The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesRepentance [At-Taubah] - Kannada translation
Surah Repentance [At-Taubah] Ayah 129 Location Madanah Number 9
ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.[1]
ಆದ್ದರಿಂದ ನೀವು (ಬಹುದೇವವಿಶ್ವಾಸಿಗಳು) ನಾಲ್ಕು ತಿಂಗಳವರೆಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸಿರಿ.[1] ತಿಳಿಯಿರಿ! ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಿತರನ್ನಾಗಿ ಮಾಡುವನು.
ಇದು ಜನರಿಗೆ ಮಹಾ ಹಜ್ಜ್ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಘೋಷಣೆಯಾಗಿದೆ—ಏನೆಂದರೆ ಅಲ್ಲಾಹು ಮತ್ತು ಅವರ ಸಂದೇಶವಾಹಕರು ಬಹುದೇವವಿಶ್ವಾಸಿಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ನೀವು (ಬಹುದೇವವಿಶ್ವಾಸಿಗಳು) ಪಶ್ಚಾತ್ತಾಪಪಟ್ಟರೆ ಅದು ನಿಮಗೆ ಒಳಿತಾಗಿದೆ. ನೀವು ಲೆಕ್ಕಿಸದೆ ತಿರುಗಿ ನಡೆದರೆ ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆ ನೀಡಿರಿ.
ಆದರೆ ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರು ಕರಾರು ಉಲ್ಲಂಘಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ನಿಮ್ಮ ಶತ್ರುಗಳಿಗೆ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗಿದ್ದಾರೆ. ನೀವು ಅವರೊಡನೆ ಮಾಡಿದ ಕರಾರನ್ನು ಅವರ ಅವಧಿ ಮುಗಿಯುವವರೆಗೆ ಮುಂದುವರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
ಪವಿತ್ರ ತಿಂಗಳುಗಳು ಕಳೆದರೆ,[1] ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಅವರು ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ದಾರಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಬಹುದೇವವಿಶ್ವಾಸಿಗಳಲ್ಲಿ ಯಾರಾದರೂ ನಿಮ್ಮೊಡನೆ ಆಶ್ರಯ ಬೇಡಿದರೆ, ಅವನಿಗೆ ಆಶ್ರಯ ನೀಡಿರಿ—ಅವನು ಅಲ್ಲಾಹನ ವಚನಗಳನ್ನು ಕೇಳುವ ತನಕ. ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಅದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.
ಬಹುದೇವವಿಶ್ವಾಸಿಗಳಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಕರಾರು ಇರುವುದು ಹೇಗೆ? ಪವಿತ್ರ ಮಸೀದಿಯ ಬಳಿ ನೀವು ಕರಾರು ಮಾಡಿಕೊಂಡವರ ಹೊರತು. ಅವರು ತಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲುವ ತನಕ ನೀವು ನಿಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
ಅವರಿಗೆ ಕರಾರು ಇರುವುದು ಹೇಗೆ? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತರೆ, ನಿಮ್ಮ ವಿಷಯದಲ್ಲಿ ಅವರು ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರು ಮಾತಿನ ಮೂಲಕ ನಿಮ್ಮ ಬಗ್ಗೆ ಸಂತೃಪ್ತಿ ಸೂಚಿಸುತ್ತಾರೆ. ಆದರೆ ಅವರ ಹೃದಯಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.
ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರಿದರು ಮತ್ತು ಅವನ ಮಾರ್ಗದಿಂದ ಜನರನ್ನು ತಡೆದರು. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳು ಬಹಳ ನೀಚವಾಗಿವೆ.
ಅವರು ಸತ್ಯವಿಶ್ವಾಸಿಯ ವಿಷಯದಲ್ಲಿ ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರೇ ಅತಿರೇಕಿಗಳು.
ಆದರೆ ಅವರು ಪಶ್ಚಾತ್ತಾಪಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ, ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ತಿಳುವಳಿಕೆಯಿರುವ ಜನರಿಗಾಗಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ.
ಅವರು ಕರಾರು ಮಾಡಿದ ನಂತರ ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ, ಆ ಸತ್ಯನಿಷೇಧದ ಮುಖಂಡರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಅವರ ಪ್ರತಿಜ್ಞೆಗಳಿಗೆ ಯಾವುದೇ ಬೆಲೆಯಿಲ್ಲ. ಅವರು (ವೈರವನ್ನು) ಮುಕ್ತಾಯಗೊಳಿಸಲೂಬಹುದು.
ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಹೊರದಬ್ಬಲು ಯತ್ನಿಸಿದ ಜನರ ವಿರುದ್ಧ ನೀವೇಕೆ ಯುದ್ಧ ಮಾಡುವುದಿಲ್ಲ? ಮೊದಲು ಯುದ್ಧ ಆರಂಭಿಸಿದವರು ಅವರೇ. ನೀವು ಅವರಿಗೆ ಹೆದರುತ್ತೀರಾ? ನೀವು ಹೆದರಲು ಹೆಚ್ಚು ಅರ್ಹನಾಗಿರುವುದು ಅಲ್ಲಾಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
ಅವರ ವಿರುದ್ಧ ಯುದ್ಧ ಮಾಡಿರಿ. ನಿಮ್ಮ ಕೈಗಳ ಮೂಲಕ ಅಲ್ಲಾಹು ಅವರನ್ನು ಶಿಕ್ಷಿಸುವನು, ಅವರನ್ನು ಅಪಮಾನಿತರನ್ನಾಗಿ ಮಾಡುವನು, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ಮಾಡುವನು ಮತ್ತು ಸತ್ಯವಿಶ್ವಾಸಿಗಳ ಹೃದಯಗಳಿಗೆ ಸಂತೃಪ್ತಿಯನ್ನು ನೀಡುವನು.
وَيُذۡهِبۡ غَيۡظَ قُلُوبِهِمۡۗ وَيَتُوبُ ٱللَّهُ عَلَىٰ مَن يَشَآءُۗ وَٱللَّهُ عَلِيمٌ حَكِيمٌ [١٥]
ಅವರ ಹೃದಯಗಳಿಂದ ಆಕ್ರೋಶವನ್ನು ನಿವಾರಿಸುವನು. ಅಲ್ಲಾಹು ಅವನು ಇಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಿಮ್ಮಲ್ಲಿ (ನಿಷ್ಠೆಯಿಂದ) ಯುದ್ಧ ಮಾಡಿದವರು ಯಾರು ಮತ್ತು ಅಲ್ಲಾಹು, ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳನ್ನು ಬಿಟ್ಟು ಇತತರೊಂದಿಗೆ ರಹಸ್ಯವಾಗಿ ಗೆಳೆತನ ಮಾಡಿಕೊಂಡವರು ಯಾರು ಎಂದು ಸ್ಪಷ್ಟವಾಗಿ ತಿಳಿಯದೆ ಅಲ್ಲಾಹು ನಿಮ್ಮನ್ನು ಈ ಸ್ಥಿತಿಯಲ್ಲಿ ಬಿಟ್ಟುಬಿಡುವನೆಂದು ನೀವು ಭಾವಿಸಿದ್ದೀರಾ? ನೀವು ಮಾಡುವ ಕೆಲಸಗಳನ್ನು ಅವನು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷಿಗಳಾಗಿರುತ್ತಾ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡುವುದು ಬಹುದೇವಾರಾಧಕರಿಗೆ ಸರಿಹೊಂದುವುದಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ.
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರುವವರು, ನಮಾಝ್ ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಭಯಪಡದವರು—ಇವರೇ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡಬೇಕಾದವರು. ಇವರು ಸನ್ಮಾರ್ಗಿಗಳಲ್ಲಿ ಸೇರುವ ನಿರೀಕ್ಷೆಯಿದೆ.
ಹಜ್ಜ್ ಯಾತ್ರಿಗಳಿಗೆ ಪಾನೀಯ ಸರಬರಾಜು ಮಾಡುವುದನ್ನು ಮತ್ತು ಪವಿತ್ರ ಮಸೀದಿಯ ನಿರ್ವಹಣೆ ಮಾಡುವುದನ್ನು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಕ್ಕೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕೆ ಸಮಾನವೆಂದು ಪರಿಗಣಿಸುತ್ತೀರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಲ್ಲ. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ಸತ್ಯವಿಶ್ವಾಸ ಸ್ವೀಕರಿಸಿದವರು, ವಲಸೆ (ಹಿಜ್ರ) ಮಾಡಿದವರು ಮತ್ತು ತಮ್ಮ ಧನ-ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳಿವೆ. ಅವರೇ ಯಶಸ್ವಿಯಾದವರು.
ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ತನ್ನ ದಯೆ, ಸಂಪ್ರೀತಿ ಮತ್ತು ಸ್ವರ್ಗೋದ್ಯಾನಗಳ ಸುವಾರ್ತೆಯನ್ನು ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಸಂತೋಷಗಳಿವೆ.
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ನಿಶ್ಚಯವಾಗಿಯೂ ಅಲ್ಲಾಹನ ಬಳಿ ಅತಿದೊಡ್ಡ ಪ್ರತಿಫಲವಿದೆ.
