The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe heights [Al-Araf] - Kannada translation - Hamza Butur
Surah The heights [Al-Araf] Ayah 206 Location Maccah Number 7
ಅಲಿಫ್, ಲಾಮ್, ಮೀಮ್, ಸ್ವಾದ್
ಇದು ನಿಮಗೆ ಅವತೀರ್ಣಗೊಳಿಸಲಾದ ಗ್ರಂಥವಾಗಿದೆ. ಇದರ ಬಗ್ಗೆ ನಿಮ್ಮ ಹೃದಯದಲ್ಲಿ ಯಾವುದೇ ಬೇಸರವುಂಟಾಗದಿರಲಿ. ಇದರ ಮೂಲಕ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯವಿಶ್ವಾಸಿಗಳಿಗೆ ಒಂದು ಉಪದೇಶವಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ).
ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿಮಗೆ ಅವತೀರ್ಣವಾದುದನ್ನು ಅನುಸರಿಸಿರಿ. ಅವನ ಹೊರತು ಬೇರೆ (ಸ್ವಘೋಷಿತ) ರಕ್ಷಕರನ್ನು ಅನುಸರಿಸಬೇಡಿ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.
ನಾವು ಎಷ್ಟು ಊರುಗಳನ್ನು ನಾಶ ಮಾಡಿದ್ದೇವೆ! ಅವರು ರಾತ್ರಿ ಅಥವಾ ಮಧ್ಯಾಹ್ನದ ನಿದ್ದೆಯಲ್ಲಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಿದೆ.
ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರ ರೋದನವು, “ನಾವು ಅಕ್ರಮಿಗಳಾಗಿದ್ದೆವು” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.
ಯಾರ ಬಳಿಗೆ ಸಂದೇಶವಾಹಕರನ್ನು ಕಳುಹಿಸಲಾಯಿತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು. ಅವರ ಬಳಿಗೆ ಕಳುಹಿಸಲಾದ ಸಂದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು.
ನಂತರ (ನಮ್ಮ ಬಳಿಯಿರುವ) ಜ್ಞಾನದ ಮೂಲಕ ನಾವು ಅವರಿಗೆ ವಿವರಿಸಿಕೊಡುವೆವು. ನಾವು ಯಾವುದೇ ಸ್ಥಿತಿಯಲ್ಲೂ ಅವರಿಂದ ದೂರವಾಗಿರಲಿಲ್ಲ.
وَٱلۡوَزۡنُ يَوۡمَئِذٍ ٱلۡحَقُّۚ فَمَن ثَقُلَتۡ مَوَٰزِينُهُۥ فَأُوْلَٰٓئِكَ هُمُ ٱلۡمُفۡلِحُونَ [٨]
ಆ ದಿನದಂದು (ಕರ್ಮಗಳನ್ನು) ತೂಗುವುದು ಸತ್ಯವಾಗಿದೆ. ಆಗ ಯಾರ ತಕ್ಕಡಿ ಭಾರವಾಗುತ್ತದೋ ಅವರೇ ಯಶಸ್ವಿಯಾದವರು.
ಯಾರ ತಕ್ಕಡಿ ಹಗುರವಾಗುತ್ತದೋ ಅವರೇ ಸ್ವಯಂ ನಷ್ಟಹೊಂದಿದವರು. ಏಕೆಂದರೆ ಅವರು ನಮ್ಮ ವಚನಗಳೊಂದಿಗೆ ಅಕ್ರಮವೆಸಗುತ್ತಿದ್ದರು.
ನಿಶ್ಚಯವಾಗಿಯೂ ನಾವು ನಿಮಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು. ಅಲ್ಲಿ ನಿಮಗೆ ಉಪಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸೃಷ್ಟಿಸಿದೆವು. ನಂತರ ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ದೇವದೂತರುಗಳೊಡನೆ ಹೇಳಿದೆವು: “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ.” ಅವರು ಸಾಷ್ಟಾಂಗ ಮಾಡಿದರು—ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರಲ್ಲಿ ಸೇರಲಿಲ್ಲ.
ಅಲ್ಲಾಹು ಕೇಳಿದನು: “ನಾನು ಸಾಷ್ಟಾಂಗ ಮಾಡಲು ಆಜ್ಞಾಪಿಸಿದಾಗ ನೀನು ಅದನ್ನು ನಿರಾಕರಿಸಲು ಕಾರಣವೇನು?” ಇಬ್ಲೀಸ್ ಹೇಳಿದನು: “ನಾನು ಆದಮರಿಗಿಂತಲೂ ಶ್ರೇಷ್ಠನು. ನೀನು ನನ್ನನ್ನು ಸೃಷ್ಟಿಸಿದ್ದು ಅಗ್ನಿಯಿಂದ ಮತ್ತು ಅವರನ್ನು ಸೃಷ್ಟಿಸಿದ್ದು ಜೇಡಿಮಣ್ಣಿನಿಂದ.”
ಅಲ್ಲಾಹು ಹೇಳಿದನು: “ಇಲ್ಲಿಂದ ಇಳಿದುಹೋಗು. ಇಲ್ಲಿ ನಿನಗೆ ಅಹಂಕಾರದಿಂದ ವರ್ತಿಸಲು ಅಧಿಕಾರವಿಲ್ಲ. ಹೊರಡು! ನಿಶ್ಚಯವಾಗಿಯೂ ನೀನು ಅಪಮಾನಿತರಲ್ಲಿ ಸೇರಿದವನಾಗಿರುವೆ.”
ಅವನು ಹೇಳಿದನು: “ಅವರನ್ನು (ಮನುಷ್ಯರನ್ನು) ಜೀವ ನೀಡಿ ಎಬ್ಬಿಸುವ ದಿನದವರೆಗೆ ನನಗೆ ಕಾಲಾವಕಾಶ (ಆಯುಷ್ಯ) ನೀಡು.”
ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿರುವೆ.”
ಅವನು ಹೇಳಿದನು: “ನೀನು ನನ್ನನ್ನು ದಾರಿತಪ್ಪಿಸಿದ ಕಾರಣ ನಾನು ಖಂಡಿತ ನಿನ್ನ ನೇರಮಾರ್ಗದಲ್ಲಿ ಕುಳಿತು ಅವರಿಗಾಗಿ ಕಾಯುವೆನು.
ನಂತರ ಅವರ ಮುಂಭಾಗದಿಂದ, ಅವರ ಹಿಂಭಾಗದಿಂದ, ಅವರ ಬಲಭಾಗದಿಂದ ಮತ್ತು ಅವರ ಎಡಭಾಗದಿಂದ ನಾನು ಖಂಡಿತ ಅವರ ಬಳಿಗೆ ಬರುವೆನು. ಅವರಲ್ಲಿ ಹೆಚ್ಚಿನವರನ್ನೂ ನೀನು ಕೃತಜ್ಞರಾಗಿ ಕಾಣಲಾರೆ.”
ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಡು! ನೀನು ಅಪಮಾನಿತನು ಮತ್ತು ತಿರಸ್ಕೃತನಾಗಿರುವೆ. ಅವರಲ್ಲಿ ಯಾರು ನಿನ್ನನ್ನು ಹಿಂಬಾಲಿಸುತ್ತಾರೋ, (ಅವರು ಸೇರಿದಂತೆ) ನಿಮ್ಮೆಲ್ಲರನ್ನೂ ನಾನು ನರಕದಲ್ಲಿ ತುಂಬಿಸುವೆನು.”
“ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ. ಅಲ್ಲಿ ನೀವುಇಚ್ಛಿಸುವ ಎಲ್ಲಾ ಕಡೆಗಳಿಂದಲೂ ತಿನ್ನಿರಿ. ಆದರೆ ಈ ಮರದ ಸಮೀಪಕ್ಕೆ ಹೋಗಬೇಡಿ. ಹೋದರೆ ನೀವು ಅಕ್ರಮಿಗಳಾಗಿ ಬಿಡುವಿರಿ.”
(ಆಗ ಆ ಹಣ್ಣನ್ನು ತಿನ್ನುವ ಮೂಲಕ) ಅವರಿಂದ ಮರೆಯಾಗಿದ್ದ ಅವರ ಗುಹ್ಯಭಾಗಗಳನ್ನು ಬಹಿರಂಗಪಡಿಸುವುದಕ್ಕಾಗಿ ಶೈತಾನನು ಅವರಿಬ್ಬರಿಗೂ (ಆ ಹಣ್ಣು ತಿನ್ನುವಂತೆ) ದುಷ್ಪ್ರೇರಣೆ ಮಾಡಿದನು. ಅವನು ಹೇಳಿದನು: “ನೀವಿಬ್ಬರು ದೇವದೂತರಾಗುವಿರಿ ಅಥವಾ ಇಲ್ಲಿ (ಸ್ವರ್ಗದಲ್ಲಿ) ಶಾಶ್ವತವಾಗಿ ವಾಸಿಸುವಿರಿ ಎಂಬ ಕಾರಣದಿಂದಲೇ ನಿಮ್ಮ ಪರಿಪಾಲಕನು ನಿಮ್ಮನ್ನು ಈ ಮರದಿಂದ ತಡೆದಿದ್ದಾನೆ.”
“ನಿಶ್ಚಯವಾಗಿಯೂ ನಾನು ನಿಮ್ಮ ಹಿತೈಷಿಯಾಗಿದ್ದೇನೆ” ಎಂದು ಅವನು ಪ್ರತಿಜ್ಞೆ ಮಾಡಿ ಹೇಳಿದನು.
ಹೀಗೆ ಅವನು ಮೋಸದಿಂದ ಅವರಿಬ್ಬರನ್ನು ಕೆಳಗಿಳಿಸಿದನು. ಅವರಿಬ್ಬರು ಆ ಮರದ ಹಣ್ಣಿನ ರುಚಿಯನ್ನು ಸವಿಯುತ್ತಿದ್ದಂತೆ ಅವರಿಗೆ ಅವರ ಗುಹ್ಯಭಾಗಗಳು ಬಹಿರಂಗವಾದವು. ಸ್ವರ್ಗದ ಎಲೆಗಳಿಂದ ಅವರಿಬ್ಬರೂ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆಗ ಅವರನ್ನು ಕರೆದು ಅವರ ಪರಿಪಾಲಕ (ಅಲ್ಲಾಹು) ಹೇಳಿದನು: “ಆ ಮರದಿಂದ ನಾನು ನಿಮ್ಮನ್ನು ತಡೆಯಲಿಲ್ಲವೇ? ನಿಶ್ಚಯವಾಗಿಯೂ ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವೆಂದು ನಾನು ನಿಮಗೆ ಹೇಳಲಿಲ್ಲವೇ?”
ಅವರಿಬ್ಬರು ಹೇಳಿದರು: “ಓ ನಮ್ಮ ಪರಿಪಾಲಕನೇ! ನಾವು ಸ್ವಯಂ ಅಕ್ರಮವೆಸಗಿದ್ದೇವೆ. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ದಯೆ ತೋರದಿದ್ದರೆ ನಾವು ನಷ್ಟಹೊಂದಿದವರಲ್ಲಿ ಸೇರುವುದು ನಿಶ್ಚಿತ.”
ಅಲ್ಲಾಹು ಹೇಳಿದನು: “ಇಳಿಯಿರಿ! ನೀವು ಪರಸ್ಪರ ಶತ್ರುಗಳಾಗುವಿರಿ. ನಿಮಗೆ ಭೂಮಿಯಲ್ಲಿ ವಾಸ್ತವ್ಯವಿದೆ ಮತ್ತು ಒಂದು ನಿರ್ದಿಷ್ಟ ಕಾಲದ ತನಕ ಜೀವನ ಸವಲತ್ತುಗಳಿವೆ.”
ಅಲ್ಲಾಹು ಹೇಳಿದನು: “ನೀವು ಅಲ್ಲಿಯೇ ಬದುಕುವಿರಿ ಮತ್ತು ಅಲ್ಲಿಯೇ ಸಾಯುವಿರಿ. ನಂತರ ನಿಮ್ಮನ್ನು ಅಲ್ಲಿಂದಲೇ ಹೊರತರಲಾಗುವುದು.”
ಓ ಆದಮರ ಮಕ್ಕಳೇ! ನಿಮ್ಮ ಗುಹ್ಯಭಾಗಗಳನ್ನು ಮುಚ್ಚಲು ನಾವು ನಿಮಗೆ ಉಡುಪನ್ನು ಇಳಿಸಿಕೊಟ್ಟಿದ್ದೇವೆ. ಅದು ನಿಮಗೆ ಅಲಂಕಾರವೂ ಆಗಿದೆ. ಆದರೆ ದೇವಭಯದ ಉಡುಪು ಅತಿಶ್ರೇಷ್ಠವಾಗಿದೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅವರು ನೆನಪಿಡುವುದಕ್ಕಾಗಿ.
