಾದ ಆಕರ್ಷಕ ಮಾತುಗಳನ್ನು ಪರಸ್ಪರ ದುರ್ಬೋಧನೆ ಮಾಡುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನು ಅವರು ಆರೋಪಿಸುತ್ತಿರುವ ವಿಷಯಗಳೊಂದಿಗೆ ಬಿಟ್ಟುಬಿಡಿ.

ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳು ಅದರ (ಅವರ ಮಾತುಗಳ) ಕಡೆಗೆ ಆಕರ್ಷಿತವಾಗುವುದಕ್ಕಾಗಿ, ಅವರು ಅದರಲ್ಲಿ ಸಂತೃಪ್ತರಾಗುವುದಕ್ಕಾಗಿ ಮತ್ತು ಅವರು ಮಾಡುವ ಪಾಪಗಳೆಲ್ಲವನ್ನೂ ಮಾಡುವುದಕ್ಕಾಗಿ (ಅವರು ಹಾಗೆ ಮಾಡುತ್ತಿದ್ದಾರೆ).

ಈ ವಿವರಣಾತ್ಮಕ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದು ಅಲ್ಲಾಹನಾಗಿರುವಾಗ ನಾನು ಅವನ ಹೊರತಾದವರನ್ನು ತೀರ್ಪುಗಾರರನ್ನಾಗಿ ಹುಡುಕಬೇಕೇ? ನಾವು ಯಾರಿಗೆ ಗ್ರಂಥ ನೀಡಿದ್ದೇವೆಯೋ ಅವರೆಲ್ಲರೂ ಇದು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯ ಸಹಿತ ಅವತೀರ್ಣವಾದ ಗ್ರಂಥವೆಂದು ತಿಳಿದಿದ್ದಾರೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಬೇಡಿ.

ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯದಲ್ಲಿ ಮತ್ತು ನ್ಯಾಯದಲ್ಲಿ ಪರಿಪೂರ್ಣವಾಗಿದೆ. ಅವನ ವಚನಗಳನ್ನು ಬದಲಾಯಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

ನೀವು ಭೂಮಿಯಲ್ಲಿರುವ ಬಹುಸಂಖ್ಯಾತರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾರೆ. ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಅನುಸರಿಸುತ್ತಾರೆ. ಅವರು ಕೇವಲ ಸುಳ್ಳನ್ನು ಮಾತ್ರ ಹೇಳುತ್ತಾರೆ.

ತನ್ನ ಮಾರ್ಗದಿಂದ ತಪ್ಪಿಹೋದವನು ಯಾರೆಂದು ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂಬ ಬಗ್ಗೆಯೂ ಅವನಿಗೆ ತಿಳಿದಿದೆ.

ಆದ್ದರಿಂದ ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ)ಲಾದ ಪ್ರಾಣಿಗಳನ್ನು ತಿನ್ನಿರಿ. ನೀವು ಅವನ ವಚನಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ!

ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ) ಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನಿಮಗೆ ನಿಷೇಧಿಸಲಾದ ವಸ್ತುಗಳನ್ನು ಅವನು ಈಗಾಗಲೇ ನಿಮಗೆ ವಿವರಿಸಿಕೊಟ್ಟಿದ್ದಾನೆ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಅದು ಕೂಡ ನಿಮಗೆ ಅನುಮತಿಸಲಾಗಿದೆ. ಹೆಚ್ಚಿನ ಜನರು ಯಾವುದೇ ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ನಿಶ್ಚಯವಾಗಿಯೂ ಅತಿರೇಕಿಗಳ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.

ಬಹಿರಂಗವಾಗಿ ಮಾಡುವ ಪಾಪಗಳನ್ನು ಮತ್ತು ರಹಸ್ಯವಾಗಿ ಮಾಡುವ ಪಾಪಗಳನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ಪಾಪ ಮಾಡುವವರು ಯಾರೋ—ಅವರು ಮಾಡಿದ ಪಾಪಕ್ಕೆ ತಕ್ಕ ಪ್ರತಿಫಲವನ್ನು ನೀಡಲಾಗುವುದು.