ಓ ಸತ್ಯವಿಶ್ವಾಸಿಗಳೇ! ನಿಮ್ಮ ತಂದೆಯರನ್ನು ಮತ್ತು ನಿಮ್ಮ ಸಹೋದರರನ್ನು ನಿಮ್ಮ ಮಿತ್ರರನ್ನಾಗಿ ಸ್ವೀಕರಿಸಬೇಡಿ—ಅವರು ಸತ್ಯವಿಶ್ವಾಸಕ್ಕಿಂತ ಹೆಚ್ಚು ಸತ್ಯನಿಷೇಧವನ್ನು ಪ್ರೀತಿಸುವುದಾದರೆ. ನಿಮ್ಮಲ್ಲಿ ಯಾರು ಅವರನ್ನು ಮಿತ್ರರನ್ನಾಗಿ ಸ್ವೀಕರಿಸುತ್ತಾರೋ ಅವರೇ ಅಕ್ರಮಿಗಳು.
ಹೇಳಿರಿ: “ನಿಮ್ಮ ತಂದೆಯರು, ನಿಮ್ಮ ಮಕ್ಕಳು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಸಂಬಂಧಿಕರು, ನೀವು ಸಂಪಾದಿಸಿದ ಆಸ್ತಿಗಳು, ನಷ್ಟವಾಗಬಹುದೆಂದು ನೀವು ಹೆದರುವ ವ್ಯಾಪಾರಗಳು, ನೀವು ಪ್ರೀತಿಸುವ ನಿಮ್ಮ ಮನೆಗಳು—ಇವೆಲ್ಲವೂ ನಿಮಗೆ ಅಲ್ಲಾಹನಿಗಿಂತ, ಅವನ ಸಂದೇಶವಾಹಕರಿಗಿಂತ ಮತ್ತು ಅವನ ಮಾರ್ಗದಲ್ಲಿ ಮಾಡುವ ಹೋರಾಟಕ್ಕಿಂತ ಹೆಚ್ಚು ಪ್ರೀತಿಯುಳ್ಳದ್ದಾಗಿದ್ದರೆ, ಅಲ್ಲಾಹು ಅವನ ಆಜ್ಞೆಯನ್ನು ತರುವ ತನಕ ಕಾಯಿರಿ. ಅವಿಧೇಯತೆ ತೋರುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”
ನಿಶ್ಚಯವಾಗಿಯೂ ಅನೇಕ ಸ್ಥಳಗಳಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಹುನೈನ್ ಯುದ್ಧ ನಡೆದ ದಿನದಲ್ಲಿ ಕೂಡ (ಅವನು ನಿಮಗೆ ಸಹಾಯ ಮಾಡಿದ್ದಾನೆ). ಅಂದು ನಿಮ್ಮ ಸಂಖ್ಯಾಬಲವನ್ನು ನೋಡಿ ನೀವು ಪುಳಕಿತರಾದ ಸಂದರ್ಭ. ಆದರೆ ಅದು ನಿಮಗೆ ಯಾವುದೇ ಉಪಕಾರ ಮಾಡಲಿಲ್ಲ. ಭೂಮಿಯು ವಿಶಾಲವಾಗಿದ್ದೂ ಸಹ ನಿಮಗೆ ಸಂಕುಚಿತವಾದಂತೆ ತೋರಿತು. ನಂತರ ನೀವು ದಿಕ್ಕೆಟ್ಟು ಪಲಾಯನ ಮಾಡಿದಿರಿ.[1]
ನಂತರ ಅಲ್ಲಾಹು ಅವನ ಸಂದೇಶವಾಹಕರ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ಅವನ ಕಡೆಯ ಶಾಂತಿಯನ್ನು ಇಳಿಸಿಕೊಟ್ಟನು. ನಿಮಗೆ ಕಾಣದಂತಹ ಸೈನ್ಯಗಳನ್ನು ಕಳುಹಿಸಿ ಸತ್ಯನಿಷೇಧಿಗಳನ್ನು ಶಿಕ್ಷಿಸಿದನು. ಅದು ಸತ್ಯನಿಷೇಧಿಗಳಿಗೆ ಪ್ರತಿಫಲವಾಗಿದೆ.
ನಂತರ ಅದರ ಬಳಿಕವೂ ಅಲ್ಲಾಹು ಅವನು ಇಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಬಹುದೇವವಿಶ್ವಾಸಿಗಳು ಅಶುದ್ಧರಾಗಿದ್ದಾರೆ.[1] ಆದ್ದರಿಂದ ಈ ವರ್ಷದ ಬಳಿಕ ಅವರು ಪವಿತ್ರ ಮಸೀದಿಯ ಸಮೀಪಕ್ಕೂ ಬರದಿರಲಿ. ನಿಮಗೆ ಬಡತನದ ಬಗ್ಗೆ ಆತಂಕವಿದ್ದರೆ, ಅಲ್ಲಾಹು ಇಚ್ಛಿಸಿದರೆ ಸದ್ಯವೇ ಅವನು ತನ್ನ ಔದಾರ್ಯದಿಂದ ನಿಮ್ಮನ್ನು ಧನಿಕರನ್ನಾಗಿ ಮಾಡುವನು.[2] ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಗ್ರಂಥ ನೀಡಲಾದವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಿಲ್ಲವೋ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸುವುದಿಲ್ಲವೋ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವಾಗಿ ಸ್ವೀಕರಿಸುವುದಿಲ್ಲವೋ ಅವರ ವಿರುದ್ಧ ಯುದ್ಧ ಮಾಡಿರಿ—ಅವರು ದೈನ್ಯತೆಯಿಂದ ಜಿಝ್ಯ ನೀಡುವ ತನಕ.
ಉಝೈರ್ (ಎಜ್ರಾ) ಅಲ್ಲಾಹನ ಮಗನೆಂದು ಯಹೂದಿಗಳು ಹೇಳಿದರು. ಮಸೀಹ್ (ಯೇಸು) ಅಲ್ಲಾಹನ ಮಗನೆಂದು ಕ್ರೈಸ್ತರು ಹೇಳಿದರು. ಇವು ಅವರು ಅವರ ಬಾಯಿಂದ ಹೇಳುವ ಮಾತುಗಳಾಗಿವೆ. ಅವರಿಗಿಂತ ಮೊದಲು ಸತ್ಯವನ್ನು ನಿಷೇಧಿಸಿದವರ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ದಾರಿತಪ್ಪಿಸಲಾಗುತ್ತಿದೆಯೆಂದು ನೋಡಿ.
ಅವರು ಅಲ್ಲಾಹನನ್ನು ಬಿಟ್ಟು ತಮ್ಮ ವಿದ್ವಾಂಸರನ್ನೂ ಮತ್ತು ಸಂತರನ್ನು, ಹಾಗೂ ಮರ್ಯಮರ ಮಗ ಮಸೀಹ ಈಸಾರನ್ನು ಪರಿಪಾಲಕರನ್ನಾಗಿ (ದೇವರುಗಳನ್ನಾಗಿ) ಸ್ವೀಕರಿಸಿದರು. ಏಕೈಕ ದೇವನನ್ನು ಮಾತ್ರ ಆರಾಧಿಸಬೇಕೆಂದು ಅವರಿಗೆ ಆದೇಶಿಸಲಾಗಿತ್ತು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ.
ಅವರು ತಮ್ಮ ಬಾಯಿಗಳಿಂದ ಅಲ್ಲಾಹನ ಬೆಳಕನ್ನು ನಂದಿಸಲು ಬಯಸುತ್ತಾರೆ. ಆದರೆ ಅಲ್ಲಾಹು ತನ್ನ ಬೆಳಕನ್ನು ಪೂರ್ಣಗೊಳಿಸದೆ ಬಿಡಲು ಅಸಮ್ಮತಿ ಸೂಚಿಸಿದ್ದಾನೆ. ಸತ್ಯನಿಷೇಧಿಗಳು ಎಷ್ಟು ದ್ವೇಷಿಸಿದರೂ ಸಹ.
ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದ್ದು ಅವನೇ. ಎಲ್ಲಾ ಧರ್ಮಗಳ ಮೇಲೆ ಅದು ಜಯಗಳಿಸುವಂತೆ ಮಾಡುವುದಕ್ಕಾಗಿ. ಬಹುದೇವವಿಶ್ವಾಸಿಗಳು ಎಷ್ಟು ದ್ವೇಷಿಸಿದರೂ ಸಹ.
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ವಿದ್ವಾಂಸರು ಮತ್ತು ಸಂತರಲ್ಲಿ ಹೆಚ್ಚಿನವರು ಅನ್ಯಾಯವಾಗಿ ಜನರ ಧನವನ್ನು ತಿನ್ನುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಮತ್ತು ಬೆಳ್ಳಿಯನ್ನು ದಾಸ್ತಾನು ಮಾಡುತ್ತಾರೋ ಮತ್ತು ಅದನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ನೀಡಿರಿ.
ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಸಿ, ನಂತರ ಅದರಿಂದ ಅವರ ಹಣೆ, ಪಾರ್ಶ್ವ ಮತ್ತು ಬೆನ್ನುಗಳಿಗೆ ಬರೆ ಹಾಕುವ ದಿನ. (ಅವರೊಡನೆ ಹೇಳಲಾಗುವುದು): “ಇದು ನೀವು ನಿಮಗಾಗಿ ದಾಸ್ತಾನು ಮಾಡಿಟ್ಟ ಆಸ್ತಿಯಾಗಿದೆ. ನೀವು ದಾಸ್ತಾನು ಮಾಡಿದ ಆಸ್ತಿಯ ರುಚಿಯನ್ನು ನೋಡಿರಿ.”
