The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesBanning [At-Tahrim] - Kannada translation
Surah Banning [At-Tahrim] Ayah 12 Location Madanah Number 66
ಓ ಪ್ರವಾದಿಯವರೇ! ಅಲ್ಲಾಹು ನಿಮಗೆ ಧರ್ಮಸಮ್ಮತಗೊಳಿಸಿದ ವಸ್ತುವನ್ನು ನೀವೇಕೆ ನಿಷಿದ್ಧಗೊಳಿಸುತ್ತೀರಿ? ನೀವು ನಿಮ್ಮ ಪತ್ನಿಯರ ಸಂಪ್ರೀತಿಯನ್ನು ಪಡೆಯಲು ಬಯಸುತ್ತೀರಾ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.[1]
ಅಲ್ಲಾಹು ನಿಮಗೆ ನಿಮ್ಮ ಆಣೆಗಳ ವಿಮುಕ್ತತೆಯನ್ನು ಈಗಾಗಲೇ ನಿಶ್ಚಯಿಸಿದ್ದಾನೆ.[1] ಅಲ್ಲಾಹು ನಿಮ್ಮ ರಕ್ಷಕನಾಗಿದ್ದಾನೆ. ಅವನು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಪ್ರವಾದಿಯವರು ತಮ್ಮ ಪತ್ನಿಯರಲ್ಲಿ ಒಬ್ಬಳಿಗೆ ಗುಟ್ಟಾಗಿ ಒಂದು ಮಾತನ್ನು ಹೇಳಿದ ಸಂದರ್ಭ(ವನ್ನು ಸ್ಮರಿಸಿ).[1] ಅವಳು ಅದನ್ನು (ಇನ್ನೊಬ್ಬ ಪತ್ನಿಗೆ) ತಿಳಿಸಿದಾಗ ಮತ್ತು ಅಲ್ಲಾಹು ತನ್ನ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದಾಗ, ಅವರು ಅದರ ಕೆಲವು ಭಾಗಗಳನ್ನು (ಪತ್ನಿಗೆ) ತಿಳಿಸಿ ಕೆಲವು ಭಾಗಗಳನ್ನು ನಿರ್ಲಕ್ಷಿಸಿದರು. ನಂತರ ಅವರು ಅದನ್ನು ಪತ್ನಿಗೆ ತಿಳಿಸಿದಾಗ ಅವಳು ಕೇಳಿದಳು: “ನಿಮಗೆ ಇದನ್ನು ತಿಳಿಸಿದ್ದು ಯಾರು?” ಅವರು ಉತ್ತರಿಸಿದರು: “ಸರ್ವಜ್ಞನು ಮತ್ತು ಸೂಕ್ಷ್ಮಜ್ಞಾನಿಯಾದ ಅಲ್ಲಾಹು ನನಗೆ ತಿಳಿಸಿದನು.”
(ಪ್ರವಾದಿಯ ಇಬ್ಬರು ಪತ್ನಿಯರೇ!) ನೀವು ಅಲ್ಲಾಹನ ಮುಂದೆ ಪಶ್ಚಾತ್ತಾಪಪಡುವುದಾದರೆ (ಅದು ಉತ್ತಮವಾಗಿದೆ). ನಿಶ್ಚಯವಾಗಿಯೂ ನಿಮ್ಮ ಹೃದಯಗಳು ವಕ್ರವಾಗಿವೆ. ಆದರೆ ನೀವು ಪ್ರವಾದಿಯ ವಿರುದ್ಧ ಪರಸ್ಪರ ಸಹಾಯ ಮಾಡುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ಅವರ ರಕ್ಷಕನಾಗಿದ್ದಾನೆ. ಜಿಬ್ರೀಲ್, ನೀತಿವಂತರಾದ ಸತ್ಯವಿಶ್ವಾಸಿಗಳು ಮತ್ತು ಅವರೆಲ್ಲರ ಹೊರತಾಗಿ ದೇವದೂತರುಗಳು ಕೂಡ ಅವರಿಗೆ ಸಹಾಯ ಮಾಡಲಿದ್ದಾರೆ.
ಅವರು ನಿಮಗೆ ವಿಚ್ಛೇದನೆ (ತಲಾಕ್) ನೀಡಿದರೆ, ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ನಿಮಗಿಂತಲೂ ಉತ್ತಮ ಪತ್ನಿಯರನ್ನು ಬದಲಿಯಾಗಿ ನೀಡುವನು. ಅವರು ಮುಸ್ಲಿಮರು, ಸತ್ಯವಿಶ್ವಾಸಿಗಳು, ದೇವಭಯವುಳ್ಳವರು, ಪಶ್ಚಾತ್ತಾಪಪಡುವವರು, ಆರಾಧನೆಯಲ್ಲಿ ಮಗ್ನರಾಗುವವರು, ಉಪವಾಸ ಆಚರಿಸುವವರು, ವಿಧವೆಗಳು ಮತ್ತು ಕನ್ಯೆಯರಾಗಿರುವರು.
ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ನರಕಾಗ್ನಿಯಿಂದ ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರ ಹೃದಯದ ಬಲಿಷ್ಠ ದೇವದೂತರುಗಳಿದ್ದಾರೆ. ಅಲ್ಲಾಹನ ಯಾವುದೇ ಆಜ್ಞೆಯನ್ನೂ ಅವರು ಧಿಕ್ಕರಿಸುವುದಿಲ್ಲ. ಅವರಿಗೆ ಆಜ್ಞಾಪಿಸಲಾಗುವುದೆಲ್ಲವನ್ನೂ ಅವರು ನಿರ್ವಹಿಸುತ್ತಾರೆ.