ಅಲ್ಲಾಹನ ಹೆಸರನ್ನು ಉಚ್ಛರಿಸದಿರುವ ಪ್ರಾಣಿಗಳನ್ನು ತಿನ್ನಬೇಡಿ. ನಿಶ್ಚಯವಾಗಿಯೂ ಅದು ಅವಿಧೇಯತೆಯಾಗಿದೆ. ನಿಮ್ಮೊಂದಿಗೆ ತರ್ಕಿಸಲು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ಮಾಡುತ್ತಾರೆ. ನೀವೇನಾದರೂ ಅವರನ್ನು ಅನುಸರಿಸಿದರೆ ನಿಶ್ಚಯವಾಗಿಯೂ ನೀವು ಸಹಭಾಗಿತ್ವ (ಶಿರ್ಕ್) ಮಾಡಿದವರಾಗುವಿರಿ.

ನಿರ್ಜೀವ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಗೆ ನಾವು ಜೀವವನ್ನು ನೀಡಿ, ಅವನಿಗೆ ಒಂದು ಬೆಳಕನ್ನು ಸಹ ದಯಪಾಲಿಸಿದೆವು. ಅವನು ಆ ಬೆಳಕಿನೊಂದಿಗೆ ಜನರ ಮಧ್ಯೆ ಓಡಾಡುತ್ತಾನೆ. ಇಂತಹವನು ಹೊರಬರಲಾಗದ ಸ್ಥಿತಿಯಲ್ಲಿ ಗಾಢಾಂಧಕಾರಗಳಲ್ಲಿ ಬಿದ್ದಿರುವ ವ್ಯಕ್ತಿಯಂತಾಗುವನೇ? ಈ ರೀತಿ ಸತ್ಯನಿಷೇಧಿಗಳಿಗೆ ಅವರು ಮಾಡುತ್ತಿರುವ ದುಷ್ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ.

ಇದೇ ರೀತಿ ನಾವು ಪ್ರತಿಯೊಂದು ಊರಿನಲ್ಲೂ ಅಲ್ಲಿನ ಅಪರಾಧಿಗಳ ಮುಖಂಡರನ್ನು ಪಿತೂರಿಗಳಲ್ಲಿ ಮಗ್ನರಾಗುವಂತೆ ಮಾಡಿದ್ದೇವೆ. ವಾಸ್ತವದಲ್ಲಿ, ಅವರು ಅವರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರಿಯುವುದಿಲ್ಲ.[1]

ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗ, “ಅಲ್ಲಾಹನ ಸಂದೇಶವಾಹಕರುಗಳಿಗೆ ನೀಡಲಾದ ವಸ್ತುವನ್ನು ನಮಗೂ ನೀಡಲಾಗುವ ತನಕ ನಾವು ಖಂಡಿತ ವಿಶ್ವಾಸವಿಡುವುದಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಸ್ಥಾಪಿಸಬೇಕೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅಪರಾಧಿಗಳಿಗೆ, ಅವರ ಮಾಡುವ ಪಿತೂರಿಗಳಿಂದಾಗಿ ಅಲ್ಲಾಹನ ಬಳಿ ಅಪಮಾನ ಮತ್ತು ಕಠಿಣವಾದ ಶಿಕ್ಷೆಯನ್ನು ಸದ್ಯವೇ ಅನುಭವಿಸಬೇಕಾಗಿ ಬರುವುದು.

ಯಾರಿಗೆ ಸನ್ಮಾರ್ಗ ತೋರಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ತೆರೆದುಕೊಡುತ್ತಾನೆ. ಯಾರನ್ನು ದಾರಿತಪ್ಪಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಬಿಗಿಯಾಗಿ ಮತ್ತು ಇಕ್ಕಟ್ಟಾಗಿ ಮಾಡುತ್ತಾನೆ. ಅವನು ಆಕಾಶಕ್ಕೆ ಏರಿ ಹೋಗುತ್ತಿದ್ದಾನೋ ಎಂಬಂತೆ! ಈ ರೀತಿ ಅಲ್ಲಾಹು ವಿಶ್ವಾಸವಿಡದವರ ಮೇಲೆ ಶಿಕ್ಷೆಯನ್ನು ಹಾಕುತ್ತಾನೆ.

ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ನೇರಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ಈಗಾಗಲೇ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶಾಂತಿಯ ಭವನವಿದೆ (ಸ್ವರ್ಗವಿದೆ). ಅವರು ಮಾಡುತ್ತಿರುವ ಕರ್ಮಗಳ ಕಾರಣದಿಂದ ಅವನು ಅವರ ಮಿತ್ರನಾಗಿದ್ದಾನೆ.

ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. (ಅವನು ಹೇಳುವನು): “ಓ ಜಿನ್ನ್‌ಗಳೇ! ನೀವು ಮನುಷ್ಯರಲ್ಲಿ ಬಹುಸಂಖ್ಯಾತರನ್ನು ದಾರಿ ತಪ್ಪಿಸಿದ್ದೀರಿ.” ಮನುಷ್ಯರಲ್ಲಿ ಸೇರಿದ ಅವರ ಆಪ್ತಮಿತ್ರರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನ ಪಡೆದರು. ಹೀಗೆ ನೀನು ನಮಗೆ ನಿಶ್ಚಯಿಸಿದ ಜೀವಿತಾವಧಿಯನ್ನು ನಾವು ತಲುಪಿದೆವು.” ಅಲ್ಲಾಹು ಹೇಳುವನು: “ನರಕಾಗ್ನಿಯೇ ನಿಮ್ಮ ವಾಸಸ್ಥಳ! ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.”

ಈ ರೀತಿ ನಾವು ಅಕ್ರಮಿಗಳನ್ನು ಪರಸ್ಪರ ಆಪ್ತರನ್ನಾಗಿ ಮಾಡುವೆವು. ಅವರು ಮಾಡುತ್ತಿರುವ ದುಷ್ಕರ್ಮಗಳ ಕಾರಣದಿಂದ.

“ಓ ಜಿನ್ನ್ ಮತ್ತು ಮನುಷ್ಯರೇ! ನಿಮಗೆ ನನ್ನ ವಚನಗಳನ್ನು ವಿವರಿಸಿಕೊಡುವ ಮತ್ತು ನಿಮ್ಮ ಈ ದಿನದ ಭೇಟಿಯ ಬಗ್ಗೆ ನಿಮಗೆ ಎಚ್ಚರಿಕೆ ನೀಡುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದಿಲ್ಲವೇ?” ಅವರು ಉತ್ತರಿಸುವರು: “ನಾವು ನಮ್ಮ ವಿರುದ್ಧವೇ ಸಾಕ್ಷಿಗಳಾಗಿದ್ದೇವೆ.” ಇಹಲೋಕ ಜೀವನವು ಅವರನ್ನು ಮರುಳುಗೊಳಿಸಿದೆ. ಅವರು ಸತ್ಯನಿಷೇಧಿಗಳಾಗಿದ್ದರು ಎಂದು ಅವರೇ ಅವರ ವಿರುದ್ಧ ಸಾಕ್ಷಿ ಹೇಳಿದ್ದಾರೆ.

ಅದು (ಸಂದೇಶವಾಹಕರನ್ನು ಕಳುಹಿಸಿರುವುದು) ನಿಮ್ಮ ಪರಿಪಾಲಕನು (ಅಲ್ಲಾಹು) ಊರುಗಳನ್ನು—ಅವುಗಳ ನಿವಾಸಿಗಳು (ಸತ್ಯದ ಬಗ್ಗೆ) ಅಜ್ಞರಾಗಿರುವಾಗ ಮಾಡಿದ ಅಕ್ರಮದ ನಿಮಿತ್ತ ನಾಶ ಮಾಡುವುದಿಲ್ಲ ಎಂಬ ಕಾರಣದಿಂದಾಗಿದೆ.[1]

ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಅನುಗುಣವಾಗಿ ಅನೇಕ ಪದವಿಗಳಿವೆ. ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನೇನಲ್ಲ.