ನಿಶ್ಚಯವಾಗಿಯೂ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡು. ಭೂಮ್ಯಾಕಾಶಗಳನ್ನು ಸೃಷ್ಟಿಸಿದ ದಿನದಂದಲೇ ಇದು ಅಲ್ಲಾಹನ ಗ್ರಂಥದಲ್ಲಿದೆ. ಅವುಗಳಲ್ಲಿ ನಾಲ್ಕು ಪವಿತ್ರ ತಿಂಗಳುಗಳು.[1] ಅದೇ ನೇರವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಬೇಡಿ. ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡುವಂತೆ ನೀವೂ ಕೂಡ ಒಟ್ಟಾಗಿ ಅವರ ವಿರುದ್ಧ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
ನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ.[1] ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ಓ ಸತ್ಯವಿಶ್ವಾಸಿಗಳೇ! ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೊರಡಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ನೀವು ಪರಲೋಕದ ಬದಲು ಇಹಲೋಕವನ್ನೇ ನೆಚ್ಚಿಕೊಂಡಿದ್ದೀರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಆನಂದಗಳು ಕ್ಷಣಿಕವಾಗಿವೆ.
ನೀವು ಯುದ್ಧಕ್ಕೆ ಹೊರಡದಿದ್ದರೆ ಅಲ್ಲಾಹು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ನೀವಲ್ಲದ ಬೇರೆ ಜನತೆಯನ್ನು ತರುವನು. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ, ಅಲ್ಲಾಹು ಅವರಿಗೆ ಖಂಡಿತ ಸಹಾಯ ಮಾಡಿದ್ದಾನೆ. ಅವರು ಇಬ್ಬರಲ್ಲಿ ಒಬ್ಬರಾಗಿದ್ದು, ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಹೊರದಬ್ಬಿ, ಅವರಿಬ್ಬರು[1] ಗುಹೆಯಲ್ಲಿ ಆಶ್ರಯ ಪಡೆದಾಗ ಮತ್ತು ಅವರು ತಮ್ಮ ಸಹಚರನೊಡನೆ, “ಸಂಕಟಪಡಬೇಡ, ನಿಶ್ಚಯವಾಗಿಯೂ ಅಲ್ಲಾಹು ನಮ್ಮ ಜೊತೆಗಿದ್ದಾನೆ” ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ಕಡೆಯ ಶಾಂತಿಯನ್ನು ಇಳಿಸಿದನು, ನೀವು ನೋಡದೇ ಇರುವಂತಹ ಸೈನ್ಯಗಳ ಮೂಲಕ ಅವರಿಗೆ ಶಕ್ತಿಯನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವು ಅತ್ಯುನ್ನತವಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನೀವು ಹಗುರವಾಗಿರುವಾಗಲೂ ಭಾರವಾಗಿರುವಾಗಲೂ ಯುದ್ಧಕ್ಕೆ ಹೊರಡಿರಿ.[1] ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು-ಧನಗಳಿಂದ ಯುದ್ಧ ಮಾಡಿರಿ. ನೀವು ತಿಳಿದವರಾಗಿದ್ದರೆ ಅದೇ ನಿಮಗೆ ಶ್ರೇಷ್ಠವಾಗಿದೆ.
ಅದು ಸಮೀಪದ (ಸುಲಭದ) ಲಾಭವಾಗಿದ್ದರೆ ಮತ್ತು ನಿರಾಯಾಸ ಪ್ರಯಾಣವಾಗಿದ್ದರೆ ಅವರು (ಕಪಟವಿಶ್ವಾಸಿಗಳು) ನಿಮ್ಮನ್ನು ಹಿಂಬಾಲಿಸುತ್ತಿದ್ದರು. ಆದರೆ ಅವರಿಗೆ ಅದು ವಿದೂರ ಮತ್ತು ಆಯಾಸಕರವಾಗಿದೆ. “ನಮಗೆ ಸಾಮರ್ಥ್ಯವಿರುತ್ತಿದ್ದರೆ ನಾವು ನಿಮ್ಮೊಂದಿಗೆ ಹೊರಡುತ್ತಿದ್ದೆವು” ಎಂದು ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಅವರು ಅವರನ್ನೇ ನಾಶ ಮಾಡುತ್ತಿದ್ದಾರೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅಲ್ಲಾಹನಿಗೆ ತಿಳಿದಿದೆ.[1]
(ಪ್ರವಾದಿಯವರೇ) ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ನೀವೇಕೆ ಅವರಿಗೆ ಅನುಮತಿ ನೀಡಿದಿರಿ? ಸತ್ಯ ಹೇಳುವವರು ಯಾರು ಮತ್ತು ಸುಳ್ಳು ಹೇಳುವವರು ಯಾರೆಂದು ಸ್ಪಷ್ಟವಾಗಿ ತಿಳಿಯುವವರೆಗೆ (ನೀವು ಅನುಮತಿ ನೀಡಬಾರದಿತ್ತು).
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ತಮ್ಮ ತನು-ಧನಗಳಿಂದ (ಅಲ್ಲಾಹನ ಮಾರ್ಗದಲ್ಲಿ) ಯುದ್ಧ ಮಾಡದಿರಲು ನಿಮ್ಮೊಡನೆ ಅನುಮತಿ ಕೇಳುವುದಿಲ್ಲ. ದೇವಭಯವುಳ್ಳವರ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡದವರು ಹಾಗೂ ಹೃದಯದಲ್ಲಿ ಸಂಶಯವಿರುವವರು ಮಾತ್ರ ನಿಮ್ಮೊಡನೆ ಅನುಮತಿ ಕೇಳುತ್ತಾರೆ. ಅವರು ಅವರ ಸಂಶಯದಲ್ಲಿಯೇ ಅಲೆದಾಡುತ್ತಿದ್ದಾರೆ.
ಅವರಿಗೆ (ಯುದ್ಧಕ್ಕೆ) ಹೊರಡುವ ಇಚ್ಛೆಯಿದ್ದರೆ ಅವರು ಅದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿದ್ದರು. ಆದರೆ ಅವರು ಅದಕ್ಕಾಗಿ ಎದ್ದೇಳುವುದನ್ನು ಅಲ್ಲಾಹು ಇಷ್ಟಪಡಲಿಲ್ಲ. ಆದ್ದರಿಂದ ಅವನು ಅವರನ್ನು ತಡೆದನು. ಕುಳಿತುಕೊಳ್ಳುವವರೊಡನೆ ನೀವೂ ಕುಳಿತುಕೊಳ್ಳಿರಿ ಎಂದು ಅವರೊಡನೆ ಹೇಳಲಾಯಿತು.
ಅವರು ನಿಮ್ಮ ಜೊತೆಗೆ ಹೊರಡುತ್ತಿದ್ದರೆ ನಿಮಗೆ ಗೊಂದಲವಲ್ಲದೆ ಇನ್ನೇನೂ ಹೆಚ್ಚುವಂತೆ ಮಾಡುತ್ತಿರಲಿಲ್ಲ. ಅವರು ನಿಮ್ಮ ನಡುವೆ ಒಡಕು ಮೂಡಿಸಲು ಸಕ್ರಿಯವಾಗಿ ಓಡಾಡುತ್ತಿದ್ದರು. ಅವರ ಮಾತುಗಳನ್ನು ಕಿವಿಗೊಟ್ಟು ಕೇಳುವವರೂ ನಿಮ್ಮಲ್ಲಿದ್ದಾರೆ. ಅಕ್ರಮಿಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
ಅವರು ಇದಕ್ಕೆ ಮೊದಲು ಕೂಡ ಒಡಕು ಮೂಡಿಸಲು ಹವಣಿಸಿದ್ದರು ಮತ್ತು ನಿಮ್ಮ ಮುಂದೆ ಕಾರ್ಯಗಳನ್ನು ತಲೆಕೆಳಗೆ ಮಾಡಿದ್ದರು. ಎಲ್ಲಿಯವರೆಗೆಂದರೆ, ಸತ್ಯವು ಬಂದು ಅಲ್ಲಾಹನ ಆಜ್ಞೆಯು ಪ್ರಕಟವಾಗುವ ತನಕ. ಅದು ಅವರಿಗೆ ಎಷ್ಟು ಅಪ್ರಿಯವಾಗಿದ್ದರೂ ಸಹ.
ಅವರಲ್ಲಿ, “ನನಗೆ (ಮನೆಯಲ್ಲಿರಲು) ಅನುಮತಿ ನೀಡಿರಿ. ನನ್ನನ್ನು ಪರೀಕ್ಷೆಗೆ ಸಿಲುಕಿಸಬೇಡಿ” ಎಂದು ಹೇಳುವವರಿದ್ದಾರೆ. ತಿಳಿಯಿರಿ! ಅವರು ಪರೀಕ್ಷೆಯಲ್ಲೇ ಬಿದ್ದಿದ್ದಾರೆ. ನಿಶ್ಚಯವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕು ಸಂಭವಿಸಿದರೆ ಅವರು ಹೇಳುತ್ತಾರೆ: “ನಾವು ಮೊದಲೇ ನಮ್ಮ ವಿಷಯದಲ್ಲಿ ಜಾಗರೂಕರಾಗಿದ್ದೆವು.” ನಂತರ ಅವರು ಸಂತೋಷಪಡುತ್ತಾ ಮರಳಿ ಹೋಗುತ್ತಾರೆ.