ಓ ಆದಮರ ಮಕ್ಕಳೇ! ನಿಮ್ಮ ತಂದೆ-ತಾಯಿಗಳನ್ನು—ಅವರ ಗುಹ್ಯಭಾಗಗಳನ್ನು ಅವರಿಗೆ ತೋರಿಸಲು ಅವರ ಬಟ್ಟೆಯನ್ನು ಕಳಚಿ ಹಾಕುತ್ತಾ—ಅವರನ್ನು ಸ್ವರ್ಗದಿಂದ ನಿರ್ಗಮಿಸುವಂತೆ ಮಾಡಿದ ಶೈತಾನನು ನಿಮ್ಮನ್ನು ಕೂಡ ಮರುಳುಗೊಳಿಸದಿರಲಿ. ನಿಶ್ಚಯವಾಗಿಯೂ ಅವನು ಮತ್ತು ಅವನ ವಂಶಸ್ಥರು ನಿಮ್ಮನ್ನು ನೋಡುತ್ತಿದ್ದಾರೆ. ಆದರೆ ನಿಮಗೆ ಅವರನ್ನು ನೋಡಲಾಗುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡದ ಜನರಿಗೆ ನಾವು ಶೈತಾನರನ್ನು ಮಿತ್ರರನ್ನಾಗಿ ಮಾಡಿದ್ದೇವೆ.
ಅವರು ಏನಾದರೂ ಅಶ್ಲೀಲಕೃತ್ಯ ಮಾಡಿದರೆ, “ನಮ್ಮ ಪೂರ್ವಜರು ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ; ಅಲ್ಲಾಹು ಇದನ್ನು ನಮಗೆ ಆದೇಶಿಸಿದ್ದಾನೆ” ಎಂದು ಹೇಳುತ್ತಾರೆ. ಹೇಳಿರಿ: “ಅಲ್ಲಾಹು ಅಶ್ಲೀಲಕೃತ್ಯ ಮಾಡಲು ಖಂಡಿತ ಆದೇಶಿಸುವುದಿಲ್ಲ. ನಿಮಗೆ ತಿಳಿದಿಲ್ಲದ ವಿಷಯವನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?”
ಹೇಳಿರಿ: “ನನ್ನ ಪರಿಪಾಲಕ ನನಗೆ ನ್ಯಾಯದಿಂದ ವರ್ತಿಸಲು ಆದೇಶಿಸಿದ್ದಾನೆ. ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ನಿಮ್ಮ ಮುಖಗಳನ್ನು (ಅವನ ಕಡೆಗೆ) ನೇರವಾಗಿ ನಿಲ್ಲಿಸಿರಿ ಮತ್ತು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನಲ್ಲಿ ಪ್ರಾರ್ಥಿಸಿರಿ (ಎಂದು ಅವನು ಆದೇಶಿಸಿದ್ದಾನೆ).” ಅವನು ನಿಮ್ಮನ್ನು ಮೊದಲು ಸೃಷ್ಟಿಸಿದಂತೆಯೇ (ನಿಮ್ಮ ಮರಣದ ಬಳಿಕ) ಪುನಃ ಸೃಷ್ಟಿಸುವನು.
ಒಂದು ಗುಂಪಿಗೆ ಅವನು ಸನ್ಮಾರ್ಗವನ್ನು ತೋರಿಸಿದ್ದಾನೆ ಮತ್ತು ಇನ್ನೊಂದು ಗುಂಪು ದುರ್ಮಾರ್ಗದಲ್ಲಿರಲು ಅರ್ಹರಾಗಿದ್ದಾರೆ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ರಕ್ಷಕರನ್ನಾಗಿ ಸ್ವೀಕರಿಸಿದರು. ಅವರು ಸನ್ಮಾರ್ಗದಲ್ಲಿದ್ದಾರೆಂದೇ ಅವರು ಭಾವಿಸುತ್ತಿದ್ದಾರೆ.
ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ.[1] ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುರ್ವ್ಯಯ ಮಾಡಬೇಡಿ. ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
ಹೇಳಿರಿ: “ಅಲ್ಲಾಹು ತನ್ನ ದಾಸರಿಗೆ ಹೊರತಂದ ಅಲಂಕಾರದ ಉಡುಪುಗಳನ್ನು ಮತ್ತು ಉತ್ತಮ ಆಹಾರಗಳನ್ನು ನಿಷೇಧಿಸಿದ್ದು ಯಾರು?” ಹೇಳಿರಿ: “ಇಹಲೋಕದಲ್ಲಿ ಅವು ಸತ್ಯವಿಶ್ವಾಸಿಗಳಿಗೆ (ಮತ್ತು ಇತರರಿಗೆ) ಇರುವುದಾಗಿದೆ. ಪುನರುತ್ಥಾನ ದಿನದಲ್ಲಿ ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಮಾತ್ರ ಇರುವುದಾಗಿದೆ.” ಈ ರೀತಿಯಲ್ಲಿ ನಾವು ತಿಳಿದುಕೊಳ್ಳುವ ಜನರಿಗಾಗಿ ವಚನಗಳನ್ನು ವಿವರಿಸಿಕೊಡುತ್ತೇವೆ.
ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ನಿಷೇಧಿಸಿರುವುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಅಶ್ಲೀಲಕೃತ್ಯಗಳು, ಪಾಪಗಳು, ನ್ಯಾಯರಹಿತವಾದ ದಬ್ಬಾಳಿಕೆಗಳು, ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಇಳಿಸಿಕೊಡದ ವಸ್ತುಗಳನ್ನು ಅವನಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ಅಲ್ಲಾಹನ ಬಗ್ಗೆ ನಿಮ್ಮ ತಿಳಿದಿಲ್ಲದ ವಿಷಯಗಳನ್ನು ಹೇಳುವುದು ಮಾತ್ರವಾಗಿವೆ.”
ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.
ಓ ಆದಮರ ಮಕ್ಕಳೇ! ನನ್ನ ವಚನಗಳನ್ನು ವಿವರಿಸಿಕೊಡುವ ಸಂದೇಶವಾಹಕರುಗಳು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದರೆ—ಆಗ ಯಾರು ದೇವಭಯದಿಂದ ಜೀವಿಸುತ್ತಾರೋ ಮತ್ತು ಸ್ವಯಂ ಸುಧಾರಿಸಿಕೊಳ್ಳುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು (ಅಲ್ಲಾಹನ) ದಾಖಲೆಯಲ್ಲಿ ಅವರಿಗೆ ನಿಶ್ಚಯಿಸಲಾದ ಪಾಲನ್ನು ಪಡೆಯುವರು. ಎಲ್ಲಿಯವರೆಗೆಂದರೆ, ಅವರ ಪ್ರಾಣ ತೆಗೆಯಲು ನಮ್ಮ ದೂತರು (ದೇವದೂತರು) ಅವರ ಬಳಿಗೆ ಬರುವಾಗ, ಅವರು (ದೇವದೂತರು) ಕೇಳುವರು: “ನೀವು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದವರು ಎಲ್ಲಿದ್ದಾರೆ?” ಅವರು ಉತ್ತರಿಸುವರು: “ಅವರು ನಮ್ಮನ್ನು ಬಿಟ್ಟು ಹೋದರು.” ಅವರು ಸತ್ಯನಿಷೇಧಿಗಳಾಗಿದ್ದರೆಂದು ಅವರೇ ಅವರ ವಿರುದ್ಧ ಸಾಕ್ಷಿ ನುಡಿದಿದ್ದಾರೆ.
ಅಲ್ಲಾಹು ಹೇಳುವನು: “ನಿಮಗಿಂತ ಮೊದಲು ತೀರಿಹೋದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳೊಂದಿಗೆ ನೀವು ಕೂಡ ನರಕವನ್ನು ಪ್ರವೇಶಿಸಿರಿ.” ಒಂದೊಂದು ಸಮುದಾಯದವರು ಅದನ್ನು ಪ್ರವೇಶಿಸುವಾಗಲೆಲ್ಲಾ ಅವರಿಗಿಂತ ಮೊದಲಿನ ಸಮುದಾಯವನ್ನು ಶಪಿಸುವರು. ಎಲ್ಲಿಯವರೆಗೆಂದರೆ, ಅವರೆಲ್ಲರೂ ಅಲ್ಲಿ ಒಟ್ಟು ಸೇರಿದಾಗ ನಂತರ ಬಂದವರು ಮೊದಲು ಬಂದವರ ಬಗ್ಗೆ ಹೇಳುವರು: “ಓ ನಮ್ಮ ಪರಿಪಾಲಕನೇ! ಇವರೇ ನಮ್ಮನ್ನು ದಾರಿ ತಪ್ಪಿಸಿದವರು. ಆದ್ದರಿಂದ ಇವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು.” ಅಲ್ಲಾಹು ಹೇಳುವನು: “ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನೀವು ತಿಳಿಯುವುದಿಲ್ಲ.”
ಮೊದಲು ಬಂದವರು ನಂತರ ಬಂದವರೊಡನೆ ಹೇಳುವರು: “ನಿಮಗೆ ನಮಗಿಂತಲೂ ದೊಡ್ಡ ಶ್ರೇಷ್ಠತೆಯೇನಿಲ್ಲ (ನಾವೆಲ್ಲರೂ ಸಮಾನರು). ಆದ್ದರಿಂದ ನೀವು ಮಾಡುತ್ತಿದ್ದ ದುಷ್ಕರ್ಮಗಳ ಶಿಕ್ಷೆಯನ್ನು ನೀವೇ ಅನುಭವಿಸಿರಿ.”
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಡಲಾಗುವುದಿಲ್ಲ.[1] ಸೂಜಿಯ ರಂಧ್ರದಲ್ಲಿ ಒಂಟೆ ಪ್ರವೇಶ ಮಾಡುವ ತನಕ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಈ ರೀತಿ ನಾವು ಅಪರಾಧಿಗಳಿಗೆ ಪ್ರತಿಫಲ ನೀಡುವೆವು.
ಅವರಿಗೆ ನರಕಾಗ್ನಿಯ ಹಾಸಿಗೆಯಿದೆ ಮತ್ತು ಅವರ ಮೇಲ್ಭಾಗದಲ್ಲಿ (ನರಕದ) ಹೊದಿಕೆಗಳೂ ಇವೆ. ಈ ರೀತಿ ನಾವು ಅಕ್ರಮಿಗಳಿಗೆ ಪ್ರತಿಫಲ ನೀಡುವೆವು.
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕೆ ಮಿಗಿಲಾದುದನ್ನು ನಾವು ಹೊರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
ನಾವು ಅವರ ಹೃದಯಗಳಲ್ಲಿರುವ ದ್ವೇಷವನ್ನು ತೆಗೆದು ಬಿಡುವೆವು. ಅವರ ತಳಭಾಗದಿಂದ ನದಿಗಳು ಹರಿಯುವುವು. ಅವರು ಹೇಳುವರು: “ಇದರ ಕಡೆಗೆ ನಮಗೆ ದಾರಿ ತೋರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ನಮಗೆ ದಾರಿ ತೋರಿಸದಿದ್ದರೆ ನಾವು ಸನ್ಮಾರ್ಗದಲ್ಲಿರುತ್ತಿರಲಿಲ್ಲ. ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು.” ಆಗ ಅವರೊಡನೆ ಹೇಳಲಾಗುವುದು: “ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ.”
ಸ್ವರ್ಗವಾಸಿಗಳು ನರಕವಾಸಿಗಳನ್ನು ಕರೆದು ಹೇಳುವರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನಾವು ಕಂಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನೀವು ಕಂಡಿದ್ದೀರಾ?” ಅವರು ಉತ್ತರಿಸುವರು: “ಹೌದು.” ಆಗ ಅವರ ನಡುವಿನಿಂದ ಒಬ್ಬನು ಘೋಷಿಸುವನು: “ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.”
ಅವರು (ಅಕ್ರಮಿಗಳು) ಯಾರೆಂದರೆ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.
ಅವರ ನಡುವೆ ಒಂದು ತಡೆಗೋಡೆಯಿದೆ[1] ಮತ್ತು ಅದರ ಎತ್ತರದ ಸ್ಥಳಗಳಲ್ಲಿ ಕೆಲವು ಜನರಿದ್ದಾರೆ.[2] ಅವರು ಎಲ್ಲರನ್ನೂ (ಸ್ವರ್ಗವಾಸಿ ಮತ್ತು ನರಕವಾಸಿಗಳೆಲ್ಲರನ್ನೂ) ಅವರ ಚಿಹ್ನೆಗಳಿಂದ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ.” ಅವರಿಗೆ ಸ್ವರ್ಗ ಪ್ರವೇಶ ಮಾಡುವ ಆಸೆಯಿದ್ದರೂ ಸಹ ಅವರು ಇನ್ನೂ ಅದನ್ನು ಪ್ರವೇಶಿಸಿಲ್ಲ.
ಅವರ ದೃಷ್ಟಿಗಳನ್ನು ನರಕವಾಸಿಗಳ ಕಡೆಗೆ ತಿರುಗಿಸಲಾದಾಗ ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮನ್ನು ಅಕ್ರಮಿಗಳೊಡನೆ ಸೇರಿಸಬೇಡ.”