ನಿಮ್ಮ ಪರಿಪಾಲಕನು (ಅಲ್ಲಾಹು) ನಿರಪೇಕ್ಷನು ಮತ್ತು ದಯಾಳುವಾಗಿದ್ದಾನೆ. ಅವನು ಇಚ್ಛಿಸಿದರೆ ನಿಮ್ಮನ್ನು ನಿವಾರಿಸಿ, ನಿಮ್ಮ ಸ್ಥಾನದಲ್ಲಿ ಅವನು ಇಚ್ಛಿಸುವ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ಮಾಡುವನು. ನಿಮ್ಮನ್ನು ಬೇರೆ ಜನರ ವಂಶಸ್ಥರನ್ನಾಗಿ ಮಾಡಿದಂತೆ.

ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ಸಂಗತಿಯು ಬಂದೇ ಬರುತ್ತದೆ. ನಿಮಗೆ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ.

ಹೇಳಿರಿ: “ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರಿ. ನಾನೂ ಕಾರ್ಯ ನಿರ್ವಹಿಸುತ್ತೇನೆ. ಇಹಲೋಕದ ಅಂತಿಮ ವಿಜಯವು ಯಾರಿಗೆ ಎಂದು ನೀವು ಸದ್ಯವೇ ತಿಳಿಯುವಿರಿ. ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.”

ಅಲ್ಲಾಹು ಸೃಷ್ಟಿಸಿದ ಕೃಷಿ ಮತ್ತು ಜಾನುವಾರುಗಳಿಂದ ಅವರು ಅವನಿಗೆ ಒಂದು ಪಾಲನ್ನು ನಿಶ್ಚಯಿಸಿದರು. ನಂತರ ತಮ್ಮ ದಾವೆಗೆ ಅನುಗುಣವಾಗಿ, “ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ದೇವರುಗಳಿಗೆ” ಎಂದು ಅವರು ಹೇಳಿದರು. ಅವರ ದೇವರುಗಳಿಗೆ ಮೀಸಲಿಟ್ಟಿರುವುದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅಲ್ಲಾಹನಿಗೆ ಮೀಸಲಿಟ್ಟಿರುವುದು ಅವರ ದೇವರುಗಳಿಗೆ ತಲುಪುತ್ತದೆ. ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.[1]

ಹೀಗೆ ಬಹುದೇವಾರಾಧಕರಲ್ಲಿ ಹೆಚ್ಚಿನವರಿಗೂ ಅವರ ಮಕ್ಕಳನ್ನು ಕೊಲ್ಲುವುದನ್ನು ಅವರ ದೇವರುಗಳು ಅಲಂಕರಿಸಿಕೊಟ್ಟಿದ್ದಾರೆ.[1] ಅವರನ್ನು ನಾಶ ಮಾಡುವುದಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಗೊಂದಲಗೊಳಿಸುವುದಕ್ಕಾಗಿ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಆರೋಪಿಸುವ ವಿಷಯಗಳೊಂದಿಗೆ ಅವರನ್ನು ಬಿಟ್ಟುಬಿಡಿ.

ಅವರು ಹೇಳುತ್ತಾರೆ: “ಈ ಜಾನುವಾರುಗಳು ಮತ್ತು ಕೃಷಿಗಳನ್ನು ನಿಷೇಧಿಸಲಾಗಿದೆ. ನಾವು ಇಚ್ಛಿಸುವವರ ಹೊರತು ಯಾರೂ ಇವುಗಳನ್ನು ತಿನ್ನಬಾರದು.” ಇದು ಅವರ ದಾವೆಯಾಗಿದೆ. “ಕೆಲವು ಜಾನುವಾರುಗಳ ಬೆನ್ನ ಮೇಲೆ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಜಾನುವಾರುಗಳನ್ನು ಕೊಯ್ಯುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಬೇಕಾಗಿಲ್ಲ” (ಎಂದು ಅವರು ಹೇಳುತ್ತಾರೆ) ಇವೆಲ್ಲವೂ ಅವರು ಅಲ್ಲಾಹನ ಬಗ್ಗೆ ಆರೋಪಿಸುವ ಸುಳ್ಳುಗಳಾಗಿವೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು.