ಹೇಳಿರಿ: “ಅಲ್ಲಾಹು ನಮಗೆ ವಿಧಿಸಿದ್ದಲ್ಲದೆ ಬೇರೇನೂ ನಮಗೆ ಸಂಭವಿಸುವುದಿಲ್ಲ. ಅವನೇ ನಮ್ಮ ರಕ್ಷಕ.” ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
ಹೇಳಿರಿ: “ನೀವು ನಮ್ಮ ವಿಷಯದಲ್ಲಿ ಇವೆರಡರಲ್ಲಿ (ಹುತಾತ್ಮರಾಗುವುದು ಅಥವಾ ವಿಜಯ ಪತಾಕೆಯೊಂದಿಗೆ ಮರಳುವುದು) ಒಂದರ ಹೊರತು ಬೇರೇನು ಕಾಯುತ್ತೀರಿ? ಆದರೆ ಅಲ್ಲಾಹು ನಿಮಗೆ ಅವನ ಕಡೆಯಿಂದ ಅಥವಾ ನಮ್ಮ ಕೈಗಳಿಂದ ಶಿಕ್ಷೆ ನೀಡಬೇಕೆಂದು ನಾವು ಕಾಯುತ್ತೇವೆ. ಆದ್ದರಿಂದ ನೀವು ಕಾಯಿರಿ. ನಿಶ್ಚಯವಾಗಿಯೂ ನಾವೂ ನಿಮ್ಮೊಂದಿಗೆ ಕಾಯುತ್ತೇವೆ.”
ಹೇಳಿರಿ: “ನೀವು (ಅಲ್ಲಾಹನ ಮಾರ್ಗದಲ್ಲಿ) ನಿಮ್ಮ ಇಚ್ಛೆಯಿಂದ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಖರ್ಚು ಮಾಡಿರಿ. (ನೀವು ಯಾವ ರೀತಿಯಲ್ಲಿ ಖರ್ಚು ಮಾಡಿದರೂ) ಅದು ನಿಮ್ಮಿಂದ ಸ್ವೀಕಾರವಾಗುವುದಿಲ್ಲ. ನಿಶ್ಚಯವಾಗಿಯೂ ನೀವು ದುಷ್ಕರ್ಮಿಗಳಾದ ಜನರಾಗಿದ್ದಿರಿ.”
(ಅಲ್ಲಾಹನ ಮಾರ್ಗದಲ್ಲಿ) ಅವರು ಮಾಡುವ ಖರ್ಚುಗಳು ಅವರಿಂದ ಸ್ವೀಕಾರವಾಗದಂತೆ ತಡೆಯಾಗಿರುವುದು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿರುವುದು, ಉದಾಸೀನವಾಗಿಯೇ ನಮಾಝ್ ಮಾಡಲು ಬರುವುದು ಮತ್ತು ಒಲ್ಲದ ಮನಸ್ಸಿನಿಂದ ಖರ್ಚು ಮಾಡುವುದು ಮುಂತಾದವುಗಳಲ್ಲದೆ ಇನ್ನೇನೂ ಅಲ್ಲ.
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣ ಬಿಡುವಂತಾಗಲು ಬಯಸುತ್ತಾನೆ.
ಅವರು ನಿಮ್ಮಲ್ಲಿ ಸೇರಿದವರು ಎಂದು (ಸಾಬೀತುಪಡಿಸಲು) ಅವರು ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ಆದರೆ ಅವರು ನಿಮ್ಮಲ್ಲಿ ಸೇರಿದವರಲ್ಲ. ಬದಲಿಗೆ ಅವರು ಅಂಜುಬುರುಕ ಜನರಾಗಿದ್ದಾರೆ.
ಅವರು (ಅಡಗಿಕೊಳ್ಳಲು) ಒಂದು ರಕ್ಷಣಾತಾಣವನ್ನು, ಗುಹೆಯನ್ನು ಅಥವಾ ನುಸುಳಿಕೊಳ್ಳಲು ಯಾವುದಾದರೂ ದ್ವಾರವನ್ನು ಕಂಡರೆ ಅದರ ಕಡೆಗೆ ದೌಡಾಯಿಸುತ್ತಾ ಓಡುತ್ತಾರೆ.
ದಾನಧರ್ಮಗಳನ್ನು ಹಂಚುವ ವಿಷಯದಲ್ಲಿ ನಿಮ್ಮನ್ನು ಟೀಕಿಸುವವರೂ ಅವರಲ್ಲಿದ್ದಾರೆ. ಅವರಿಗೆ ಅದರಿಂದ ಏನಾದರೂ ಕೊಟ್ಟುಬಿಟ್ಟರೆ ಸಂತೋಷವಾಗುತ್ತದೆ. ಅವರಿಗೆ ಏನೂ ಕೊಡದಿದ್ದರೆ ಅವರು ಸಿಟ್ಟಾಗುತ್ತಾರೆ.
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಏನು ಕೊಟ್ಟರೋ ಅದರಲ್ಲಿ ಸಂತೃಪ್ತರಾಗಿ, “ನಮಗೆ ಅಲ್ಲಾಹು ಸಾಕು; ಅಲ್ಲಾಹು ಅವನ ಔದಾರ್ಯದಿಂದ ನಮಗೆ ಕೊಡುವನು ಮತ್ತು ಅವನ ಸಂದೇಶವಾಹಕರು ಕೂಡ ಕೊಡುವರು; ನಿಶ್ಚಯವಾಗಿಯೂ ನಾವು ಅಲ್ಲಾಹನಲ್ಲಿ ಮಾತ್ರ ನಿರೀಕ್ಷೆಯಿಡುತ್ತೇವೆ” ಎಂದು ಅವರು ಹೇಳುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
ದಾನಧರ್ಮವನ್ನು (ಝಕಾತ್) ಬಡವರಿಗೆ, ನಿರ್ಗತಿಕರಿಗೆ, ಅದರ ಸಂಗ್ರಹಕರಿಗೆ, ಹೃದಯದಲ್ಲಿ (ಇಸ್ಲಾಮ್ ಧರ್ಮದ ಬಗ್ಗೆ) ಒಲವುಳ್ಳವರಿಗೆ, ಗುಲಾಮ ವಿಮೋಚನೆಗೆ, ಸಾಲದಲ್ಲಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದಕ್ಕೆ ಮತ್ತು ಪ್ರಯಾಣಿಕರಿಗೆ ಮಾತ್ರ ನೀಡಬೇಕಾಗಿದೆ. ಇದು ಅಲ್ಲಾಹು ವಿಧಿಸಿದ ಕಡ್ಡಾಯ ಬಾಧ್ಯತೆಯಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಪ್ರವಾದಿಗೆ ತೊಂದರೆ ಕೊಡುವವರು ಮತ್ತು ಅವರು (ಎಲ್ಲರ ಮಾತುಗಳನ್ನೂ ಕೇಳುವ) ಕಿವಿಯಾಗಿದ್ದಾರೆ ಎಂದು ಹೇಳುವವರು ಅವರಲ್ಲಿದ್ದಾರೆ. ಹೇಳಿರಿ: “ಅವರು ನಿಮಗೆ ಒಳಿತನ್ನೇ ಬಯಸುವ ಕಿವಿಯಾಗಿದ್ದಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳ ಮಾತನ್ನು ನಂಬುತ್ತಾರೆ. ಅವರು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳಿಗೆ ದಯೆಯಾಗಿದ್ದಾರೆ.” ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವವರು ಯಾರೋ ಅವರಿಗೆ ಯಾತನಾಮಯ ಶಿಕ್ಷೆಯಿದೆ.
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ಆದರೆ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಸಂಪ್ರೀತಿಯನ್ನು ಪಡೆಯುವುದೇ ಅವರಿಗೆ ಹೆಚ್ಚು ಅರ್ಹವಾಗಿದೆ.
ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುತ್ತಾನೋ ಅವನಿಗೆ ನರಕವೇ ಗತಿ ಮತ್ತು ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾನೆಂದು ಅವರಿಗೆ ತಿಳಿದಿಲ್ಲವೇ? ಅದೇ ಅತಿದೊಡ್ಡ ಅಪಮಾನ.
ಅವರ ಹೃದಯದಲ್ಲಿರುವ ದುರ್ವಿಚಾರಗಳನ್ನು ಬಹಿರಂಗಪಡಿಸುವ ಅಧ್ಯಾಯವು ಅವತೀರ್ಣವಾಗಬಹುದೋ ಎಂದು ಕಪಟವಿಶ್ವಾಸಿಗಳು ಹೆದರುತ್ತಾರೆ. ಹೇಳಿರಿ: “ನೀವು ತಮಾಷೆ ಮಾಡುತ್ತಿರಿ. ನಿಶ್ಚಯವಾಗಿಯೂ ನೀವು ಹೆದರುವುದನ್ನು ಅಲ್ಲಾಹು ಬಹಿರಂಗಪಡಿಸುವನು.”
ನೀವು ಅವರೊಂದಿಗೆ ಕೇಳಿದರೆ ಅವರು ಹೇಳುತ್ತಾರೆ: “ನಾವು ಕೇವಲ ಹರಟೆ ಹೊಡೆಯುತ್ತಾ ಆಟವಾಡುತ್ತಿದ್ದೆವು.” ಕೇಳಿರಿ: “ಅಲ್ಲಾಹು, ಅವನ ವಚನಗಳು ಮತ್ತು ಅವನ ಸಂದೇಶವಾಹಕರನ್ನು ನೀವು ತಮಾಷೆ ಮಾಡುತ್ತಿದ್ದಿರಾ?