ಓ ಸತ್ಯನಿಷೇಧಿಗಳೇ! ಇಂದು ನೀವು ನೆಪಗಳನ್ನು ಹೇಳಬೇಡಿ. ನಿಮಗೆ ನಿಮ್ಮ ಕರ್ಮಗಳ ಪ್ರತಿಫಲವನ್ನು ಮಾತ್ರ ನೀಡಲಾಗುವುದು.
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮುಂದೆ ನಿಷ್ಕಳಂಕವಾಗಿ ಪಶ್ಚಾತ್ತಾಪಪಡಿರಿ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ಪಾಪಗಳನ್ನು ಅಳಿಸಿಬಿಡಬಹುದು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸಬಹುದು. ಅದು ಅಲ್ಲಾಹು ಪ್ರವಾದಿಯನ್ನು ಮತ್ತು ಅವರ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ಅವಮಾನಿಸದ ದಿನ. ಅವರ ಬೆಳಕು ಅವರ ಮುಂಭಾಗದಿಂದ ಮತ್ತು ಬಲಭಾಗದಿಂದ ಹರಿಯುತ್ತಿರುವುದು. ಅವರು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮ ಬೆಳಕನ್ನು ನಮಗೆ ಪೂರ್ಣವಾಗಿ ನೀಡು. ನಮ್ಮನ್ನು ಕ್ಷಮಿಸು. ನಿಶ್ಚಯವಾಗಿಯೂ ನಿನಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆ.”
ಓ ಪ್ರವಾದಿಯವರೇ! ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರೊಡನೆ ಕಠೋರವಾಗಿ ವರ್ತಿಸಿರಿ. ನರಕವೇ ಅವರ ವಾಸಸ್ಥಳ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
ಅಲ್ಲಾಹು ಸತ್ಯನಿಷೇಧಿಗಳಿಗೆ ನೂಹರ ಪತ್ನಿ ಮತ್ತು ಲೂತರ ಪತ್ನಿಯನ್ನು ಉದಾಹರಣೆಯಾಗಿ ತೋರಿಸಿದ್ದಾನೆ. ಇವರಿಬ್ಬರು ನಮ್ಮ ದಾಸರಲ್ಲಿ ನೀತಿವಂತರಾಗಿದ್ದ ಇಬ್ಬರು ದಾಸರ ಮನೆಯಲ್ಲಿ ವಾಸವಾಗಿದ್ದರು. ಆದರೆ ಅವರು (ಪತ್ನಿಯರು) ಅವರನ್ನು ವಂಚಿಸಿದರು. ಆಗ ಅಲ್ಲಾಹನ ಶಿಕ್ಷೆಯಿಂದ ಅವರನ್ನು ಪಾರು ಮಾಡಲು ಅವರಿಗೆ (ಆ ಇಬ್ಬರು ಪ್ರವಾದಿಗಳಿಗೆ) ಸಾಧ್ಯವಾಗಲಿಲ್ಲ. “ನರಕಾಗ್ನಿಯನ್ನು ಪ್ರವೇಶಿಸುವವರೊಡನೆ ನೀವು ಕೂಡ ಪ್ರವೇಶಿಸಿರಿ” ಎಂದು ಅವರೊಡನೆ (ಆ ಪತ್ನಿಯರೊಡನೆ) ಹೇಳಲಾಯಿತು.
ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಫರೋಹನ ಪತ್ನಿಯನ್ನು ಉದಾಹರಣೆಯಾಗಿ ತೋರಿಸಿದ್ದಾನೆ. ಅವಳು ಹೇಳಿದ ಸಂದರ್ಭ: “ನನ್ನ ಪರಿಪಾಲಕನೇ! ನನಗೆ ನಿನ್ನ ಬಳಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸಿಕೊಡು. ನನ್ನನ್ನು ಫರೋಹ ಮತ್ತು ಅವನ ಕೃತ್ಯಗಳಿಂದ ರಕ್ಷಿಸು. ಅಕ್ರಮಿಗಳಾದ ಜನರಿಂದಲೂ ನನ್ನನ್ನು ರಕ್ಷಿಸು.”
ಅದೇ ರೀತಿ ಇಮ್ರಾನರ ಮಗಳಾದ ಮರ್ಯಮರನ್ನು ಕೂಡ (ಉದಾಹರಣೆಯಾಗಿ ತೋರಿಸಿದ್ದಾನೆ). ಆಕೆ ತನ್ನ ಗುಹ್ಯಭಾಗವನ್ನು ಕಾಪಾಡಿದ್ದಳು. ನಾವು ನಮ್ಮ ಕಡೆಯಿಂದ ಅದಕ್ಕೆ ಆತ್ಮವನ್ನು ಊದಿದೆವು. ಆಕೆ ತನ್ನ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ಮತ್ತು ಗ್ರಂಥಗಳಲ್ಲಿ ವಿಶ್ವಾಸವಿಟ್ಟಿದ್ದಳು. ಆಕೆ ಆರಾಧನಾ ನಿರತರಲ್ಲಿ ಸೇರಿದವರಾಗಿದ್ದಳು.