ಅವರು ಹೇಳುತ್ತಾರೆ: “ಈ ಜಾನುವಾರುಗಳ ಹೊಟ್ಟೆಯಲ್ಲಿರುವುದು ನಮ್ಮ ಪುರುಷರಿಗೆ ಮಾತ್ರ ಇರುವಂತದ್ದು. ಅದು ನಮ್ಮ ಪತ್ನಿಯರಿಗೆ ನಿಷಿದ್ಧವಾಗಿವೆ.” ಆದರೆ ಅದು ಸತ್ತ ಪ್ರಾಣಿಯಾದರೆ ಅವರು ಅದನ್ನು ಸಮಾನವಾಗಿ ಪಾಲು ಮಾಡುತ್ತಾರೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.

ಅಜ್ಞಾನದಿಂದ ಅವಿವೇಕಿಗಳಾಗಿ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುತ್ತಾ ಅಲ್ಲಾಹು ದಯಪಾಲಿಸಿದ ವಸ್ತುಗಳನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ದಾರಿತಪ್ಪಿ ಹೋದರು. ಅವರು ಸನ್ಮಾರ್ಗದಲ್ಲಿ ಸೇರಲಿಲ್ಲ.

ಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಹೋಲಿಕೆಯಿರುವ ಮತ್ತು ಹೋಲಿಕೆಯಿಲ್ಲದ ಆಲಿವ್ ಮತ್ತು ದಾಳಿಂಬೆಗಳನ್ನು ಸೃಷ್ಟಿಸಿದ್ದು ಅವನೇ. ಅವು ಹಣ್ಣು ಬಿಟ್ಟರೆ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಅವುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು (ಝಕಾತನ್ನು) ನೀಡಿರಿ. ದುರ್ವ್ಯಯ ಮಾಡಬೇಡಿ. ನಿಶ್ಚಯವಾಗಿಯೂ ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.

ಭಾರ ಹೊರುವ ಜಾನುವಾರುಗಳನ್ನು ಮತ್ತು (ಆಹಾರಕ್ಕಾಗಿ) ಕೊಯ್ಯುವ ಜಾನುವಾರುಗಳನ್ನು (ಅವನು ಸೃಷ್ಟಿಸಿದ್ದಾನೆ). ಅಲ್ಲಾಹು ನಿಮಗೆ ಆಹಾರವಾಗಿ ನೀಡಿದ ವಸ್ತುಗಳಿಂದ ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ.

ಎಂಟು ಜೋಡಿಗಳನ್ನು (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣುಗಳನ್ನು ಅವನು ಸೃಷ್ಟಿಸಿದ್ದಾನೆ). ಕುರಿಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು) ಹಾಗೂ ಮೇಕೆಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿಕೊಡಿ.”

ಒಂಟೆಯಿಂದ ಎರಡು (ಗಂಡು ಮತ್ತು ಹೆಣ್ಣು) ಮತ್ತು ಹಸುವಿನಿಂದ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ಅಲ್ಲಾಹು ಇದನ್ನು ಆದೇಶಿಸುವಾಗ ನೀವು ಉಪಸ್ಥಿತರಿದ್ದಿರಾ? ಯಾವುದೇ ಜ್ಞಾನವಿಲ್ಲದೆ, ಜನರನ್ನು ದಾರಿ ತಪ್ಪಿಸುವುದಕ್ಕಾಗಿ ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”

ಹೇಳಿರಿ: “ಆಹಾರ ಸೇವಿಸುವವನಿಗೆ ನಿಷೇಧಿಸಲಾದ ಏನನ್ನೂ ನನಗೆ ನೀಡಲಾದ ದೇವವಾಣಿಯಲ್ಲಿ ನಾನು ಕಾಣುವುದಿಲ್ಲ. ಅದು ಶವ, ಅಥವಾ ಹರಿಯುವ ರಕ್ತ, ಅಥವಾ ಹಂದಿ ಮಾಂಸವಾಗಿದ್ದರೆ ಹೊರತು. ಏಕೆಂದರೆ ಅದು ಹೊಲಸಾಗಿದೆ. ಅಥವಾ ಅಲ್ಲಾಹೇತರರ ಹೆಸರಲ್ಲಿ (ಹರಕೆಯಾಗಿ) ಘೋಷಿಸಲಾದ ಕಾರಣ ನಿಷಿದ್ಧವಾದ ವಸ್ತುಗಳ ಹೊರತು. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”