ಎತ್ತರದ ಸ್ಥಳಗಳಲ್ಲಿರುವವರು ಚಿಹ್ನೆಗಳ ಮೂಲಕ ಗುರುತಿಸಿದ ಆ ಜನರನ್ನು (ನರಕವಾಸಿಗಳನ್ನು) ಕರೆದು ಹೇಳುವರು: “ನೀವು ಒಟ್ಟುಗೂಡಿಸಿದ (ಜನ ಮತ್ತು ಧನ) ಮತ್ತು ನೀವು ತೋರುತ್ತಿದ್ದ ಅಹಂಕಾರ ನಿಮಗೇನಾದರೂ ಉಪಕಾರ ಮಾಡಿದೆಯೇ?
ಅಲ್ಲಾಹು ದಯೆ ತೋರಲಾರ ಎಂದು ನೀವು ಆಣೆ ಮಾಡಿ ಹೇಳುತ್ತಿದ್ದದ್ದು ಈ ಜನರ ಬಗ್ಗೆಯಲ್ಲವೇ? ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವುದೇ ಭಯವಿಲ್ಲ; ನೀವು ದುಃಖಿಸುವುದೂ ಇಲ್ಲ (ಎಂದು ಅವರೊಡನೆ ಈಗ ಹೇಳಲಾಗಿದೆ).”
ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಮಗೆ ಸ್ವಲ್ಪ ನೀರು ಕೊಡಿ; ಅಥವಾ ಅಲ್ಲಾಹು ನಿಮಗೆ ನೀಡಿರುವ ಆಹಾರಗಳಲ್ಲಿ ಏನಾದರೂ ಕೊಡಿ.” ಅವರು (ಸ್ವರ್ಗವಾಸಿಗಳು) ಹೇಳುವರು: “ನಿಶ್ಚಯವಾಗಿಯೂ ಅಲ್ಲಾಹು ಅವೆರಡನ್ನೂ ಸತ್ಯನಿಷೇಧಿಗಳಿಗೆ ನಿಷೇಧಿಸಿದ್ದಾನೆ.
ಅವರು (ಸತ್ಯನಿಷೇಧಿಗಳು) ಯಾರೆಂದರೆ, ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರು ಹಾಗೂ ಇಹಲೋಕ ಜೀವನಕ್ಕೆ ಮರುಳಾದವರು.” ಅವರ ಈ ದಿನದ ಭೇಟಿಯನ್ನು ಅವರು ಮರೆತುಬಿಟ್ಟಂತೆ, ಮತ್ತು ಅವರು ನಮ್ಮ ವಚನಗಳನ್ನು ನಿಷೇಧಿಸಿದಂತೆ, ಇಂದು ನಾವು ಕೂಡ ಅವರನ್ನು ಮರೆತುಬಿಡುವೆವು.
وَلَقَدۡ جِئۡنَٰهُم بِكِتَٰبٖ فَصَّلۡنَٰهُ عَلَىٰ عِلۡمٍ هُدٗى وَرَحۡمَةٗ لِّقَوۡمٖ يُؤۡمِنُونَ [٥٢]
ಜ್ಞಾನದ ಆಧಾರದಲ್ಲಿ ವಿವರಿಸಲಾದ ಒಂದು ಗ್ರಂಥವನ್ನು ನಾವು ಅವರಿಗೆ ನೀಡಿದ್ದೇವೆ. ಅದು ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿ ಮತ್ತು ದಯೆಯಾಗಿದೆ.
ಅವರು ಅದರ ಫಲಿತಾಂಶವನ್ನು ಕಾಯುತ್ತಿದ್ದಾರೆಯೇ?[1] ಅದರ ಫಲಿತಾಂಶವು ಬರುವ ದಿನದಂದು ಅದಕ್ಕೆ ಮುಂಚೆ ಅದನ್ನು ಮರೆತುಬಿಟ್ಟವರು ಹೇಳುವರು: “ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರುಗಳು ಸತ್ಯ ಸಹಿತ ಬಂದಿದ್ದರು. ನಮಗೆ ಶಿಫಾರಸು ಮಾಡುವ ಶಿಫಾರಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಈಗಾಗಲೇ ಮಾಡಿದ ಕರ್ಮಗಳಲ್ಲದ ಬೇರೆ ಕರ್ಮಗಳನ್ನು ಮಾಡಲು ನಮ್ಮನ್ನು ಪುನಃ ಇಹಲೋಕಕ್ಕೆ ಕಳುಹಿಸಲಾಗುವುದೇ?” ಅವರು ಸ್ವಯಂ ನಷ್ಟಹೊಂದಿದವರು. ಅವರು ಕಲ್ಪಿಸಿ ಹೇಳುತ್ತಿದ್ದ ವಿಷಯಗಳೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುವು.
ನಿಶ್ಚಯವಾಗಿಯೂ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪರಿಪಾಲಕನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ. ಆಗ ಅದು ಕ್ಷಿಪ್ರಗತಿಯಲ್ಲಿ ಹಗಲನ್ನು ಹುಡುಕುತ್ತಾ ಸಾಗುತ್ತದೆ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳೆಲ್ಲವೂ ಅವನ ಆಜ್ಞೆಗೆ ವಿಧೇಯವಾಗಿವೆ. ತಿಳಿಯಿರಿ! ಸೃಷ್ಟಿ ಮತ್ತು ಆಜ್ಞೆಯು ಅವನದ್ದು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.
ವಿನಯದಿಂದ ಮತ್ತು ರಹಸ್ಯವಾಗಿ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರುವವರನ್ನು ಇಷ್ಟಪಡುವುದಿಲ್ಲ.
ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಭಯ ಮತ್ತು ನಿರೀಕ್ಷೆಯಿಂದ ಅವನನ್ನು ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ದಯೆ ಒಳಿತು ಮಾಡುವವರ ಸಮೀಪದಲ್ಲಿದೆ.
ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು ಅವನೇ. ಎಲ್ಲಿಯವರೆಗೆಂದರೆ, ಅದು ಭಾರವಾದ ಮೋಡಗಳನ್ನು ಹೊತ್ತಾಗ ನಾವು ಅದನ್ನು ಬರಡು ಪ್ರದೇಶಕ್ಕೆ ಸಾಗಿಸುವೆವು. ನಂತರ ನಾವು ಅಲ್ಲಿ ಮಳೆ ಸುರಿಸುವೆವು ಮತ್ತು ಅದರಿಂದ ವಿಭಿನ್ನ ಹಣ್ಣುಗಳನ್ನು ಉತ್ಪಾದಿಸುವೆವು. ಇದೇ ರೀತಿ ನಾವು ಸತ್ತವರನ್ನು (ಸಮಾಧಿಯಿಂದ) ಹೊರತರುವೆವು. ನೀವು ಉಪದೇಶ ಪಡೆಯುವುದಕ್ಕಾಗಿ (ಇದನ್ನು ವಿವರಿಸುತ್ತಿದ್ದೇವೆ).
ಉತ್ತಮ ಭೂಮಿಯಲ್ಲಿ ಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಉತ್ತಮ ಬೆಳೆಗಳು ಬೆಳೆಯುತ್ತವೆ. ಆದರೆ ಕೆಟ್ಟ ಭೂಮಿಯಲ್ಲಿ ಸಸ್ಯಗಳು ಶುಷ್ಕವಾಗಿಯಲ್ಲದೆ ಬೆಳೆಯುವುದಿಲ್ಲ. ಕೃತಜ್ಞರಾದ ಜನರಿಗೆ ಈ ರೀತಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಭಯಾನಕ ದಿನದ ಶಿಕ್ಷೆಯು (ನಿಮ್ಮ ಮೇಲೆರಗಬಹುದೆಂದು) ನಿಶ್ಚಯವಾಗಿಯೂ ನಾನು ಭಯಪಡುತ್ತೇನೆ.”
ಅವರ ಜನರ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನೀನು ಸ್ಪಷ್ಟ ದುರ್ಮಾರ್ಗದಲ್ಲಿದ್ದೀ ಎಂದು ನಮಗೆ ತೋರುತ್ತಿದೆ.”
ನೂಹ್ ಹೇಳಿದರು: “ಓ ನನ್ನ ಜನರೇ! ನಾನು ಯಾವುದೇ ದುರ್ಮಾರ್ಗದಲ್ಲಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ ಮತ್ತು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ. ನೀವು ತಿಳಿದಿರದ ವಿಷಯಗಳನ್ನು ನಾನು ಅಲ್ಲಾಹನಿಂದ ತಿಳಿಯುತ್ತೇನೆ.
ನಿಮಗೆ ಎಚ್ಚರಿಕೆ ನೀಡಲು, ನೀವು ದೇವಭಯದಿಂದ ಜೀವಿಸುವಂತಾಗಲು ಮತ್ತು ನಿಮಗೆ ದಯೆ ತೋರುವಂತಾಗಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ?”
ಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ಅವರನ್ನು ಮತ್ತು ಅವನ ಅನುಯಾಯಿಗಳನ್ನು ನಾವೆಯಲ್ಲಿ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮುಳುಗಿಸಿದೆವು. ನಿಶ್ಚಯವಾಗಿಯೂ ಅವರು ಕಣ್ಣು ಕಾಣದ ಜನರಾಗಿದ್ದರು.[1]
ಆದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಹೂದರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”
ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನಿನ್ನಲ್ಲಿ ಅವಿವೇಕತನವಿದೆಯೆಂದು ನಮಗೆ ತೋರುತ್ತಿದೆ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀ ಎಂದು ನಾವು ಭಾವಿಸುತ್ತಿದ್ದೇವೆ.”
ಹೂದ್ ಹೇಳಿದರು: “ಓ ನನ್ನ ಜನರೇ! ನನ್ನಲ್ಲಿ ಅವಿವೇಕತನವಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ. ನಿಶ್ಚಯವಾಗಿಯೂ ನಾನು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ.
ನಿಮಗೆ ಎಚ್ಚರಿಕೆ ನೀಡಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ? ನೂಹರ ಜನರ ಬಳಿಕ ಅಲ್ಲಾಹು ನಿಮ್ಮನ್ನು ಅವರ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಟ್ಟನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.”
ಅವರು ಹೇಳಿದರು: “ನಾವು ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ನಮ್ಮ ಪೂರ್ವಜರು ಆರಾಧಿಸುತ್ತಿದ್ದ ದೇವರುಗಳನ್ನು ಬಿಟ್ಟುಬಿಡಬೇಕು ಎಂದು ಹೇಳಲು ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ನಮಗೆ ಹೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ತೋರಿಸು. ನೀನು ಸತ್ಯವನ್ನೇ ಹೇಳುತ್ತಿದ್ದರೆ.”
ಹೂದ್ ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆ ಮತ್ತು ಕೋಪ ಈಗಾಗಲೇ ನಿಮ್ಮ ಮೇಲೆರಗಿದೆ. ನೀವು ಮತ್ತು ನಿಮ್ಮ ಪೂರ್ವಜರು ಹೆಸರಿಟ್ಟ ಕೆಲವು ದೇವರುಗಳ ಹೆಸರುಗಳನ್ನು ಹೇಳಿ ನೀವು ನನ್ನೊಂದಿಗೆ ತರ್ಕಿಸುತ್ತೀರಾ? ಅಲ್ಲಾಹು ಅದಕ್ಕೆ (ಅವರು ದೇವರುಗಳು ಎಂಬುದಕ್ಕೆ) ಯಾವುದೇ ಸಾಕ್ಷ್ಯಾಧಾರಗಳನ್ನು ಇಳಿಸಿಲ್ಲ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತೇನೆ.”
ನಂತರ ನಾವು ಹೂದರನ್ನು ಮತ್ತು ಅವರ ಅನುಯಾಯಿಗಳನ್ನು ನಮ್ಮ ದಯೆಯಿಂದ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮತ್ತು ವಿಶ್ವಾಸವಿಡದವರನ್ನು ನಾವು ನಿರ್ನಾಮ ಮಾಡಿದೆವು.
ಸಮೂದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ಇದು ಅಲ್ಲಾಹನ ಒಂಟೆ. ಇದು ನಿಮಗೆ ದೃಷ್ಟಾಂತವಾಗಿದೆ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಅದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಅದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.
ಆದ್ ಗೋತ್ರದವರ ಬಳಿಕ ಅವನು ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ಭೂಮಿಯಲ್ಲಿ ವಾಸ್ತವ್ಯವನ್ನು ಮಾಡಿಕೊಟ್ಟನು. ನೀವು ಭೂಮಿಯ ಸಮತಟ್ಟು ಪ್ರದೇಶಗಳಲ್ಲಿ ಸೌಧಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳಲ್ಲಿ ಮನೆಗಳನ್ನು ಕೊರೆಯುತ್ತೀರಿ. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲ್ಲಾಹನ ಆಜ್ಞೋಲ್ಲಂಘನೆ ಮಾಡಬೇಡಿ.”
ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಸ್ವಾಲಿಹರಲ್ಲಿ ವಿಶ್ವಾಸವಿಟ್ಟ ಬಲಹೀನರೊಡನೆ ಹೇಳಿದರು: “ಸ್ವಾಲಿಹರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿಂದ ಕಳುಹಿಸಲಾಗಿದೆಯೆಂದು ನೀವು ನಿಜವಾಗಿಯೂ ನಂಬುತ್ತೀರಾ?” ಅವರು ಉತ್ತರಿಸಿದರು: “ಅವರೊಡನೆ ಏನು ಕಳುಹಿಸಲಾಗಿದೆಯೋ ಅದರಲ್ಲಿ ನಿಶ್ಚಯವಾಗಿಯೂ ನಾವು ವಿಶ್ವಾಸವಿಟ್ಟಿದ್ದೇವೆ.”
ಅಹಂಕಾರಿಗಳು ಹೇಳಿದರು: “ನೀವು ಯಾವುದರಲ್ಲಿ ವಿಶ್ವಾಸವಿಟ್ಟಿದ್ದೀರೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ.”
ನಂತರ ಅವರು ಆ ಒಂಟೆಯನ್ನು ಕೊಂದು ಅವರ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದರು. ಅವರು ಹೇಳಿದರು: “ಓ ಸ್ವಾಲಿಹ್! ನೀನು ನಮ್ಮನ್ನು ಹೆದರಿಸುತ್ತಿದ್ದ ಆ ಶಿಕ್ಷೆಯನ್ನು ತಂದು ತೋರಿಸು. ನೀನು (ನಿಜವಾಗಿಯೂ) ಸಂದೇಶವಾಹಕನಾಗಿದ್ದರೆ.”
ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ಅವರ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
ಅವರಿಂದ ತಿರುಗಿ ನಡೆಯುತ್ತಾ ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಆದರೆ ನೀವು ಉಪದೇಶ ಮಾಡುವವರನ್ನು ಇಷ್ಟಪಡುತ್ತಿರಲಿಲ್ಲ.”
ಲೂತರನ್ನು ಕೂಡ (ನಾವು ಕಳುಹಿಸಿದೆವು). ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಾ?
ನೀವು ಲೈಂಗಿಕ ತೃಷೆಯನ್ನು ತೀರಿಸಲು ಮಹಿಳೆಯರ ಬದಲು ಪುರುಷರ ಬಳಿಗೆ ಹೋಗುತ್ತಿದ್ದೀರಿ. ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”
ಆಗ ಅವರ ಜನರ ಉತ್ತರವು, “ಇವರನ್ನು ನಿಮ್ಮ ಊರಿನಿಂದ ಓಡಿಸಿರಿ; ಇವರು ಪರಿಶುದ್ಧ ಜನರಾಗಿದ್ದಾರೆ!” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.
ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೆ ಗುರಿಯಾದವರಲ್ಲಿ ಸೇರಿದವಳಾದಳು.
ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಅಪರಾಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.
ಮದ್ಯನ್ ಗೋತ್ರದವರ ಬಳಿಗೆ ಅವರ ಸಹೋದರ ಶುಐಬರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ನೀವು ಅಳತೆ ಮತ್ತು ತೂಕವನ್ನು ಪೂರ್ತಿಯಾಗಿ ನೀಡಿರಿ. ಜನರಿಗೆ ಅವರ ಸಾಮಗ್ರಿಗಳನ್ನು ಕಡಿಮೆಗೊಳಿಸಬೇಡಿ. ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಇದು ನಿಮಗೆ ಉತ್ತಮವಾಗಿದೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
ಅಲ್ಲಾಹನಲ್ಲಿ ವಿಶ್ವಾಸವಿಟ್ಟವರನ್ನು ಬೆದರಿಸಲು, ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯಲು ಮತ್ತು ಆ ಮಾರ್ಗದಲ್ಲಿ ವಕ್ರತೆಯನ್ನು ಹುಡುಕಲು ನೀವು ದಾರಿಗಳಲ್ಲಿ ಕುಳಿತುಕೊಳ್ಳಬೇಡಿ. ನೀವು ಕಡಿಮೆ ಸಂಖ್ಯೆಯಲ್ಲಿದ್ದಿರಿ. ನಂತರ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದನ್ನು ಸ್ಮರಿಸಿರಿ. ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.
ನಿಮ್ಮಲ್ಲಿ ಒಂದು ಗುಂಪು ನನ್ನೊಂದಿಗೆ ಕಳುಹಿಸಲಾದ ಸಂದೇಶದಲ್ಲಿ ವಿಶ್ವಾಸವಿಟ್ಟು ಇನ್ನೊಂದು ಗುಂಪು ಅದರಲ್ಲಿ ವಿಶ್ವಾಸವಿಡದಿದ್ದರೆ—ಅಲ್ಲಾಹು ನಮ್ಮ ಮಧ್ಯೆ ತೀರ್ಪು ನೀಡುವ ತನಕ ತಾಳ್ಮೆಯಿಂದ ಕಾಯಿರಿ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”
ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಹೇಳಿದರು: “ಓ ಶುಐಬ್! ನಿಶ್ಚಯವಾಗಿಯೂ ನಿನ್ನನ್ನು ಮತ್ತು ನಿನ್ನ ಜೊತೆಗಿರುವ ಸತ್ಯವಿಶ್ವಾಸಿಗಳನ್ನು ನಾವು ನಮ್ಮ ಊರಿನಿಂದ ಓಡಿಸುವೆವು. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು.” ಶುಐಬ್ ಹೇಳಿದರು: “ನಾವು ಅದನ್ನು (ನಿಮ್ಮ ಧರ್ಮವನ್ನು) ದ್ವೇಷಿಸುವವರಾಗಿದ್ದರೂ ಸಹ (ಮರಳಿ ಬರಬೇಕೇ)?
ಅಲ್ಲಾಹು ನಮ್ಮನ್ನು ನಿಮ್ಮ ಧರ್ಮದಿಂದ ರಕ್ಷಿಸಿದ ಬಳಿಕ ನಾವು ಪುನಃ ಅದಕ್ಕೆ ಮರಳಿದರೆ, ನಾವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿದವರಾಗುವೆವು. ನಿಮ್ಮ ಧರ್ಮಕ್ಕೆ ಮರಳಲು ನಮ್ಮಿಂದ ಸುತರಾಂ ಸಾಧ್ಯವಿಲ್ಲ. ನಮ್ಮ ಪರಿಪಾಲಕನಾದ ಅಲ್ಲಾಹು ಇಚ್ಛಿಸಿದರೆ ಹೊರತು. ನಮ್ಮ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮ ಮತ್ತು ನಮ್ಮ ಜನರ ನಡುವೆ ಸತ್ಯವಾದ ತೀರ್ಪನ್ನು ನೀಡು. ತೀರ್ಪು ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”
ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನೀವು ಶುಐಬರ ಹಿಂದೆ ಹೋದರೆ ನಿಶ್ಚಯವಾಗಿಯೂ ನೀವು ನಷ್ಟಹೊಂದುವಿರಿ.”
ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
ಶುಐಬರನ್ನು ನಿಷೇಧಿಸಿದವರ ಸ್ಥಿತಿಯು ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತಾಯಿತು. ಶುಐಬರನ್ನು ನಿಷೇಧಿಸಿದವರೇ ನಷ್ಟಹೊಂದಿದರು.
ಅವರಿಂದ ತಿರುಗಿ ನಡೆಯುತ್ತಾ ಶುಐಬ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಹೀಗಿರುವಾಗ ಸತ್ಯವನ್ನು ನಿಷೇಧಿಸಿದ ಜನರಿಗಾಗಿ ನಾನೇಕೆ ಬೇಸರ ಮಾಡಿಕೊಳ್ಳಲಿ?”
ನಾವು ಯಾವುದೇ ಊರಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದಾಗ, (ಅವರು ಆ ಪ್ರವಾದಿಯನ್ನು ನಿಷೇಧಿಸಿದರೆ) ಅಲ್ಲಿನ ನಿವಾಸಿಗಳನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿಯುತ್ತಿದ್ದೆವು. ಅವರು ವಿನಯವಂತರಾಗುವುದಕ್ಕಾಗಿ.
ನಂತರ ನಾವು ಕೆಡುಕಿನ ಸ್ಥಾನದಲ್ಲಿ (ಬಡತನ ಮತ್ತು ಅನಾರೋಗ್ಯದ ಸ್ಥಾನದಲ್ಲಿ) ಒಳಿತನ್ನು ನೀಡಿ ಬದಲಾಯಿಸುವೆವು. ಎಲ್ಲಿಯವರೆಗೆಂದರೆ, ಅವರು ಅಭಿವೃದ್ಧಿ ಪಡೆದು, “ನಮ್ಮ ಪೂರ್ವಜರಿಗೂ ಬಡತನ ಮತ್ತು ಅನಾರೋಗ್ಯ ಉಂಟಾಗಿತ್ತು” ಎಂದು ಹೇಳುವ ತನಕ. ಆಗ ನಾವು ಅವರಿಗೆ ತಿಳಿಯದ ರೀತಿಯಲ್ಲಿ ಹಠಾತ್ತನೆ ಅವರನ್ನು ಹಿಡಿದುಕೊಳ್ಳುವೆವು.
ಊರುಗಳ ನಿವಾಸಿಗಳು ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಾಗಿದ್ದರೆ, ನಾವು ಅವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಸಮೃದ್ಧಿಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ಸತ್ಯನಿಷೇಧಿಗಳಾದರು. ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳಿಂದಾಗಿ ನಾವು ಅವರನ್ನು ಹಿಡಿದೆವು.
ಆ ಊರುಗಳ ನಿವಾಸಿಗಳು—ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?
ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?
ಅವರು ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗಿದ್ದಾರೆಯೇ? ನಷ್ಟಹೊಂದಿದ ಜನರ ಹೊರತು ಇನ್ನಾರೂ ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗುವುದಿಲ್ಲ.
ಭೂಮಿಯಲ್ಲಿ ವಾಸವಾಗಿದ್ದವರು (ನಾಶವಾದ) ಬಳಿಕ ಅದರ ಉತ್ತರಾಧಿಕಾರಿಗಳಾಗಿ ಬಂದವರಿಗೆ—ನಾವು ಇಚ್ಛಿಸಿದರೆ ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸುವೆವು ಎಂಬ ಪ್ರಜ್ಞೆಯು ಸರಿದಾರಿಯನ್ನೇಕೆ ತೋರಿಸಲಿಲ್ಲ? ನಾವು ಅವರ ಹೃದಯಗಳಿಗೆ ಮೊಹರು ಹಾಕುವೆವು. ಆದ್ದರಿಂದ ಯಾವುದಕ್ಕೂ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ.
ಆ ಊರುಗಳ ಕೆಲವು ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುವೆವು. ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ಮೊದಲು ಏನನ್ನು ನಿಷೇಧಿಸಿದ್ದರೋ ಅದರಲ್ಲಿ ಅವರು ವಿಶ್ವಾಸವಿಡಲಿಲ್ಲ. ಈ ರೀತಿ ಅಲ್ಲಾಹು ಸತ್ಯನಿಷೇಧಿಗಳ ಹೃದಯಗಳಿಗೆ ಮೊಹರು ಹಾಕುತ್ತಾನೆ.
ಅವರಲ್ಲಿ ಹೆಚ್ಚಿನವರು ಕರಾರು ಪಾಲಿಸುವುದನ್ನು ನಾವು ಕಂಡಿಲ್ಲ. ಅವರಲ್ಲಿ ಹೆಚ್ಚಿನವರನ್ನೂ ನಾವು ಅವಿಧೇಯರಾಗಿಯೇ ಕಂಡಿದ್ದೇವೆ.
ನಂತರ ಅವರ ಬಳಿಕ ನಾವು ಮೂಸಾರನ್ನು ಫರೋಹ ಮತ್ತು ಅವನ ಜನರ ಬಳಿಗೆ ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಆದರೆ ಅವರು ಅನ್ಯಾಯವಾಗಿ ಆ ದೃಷ್ಟಾಂತಗಳನ್ನು ನಿಷೇಧಿಸಿದರು. ಆ ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.
ಮೂಸಾ ಹೇಳಿದರು: “ಓ ಫರೋಹ! ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
ಅಲ್ಲಾಹನ ಮೇಲೆ ಸತ್ಯವನ್ನೇ ಹೊರತು ಬೇರೇನನ್ನೂ ಹೇಳಬಾರದೆಂಬ ನಿಷ್ಠೆ ನನಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನನ್ನ ಜೊತೆಗೆ ಕಳುಹಿಸಿಕೊಡಿ.”