ನೆಪಗಳನ್ನು ಹೇಳಬೇಡಿ. ಸತ್ಯವಿಶ್ವಾಸಿಗಳಾದ ಬಳಿಕ ನೀವು ಸತ್ಯನಿಷೇಧಿಗಳಾಗಿದ್ದೀರಿ. ನಿಮ್ಮಲ್ಲಿ ಒಂದು ಗುಂಪನ್ನು ನಾವು ಕ್ಷಮಿಸಿದರೆ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು. ಅದೇಕೆಂದರೆ ಅವರು ಅಪರಾಧಿಗಳಾಗಿದ್ದಾರೆ.”[1]
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರು ಒಂದೇ ವರ್ಗಕ್ಕೆ ಸೇರಿದವರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತನ್ನು ವಿರೋಧಿಸುತ್ತಾರೆ, ಹಾಗೂ ತಮ್ಮ ಕೈಗಳನ್ನು ಮಡಚಿಕೊಳ್ಳುತ್ತಾರೆ.[1] ಅವರು ಅಲ್ಲಾಹನನ್ನು ಮರೆತಿದ್ದಾರೆ. ಆದ್ದರಿಂದ ಅಲ್ಲಾಹು ಕೂಡ ಅವರನ್ನು ಮರೆತಿದ್ದಾನೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳೇ ದುಷ್ಕರ್ಮಿಗಳು.
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರಿಗೆ ಹಾಗೂ ಸತ್ಯನಿಷೇಧಿಗಳಿಗೆ ಅಲ್ಲಾಹು ನರಕಾಗ್ನಿಯ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅವರಿಗೆ ಅದೇ ಸಾಕು. ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅವರಿಗೆ ಶಾಶ್ವತ ಶಿಕ್ಷೆಯಿದೆ.
(ನಿಮ್ಮ ಸ್ಥಿತಿಯು) ನಿಮಗಿಂತ ಮೊದಲಿನ ಸತ್ಯನಿಷೇಧಿಗಳಂತೆ. ಅವರು ನಿಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು ಮತ್ತು ನಿಮಗಿಂತಲೂ ಹೆಚ್ಚು ಆಸ್ತಿ ಹಾಗೂ ಮಕ್ಕಳನ್ನು ಹೊಂದಿದ್ದರು. ಅವರು ಅವರ ಪಾಲನ್ನು ಪಡೆದು ಆನಂದಿಸಿದರು. ನಿಮಗಿಂತ ಮೊದಲಿನವರು ಅವರ ಪಾಲನ್ನು ಪಡೆದು ಆನಂದಿಸಿದಂತೆ ನೀವೂ ಸಹ ನಿಮ್ಮ ಪಾಲನ್ನು ಪಡೆದು ಆನಂದಿಸುತ್ತೀರಿ. ಅವರು ತಮಾಷೆಗಳಲ್ಲಿ ಕಾಲಹರಣ ಮಾಡಿದಂತೆ ನೀವು ಕೂಡ ತಮಾಷೆಗಳಲ್ಲಿ ಕಾಲಹರಣ ಮಾಡಿದ್ದೀರಿ. ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿವೆ. ಅವರೇ ನಷ್ಟಹೊಂದಿದವರು.
ಅವರಿಗಿಂತ ಮೊದಲಿನವರ—ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ, ಇಬ್ರಾಹೀಮರ ಜನರು, ಮದ್ಯನ್ ದೇಶದ ಜನರು, ಬುಡಮೇಲಾದ ದೇಶದ ಜನರು—ಮುಂತಾದವರ ಸಮಾಚಾರಗಳು ಇವರಿಗೆ ತಲುಪಿಲ್ಲವೇ? ಅವರೆಲ್ಲರ ಬಳಿಗೆ ಅವರ ಪ್ರವಾದಿಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು.
ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರು ಪರಸ್ಪರ ಆಪ್ತಮಿತ್ರರು. ಅವರು ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡುತ್ತಾರೆ. ಅಲ್ಲಾಹು ಅವರಿಗೆ ಖಂಡಿತ ದಯೆ ತೋರುವನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಅಲ್ಲಾಹು ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಚಿರಸ್ಥಾಯಿಯಾದ ಉದ್ಯಾನಗಳಲ್ಲಿರುವ ಮನಮೋಹಕ ವಸತಿಗಳ ಭರವಸೆಯನ್ನೂ ನೀಡಿದ್ದಾನೆ. ಆದರೆ ಅಲ್ಲಾಹನ ಸಂಪ್ರೀತಿಯೇ ಎಲ್ಲಕ್ಕಿಂತಲೂ ದೊಡ್ಡದು. ಅದೇ ಅತಿದೊಡ್ಡ ಯಶಸ್ಸು.
ಓ ಪ್ರವಾದಿಯವರೇ! ಸತ್ಯನಿಷೇಧಿಗಳ ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರ ವಿಷಯದಲ್ಲಿ ಕಟುವಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕವಾಗಿದೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
ನಾವು (ಪ್ರವಾದಿಯ ವಿರುದ್ಧ ಏನೂ) ಹೇಳಿಲ್ಲವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಆದರೆ (ವಾಸ್ತವದಲ್ಲಿ) ಅವರು ಸತ್ಯನಿಷೇಧದ ಮಾತನ್ನೇ ಹೇಳಿದ್ದಾರೆ. ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ಸತ್ಯನಿಷೇಧಿಗಳಾಗಿ ಮಾರ್ಪಟ್ಟಿದ್ದಾರೆ. ಅವರಿಗೆ ಮಾಡಲು ಸಾಧ್ಯವಾಗದ ಸಂಗತಿಗಾಗಿ (ಪ್ರವಾದಿಯ ಹತ್ಯೆಗಾಗಿ) ಅವರು ಹವಣಿಸಿದ್ದರು. ಅಲ್ಲಾಹು ಅವನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸಿದನು ಮತ್ತು ಅವನ ಸಂದೇಶವಾಹಕರು ಕೂಡ (ಅವರನ್ನು ಶ್ರೀಮಂತಗೊಳಿಸಿದರು) ಎಂಬುದಲ್ಲದೆ ಅವರ ಪ್ರತೀಕಾರಕ್ಕೆ ಬೇರೇನು ಕಾರಣವಿದೆ? ಅವರು ಪಶ್ಚಾತ್ತಾಪಪಟ್ಟು ಮರಳಿದರೆ ಅದು ಅವರಿಗೇ ಒಳ್ಳೆಯದು. ಅವರು ಬೆನ್ನು ತೋರಿಸಿ ನಡೆದರೆ, ಅಲ್ಲಾಹು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ಯಾತನಾಮಯ ಶಿಕ್ಷೆಯನ್ನು ನೀಡುವನು. ಭೂಮಿಯಲ್ಲಿ ಅವರಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು.
“ಅಲ್ಲಾಹು ಅವನ ಔದಾರ್ಯದಿಂದ ನಮಗೆ ದೌಲತ್ತು ನೀಡಿದರೆ ನಿಶ್ಚಯವಾಗಿಯೂ ನಾವು ದಾನಧರ್ಮ ಮಾಡುತ್ತೇವೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇವೆ” ಎಂದು ಅಲ್ಲಾಹನೊಡನೆ ಕರಾರು ಮಾಡಿದವರು ಅವರಲ್ಲಿದ್ದಾರೆ.
ಆದರೆ ಅವನು ಅವರಿಗೆ ಅವನ ಔದಾರ್ಯದಿಂದ ದೌಲತ್ತು ನೀಡಿದಾಗ ಅವರು ಜಿಪುಣತನ ತೋರಿದರು ಮತ್ತು ಕಡೆಗಣಿಸುತ್ತಾ ತಿರುಗಿ ನಡೆದರು.
ಆದ್ದರಿಂದ ಅವರಿಗೆ ಶಿಕ್ಷೆಯಾಗಿ ಅಲ್ಲಾಹು ಅವರ ಹೃದಯಗಳಲ್ಲಿ ಕಪಟತೆಯನ್ನು ಹಾಕಿದನು. ಅವರು ಅವನನ್ನು ಭೇಟಿಯಾಗುವ ದಿನದ ತನಕ (ಅದು ಅವರ ಹೃದಯಗಳಲ್ಲಿರುವುದು). ಅದೇಕೆಂದರೆ, ಅವರು ಅಲ್ಲಾಹನಿಗೆ ನೀಡಿದ ಭರವಸೆಯನ್ನು ಮುರಿದರು. ಅದೇಕೆಂದರೆ, ಅವರು ಸುಳ್ಳು ಹೇಳುವವರಾಗಿದ್ದರು.
ಅವರ ರಹಸ್ಯಗಳನ್ನು ಮತ್ತು ಅವರ ಗೂಢ ಸಂಭಾಷಣೆಗಳನ್ನು ಅಲ್ಲಾಹು ತಿಳಿಯುತ್ತಾನೆಂದು, ಮತ್ತು ಅಲ್ಲಾಹು ಅಗೋಚರ ಸಂಗತಿಗಳನ್ನು ಬಹಳ ಚೆನ್ನಾಗಿ ತಿಳಿಯುತ್ತಾನೆಂದು ಅವರಿಗೆ ಗೊತ್ತಿಲ್ಲವೇ?
ಸ್ವಯಂಪ್ರೇರಣೆಯಿಂದ ದಾನ ಮಾಡುವ ಸತ್ಯವಿಶ್ವಾಸಿಗಳನ್ನು ಮತ್ತು ದಾನ ಮಾಡಲು ತಮ್ಮ ದಿನಗೂಲಿಯ ಹೊರತು ಬೇರೇನೂ ಇಲ್ಲದವರನ್ನು ಅವರು ಟೀಕಿಸುತ್ತಾರೆ. ಅವರು ಅವರನ್ನು ತಮಾಷೆ ಮಾಡುತ್ತಾರೆ. ಅಲ್ಲಾಹು ಕೂಡ ಅವರನ್ನು (ಕಪಟವಿಶ್ವಾಸಿಗಳನ್ನು) ತಮಾಷೆ ಮಾಡುವನು. ಅವರಿಗೆ ಯಾತನಾಮಯ ಶಿಕ್ಷೆಯಿದೆ.