ನಾವು ಯಹೂದಿಗಳಿಗೆ ಉಗುರುಗಳಿರುವ ಎಲ್ಲಾ ಪ್ರಾಣಿಗಳನ್ನು ನಿಷೇಧಿಸಿದ್ದೆವು. ಹಸು, ಮೇಕೆ ಮುಂತಾದ ಪ್ರಾಣಿಗಳ ಕೊಬ್ಬುಗಳನ್ನು ನಾವು ಅವರಿಗೆ ನಿಷೇಧಿಸಿದ್ದೆವು. ಆದರೆ ಅವುಗಳ ಬೆನ್ನಲ್ಲಿರುವ ಅಥವಾ ಕರುಳುಗಳಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊಂಡಿರುವ ಕೊಬ್ಬುಗಳ ಹೊರತು. ಇದು ಅವರ ಅತಿರೇಕಕ್ಕೆ ನಾವು ನೀಡಿದ ಶಿಕ್ಷೆಯಾಗಿದೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.

ಅವರು ನಿಮ್ಮನ್ನು ನಿಷೇಧಿಸಿದರೆ, ಹೇಳಿರಿ: “ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲ ದಯೆಯುಳ್ಳವನು. ಆದರೆ ಅಕ್ರಮವೆಸಗಿದ ಜನರಿಂದ ಅವನ ಶಿಕ್ಷೆಯು ನಿವಾರಣೆಯಾಗುವುದಿಲ್ಲ.”

ಬಹುದೇವಾರಾಧಕರು ಹೇಳುವರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ ಮತ್ತು ಯಾವುದೇ ವಸ್ತುವನ್ನು ನಿಷೇಧಿಸುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು—ನಮ್ಮ ಶಿಕ್ಷೆಯ ರುಚಿಯನ್ನು ನೋಡುವವರೆಗೆ. ಹೇಳಿರಿ: “ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ಇದ್ದರೆ ಅದನ್ನು ತೋರಿಸಿ. ನೀವು ಊಹಾ-ಪೋಹಗಳನ್ನು ಹಿಂಬಾಲಿಸುತ್ತಿದ್ದೀರಿ. ನೀವು ಕೇವಲ ಸುಳ್ಳನ್ನು ಹೇಳುತ್ತಿದ್ದೀರಿ.”

ಹೇಳಿರಿ: “ನಿರ್ಣಾಯಕ ಪುರಾವೆಯಿರುವುದು ಅಲ್ಲಾಹನಲ್ಲಿ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನು.”

ಹೇಳಿರಿ: “ಅಲ್ಲಾಹು ಇವುಗಳನ್ನು ನಿಷೇಧಿಸಿದ್ದಾನೆಂದು ಸಾಕ್ಷಿ ನುಡಿಯುವ ನಿಮ್ಮ ಸಾಕ್ಷಿಗಳನ್ನು ಕರೆತನ್ನಿರಿ.” ಅವರೇನಾದರೂ ಸಾಕ್ಷಿ ನುಡಿದರೆ ನೀವು ಅವರೊಂದಿಗೆ ಸಾಕ್ಷಿ ನುಡಿಯಬೇಡಿ. ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಪರಲೋಕದಲ್ಲಿ ವಿಶ್ವಾಸವಿಡದ ಜನರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಾಟಿಗಳನ್ನು ಕಲ್ಪಿಸುವವರಾಗಿದ್ದಾರೆ.