ಫರೋಹ ಹೇಳಿದನು: “ನೀನು ದೃಷ್ಟಾಂತವನ್ನು ತಂದಿದ್ದರೆ ಅದನ್ನು ತೋರಿಸು. ನೀನು ಸತ್ಯವಂತರಲ್ಲಿ ಸೇರಿದ್ದರೆ.”
ಆಗ ಮೂಸಾ ತಮ್ಮ ಕೋಲನ್ನು ಕೆಳಗೆಸೆದರು. ತಕ್ಷಣ ಅದು ಸ್ಪಷ್ಟವಾಗಿ ಕಾಣುವ ಒಂದು ಸರ್ಪವಾಗಿ ಮಾರ್ಪಟ್ಟಿತು.
ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಹೊರತೆಗೆದರು. ಆಗ ಅದು ನೋಡುವವರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.
ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.
ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಆದ್ದರಿಂದ ನೀವೇನು ಆದೇಶ ನೀಡುವಿರಿ?”
ಅವರು (ಮುಖಂಡರು ಪರಸ್ಪರ ಸಮಾಲೋಚನೆ ಮಾಡಿ) ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.
ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಅವರು ಕರೆದುಕೊಂಡು ಬರಲಿ.”
ಮಾಟಗಾರರು ಫರೋಹನ ಬಳಿಗೆ ಬಂದು ಕೇಳಿದರು: “ನಾವು ವಿಜೇತರಾದರೆ ನಿಶ್ಚಯವಾಗಿಯೂ ನಮಗೆ ಪ್ರತಿಫಲವಿದೆಯಲ್ಲವೇ?”
ಫರೋಹ ಹೇಳಿದನು: “ಹೌದು, ನಿಶ್ಚಯವಾಗಿಯೂ ನೀವು ನನ್ನ ಆಪ್ತರಲ್ಲಿ ಸೇರುವಿರಿ.”
ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು (ಕೋಲನ್ನು) ಎಸೆಯಿರಿ. ಅಥವಾ ನಾವೇ (ಮೊದಲು) ಎಸೆಯುತ್ತೇವೆ.”
ಮೂಸಾ ಹೇಳಿದರು: “ನೀವೇ ಎಸೆಯಿರಿ.” ಅವರು (ಕೋಲುಗಳನ್ನು) ಎಸೆದಾಗ ಅವರು ಜನರ ಕಣ್ಣುಗಳಿಗೆ ಮಾಟ ಮಾಡಿ ಅವರನ್ನು ಭಯಭೀತಗೊಳಿಸಿದರು. ಅವರು ಬಹುದೊಡ್ಡ ಮಾಟಗಾರಿಕೆಯನ್ನು ಪ್ರದರ್ಶಿಸಿದ್ದರು.
“ತಮ್ಮ ಕೋಲನ್ನು ಎಸೆಯಿರಿ” ಎಂದು ನಾವು ಮೂಸಾರಿಗೆ ದೇವವಾಣಿ ನೀಡಿದೆವು. ಆಗ ಅಗೋ ಅವರು ಕೃತಕವಾಗಿ ನಿರ್ಮಿಸಿದ (ಸರ್ಪಗಳನ್ನು) ಅದು ನುಂಗತೊಡಗಿತು.
ಸತ್ಯವು ಸಾಬೀತಾಯಿತು ಮತ್ತು ಅವರು ಮಾಡುತ್ತಿದ್ದ ಕೆಲಸಗಳೆಲ್ಲವೂ ನಿಷ್ಫಲವಾದವು.
ಅವರು ಅಲ್ಲಿಯೇ ಸೋತು ದಯನೀಯ ಸ್ಥಿತಿಯಲ್ಲಿ ಮರಳಿದರು.
ಮಾಟಗಾರರು (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿದರು.
ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.
ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”
ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಇದು ನೀವು ನಗರದ ನಿವಾಸಿಗಳನ್ನು ಅಲ್ಲಿಂದ ಓಡಿಸಲು ಮಾಡಿದ ಪಿತೂರಿಯಾಗಿದೆ. ಸದ್ಯವೇ ನೀವು ತಿಳಿಯುವಿರಿ.
ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ, ನಂತರ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.”
ಮಾಟಗಾರರು ಹೇಳಿದರು: “ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.
ನಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳು ನಮ್ಮ ಬಳಿಗೆ ಬಂದಾಗ ನಾವು ಅದರಲ್ಲಿ ವಿಶ್ವಾಸವಿಟ್ಟೆವು ಎಂಬುದರ ಹೊರತು ಬೇರೆ ಯಾವ ಅಪರಾಧಕ್ಕಾಗಿ ನೀವು ನಮ್ಮ ಮೇಲೆ ಸಿಟ್ಟಾಗಿದ್ದೀರಿ? ಓ ನಮ್ಮ ಪರಿಪಾಲಕನೇ! ನಮಗೆ ಸಹನಾಶಕ್ತಿಯನ್ನು ಸುರಿಸಿಕೊಡು ಮತ್ತು ಮುಸಲ್ಮಾನರಾಗಿರುವ ಸ್ಥಿತಿಯಲ್ಲಿ ನಮ್ಮನ್ನು ಮೃತಪಡಿಸು.”
ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮತ್ತು ನಿಮ್ಮನ್ನು ಹಾಗೂ ನಿಮ್ಮ ದೇವರುಗಳನ್ನು ಬಹಿಷ್ಕರಿಸಲು ನೀವು ಮೂಸಾ ಮತ್ತು ಅವನ ಜನರನ್ನು (ಸ್ವತಂತ್ರವಾಗಿ) ಬಿಟ್ಟುಬಿಡುತ್ತೀರಾ?” ಫರೋಹ ಹೇಳಿದನು: “ನಾವು ಅವರ (ಇಸ್ರಾಯೇಲರ) ಗಂಡುಮಕ್ಕಳ ಕತ್ತು ಕೊಯ್ಯುವೆವು ಮತ್ತು ಅವರ ಹೆಣ್ಣು ಮಕ್ಕಳನ್ನು ಜೀವಂತ ಬಿಡುವೆವು. ನಿಶ್ಚಯವಾಗಿಯೂ ನಮಗೆ ಅವರ ಮೇಲೆ ಸರ್ವಾಧಿಕಾರವಿದೆ.”
ಮೂಸಾ ತಮ್ಮ ಜನರಿಗೆ ಹೇಳಿದರು: “ನೀವು ಅಲ್ಲಾಹನಲ್ಲಿ ಸಹಾಯ ಬೇಡಿರಿ ಮತ್ತು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಭೂಮಿ ಅಲ್ಲಾಹನಿಗೆ ಸೇರಿದ್ದು. ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನು ಅದನ್ನು ಉತ್ತರಾಧಿಕಾರವಾಗಿ ನೀಡುತ್ತಾನೆ. ಉತ್ತಮ ಅಂತ್ಯವಿರುವುದು ದೇವಭಯವುಳ್ಳವರಿಗೆ ಮಾತ್ರ.”
ಅವರು ಹೇಳಿದರು: “ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬರುವ ಮೊದಲು ಮತ್ತು ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬಂದ ಬಳಿಕವೂ ನಾವು ಹಿಂಸೆಗೆ ಗುರಿಯಾಗಿದ್ದೇವೆ.” ಮೂಸಾ ಹೇಳಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ವೈರಿಯನ್ನು ನಾಶ ಮಾಡಿ, ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದು. ನಂತರ ನೀವು ಹೇಗೆ ಕಾರ್ಯವೆಸಗುತ್ತೀರಿ ಎಂದು ಅವನು ನೋಡುವನು.”
ಫರೋಹನ ಜನರನ್ನು ನಾವು ಬರಗಾಲ ಮತ್ತು ಬೆಳೆಗಳ ಅಭಾವದಿಂದ ಹಿಡಿದೆವು. ಅವರು ಜಾಗೃತರಾಗುವುದಕ್ಕಾಗಿ.
ಅವರಿಗೆ ಒಳಿತುಂಟಾದರೆ, “ಇದು ನಮ್ಮ ಸಿಗಬೇಕಾದ ಹಕ್ಕು” ಎಂದು ಅವರು ಹೇಳುತ್ತಾರೆ. ಅವರಿಗೆ ಕೆಡುಕು ಬಾಧಿಸಿದರೆ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಪಶಕುನವಾಗಿ ಕಾಣುತ್ತಾರೆ. ತಿಳಿಯಿರಿ! ಅವರ ಶಕುನವು ಅಲ್ಲಾಹನ ಬಳಿಯಲ್ಲಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ಅವರು ಹೇಳಿದರು: “ನೀನು ನಮ್ಮನ್ನು ಮೋಡಿ ಮಾಡಲು ಯಾವುದೇ ದೃಷ್ಟಾಂತವನ್ನು ತಂದರೂ ನಾವು ನಿನ್ನಲ್ಲಿ ವಿಶ್ವಾಸವಿಡುವುದಿಲ್ಲ.”
ಆಗ ನಾವು ಅವರ ವಿರುದ್ಧ ಪ್ರವಾಹ, ಮಿಡತೆ, ಹೇನು, ಕಪ್ಪೆಗಳು ಮತ್ತು ರಕ್ತವನ್ನು ಸ್ಪಷ್ಟ ದೃಷ್ಟಾಂತಗಳಾಗಿ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧವೆಸಗಿದ ಜನರಾಗಿದ್ದರು.
ಶಿಕ್ಷೆಯು ಅವರ ಮೇಲೆರಗಿದಾಗ ಅವರು ಹೇಳಿದರು: “ಓ ಮೂಸಾ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ನೀಡಿದ ಭರವಸೆಯಂತೆ ನೀವು ಅವನನ್ನು ಕರೆದು ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ನಿವಾರಿಸಿದರೆ ನಾವು ಖಂಡಿತ ವಿಶ್ವಾಸವಿಡುವೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಖಂಡಿತ ನಿಮ್ಮ ಜೊತೆಗೆ ಕಳುಹಿಸಿಕೊಡುವೆವು.”
ಆದರೆ ಅವರು ತಲುಪಬೇಕಾದ ಒಂದು ಅವಧಿಯ ತನಕ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ, ಅಗೋ ಅವರು ಮಾತು ತಪ್ಪುತ್ತಿದ್ದಾರೆ.
ಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು. ಏಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.
ದಬ್ಬಾಳಿಕೆಗೆ ಗುರಿಯಾದ ಜನರನ್ನು (ಇಸ್ರಾಯೇಲ್ ಮಕ್ಕಳನ್ನು) ನಾವು ಸಮೃದ್ಧಗೊಳಿಸಿದ ಭೂಮಿಯ ಪೂರ್ವ ಮತ್ತು ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಇಸ್ರಾಯೇಲ್ ಮಕ್ಕಳು ತಾಳ್ಮೆ ತೋರಿದ ಕಾರಣ ಅವರಿಗೆ ಸಂಬಂಧಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತಮ ವಚನವು ನೆರವೇರಿತು. ಫರೋಹ ಮತ್ತು ಅವನ ಜನರು ನಿರ್ಮಿಸಿದ್ದನ್ನು ಮತ್ತು ಅವರು ಎತ್ತರಿಸಿ ಕಟ್ಟಿದ್ದನ್ನು ನಾವು ನಾಶ ಮಾಡಿದೆವು.
ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ಅಲ್ಲಿ ಅವರು ವಿಗ್ರಹಗಳ ಮುಂದೆ ಧ್ಯಾನಮಗ್ನರಾಗಿ ಕುಳಿತಿದ್ದ ಜನರನ್ನು ಕಂಡರು. ಅವರು ಹೇಳಿದರು: “ಓ ಮೂಸಾ! ಇವರಿಗೆ ದೇವರುಗಳು ಇರುವಂತೆ ನಮಗೂ ಒಬ್ಬ ದೇವನನ್ನು ಮಾಡಿಕೊಡಿ.” ಮೂಸಾ ಹೇಳಿದರು: “ನಿಶ್ಚಯವಾಗಿಯೂ ನೀವು ವಿವೇಕರಹಿತ ಜನರಾಗಿದ್ದೀರಿ.
ನಿಶ್ಚಯವಾಗಿಯೂ ಇವರು ಮಾಡುತ್ತಿರುವ ಈ ಕಾರ್ಯವು (ವಿಗ್ರಹಾರಾಧನೆ) ನಾಶವಾಗಿ ಹೋಗುತ್ತದೆ ಮತ್ತು ಇವರು ಮಾಡುತ್ತಿರುವ ಈ ಕಾರ್ಯವು ಆಧಾರರಹಿತವಾಗಿದೆ.”
ಮೂಸಾ ಕೇಳಿದರು: “ಅಲ್ಲಾಹು ನಿಮ್ಮನ್ನು ಸರ್ವಲೋಕಗಳ ಜನರಿಗಿಂತ ಶ್ರೇಷ್ಠಗೊಳಿಸಿರುವಾಗ, ನಾನು ಅವನಲ್ಲದ ಬೇರೆ ದೇವರನ್ನು ನಿಮಗಾಗಿ ಹುಡುಕಿ ತರಬೇಕೇ?”
ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಚಯವಾಗಿಯೂ ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.
ನಾವು ಮೂಸಾರಿಗೆ ಮೂವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದೆವು ಮತ್ತು ಅದಕ್ಕೆ ಹತ್ತು ಸೇರಿಸಿ ಪೂರ್ಣಗೊಳಿಸಿದೆವು. ಹೀಗೆ ಮೂಸಾರ ಪರಿಪಾಲಕನು (ಅಲ್ಲಾಹು) ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣವಾಯಿತು. ಮೂಸಾ ತಮ್ಮ ಸಹೋದರ ಹಾರೂನರಿಗೆ ಹೇಳಿದರು: “ನನ್ನ ಜನರಿಗೆ ನನ್ನ ಪ್ರತಿನಿಧಿಯಾಗಿರು. ಒಳಿತನ್ನು ಮಾಡು. ಕಿಡಿಗೇಡಿಗಳ ಮಾರ್ಗವನ್ನು ಹಿಂಬಾಲಿಸಬೇಡ.”
ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪರಿಪಾಲಕನು (ಅಲ್ಲಾಹು) ಅವರೊಡನೆ ಮಾತನಾಡಿದಾಗ ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನಿನ್ನನ್ನು ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು.” ಅಲ್ಲಾಹು ಹೇಳಿದನು: “ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ, ನೀವು ಆ ಬೆಟ್ಟವನ್ನು ನೋಡಿರಿ. ಅದು ಅದರ ಸ್ಥಳದಲ್ಲಿಯೇ ಕದಲದೆ ನಿಂತರೆ ನೀವು ನನ್ನನ್ನು ನೋಡುವಿರಿ.” ನಂತರ ಅವರ ಪರಿಪಾಲಕನು (ಅಲ್ಲಾಹು) ಆ ಬೆಟ್ಟಕ್ಕೆ ತನ್ನನ್ನು ಪ್ರಕಟಗೊಳಿಸಿದಾಗ, ಅವನ ತೇಜಸ್ಸು ಅದನ್ನು ನುಚ್ಚುನೂರು ಮಾಡಿತು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ನಂತರ ಪ್ರಜ್ಞೆ ಬಂದಾಗ ಅವರು ಹೇಳಿದರು: “ನೀನು ಪರಿಶುದ್ಧನು. ನಾನು ನಿನ್ನ ಬಳಿಗೆ ಪಶ್ಚಾತ್ತಾಪದಿಂದ ಮರಳಿದ್ದೇನೆ. ನಾನು ಸತ್ಯವಿಶ್ವಾಸಿಗಳಲ್ಲಿ ಮೊದಲಿಗನಾಗಿದ್ದೇನೆ.”
ಅಲ್ಲಾಹು ಹೇಳಿದನು: “ಓ ಮೂಸಾ! ನಿಶ್ಚಯವಾಗಿಯೂ ಮನುಷ್ಯರ ಪೈಕಿ ನಾನು ನಿಮ್ಮನ್ನು ನನ್ನ ಸಂದೇಶಗಳಿಂದ ಮತ್ತು ನನ್ನ (ನೇರ) ಮಾತಿನಿಂದ ಆರಿಸಿದ್ದೇನೆ. ಆದ್ದರಿಂದ ನಾನು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಕೃತಜ್ಞರಾಗಿರುವ ಜನರಲ್ಲಿ ಸೇರಿಕೊಳ್ಳಿ.”
ನಾವು ಅವರಿಗೆ (ಮೂಸಾರಿಗೆ) ಹಲಗೆಗಳಲ್ಲಿ ಎಲ್ಲವನ್ನೂ—ಹಿತೋಪದೇಶ ಮತ್ತು ಎಲ್ಲಾ ವಿಷಯಗಳ ವಿವರಣೆಯನ್ನು—ಬರೆದುಕೊಟ್ಟೆವು. (ನಾವು ಹೇಳಿದೆವು): “ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಇದರಲ್ಲಿರುವ ಉತ್ತಮ ವಿಷಯಗಳನ್ನು ಸ್ವೀಕರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ದುಷ್ಕರ್ಮಿಗಳ ವಾಸ್ತವ್ಯವನ್ನು ನಾನು ಸದ್ಯವೇ ನಿಮಗೆ ತೋರಿಸಿಕೊಡುವೆನು.”
ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಡುವವರನ್ನು ನಾನು ನನ್ನ ವಚನಗಳಿಂದ ತಿರುಗಿಸಿಬಿಡುವೆನು. ಅವರು ದೃಷ್ಟಾಂತಗಳೆಲ್ಲವನ್ನು ನೋಡಿದರೂ ಸಹ ಅದರಲ್ಲಿ ವಿಶ್ವಾಸವಿಡುವುದಿಲ್ಲ. ಅವರು ಒಳಿತಿನ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುವುದಿಲ್ಲ. ಅವರು ಕೆಟ್ಟ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.
ನಮ್ಮ ವಚನಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ—ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನಲ್ಲದೆ ಬೇರೇನಾದರೂ ನೀಡಲಾಗುವುದೇ?
ಮೂಸಾರ ನಿರ್ಗಮನದ ಬಳಿಕ ಅವರ ಜನರು (ಇಸ್ರಾಯೇಲ್ ಮಕ್ಕಳು) ತಮ್ಮ ಆಭರಣಗಳಿಂದ ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು (ದೇವರಾಗಿ) ಮಾಡಿಕೊಂಡರು. ಅದು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರಿಗೆ ಸನ್ಮಾರ್ಗ ತೋರಿಸುವುದಿಲ್ಲವೆಂದು ಅವರಿಗೆ ತಿಳಿದಿಲ್ಲವೇ? ಅವರು ಅದನ್ನು (ದೇವರಾಗಿ) ಮಾಡಿಕೊಂಡರು. ಅವರು ಅಕ್ರಮಿಗಳಾಗಿದ್ದರು.
(ನಂತರ ತಮ್ಮ ತಪ್ಪನ್ನು ಅರಿತು) ಅವರು ಮರುಗಿದಾಗ, ಮತ್ತು ಅವರು ದಾರಿತಪ್ಪಿದ್ದಾರೆಂದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ದಯೆ ತೋರದಿದ್ದರೆ ಮತ್ತು ನಮ್ಮನ್ನು ಕ್ಷಮಿಸದಿದ್ದರೆ, ನಿಶ್ಚಯವಾಗಿಯೂ ನಾವು ನಷ್ಟಹೊಂದಿದವರಲ್ಲಿ ಸೇರುವೆವು.”
ಮೂಸಾ ತಮ್ಮ ಜನರ ಬಳಿಗೆ ಮರಳಿ ಬಂದಾಗ—ಅವರು ಕೋಪ ಮತ್ತು ಬೇಸರದಿಂದ ಹೇಳಿದರು: “ನನ್ನ ನಿರ್ಗಮನದ ಬಳಿಕ ನೀವು ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದಕ್ಕೆ ಮೊದಲೇ ನೀವು ಅವಸರಪಟ್ಟಿರಾ?” ಅವರು ಹಲಗೆಗಳನ್ನು ಎಸೆದು ಸಹೋದರನ ತಲೆಗೂದಲನ್ನು ಹಿಡಿದು ಎಳೆದರು. ಅವರು (ಸಹೋದರ) ಹೇಳಿದರು: “ನನ್ನ ತಾಯಿಯ ಮಗನೇ! ನಿಶ್ಚಯವಾಗಿಯೂ ಈ ಜನರು ನನ್ನನ್ನು ದುರ್ಬಲನೆಂದು ಪರಿಗಣಿಸಿದರು. ಅವರು ನನ್ನನ್ನು ಇನ್ನೇನು ಕೊಲ್ಲುವುದರಲ್ಲಿದ್ದರು. ನನ್ನ ಮೇಲೆ ಹಲ್ಲೆ ಮಾಡಿ ವೈರಿಗಳಿಗೆ ಸಂತಸವಾಗುವಂತೆ ಮಾಡಬೇಡ. ಅಕ್ರಮಿಗಳ ಸಾಲಿಗೆ ನನ್ನನ್ನು ಕೂಡ ಸೇರಿಸಿ ಬಿಡಬೇಡ.”
قَالَ رَبِّ ٱغۡفِرۡ لِي وَلِأَخِي وَأَدۡخِلۡنَا فِي رَحۡمَتِكَۖ وَأَنتَ أَرۡحَمُ ٱلرَّٰحِمِينَ [١٥١]
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ, ನನ್ನನ್ನು ಮತ್ತು ನನ್ನ ಸಹೋದರನನ್ನು ಕ್ಷಮಿಸು. ನಮ್ಮನ್ನು ನಿನ್ನ ದಯೆಯಲ್ಲಿ ಸೇರಿಸು. ನೀನು ದಯಾಳುಗಳಲ್ಲೇ ಅತ್ಯಧಿಕ ದಯಾಳುವಾಗಿರುವೆ.”
ಕರುವನ್ನು ದೇವರಾಗಿ ಸ್ವೀಕರಿಸಿದವರು ಯಾರೋ—ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕೋಪವನ್ನು ಮತ್ತು ಇಹಲೋಕ ಜೀವನದಲ್ಲಿ ನಿಂದ್ಯತೆಯನ್ನು (ಬಳುವಳಿಯಾಗಿ) ಪಡೆಯುವರು. ಸುಳ್ಳು ಆರೋಪಿಸುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
ಆದರೆ ಪಾಪ ಮಾಡಿದ ಬಳಿಕ ಪಶ್ಚಾತ್ತಾಪಪಡುವವರು ಮತ್ತು ವಿಶ್ವಾಸವಿಡುವವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅದರ ನಂತರವೂ ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಮೂಸಾರ ಕೋಪ ತಣ್ಣಗಾದಾಗ ಅವರು ಹಲಗೆಗಳನ್ನು ಎತ್ತಿಕೊಂಡರು. ಅದರಲ್ಲಿರುವ ಉಲ್ಲೇಖಗಳಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಿತ್ತು.
ಮೂಸಾ ತಮ್ಮ ಜನರಲ್ಲಿ ಸೇರಿದ ಎಪ್ಪತ್ತು ಪುರುಷರನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ ಆರಿಸಿದರು. ಆದರೆ ಭೀಕರ ಕಂಪನವು ಅವರನ್ನು ಹಿಡಿದಾಗ ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ಇಚ್ಛಿಸಿದರೆ ಇದಕ್ಕಿಂತ ಮೊದಲೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಿತ್ತು. ನಮ್ಮಲ್ಲಿನ ಅವಿವೇಕಿಗಳು ಮಾಡಿದ ಕೃತ್ಯಕ್ಕೆ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಾಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ನೀನು ದಾರಿತಪ್ಪಿಸುತ್ತೀ ಮತ್ತು ನೀನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತೀ. ನೀನೇ ನಮ್ಮ ರಕ್ಷಕ. ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನು ಕ್ಷಮಿಸುವವರಲ್ಲಿ ಅತ್ಯುತ್ತಮನಾಗಿರುವೆ.
ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ಒಳಿತನ್ನು ದಾಖಲಿಸು. ನಿಶ್ಚಯವಾಗಿಯೂ ನಾವು ನಿನ್ನ ಕಡೆಗೆ ಮರಳಿದ್ದೇವೆ.” ಅಲ್ಲಾಹು ಹೇಳಿದನು: “ನಾನು ಇಚ್ಛಿಸುವವರನ್ನು ನಾನು ಶಿಕ್ಷಿಸುವೆನು. ಆದರೆ ನನ್ನ ದಯೆ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದೆ. ದೇವಭಯದಿಂದ ಜೀವಿಸುವ, ಝಕಾತ್ ನೀಡುವ ಮತ್ತು ನಮ್ಮ ವಚನಗಳಲ್ಲಿ ವಿಶ್ವಾಸವಿಡುವ ಜನರಿಗೆ ನಾನು ಅದನ್ನು (ದಯೆಯನ್ನು) ದಾಖಲಿಸುವೆನು.
ಅವರು ಯಾರೆಂದರೆ, ತಮ್ಮ ಬಳಿಯಿರುವ ತೌರಾತ್ ಮತ್ತು ಇಂಜೀಲ್ನಲ್ಲಿ ಉಲ್ಲೇಖವಿರುವುದಾಗಿ ಕಾಣುವ ಅನಕ್ಷರಸ್ಥ ಪ್ರವಾದಿಯಾದ ಸಂದೇಶವಾಹಕರನ್ನು (ಪ್ರವಾದಿ ಮುಹಮ್ಮದರನ್ನು) ಅನುಸರಿಸುವವರು. ಆ ಪ್ರವಾದಿ ಅವರಿಗೆ ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ. ಅವರಿಗೆ ಉತ್ತಮ ವಸ್ತುಗಳನ್ನು ಅನುಮತಿಸುತ್ತಾರೆ ಮತ್ತು ಕೆಟ್ಟ ವಸ್ತುಗಳನ್ನು ನಿಷೇಧಿಸುತ್ತಾರೆ. ಅವರ ಭಾರವನ್ನು ಕೆಳಗಿಳಿಸಿ ಅವರ ಮೇಲೆ ಹೊರಿಸಲಾಗಿದ್ದ ಸಂಕೋಲೆಗಳನ್ನು ಕಳಚುತ್ತಾರೆ. ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಬೆಂಬಲಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣವಾದ ಬೆಳಕನ್ನು ಅನುಸರಿಸುವವರು ಯಾರೋ—ಅವರೇ ಯಶಸ್ವಿಯಾದವರು.