ನೀವು ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿದರೂ ಅಥವಾ ಕ್ಷಮೆಯಾಚನೆ ಮಾಡದಿದ್ದರೂ, ನೀವು ಅವರಿಗೋಸ್ಕರ ಎಪ್ಪತ್ತು ಸಲ ಕ್ಷಮೆಯಾಚನೆ ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುವುದಿಲ್ಲ. ಅದೇಕೆಂದರೆ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
(ಯುದ್ಧದಿಂದ ತಪ್ಪಿಸಿ) ಹಿಂದೆ ಉಳಿದವರು ಅಲ್ಲಾಹನ ಸಂದೇಶವಾಹಕರು ಯುದ್ಧಕ್ಕೆ ಹೊರಟ ನಂತರ ತಾವು ಹಿಂದೆ ಉಳಿದುದರ ಬಗ್ಗೆ ಸಂತೃಪ್ತರಾಗಿದ್ದಾರೆ. ಅವರು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಇಷ್ಟಪಡಲಿಲ್ಲ. ಅವರು ಹೇಳಿದರು: “ಈ ಉರಿಬಿಸಿಲಿನಲ್ಲಿ ಯುದ್ಧಕ್ಕೆ ಹೋಗಬೇಡಿ.” ಹೇಳಿರಿ: “ನರಕದ ಬೆಂಕಿ ಅದಕ್ಕಿಂತಲೂ ತೀಕ್ಷ್ಣ ಉರಿಯನ್ನು ಹೊಂದಿದೆ.” ಅವರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರೆ!
ಆದ್ದರಿಂದ ಅವರು ಮಾಡಿಟ್ಟ ದುಷ್ಕರ್ಮಗಳ ಫಲವಾಗಿ ಅವರು ಕನಿಷ್ಠ ನಗುತ್ತಿರಲಿ ಮತ್ತು ಗರಿಷ್ಠ ಅಳುತ್ತಿರಲಿ.
(ಯುದ್ಧಾನಂತರ) ಅಲ್ಲಾಹು ನಿಮ್ಮನ್ನು (ಸುರಕ್ಷಿತವಾಗಿ) ಅವರಲ್ಲಿನ ಒಂದು ಗುಂಪಿನ ಬಳಿಗೆ ಹಿಂದಿರುಗಿಸಿದರೆ, ಇನ್ನೊಂದು ಯುದ್ಧಕ್ಕೆ ಬರುತ್ತೇವೆಂದು ಅವರು ನಿಮ್ಮಲ್ಲಿ ಅನುಮತಿ ಕೇಳುತ್ತಾರೆ. ಹೇಳಿರಿ: “ನೀವು ಯಾವತ್ತೂ ನನ್ನ ಜೊತೆಗೆ ಬರುವಂತಿಲ್ಲ. ನೀವು ಯಾವತ್ತೂ ನನ್ನ ಜೊತೆಗೂಡಿ ವೈರಿಗಳೊಡನೆ ಯುದ್ಧ ಮಾಡುವಂತಿಲ್ಲ. ನಿಶ್ಚಯವಾಗಿಯೂ ಮೊದಲ ಸಂದರ್ಭದಲ್ಲಿ ನೀವು (ಯುದ್ಧಕ್ಕೆ ಹೋಗದೆ) ಹಿಂದೆ ಉಳಿಯಲು ಇಷ್ಟಪಟ್ಟಿರಿ. ಆದ್ದರಿಂದ ನೀವು ಹಿಂದೆ ಉಳಿದವರೊಂದಿಗೇ ಇದ್ದುಕೊಳ್ಳಿ.”
ಅವರಲ್ಲಿ ಯಾರಾದರೂ ಇಹಲೋಕ ತ್ಯಜಿಸಿದರೆ ಅವನಿಗೆ ಅಂತ್ಯಕ್ರಿಯೆಯ ನಮಾಝ್ ಮಾಡಬೇಡಿ. ಅವನ ಸಮಾಧಿಯ ಬಳಿ ನಿಲ್ಲಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ ಮತ್ತು ಅವಿಧೇಯರಾಗಿಯೇ ಪ್ರಾಣಬಿಟ್ಟಿದ್ದಾರೆ.
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣಬಿಡುವಂತಾಗಲು ಬಯಸುತ್ತಾನೆ.
“ಅಲ್ಲಾಹನಲ್ಲಿ ವಿಶ್ವಾಸವಿಡಿ ಮತ್ತು ಅವನ ಸಂದೇಶವಾಹಕರ ಜೊತೆಗೂಡಿ ಯುದ್ಧ ಮಾಡಿ” ಎಂಬ ಆಜ್ಞೆಯಿರುವ ಒಂದು ಅಧ್ಯಾಯವು ಅವತೀರ್ಣವಾದರೆ, ಅವರಲ್ಲಿನ ಧನಿಕರ ಒಂದು ಗುಂಪು ನಿಮ್ಮ ಬಳಿಗೆ ಬಂದು, “ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ; ನಾವು (ನಮ್ಮ ಮನೆಯಲ್ಲೇ) ಉಳಿಯುತ್ತೇವೆ” ಎಂದು ಹೇಳುತ್ತಾ ನಿಮ್ಮಲ್ಲಿ (ಯುದ್ಧದಿಂದ ತಪ್ಪಿಸಿಕೊಳ್ಳಲು) ಅನುಮತಿ ಕೇಳಿದರು.
(ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಉಳಿದುಕೊಳ್ಳಲು ಅವರು ಇಷ್ಟಪಟ್ಟರು. ಅವರ ಹೃದಯಗಳಿಗೆ ಮೊಹರು ಹಾಕಲಾಗಿದೆ. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ.
ಆದರೆ ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ತಮ್ಮ ತನು-ಧನಗಳಿಂದ ಯುದ್ಧ ಮಾಡಿದರು. ಅವರೇ ಒಳಿತನ್ನು ಹೊಂದಿರುವವರು. ಅವರೇ ಯಶಸ್ವಿಯಾದವರು.
ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದೇ ಅತಿದೊಡ್ಡ ವಿಜಯ.
ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿ (ಯುದ್ಧಕ್ಕೆ ತೆರಳದಿರಲು) ವಿನಾಯಿತಿ ಹೊಂದಿರುವವರು ಅವರಿಗೆ ಅನುಮತಿ ಸಿಗುವುದಕ್ಕಾಗಿ ನಿಮ್ಮ ಬಳಿಗೆ ಬಂದರು. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಸುಳ್ಳು ಹೇಳಿದವರು (ಮನೆಯಲ್ಲೇ) ಕುಳಿತರು. ಅವರಲ್ಲಿರುವ ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯು ಕಾದಿದೆ.
(ಯುದ್ಧದಲ್ಲಿ ಪಾಲ್ಗೊಳ್ಳದ) ದುರ್ಬಲರ ಮೇಲೆ, ರೋಗಿಗಳ ಮೇಲೆ ಮತ್ತು ಖರ್ಚು ಮಾಡಲು ಏನೂ ಇಲ್ಲದವರ ಮೇಲೆ ದೋಷವಿಲ್ಲ—ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಹಿತಚಿಂತಕರಾಗಿದ್ದರೆ. ಇಂತಹ ಸಜ್ಜನರ ಮೇಲೆ ಆರೋಪ ಹೊರಿಸಲು ಯಾವುದೇ ಅವಕಾಶವಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಅವರು ನಿಮ್ಮ ಬಳಿಗೆ ಬಂದು, ಅವರನ್ನು ಕೂಡ ಯುದ್ಧಕ್ಕೆ ಒಯ್ಯಬೇಕೆಂದು ವಿನಂತಿಸಿದಾಗ, “ನಿಮ್ಮನ್ನು ಒಯ್ಯುವಂತಹ ಯಾವುದೇ ಸವಾರಿ ನನ್ನ ಬಳಿಯಿಲ್ಲ” ಎಂದು ನೀವು ಉತ್ತರಿಸಿದಿರಿ; ಆಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಲು ಚಿಕ್ಕಾಸು ಕೂಡ ಇಲ್ಲದೆ ಬೇಸರದಿಂದ ಕಣ್ಣೀರು ಸುರಿಸುತ್ತಾ ಹಿಂದಿರುಗಿ ಹೋದವರ ಮೇಲೂ ದೋಷವಿಲ್ಲ.
ಆರೋಪ ಹೊರಿಸಲು ಅವಕಾಶವಿರುವುದು ಧನಿಕರಾಗಿದ್ದೂ ಸಹ (ಯುದ್ಧದಿಂದ ವಿನಾಯಿತಿ ಪಡೆಯಲು) ನಿಮ್ಮಲ್ಲಿ ಅನುಮತಿ ಕೇಳುವವರ ಮೇಲೆ ಮಾತ್ರ. ಅವರು (ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಕುಳಿತುಕೊಳ್ಳಲು ಇಷ್ಟಪಟ್ಟರು. ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ತಿಳಿಯುವುದಿಲ್ಲ.
ನೀವು (ಯುದ್ಧದಿಂದ) ಮರಳಿ ಅವರ ಬಳಿಗೆ ಹೋದಾಗ, ಅವರು ನಿಮ್ಮ ಮುಂದೆ ನೆಪಗಳನ್ನು ಹೇಳುತ್ತಾರೆ. ಹೇಳಿರಿ: “ನೀವು ನೆಪಗಳನ್ನು ಹೇಳಬೇಡಿ. ನಾವು ನಿಮ್ಮನ್ನು ಎಂದಿಗೂ ನಂಬುವುದಿಲ್ಲ. ನಿಮ್ಮ ಕೆಲವು ಸಮಾಚಾರಗಳನ್ನು ಅಲ್ಲಾಹು ನಮಗೆ ತಿಳಿಸಿದ್ದಾನೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ನೀವು ಮಾಡುವ ಕೆಲಸವನ್ನು ನೋಡುತ್ತಾರೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ವಿವರಿಸಿಕೊಡುವನು.”