ಹೇಳಿರಿ: “ಬನ್ನಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಏನು ನಿಷೇಧಿಸಿದ್ದಾನೆಂದು ನಾನು ನಿಮಗೆ ಓದಿಕೊಡುವೆನು. (ಅವು ಏನೆಂದರೆ) ನೀವು ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡಬೇಡಿ, ಮಾತಾಪಿತರಿಗೆ ಒಳಿತು ಮಾಡಿರಿ, ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ—ನಿಮಗೂ, ಅವರಿಗೂ ನಾವು ಆಹಾರ ನೀಡುತ್ತೇವೆ—ಬಹಿರಂಗವಾಗಿರುವ ಮತ್ತು ರಹಸ್ಯವಾಗಿರುವ ಯಾವುದೇ ಅಶ್ಲೀಲತೆಗಳ ಬಳಿಗೆ ಹೋಗಬೇಡಿ ಮತ್ತು ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.”

ಒಳಿತು ಮಾಡುವ ಉದ್ದೇಶದಿಂದಲೇ ಹೊರತು ನೀವು ಅನಾಥರ ಆಸ್ತಿಯನ್ನು ಮುಟ್ಟಬೇಡಿ. ಅವರು ಪ್ರೌಢರಾಗುವ ತನಕ (ಅವರ ಸಂರಕ್ಷಣೆಯನ್ನು ವಹಿಸಿಕೊಳ್ಳಿ). ಅಳತೆ ಮತ್ತು ತೂಕ ಮಾಡುವಾಗ ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ಮಾಡಿರಿ. ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಹೊರಿಸುವುದಿಲ್ಲ. ಮಾತನಾಡುವಾಗ (ಸಾಕ್ಷಿ ನುಡಿಯುವಾಗ) ನ್ಯಾಯದಿಂದ ಮಾತನಾಡಿರಿ. ಅದು ನಿಕಟ ಸಂಬಂಧಿಕನಿಗೆ ಸಂಬಂಧಿಸಿದ ವಿಷಯವಾದರೂ ಸಹ. ಅಲ್ಲಾಹನ ಕರಾರನ್ನು ನೆರವೇರಿಸಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ನೆನಪಿಟ್ಟುಕೊಳ್ಳುವುದಕ್ಕಾಗಿ.

ನಿಶ್ಚಯವಾಗಿಯೂ ಇದು ನನ್ನ ನೇರ ಮಾರ್ಗವಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ನಡೆಯಿರಿ. ಇತರ ಮಾರ್ಗಗಳಲ್ಲಿ ನಡೆಯಬೇಡಿ. ಅವು ನಿಮ್ಮನ್ನು ಅವನ ಮಾರ್ಗದಿಂದ ಬೇರ್ಪಡಿಸುತ್ತವೆ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.

ಒಳಿತು ಮಾಡುವವರಿಗೆ ಅನುಗ್ರಹದ ಪೂರ್ತೀಕರಣವಾಗಿ, ಮತ್ತು ಎಲ್ಲಾ ವಿಷಯಗಳ ವಿವರಣೆಯಾಗಿ ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದರಲ್ಲಿ ವಿಶ್ವಾಸವಿಡುವುದಕ್ಕಾಗಿ.

ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.

"ನಮಗಿಂತ ಮೊದಲಿನ ಎರಡು ಸಮುದಾಯಗಳಿಗೆ ಮಾತ್ರ ಗ್ರಂಥವು ಅವತೀರ್ಣವಾಗಿದೆ; ಅವರು ಮಾಡುತ್ತಿದ್ದ ಅಧ್ಯಯನದ ಬಗ್ಗೆ ನಮಗೇನೂ ತಿಳಿದಿರಲಿಲ್ಲ” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ).

ಅಥವಾ, “ನಮಗೊಂದು ಗ್ರಂಥವು ಅವತೀರ್ಣವಾಗುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆಯುತ್ತಿದ್ದೆವು” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). ಈಗ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರ, ಮಾರ್ಗದರ್ಶನ ಮತ್ತು ದಯೆಯು ಬಂದಿದೆ. ಇದರ ಬಳಿಕವೂ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರು? ನಮ್ಮ ವಚನಗಳಿಂದ ವಿಮುಖರಾಗುವವರು ಯಾರೋ—ಅವರು ವಿಮುಖರಾದ ಕಾರಣ ನಾವು ಅವರಿಗೆ ಅತಿ ಹೀನ ಶಿಕ್ಷೆಯನ್ನು ನೀಡುವೆವು.