ಹೇಳಿರಿ: “ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅಂದರೆ, ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗೆ ಸೇರಿದ್ದೋ ಅವನ (ಸಂದೇಶವಾಹಕ). ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ.” ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
ಮೂಸಾರ ಜನರಲ್ಲಿ ಒಂದು ಪಂಗಡವಿದೆ. ಅವರು ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾರೆ.
ನಾವು ಅವರನ್ನು ಹನ್ನೆರಡು ವಂಶಗಳ ಗೋತ್ರಗಳನ್ನಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನರು ನೀರಿಗಾಗಿ ಅಂಗಲಾಚಿದಾಗ, “ನಿಮ್ಮ ಕೋಲಿನಿಂದ ಆ ಬಂಡೆಗೆ ಬಡಿಯಿರಿ” ಎಂದು ನಾವು ಅವರಿಗೆ ದೇವವಾಣಿ ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಜನರೆಲ್ಲರೂ ತಮ್ಮ ತಮ್ಮ ನೀರು ಕುಡಿಯುವ ಸ್ಥಳವನ್ನು ತಿಳಿದುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು. ಅವರಿಗೆ ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು. “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ” (ಎಂದು ನಾವು ಹೇಳಿದೆವು). ಅವರು ನಮ್ಮೊಂದಿಗೆ ಅನ್ಯಾಯ ಮಾಡಿಲ್ಲ; ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದರು.
ಅವರೊಡನೆ ಹೇಳಲಾದ ಸಂದರ್ಭ: “ನೀವು ಈ ಊರಿನಲ್ಲಿ ವಾಸಿಸಿರಿ. ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಯಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು 'ಹಿತ್ತ' ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ (ಪ್ರತಿಫಲವನ್ನು) ಹೆಚ್ಚಿಸುವೆವು.”
ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತಿಗೆ ಬದಲು ಬೇರೊಂದು ಮಾತನ್ನು ಹೇಳಿದರು. ಅವರು ಅಕ್ರಮವೆಸಗುತ್ತಿದ್ದ ಕಾರಣ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.
ಸಮುದ್ರ ತೀರದಲ್ಲಿದ್ದ ಆ ಊರಿನ ಬಗ್ಗೆ ಅವರೊಡನೆ ಕೇಳಿರಿ. ಅವರು ಸಬ್ಬತ್ ದಿನ (ಶನಿವಾರ) ಅತಿರೇಕವೆಸಗಿದ ಸಂದರ್ಭ. ಸಬ್ಬತ್ನ ದಿನ (ಶನಿವಾರ) ಮೀನುಗಳು ನೀರಿನ ಮೇಲೆ ತಲೆಯೆತ್ತುತ್ತಾ ಅವರ ಮುಂದೆ ಪ್ರತ್ಯಕ್ಷವಾಗುತ್ತಿದ್ದವು ಮತ್ತು ಸಬ್ಬತ್ ಅಲ್ಲದ ದಿನ ಅವರ ಮುಂದೆ ಪ್ರತ್ಯಕ್ಷವಾಗುತ್ತಿರಲಿಲ್ಲ. ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಅವರನ್ನು ಈ ರೀತಿಯಲ್ಲಿ ಪರೀಕ್ಷಿಸಿದೆವು.[1]
ಅವರಲ್ಲಿ ಒಂದು ಗುಂಪು ಜನರು ಹೇಳಿದರು: “ನೀವೇಕೆ ಈ ಜನರಿಗೆ ಉಪದೇಶ ಮಾಡುತ್ತೀರಿ. ಅಲ್ಲಾಹು ಅವರನ್ನು ನಾಶ ಮಾಡುವನು ಅಥವಾ ಕಠಿಣವಾಗಿ ಶಿಕ್ಷಿಸುವನು.” ಅವರು ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಮ್ಮನ್ನು ದೋಷಮುಕ್ತಗೊಳಿಸುವುದಕ್ಕಾಗಿ ಮತ್ತು ಅವರು ದೇವಭಯವುಳ್ಳವರಾಗುವುದಕ್ಕಾಗಿ (ನಾವು ಹೀಗೆ ಮಾಡುತ್ತಿದ್ದೇವೆ).”[1]
ಅವರಿಗೆ ನೆನಪಿಸಿಕೊಡಲಾದ ವಿಷಯಗಳನ್ನು ಅವರು ಮರೆತು ಬಿಟ್ಟಾಗ, ಕೆಡುಕುಗಳನ್ನು ವಿರೋಧಿಸುತ್ತಿದ್ದ ಜನರನ್ನು ನಾವು ರಕ್ಷಿಸಿದೆವು. ಅಕ್ರಮವೆಸಗಿದ ಜನರನ್ನು ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಕಠಿಣ ಶಿಕ್ಷೆಯ ಮೂಲಕ ಹಿಡಿದೆವು.
ಅವರಿಗೆ ವಿರೋಧಿಸಲಾದ ವಿಷಯಗಳಲ್ಲಿ ಅವರು ಉದ್ಧಟತನ ತೋರಿದಾಗ ನಾವು ಅವರೊಡನೆ ಹೇಳಿದೆವು: “ನೀವು ನೀಚ ಕಪಿಗಳಾಗಿ ಬಿಡಿ.”
“ಪುನರುತ್ಥಾನ ದಿನದ ತನಕ ಅವರಿಗೆ (ಇಸ್ರಾಯೇಲ್ ಮಕ್ಕಳಿಗೆ) ಕಠೋರ ಹಿಂಸೆ ನೀಡುವ ಜನರನ್ನು ಅವರ ವಿರುದ್ಧ ಕಳುಹಿಸುವೆನು” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ನಾವು ಅವರನ್ನು ಭೂಮಿಯಲ್ಲಿ ಹಲವು ಗುಂಪುಗಳನ್ನಾಗಿ ವಿಂಗಡಿಸಿದೆವು. ಅವರಲ್ಲಿ ನೀತಿವಂತರಿದ್ದಾರೆ. ಅಲ್ಲದವರೂ ಇದ್ದಾರೆ. ನಾವು ಅವರನ್ನು ಒಳಿತು ಮತ್ತು ಕೆಡುಕುಗಳಿಂದ ಪರೀಕ್ಷಿಸಿದೆವು. ಅವರು (ವಿಧೇಯತೆಗೆ) ಮರಳುವುದಕ್ಕಾಗಿ.
ನಂತರ ಅವರ ಹಿಂದೆಯೇ ಅವರ ನಂತರದವರು ಬಂದರು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಇಹಲೋಕ ಜೀವನದ ಕೀಳು ವಸ್ತುಗಳನ್ನು ಪಡೆಯುತ್ತಾರೆ. ಅವರು ಹೇಳುತ್ತಾರೆ: “ನಮ್ಮನ್ನು ಕ್ಷಮಿಸಲಾಗುತ್ತದೆ.”[1] ಅದರಂತಹ ಬೇರೆ ವಸ್ತುಗಳು ದೊರಕಿದರೂ ಅವರು ಅದನ್ನು ಪಡೆಯುತ್ತಾರೆ. ಅಲ್ಲಾಹನ ಮೇಲೆ ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ ಮತ್ತು ಗ್ರಂಥವನ್ನು ಅಧ್ಯಯನ ಮಾಡಿ (ಅದರಂತೆ ನಡೆಯುತ್ತೇವೆ) ಎಂದು ಅವರಿಂದ ಗ್ರಂಥದ ಮೂಲಕ ಕರಾರು ಪಡೆಯಲಾಗಿಲ್ಲವೇ? ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?
ಗ್ರಂಥವನ್ನು ಬಿಗಿಯಾಗಿ ಹಿಡಿಯುವವರು ಮತ್ತು ನಮಾಝನ್ನು ಸಂಸ್ಥಾಪಿಸುವವರು ಯಾರೋ— ನಿಶ್ಚಯವಾಗಿಯೂ ಸುಧಾರಣೆ ಮಾಡುವವರ ಪ್ರತಿಫಲವನ್ನು ನಾವು ವ್ಯರ್ಥಗೊಳಿಸುವುದಿಲ್ಲ.
ನಾವು ಪರ್ವತವನ್ನು ಅವರ ಮೇಲೆ ಕೊಡೆಯಂತೆ ಎತ್ತಿ ಹಿಡಿದ ಸಂದರ್ಭ. ಅದು ಅವರ ಮೇಲೆ ಬೀಳಬಹುದೆಂದು ಅವರಿಗೆ ಖಾತ್ರಿಯಾಯಿತು. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.”
ನಿಮ್ಮ ಪರಿಪಾಲಕನು (ಅಲ್ಲಾಹು) ಆದಮರ ಮಕ್ಕಳಿಂದ—ಅವರ ಬೆನ್ನುಗಳಿಂದ ಅವರ ಸಂತಾನವನ್ನು ಹೊರತೆಗೆದು, ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿ ನಿಲ್ಲಿಸಿದ ಸಂದರ್ಭ. (ಅಲ್ಲಾಹು ಕೇಳಿದನು): “ನಾನು ನಿಮ್ಮ ಪರಿಪಾಲಕನಲ್ಲವೇ?” ಅವರು ಉತ್ತರಿಸಿದರು: “ಹೌದು, ನಾವು ಸಾಕ್ಷಿಗಳಾಗಿದ್ದೇವೆ.” ನಿಶ್ಚಯವಾಗಿಯೂ ನಮಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಪುನರುತ್ಥಾನ ದಿನ ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).
ಅಥವಾ, “ಈ ಹಿಂದೆ ನಮ್ಮ ಪೂರ್ವಜರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದ್ದರು. ನಾವು ಅವರ ನಂತರದ ಸಂತಾನವಾಗಿದ್ದೇವೆ. ಆ ಮಿಥ್ಯವಾದಿಗಳು ಮಾಡಿದ ತಪ್ಪಿಗಾಗಿ ನೀನು ನಮ್ಮನ್ನು ನಾಶ ಮಾಡುವೆಯಾ?” ಎಂದು ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).
ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅವರು (ಸತ್ಯಕ್ಕೆ) ಮರಳುವುದಕ್ಕಾಗಿ.
ಅವರಿಗೆ ಒಬ್ಬ ವ್ಯಕ್ತಿಯ ಸಮಾಚಾರವನ್ನು ತಿಳಿಸಿಕೊಡಿ. ನಾವು ಅವನಿಗೆ ನಮ್ಮ ವಚನಗಳ ಜ್ಞಾನವನ್ನು ನೀಡಿದೆವು. ಆದರೆ ಅವನು ಅದರಿಂದ ನುಣುಚಿಕೊಂಡನು. ಆಗ ಶೈತಾನನು ಅವನನ್ನು ಹಿಂಬಾಲಿಸಿದನು ಮತ್ತು ಅವನು ದುರ್ಮಾರ್ಗಿಗಳಲ್ಲಿ ಸೇರಿಬಿಟ್ಟನು.
ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ಮೂಲಕ ನಾವು ಅವನನ್ನು ಉನ್ನತಿಗೇರಿಸುತ್ತಿದ್ದೆವು. ಆದರೆ ಅವನು ಭೂಮಿಗೆ ಅಂಟಿಕೊಂಡು ಸ್ವೇಚ್ಛೆಗಳನ್ನು ಹಿಂಬಾಲಿಸಿದನು. ಅವನ ಉದಾಹರಣೆಯು ಒಂದು ನಾಯಿಯಂತೆ. ನೀವು ಅದನ್ನು ಓಡಿಸಿದರೂ ಅದು ನಾಲಗೆ ಹೊರಚಾಚುತ್ತದೆ. ನೀವು ಅದನ್ನು ಅದರ ಪಾಡಿಗೆ ಬಿಟ್ಟರೂ ಅದು ನಾಲಗೆ ಹೊರಚಾಚುತ್ತದೆ. ಇದು ನಮ್ಮ ವಚನಗಳನ್ನು ನಿಷೇಧಿಸಿದವರ ಉದಾಹರಣೆಯಾಗಿದೆ. ಅವರಿಗೆ ಈ ಕಥೆಗಳನ್ನು ಹೇಳಿಕೊಡಿ. ಅವರು ಆಲೋಚಿಸುವುದಕ್ಕಾಗಿ.
ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಸ್ವಯಂ ಅಕ್ರಮವೆಸಗಿದ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ.
ಅಲ್ಲಾಹು ಯಾರಿಗೆ ಸನ್ಮಾರ್ಗ ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವರೇ ನಷ್ಟಹೊಂದಿದವರು.