ನೀವು ಅವರ ಬಳಿಗೆ ಮರಳಿದಾಗ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದಕ್ಕಾಗಿ ಅವರು ನಿಮ್ಮ ಮುಂದೆ ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ನೀವು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ನಿಜವಾಗಿಯೂ ಅವರು ಹೊಲಸು ಜನರು. ಅವರ ವಾಸಸ್ಥಳ ನರಕವಾಗಿದೆ. ಅದು ಅವರು ಮಾಡಿದ ದುಷ್ಕರ್ಮಗಳ ಫಲವಾಗಿದೆ.
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ನೀವು ಅವರ ಬಗ್ಗೆ ಸಂಪ್ರೀತರಾದರೂ, ಅಲ್ಲಾಹು ಆ ದುಷ್ಕರ್ಮಿಗಳ ಬಗ್ಗೆ ಖಂಡಿತ ಸಂಪ್ರೀತನಾಗುವುದಿಲ್ಲ.
ಮರುಭೂಮಿ ನಿವಾಸಿಗಳಾದ ಅರಬ್ಬಿಗಳು ಕಡು ನಿಷೇಧ ಮತ್ತು ಕಪಟತೆಯಿರುವ ಜನರಾಗಿದ್ದಾರೆ. ಅಲ್ಲಾಹು ಅವನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ನಿಯಮಗಳ ಬಗ್ಗೆ ಅಜ್ಞರಾಗಿರಲು ಅವರು ಹೆಚ್ಚು ಅರ್ಹರಾಗಿದ್ದಾರೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
(ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ದಂಡವೆಂದು ಪರಿಗಣಿಸುವವರು ಮತ್ತು ನಿಮಗೆ ಕೆಟ್ಟ ಕಾಲಚಕ್ರಗಳು ಬರುವುದನ್ನು ಕಾಯುವವರು ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ಕೆಟ್ಟ ಕಾಲಚಕ್ರಗಳು ಅವರಿಗೇ ಬರಲಿ! ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ಮತ್ತು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ಅಲ್ಲಾಹನ ಸಾಮೀಪ್ಯ ಪಡೆಯುವ ಮತ್ತು ಸಂದೇಶವಾಹಕರ ಪ್ರಾರ್ಥನೆಗಳಲ್ಲಿ ಒಳಪಡುವ ಮಾರ್ಗವೆಂದು ಪರಿಗಣಿಸುವವರೂ ಕೂಡ ಆ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅದು ಅವರಿಗೆ ಸಾಮೀಪ್ಯ ಪಡೆಯುವ ಮಾರ್ಗವಾಗಿದೆ. ಅಲ್ಲಾಹು ಅವರನ್ನು ತನ್ನ ಕರುಣೆಯಲ್ಲಿ ಸೇರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಮುಹಾಜಿರ್ ಮತ್ತು ಅನ್ಸಾರ್ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ.
ನಿಮ್ಮ ಸುತ್ತಮುತ್ತಲಲ್ಲಿರುವ ಅಲೆಮಾರಿ ಅರಬ್ಬಿಗಳಲ್ಲಿ ಕಪಟವಿಶ್ವಾಸಿಗಳಿದ್ದಾರೆ. ಮದೀನಾ ನಿವಾಸಿಗಳಲ್ಲೂ ಇದ್ದಾರೆ. ಅವರು ಕಪಟತೆಯಲ್ಲಿ ಮಿತಿಮೀರಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನಮಗೆ ಅವರ ಬಗ್ಗೆ ತಿಳಿದಿದೆ. ನಾವು ಸದ್ಯವೇ ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರನ್ನು ಘೋರ ಶಿಕ್ಷೆಗೆ ತಳ್ಳಲಾಗುವುದು.
ತಮ್ಮ ತಪ್ಪುಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ.[1] ಅವರು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಿಶ್ರಗೊಳಿಸಿದ್ದಾರೆ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ನೀವು ಅವರ ಸಂಪತ್ತುಗಳಿಂದ ದಾನವನ್ನು ಪಡೆಯಿರಿ. ಅದರ ಮೂಲಕ ನೀವು ಅವರನ್ನು ಶುದ್ಧೀಕರಿಸುತ್ತೀರಿ. ಅವರಿಗೋಸ್ಕರ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಸಮಾಧಾನವಾಗಿದೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ನಿಶ್ಚಯವಾಗಿಯೂ ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರಿಂದ ದಾನಧರ್ಮಗಳನ್ನು ತೆಗೆದುಕೊಳ್ಳುತ್ತಾನೆ; ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆೆಂದು ಅವರಿಗೆ ತಿಳಿದಿಲ್ಲವೇ?
ಹೇಳಿರಿ: “ನೀವು ಕರ್ಮವೆಸಗಿರಿ. ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನಿಮ್ಮ ಕರ್ಮಗಳನ್ನು ನೋಡುವರು. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವೇನು ಮಾಡುತ್ತಿದ್ದಿರಿ ಎಂದು ಅವನು ನಿಮಗೆ ತಿಳಿಸಿಕೊಡುವನು.”
ಅಲ್ಲಾಹನ ಆಜ್ಞೆ ಬರುವ ತನಕ ತೀರ್ಪನ್ನು ಕಾದಿರಿಸಲಾದ ಕೆಲವರಿದ್ದಾರೆ. ಅಲ್ಲಾಹು ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.[1]
ಹಾನಿ ಮಾಡಲು, ಅಲ್ಲಾಹನನ್ನು ನಿಷೇಧಿಸಲು, ಸತ್ಯವಿಶ್ವಾಸಿಗಳ ನಡುವೆ ಒಡಕು ಮೂಡಿಸಲು ಮತ್ತು ಈಗಾಗಲೇ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದವರಿಗೆ ಹೊಂಚುದಾಣವನ್ನು ನಿರ್ಮಿಸಿಕೊಡಲು ಒಂದು ಮಸೀದಿಯನ್ನು[1] ನಿರ್ಮಿಸಿದವರು ಯಾರೋ—ಅವರು, “ನಾವು ಒಳಿತನ್ನು ಮಾತ್ರ ಉದ್ದೇಶಿಸುತ್ತೇವೆ” ಎಂದು ಆಣೆ ಮಾಡಿ ಹೇಳುತ್ತಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.
ನೀವು ಯಾವತ್ತೂ ಅಲ್ಲಿ (ನಮಾಝ್ ಮಾಡಲು) ನಿಲ್ಲಬೇಡಿ. ನಿಮಗೆ ನಿಲ್ಲಲು (ನಮಾಝ್ ಮಾಡಲು) ಹೆಚ್ಚು ಅರ್ಹವಾಗಿರುವುದು ಮೊದಲ ದಿನದಿಂದಲೇ ದೇವಭಯದ ಆಧಾರದಲ್ಲಿ ನಿರ್ಮಿಸಲಾದ ಮಸೀದಿಯಾಗಿದೆ. ಅಲ್ಲಿ (ಆ ಮಸೀದಿಯಲ್ಲಿ) ಶುದ್ಧಿಯಾಗಲು ಇಷ್ಟಪಡುವ ಜನರಿದ್ದಾರೆ. ಅಲ್ಲಾಹು ಶುದ್ಧಿಯಾಗಿರುವವರನ್ನು ಇಷ್ಟಪಡುತ್ತಾನೆ.
ಅಲ್ಲಾಹನ ಭಯ ಮತ್ತು ಸಂಪ್ರೀತಿಯ ತಳಹದಿಯ ಮೇಲೆ ತನ್ನ ಕಟ್ಟಡವನ್ನು ನಿರ್ಮಿಸಿದವನು ಉತ್ತಮನೋ ಅಥವಾ ಕುಸಿಯುವ ಹಂತದಲ್ಲಿರುವ ಪ್ರಪಾತದ ಅಂಚಿನಲ್ಲಿ ತನ್ನ ಕಟ್ಟಡವನ್ನು ನಿರ್ಮಿಸಿ ಅದರೊಂದಿಗೆ ನರಕಾಗ್ನಿಗೆ ಕುಸಿದು ಬಿದ್ದವನೋ? ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ಅವರು ನಿರ್ಮಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಸಂಶಯ ಪಿಶಾಚಿಯಂತೆ ಅವರನ್ನು ಸತತವಾಗಿ ಚುಚ್ಚುತ್ತಲೇ ಇರುವುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಿಂದ, ಅವರಿಗೆ ಸ್ವರ್ಗವನ್ನು ನೀಡುವೆನು ಎಂಬುದಕ್ಕೆ ಬದಲಿಯಾಗಿ, ಅವರ ತನು-ಧನಗಳನ್ನು ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ (ವೈರಿಗಳನ್ನು) ಕೊಲ್ಲುತ್ತಾರೆ ಮತ್ತು (ವೈರಿಗಳಿಂದ) ಕೊಲೆಗೀಡಾಗುತ್ತಾರೆ. ಇದು ತೌರಾತ್ನಲ್ಲಿ, ಇಂಜೀಲ್ನಲ್ಲಿ ಮತ್ತು ಕುರ್ಆನ್ನಲ್ಲಿ ಅಲ್ಲಾಹು ನೀಡಿದ ಸತ್ಯ ವಾಗ್ದಾನವಾಗಿದೆ. ಅಲ್ಲಾಹನಿಗಿಂತಲೂ ಹೆಚ್ಚು ತನ್ನ ಕರಾರನ್ನು ಪೂರ್ತಿ ಮಾಡುವವನು ಯಾರು? ಆದ್ದರಿಂದ ನೀವು ಮಾಡಿರುವ ಈ ವ್ಯವಹಾರದಲ್ಲಿ ಸಂತೋಷಪಡಿರಿ. ಅದೇ ಅತಿದೊಡ್ಡ ಯಶಸ್ಸು.