ಅವರ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ಅವರ ಪರಿಪಾಲಕನು (ಅಲ್ಲಾಹು) ಬರುವುದನ್ನು ಅಥವಾ ಅವರ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವುದನ್ನಲ್ಲದೆ ಅವರು ಬೇರೆ ಏನನ್ನು ಕಾಯುತ್ತಿದ್ದಾರೆ? ನಿಮ್ಮ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವ ದಿನದಂದು, ಅದಕ್ಕಿಂತ ಮೊದಲು ಸತ್ಯವಿಶ್ವಾಸಿಯಾದವನು ಅಥವಾ ಸತ್ಯವಿಶ್ವಾಸದಿಂದ ಏನಾದರೂ ಒಳಿತು ಮಾಡಿದವನ ಹೊರತು ಬೇರೆ ಯಾರಿಗೂ ಅವನ ವಿಶ್ವಾಸವು ಉಪಕಾರ ಮಾಡುವುದಿಲ್ಲ. ಹೇಳಿರಿ: “ನೀವು ಕಾಯಿರಿ, ನಿಶ್ಚಯವಾಗಿಯೂ ನಾವು ಕೂಡ ಕಾಯುತ್ತೇವೆ.”

ತಮ್ಮ ಧರ್ಮವನ್ನು ಒಡೆದು ವಿವಿಧ ಪಂಗಡಗಳಾಗಿ ಬೇರ್ಪಟ್ಟವರು ಯಾರೋ—ಅವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದು. ಅವರು ಮಾಡುತ್ತಿದ್ದ ಕರ್ಮಗಳನ್ನು ನಂತರ ಅವನು ಅವರಿಗೆ ತಿಳಿಸಿಕೊಡುವನು.

ಯಾರು ಒಂದು ಒಳಿತನ್ನು ತರುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಒಂದು ಕೆಡುಕನ್ನು ತರುತ್ತಾನೋ ಅವನಿಗೆ ಅದಕ್ಕೆ ಸಮಾನವಾದ ಶಿಕ್ಷೆಯನ್ನು ಮಾತ್ರ ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.

ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನನಗೆ ನೇರಮಾರ್ಗವನ್ನು—ಏಕನಿಷ್ಠರಾದ ಇಬ್ರಾಹೀಮರ ನೇರ ಧರ್ಮವನ್ನು ತೋರಿಸಿದ್ದಾನೆ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”

ಹೇಳಿರಿ: “ನಿಶ್ಚಯವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು.

ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆಜ್ಞಾಪಿಸಲಾಗಿದೆ. ನಾನು ಮುಸಲ್ಮಾನರಲ್ಲಿ (ಶರಣಾದವರಲ್ಲಿ) ಮೊದಲಿಗನಾಗಿದ್ದೇನೆ.”

ಹೇಳಿರಿ: “ಅಲ್ಲಾಹು ಸರ್ವ ವಸ್ತುಗಳ ಪರಿಪಾಲಕನಾಗಿರುವಾಗ, ನಾನು ಅವನ ಹೊರತು ಬೇರೆ ಪರಿಪಾಲಕರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಕ್ಕೆ ಉತ್ತರದಾಯಿಯಾಗಿದ್ದಾನೆ. ಪಾಪಗಳ ಭಾರವನ್ನು ಹೊರುವ ಯಾರೂ ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ನಂತರ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವಿರಿ. ಆಗ ನೀವು ಯಾವ ವಿಷಯದಲ್ಲಿ ಭಿನ್ನಮತ ತಳೆದಿರೋ ಅದನ್ನು ಅವನು ನಿಮಗೆ ತಿಳಿಸಿಕೊಡುವನು.”

ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು ಅವನೇ. ಅವನು ನಿಮಗೆ ನೀಡಿದ ಅನುಗ್ರಹಗಳಲ್ಲಿ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಶ್ರೇಷ್ಠ ಸ್ಥಾನಮಾನಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.