ಜಿನ್ನ್ ಮತ್ತು ಮನುಷ್ಯರಲ್ಲಿ ಸೇರಿದ ಬಹುಪಾಲನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ; ಆದರೆ ಅವರು ಅವುಗಳ ಮೂಲಕ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಕಣ್ಣುಗಳಿವೆ; ಆದರೆ ಅವರು ಅವುಗಳ ಮೂಲಕ ನೋಡುವುದಿಲ್ಲ. ಅವರಿಗೆ ಕಿವಿಗಳಿವೆ; ಆದರೆ ಅವರು ಅವುಗಳ ಮೂಲಕ ಕೇಳುವುದಿಲ್ಲ. ಅವರು ಜಾನುವಾರುಗಳಂತೆ. ಅಲ್ಲ, ಅವರು ಅತ್ಯಧಿಕ ದಾರಿತಪ್ಪಿದವರು. ಅವರೇ ನಿರ್ಲಕ್ಷ್ಯದಲ್ಲಿರುವವರು.
ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ. ಅವನ ಹೆಸರುಗಳ ವಿಷಯದಲ್ಲಿ ವಾಮಮಾರ್ಗವನ್ನು ತುಳಿಯುವವರನ್ನು ಬಿಟ್ಟುಬಿಡಿ. ಅವರು ಮಾಡಿದ ಕೃತ್ಯಗಳ ಪ್ರತಿಫಲವನ್ನು ಅವರಿಗೆ ಸದ್ಯವೇ ನೀಡಲಾಗುವುದು.
ನಾವು ಸೃಷ್ಟಿಸಿದ ಸೃಷ್ಟಿಗಳಲ್ಲಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದರ ಆಧಾರದಲ್ಲಿ ನ್ಯಾಯ ಸ್ಥಾಪಿಸುವ ಒಂದು ಸಮುದಾಯವಿದೆ.
ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವೆವು.
ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರಗಾರಿಕೆಯು ಬಲಿಷ್ಠವಾಗಿದೆ.
ಅವರು ಆಲೋಚಿಸುವುದಿಲ್ಲವೇ? ಅವರ ಸಂಗಡಿಗನಿಗೆ (ಮುಹಮ್ಮದರಿಗೆ) ಯಾವುದೇ ರೀತಿಯ ಬುದ್ಧಿಭ್ರಮಣೆಯಿಲ್ಲ. ಅವರೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದಾರೆ.
ಭೂಮ್ಯಾಕಾಶಗಳ ಸಾಮ್ರಾಜ್ಯಗಳನ್ನು ಮತ್ತು ಅಲ್ಲಾಹು ಸೃಷ್ಟಿಸಿದ ಎಲ್ಲಾ ವಸ್ತುಗಳನ್ನು ಹಾಗೂ ಅವರ ಜೀವಿತಾವಧಿ ಸಮೀಪಿಸಿರಬಹುದೆಂದು ಅವರು ಆಲೋಚಿಸಿ ನೋಡುವುದಿಲ್ಲವೇ? ಇದರ (ಕುರ್ಆನಿನ) ಬಳಿಕ ಅವರು ಯಾವ ಸಮಾಚಾರದಲ್ಲಿ ವಿಶ್ವಾಸವಿಡುವರು?
ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವನು ಅವರನ್ನು ಬಿಟ್ಟುಬಿಡುವನು.
ಅವರು ಅಂತಿಮದಿನದ ಬಗ್ಗೆ—“ಅದು ಯಾವಾಗ ಸಂಭವಿಸುತ್ತದೆ” ಎಂದು ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿ ಅದು ಅತ್ಯಂತ ಭಾರವಿರುವ (ಭಯಾನಕ) ಸಂಗತಿಯಾಗಿದೆ. ಅದು ಅನಿರೀಕ್ಷಿತವಾಗಿಯೇ ನಿಮ್ಮ ಬಳಿಗೆ ಬರುತ್ತದೆ.” ನಿಮಗೆ ಅದರ ಬಗ್ಗೆ ಜ್ಞಾನವಿದೆಯೆಂಬ ಭಾವನೆಯಿಂದ ಅವರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.” ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ಹೇಳಿರಿ: “ನಾನು ನನಗಾಗಿ ಯಾವುದೇ ಲಾಭ ಅಥವಾ ತೊಂದರೆ ಮಾಡುವ ಅಧಿಕಾರವನ್ನು ಹೊಂದಿಲ್ಲ—ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನನಗೆ ಅದೃಶ್ಯ ಜ್ಞಾನವಿರುತ್ತಿದ್ದರೆ, ನಾನು ಹೇರಳ ಒಳಿತುಗಳನ್ನು ಮಾಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಲೇ ಇರಲಿಲ್ಲ. ವಿಶ್ವಾಸವಿಡುವ ಜನರಿಗೆ ನಾನೊಬ್ಬ ಮುನ್ನೆಚ್ಚರಿಕೆಗಾರ ಮತ್ತು ಸುವಾರ್ತೆ ನೀಡುವವ ಮಾತ್ರವಾಗಿದ್ದೇನೆ.”
ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದವನು ಅವನೇ. ನಂತರ ಅವನಿಂದ ಅವನ ಪತ್ನಿಯನ್ನು ಸೃಷ್ಟಿಸಿದನು—ಅವನು ಅವಳಿಂದ ನೆಮ್ಮದಿ ಪಡೆಯುವುದಕ್ಕಾಗಿ. ನಂತರ ಅವನು ಅವಳೊಡನೆ ಸೇರಿದಾಗ ಅವಳು ಹಗುರವಾದ ಗರ್ಭ ಧರಿಸಿ, ನಂತರ ಅದರೊಂದಿಗೆ ಮುಂದುವರಿದಳು. ಅವಳ ಭಾರವು ಹೆಚ್ಚಾದಾಗ (ಹೆರಿಗೆ ನೋವು ಗೋಚರಿಸಿದಾಗ) ಅವರಿಬ್ಬರೂ ಅವರ ಪರಿಪಾಲಕನಾದ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದರು: “ನೀನು ನಮಗೆ ನೀತಿವಂತ ಮಗುವನ್ನು ನೀಡಿದರೆ ನಾವು ಖಂಡಿತ ನಿನಗೆ ಆಭಾರಿಯಾಗುವೆವು.”
ಅವನು ಅವರಿಗೆ ನೀತಿವಂತ ಮಗುವನ್ನು ನೀಡಿದಾಗ, ಅವನು ಅವರಿಗೆ ನೀಡಿದ್ದರಲ್ಲಿಯೇ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸಿದರು. ಅವರು ಮಾಡುವ ಸಹಭಾಗಿತ್ವದಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ.
ಯಾವುದೇ ವಸ್ತುವನ್ನು ಸೃಷ್ಟಿಸದವರನ್ನೋ ಅವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ಮಾಡುವುದು? (ವಾಸ್ತವವಾಗಿ) ಅವರೇ ಸೃಷ್ಟಿಗಳಾಗಿದ್ದಾರೆ.
ಅವರಿಗೆ ಯಾವುದೇ ಸಹಾಯವನ್ನು ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.
ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ನಿಮ್ಮನ್ನು ಅನುಸರಿಸುವುದಿಲ್ಲ. ನೀವು ಅವರನ್ನು ಕರೆದರೂ ಅಥವಾ ಕರೆಯದೆ ಮೌನವಾಗಿದ್ದರೂ ನಿಮಗೆ ಸಂಬಂಧಿಸಿದಂತೆ ಅವೆರಡೂ ಸಮಾನವಾಗಿವೆ.
ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರು (ಆ ದೇವರುಗಳು) ನಿಶ್ಚಯವಾಗಿಯೂ ನಿಮ್ಮಂತಹ ಸೃಷ್ಟಿಗಳಾಗಿದ್ದಾರೆ. ಅವರನ್ನು ಕರೆದು ಪ್ರಾರ್ಥಿಸಿರಿ; ಅವರು ನಿಮಗೆ ಉತ್ತರ ನೀಡುತ್ತಾರೋ ನೋಡೋಣ. ನೀವು ಸತ್ಯವಂತರಾಗಿದ್ದರೆ.
ಅವರಿಗೆ ನಡೆಯಲು ಸಾಧ್ಯವಾಗುವ ಕಾಲುಗಳಿವೆಯೇ? ಅವರಿಗೆ ಹಿಡಿಯಲು ಸಾಧ್ಯವಾಗುವ ಕೈಗಳಿವೆಯೇ? ಅವರಿಗೆ ನೋಡಲು ಸಾಧ್ಯವಾಗುವ ಕಣ್ಣುಗಳಿವೆಯೇ? ಅವರಿಗೆ ಕೇಳಲು ಸಾಧ್ಯವಾಗುವ ಕಿವಿಗಳಿವೆಯೇ? ಹೇಳಿರಿ: “ನೀವು ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನನ್ನ ಮೇಲೆ ನಿಮ್ಮ ತಂತ್ರವನ್ನು ಪ್ರಯೋಗಿಸಿರಿ. ನನಗೆ ಕಾಲಾವಕಾಶ ನೀಡಬೇಡಿ.”
ನಿಶ್ಚಯವಾಗಿಯೂ ಈ ಗ್ರಂಥವನ್ನು ಅವತೀರ್ಣಗೊಳಿಸಿದ ಅಲ್ಲಾಹನೇ ನನ್ನ ರಕ್ಷಕ. ಅವನು ನೀತಿವಂತರನ್ನು ಸಂರಕ್ಷಿಸುವ ಹೊಣೆಯನ್ನು ವಹಿಸಿಕೊಂಡಿದ್ದಾನೆ.
وَٱلَّذِينَ تَدۡعُونَ مِن دُونِهِۦ لَا يَسۡتَطِيعُونَ نَصۡرَكُمۡ وَلَآ أَنفُسَهُمۡ يَنصُرُونَ [١٩٧]
ನೀವು ಅವನನ್ನು (ಅಲ್ಲಾಹನನ್ನು) ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ—ನಿಮಗೆ ಸಹಾಯ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.
ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನಿಮಗೆ ಕಾಣಬಹುದು. ಆದರೆ ಅವರು ನೋಡುವುದಿಲ್ಲ.
(ಜನರೊಡನೆ) ಸೌಮ್ಯವಾಗಿ ವರ್ತಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅವಿವೇಕಿಗಳಿಂದ ದೂರವಿರಿ.
وَإِمَّا يَنزَغَنَّكَ مِنَ ٱلشَّيۡطَٰنِ نَزۡغٞ فَٱسۡتَعِذۡ بِٱللَّهِۚ إِنَّهُۥ سَمِيعٌ عَلِيمٌ [٢٠٠]
ನಿಮಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ, ಅವರು ಅಲ್ಲಾಹನನ್ನು ಸ್ಮರಿಸುತ್ತಾರೆ. ಆಗ ಅವರು ಒಳದೃಷ್ಟಿಯುಳ್ಳವರಾಗುತ್ತಾರೆ.
ಅವರು (ಶೈತಾನರು) ಅವರ ಸಹೋದರರನ್ನು ದುರ್ಮಾರ್ಗದಲ್ಲಿ ಬಿಟ್ಟುಬಿಡುತ್ತಾರೆ. ಅವರು ಅದರಲ್ಲಿ ಯಾವುದೇ ಅಭಾವ ಮಾಡುವುದಿಲ್ಲ.
ನೀವು ಅವರಿಗೆ ಒಂದು ದೃಷ್ಟಾಂತವನ್ನು ತಂದು ತೋರಿಸದಿದ್ದರೆ, ಅವರು ಹೇಳುತ್ತಾರೆ: “ನೀವೇ ಅದನ್ನು ರಚಿಸಿ ತರಬಾರದೇ?” ಹೇಳಿರಿ: “ನನ್ನ ಪರಿಪಾಲಕನಿಂದ (ಅಲ್ಲಾಹನಿಂದ) ಬರುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ಇದು (ಕುರ್ಆನ್) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕಣ್ತೆರೆಸುವ ಸಾಕ್ಷ್ಯಾಧಾರವಾಗಿದೆ ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.”
ಕುರ್ಆನ್ ಪಠಿಸಲಾಗುವಾಗ ಅದನ್ನು ಕಿವಿಗೊಟ್ಟು ಕೇಳಿರಿ ಮತ್ತು ಮೌನವಾಗಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.
ವಿನಯ ಮತ್ತು ಭಯದಿಂದ ಧ್ವನಿಯನ್ನು ತಗ್ಗಿಸಿ ಮುಂಜಾನೆ ಮತ್ತು ಸಂಜೆ ನೀವು ನಿಮ್ಮ ಮನಸ್ಸಿನಲ್ಲೇ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. ನೀವು ನಿರ್ಲಕ್ಷ್ಯರಾಗಿರುವವರಲ್ಲಿ ಸೇರಬೇಡಿ.
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ. ಅವರು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗ ಮಾಡುತ್ತಾರೆ.