ಪಶ್ಚಾತ್ತಾಪಪಡುವವರು, ಆರಾಧನೆ ಮಾಡುವವರು, ಸ್ತುತಿಕೀರ್ತನೆ ಮಾಡುವವರು, ಉಪವಾಸ ಆಚರಿಸುವವರು, ತಲೆಬಾಗುವವರು, ಸಾಷ್ಟಾಂಗ ಮಾಡುವವರು, ಒಳಿತನ್ನು ಆದೇಶಿಸುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಎಲ್ಲೆಗಳನ್ನು ಸಂರಕ್ಷಿಸುವವರು (ಇವರೇ ಸತ್ಯವಿಶ್ವಾಸಿಗಳು). ಆ ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿರಿ.
ಬಹುದೇವವಿಶ್ವಾಸಿಗಳು ನರಕವಾಸಿಗಳೆಂದು ಸ್ಪಷ್ಟವಾದ ಬಳಿಕ ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ. ಅವರು ಆಪ್ತ ಸಂಬಂಧಿಕರಾಗಿದ್ದರೂ ಸಹ.
ಇಬ್ರಾಹೀಮರು ತಮ್ಮ ತಂದೆಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿರುವುದು ಅವರು ತಂದೆಗೆ ಕೊಟ್ಟ ಮಾತನ್ನು ಪಾಲಿಸುವುದಕ್ಕಾಗಿತ್ತು. ಆದರೆ ತಂದೆ ಅಲ್ಲಾಹನ ವೈರಿಯೆಂದು ಸ್ಪಷ್ಟವಾದಾಗ ಅವರು ತಂದೆಯಿಂದ ದೂರವಾದರು. ನಿಶ್ಚಯವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯದವರು ಮತ್ತು ಸಹಿಷ್ಣುವಾಗಿದ್ದರು.
ಅಲ್ಲಾಹು ಜನರಿಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ಅವರನ್ನು ದಾರಿತಪ್ಪಿಸುವುದಿಲ್ಲ—ಅವರು ಯಾವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ತನಕ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರು ಅಥವಾ ಸಹಾಯಕರಿಲ್ಲ.
ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯನ್ನು ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಹಿಂಬಾಲಿಸಿದ ಮುಹಾಜಿರ್ ಮತ್ತು ಅನ್ಸಾರರನ್ನು ಕ್ಷಮಿಸಿದ್ದಾನೆ. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಅವರೊಡನೆ ಕೃಪೆ ಮತ್ತು ದಯೆಯುಳ್ಳವನಾಗಿದ್ದಾನೆ.
ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ).[1] ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯವಂತರಲ್ಲಿ ಸೇರಿಕೊಳ್ಳಿ.
ಪ್ರವಾದಿಯವರನ್ನು ಬಿಟ್ಟು ಹಿಂದೆ ಉಳಿಯುವುದು (ಯುದ್ಧಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುವುದು) ಮತ್ತು ಅವರಿಗಿಂತಲೂ ಹೆಚ್ಚು ತಮ್ಮ ಕೆಲಸ-ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಮದೀನಾ ನಿವಾಸಿಗಳಿಗೆ ಮತ್ತು ಅದರ ಸುತ್ತಲಿರುವ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಿಗೆ ಭೂಷಣವಲ್ಲ. ಅದೇಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹ, ಆಯಾಸ ಅಥವಾ ಹಸಿವು ಸಂಭವಿಸಿದರೂ, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದೇ ಪ್ರದೇಶದಲ್ಲಿ ಅವರು ಕಾಲೂರಿದರೂ, ಅಥವಾ ವೈರಿಗಳಿಗೆ ಅವರು ಯಾವುದೇ ನಾಶ-ನಷ್ಟ ತಂದಿಟ್ಟರೂ, ಅವುಗಳಿಗೆ ಬದಲಿಯಾಗಿ ಅವರಿಗೆ ಒಂದು ಸತ್ಕರ್ಮವನ್ನು ದಾಖಲಿಸಲಾಗುವುದು. ಒಳಿತು ಮಾಡುವವರ ಕರ್ಮಗಳನ್ನು ಅಲ್ಲಾಹು ವ್ಯರ್ಥಗೊಳಿಸುವುದಿಲ್ಲ.
ಅವರು ಸಣ್ಣ ಮೊತ್ತದಲ್ಲಿ ಅಥವಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಿದರೂ, ಅಥವಾ ಯಾವುದೇ ಕಣಿವೆಯನ್ನು ದಾಟಿದರೂ—ಅವರು ಮಾಡಿದ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲ ನೀಡುವುದಕ್ಕಾಗಿ ಇವೆಲ್ಲವನ್ನೂ ದಾಖಲಿಸಿಡಲಾಗುವುದು.
ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೊರಡುವುದು ಸರಿಯಲ್ಲ. ಬದಲಿಗೆ, ಅವರಲ್ಲಿರುವ ಒಂದೊಂದು ವಿಭಾಗದಿಂದ ಒಂದೊಂದು ಗುಂಪು ಜನರು ಯುದ್ಧಕ್ಕೆ ಹೊರಟು, ಉಳಿದವರು ಧರ್ಮದ ಬಗ್ಗೆ ತಿಳುವಳಿಕೆಯನ್ನು ಪಡೆದು, ನಂತರ ಆ ಜನರು ತಮ್ಮ ಬಳಿಗೆ ಮರಳಿ ಬಂದಾಗ, ಅವರು (ಅಲ್ಲಾಹನನ್ನು) ಭಯಪಟ್ಟು ಜೀವಿಸುವುದಕ್ಕಾಗಿ ಅವರಿಗೆ (ಧಾರ್ಮಿಕ ನಿಯಮಗಳ ಬಗ್ಗೆ) ತಿಳುವಳಿಕೆ ನೀಡಬಾರದೇಕೆ?
ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸುಪಾಸಿನಲ್ಲಿರುವ ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಠೋರತೆಯನ್ನು ಕಾಣಲಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು ಕೇಳುತ್ತಾರೆ: “ಇದು ನಿಮ್ಮಲ್ಲಿ ಯಾರಿಗೆ ವಿಶ್ವಾಸವನ್ನು ಹೆಚ್ಚಿಸಿದೆ?” ಸತ್ಯವಿಶ್ವಾಸಿಗಳು ಯಾರೋ—ಅವರಿಗೆ ಅದು ವಿಶ್ವಾಸವನ್ನು ಹೆಚ್ಚಿಸಿದೆ. ಅವರು ಅದರಲ್ಲಿ ಸಂತೋಷಪಡುತ್ತಾರೆ.
ಆದರೆ ಯಾರ ಹೃದಯಗಳಲ್ಲಿ ರೋಗವಿದೆಯೋ, ಅವರಿಗೆ ಅದು ಹೊಲಸಿನ ಮೇಲೆ ಹೊಲಸನ್ನು ಹೆಚ್ಚಿಸಿದೆ. ಅವರು ಸತ್ಯನಿಷೇಧಿಗಳಾಗಿಯೇ ಸಾಯುತ್ತಾರೆ.
ಪ್ರತಿವರ್ಷವೂ ಅವರು ಒಂದು ಅಥವಾ ಎರಡು ಬಾರಿ ಪರೀಕ್ಷೆಗೆ ಗುರಿಯಾಗುವುದನ್ನು ಅವರು ನೋಡುವುದಿಲ್ಲವೇ? ಆದರೂ ಅವರು ಪಶ್ಚಾತ್ತಾಪಪಡುವುದಿಲ್ಲ. ಅವರು ಉಪದೇಶ ಸ್ವೀಕರಿಸುವುದೂ ಇಲ್ಲ.
ಯಾವುದೇ ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು “ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ತಾನೇ?” ಎಂಬರ್ಥದಲ್ಲಿ ಇತರರನ್ನು ನೋಡುತ್ತಾರೆ. ನಂತರ ಅವರು ಅಲ್ಲಿಂದ ತೆರಳುತ್ತಾರೆ. ಅಲ್ಲಾಹು ಅವರ ಹೃದಯಗಳನ್ನು ತಿರುಗಿಸಿದ್ದಾನೆ. ಅವರು ಅರ್ಥಮಾಡಿಕೊಳ್ಳದ ಜನರಾಗಿರುವುದೇ ಅದಕ್ಕೆ ಕಾರಣ.
ನಿಮ್ಮ ಬಳಿಗೆ ನಿಮ್ಮಿಂದಲೇ ಇರುವ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟ ಅನುಭವಿಸುವುದು ಅವರಿಗೆ ಸಂಕಟದಾಯಕವಾಗಿದೆ. ಅವರಿಗೆ ನಿಮ್ಮ ಬಗ್ಗೆ ಕಳಕಳಿಯಿದೆ. ಅವರು ಸತ್ಯವಿಶ್ವಾಸಿಗಳೊಡನೆ ಕೃಪೆ ಮತ್ತು ದಯೆಯುಳ್ಳವರಾಗಿದ್ದಾರೆ.
ಅವರೇನಾದರೂ ತಿರುಗಿ ನಡೆದರೆ, ಹೇಳಿರಿ: “ನನಗೆ ಅಲ್ಲಾಹು ಸಾಕು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ಅವನು ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.”